Advertisement

BJP vs Congress ; ಕೇಸ್‌ ಮೇಲೆ ಕೇಸ್‌

12:37 AM Sep 29, 2024 | Team Udayavani |

ತನಿಖೆಗೆ ಸ್ನೇಹಮಯಿ ಆಗ್ರಹ, 16 ಪುಟದ ದೂರು.  55 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಕೆ ಆರೋಪ
ಬೆಂಗಳೂರು: ಮುಡಾ ಹಗರಣ ದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾ ಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರಿಗೆ ಉರುಳು ಇನ್ನಷ್ಟು ಬಿಗಿ ಯಾಗುವ ಸಾಧ್ಯತೆಗಳಿವೆ.

Advertisement

ಅವ್ಯವಹಾರ ಕುರಿತು ಸ್ನೇಹಮಯಿ ಕೃಷ್ಣ ಇ.ಡಿ. ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕರಿಗೆ ಇ-ಮೇಲ್‌ ಮತ್ತು ಪತ್ರ ಬರೆದು 16 ಪುಟಗಳ ದೂರು ಸಲ್ಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮೂಲಕ ತನಿಖೆ ನಡೆಸು ವಂತೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಪತ್ನಿಯ ಹೆಸರಿನಲ್ಲಿ ಅಕ್ರಮ ವಾಗಿ 14 ನಿವೇಶನ ಪಡೆದುಕೊಂಡಿದ್ದಾರೆ. ಬದಲಿ ನಿವೇಶನ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ ಶುಕ್ರವಾರ ಸಿಎಂ, ಪತ್ನಿ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್‌ ದಾಖಲಾಗಿತ್ತು. ಇದರ ಬೆನ್ನಲ್ಲೇ ಶನಿವಾರ ಇ.ಡಿ.ಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ ?
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ಮಾಡಿದ್ದ ಆರೋಪಗಳನ್ನೇ ದೂರಿನಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ. ಮುಡಾದಿಂದ ಕಾನೂನು ಬಾಹಿರವಾಗಿ 14 ನಿವೇಶನಗಳನ್ನು ಪಡೆದುಕೊಂಡು, 55 ಕೋಟಿ ರೂ.ಗೂ ಹೆಚ್ಚಿನ ಲಾಭ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ನೀಡಿದ್ದು, ಹೈಕೋರ್ಟ್‌ ಸಹ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿದೆ. ಮುಖ್ಯಮಂತ್ರಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾದರೂ ಪ್ರಕರಣದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಡಾದಿಂದ ಕಾನೂನು ಬಾಹಿರ ವಾಗಿ 14 ನಿವೇಶನ ಖರೀದಿ
ಈ ನಿವೇಶನದ ಮೂಲಕ 55 ಕೋಟಿ ರೂ.ಗೂ ಹೆಚ್ಚಿನ ಲಾಭ
ಪ್ರಕರಣದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಆಗತ್ಯ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮೂಲಕ ತನಿಖೆ ಆಗಲಿ

Advertisement

ಚುನಾವಣೆ ಬಾಂಡ್‌ ಮೂಲಕ ಸುಲಿಗೆ ಪ್ರಕರಣ: ಬಿಜೆಪಿಗರ ವಿರುದ್ಧ ಎಫ್ಐಆರ್‌
ಚುನಾವಣೆ ಬಾಂಡ್‌ ಮೂಲಕ ಕಾರ್ಪೊರೇಟ್‌ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ 6 ಮಂದಿಯ ವಿರುದ್ಧ ತಿಲಕನಗರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ಜನಾಧಿಕಾರ ಸಂಘರ್ಷ ಪರಿಷತ್‌ನ ಮುಖಂಡ ಆದರ್ಶ್‌ ಅಯ್ಯರ್‌, ಚುನಾವಣೆ ಬಾಂಡ್‌ ಮೂಲಕ 8 ಸಾವಿರ ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ನಿರ್ಮಲಾ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡುವಂತೆ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ತಿಲಕನಗರ ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಶುಕ್ರವಾರವಷ್ಟೇ ಸೂಚಿಸಿತ್ತು.

ಅದರಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬಿಜೆಪಿಯ ರಾಷ್ಟ್ರೀಯ ಘಟಕದ ಮುಖಂಡರು, ಬಿಜೆಪಿಯ ಹಿಂದಿನ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಹಿಂದಿನ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಘಟಕದ ಮುಖಂಡರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 384 (ಸುಲಿಗೆ), 120(ಬಿ) (ಅಪರಾಧಿಕ ಒಳ ಸಂಚು) 34 (ಒಟ್ಟಿಗೆ ಸೇರಿ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ದೂರುದಾರರಿಗೆ ನೋಟಿಸ್‌ ನೀಡಿದ್ದು, ಅವರು ನೀಡುವ ಮಾಹಿತಿ ಆಧರಿಸಿ ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೂರಿನಲ್ಲಿ ಏನಿದೆ?
ಜಾರಿ ನಿರ್ದೇಶನಾಲಯದ ಮೂಲಕ ದೇಶದ ಎಂಎನ್‌ಸಿ ಮತ್ತು ಟಿಎನ್‌ಸಿ ಕಾರ್ಪೊರೇಟ್‌ ಕಂಪೆನಿಗಳ ಸಿಇಒ ಮತ್ತು ಎಂಡಿ ಅವರಿಂದ ಚುನಾವಣೆ ಬಾಂಡ್‌ಗಳ ಹೆಸರಿನಲ್ಲಿ 8 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಆರೋಪಿಗಳು ಒಳಸಂಚು ಮಾಡಿ ಬಲವಂತದಿಂದ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ನಳಿನ್‌ ಕುಮಾರ್‌ ಕಟೀಲು ಮೂಲಕ ರಹಸ್ಯ ಮಾರ್ಗವಾಗಿ ಈ ಹಣ ವರ್ಗಾವಣೆಯಾಗಿದೆ. ಜತೆಗೆ ನಿರ್ಮಲಾ ಸೀತಾರಾಮನ್‌, ಇ.ಡಿ. ಅಧಿಕಾರಿಗಳ ಸಹಾಯ ಪಡೆದು ಬಿಜೆಪಿ ಮುಖಂಡರು, ವಿಜಯೇಂದ್ರ ಹಾಗೂ ಇತರರ ಲಾಭಕ್ಕಾಗಿ ಕೆಲವು ಪ್ರತಿಷ್ಠಿತ ಕಂಪೆನಿಗಳ ಮೇಲೆ ದಾಳಿ ಮಾಡಿ ಸಿಇಒ ಹಾಗೂ ಎಂ.ಡಿ.ಗಳನ್ನು ಬಂಧಿಸಿದ್ದಾರೆ. ಈ ದಾಳಿ ಮೂಲಕ ಹೆದರಿಸಿ ಅನೇಕ ಕಾರ್ಪೊರೇಟ್‌ ಕಂಪೆನಿಗಳಿಗೆ ಕೋಟ್ಯಂತರ ಮೌಲ್ಯದ ಚುನಾವಣೆ ಬಾಂಡ್‌ಗಳನ್ನು ಖರೀದಿಸುವಂತೆ ಆಗ್ರಹಿಸಿದ್ದಾರೆ.

ಕಾರ್ಪೊರೇಟ್‌ ಅಲ್ಯೂಮಿನಿಯಂ ಮತ್ತು ಕಾಫ‌ರ್‌ ಜೈಂಟ್‌, ಎಂ.ಎಸ್‌. ಸ್ಕ್ವೇರ್‌ ಲೈಟ್‌, ವೇದಾಂತ ಕಂಪೆನಿಗಳಿಂದ 2019ನೇ ಸಾಲಿನ ಎಪ್ರಿಲ್‌ನಿಂದ 2022ರ ಆಗಸ್ಟ್‌ ಮತ್ತು 2023ರ ನ.ವರೆಗೆ ಒಟ್ಟು 230.15 ಕೋಟಿ ರೂ. ಪಡೆದು ಕೊಂಡಿ¨ªಾರೆ. ಅರವಿಂದ ಫಾರ್ಮಾ ಕಂಪೆನಿಯಿಂದ 2022ರ ಜುಲೈಯಿಂದ 2023 ನವೆಂಬರ್‌ ವರೆಗೆ ಒಟ್ಟು 49.5 ಕೋಟಿ ರೂ. ಸೇರಿ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ರಹಸ್ಯವಾಗಿ ಎಲ್ಲ ಆರೋಪಿಗಳು ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆದರ್ಶ್‌ ಅಯ್ಯರ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಆರೋಪಿಗಳು ಯಾರೆಲ್ಲ?
 ಎ1 – ನಿರ್ಮಲಾ ಸೀತಾರಾಮನ್‌
  ಎ2- ಜಾರಿ ನಿರ್ದೇಶನಾಲಯ
ಎ3 – ರಾಷ್ಟ್ರೀಯ ಬಿಜೆಪಿ ಮುಖಂಡರು ಮತ್ತು ಇತರರು
 ಎ4- ನಳಿನ್‌ ಕುಮಾರ್‌ (ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ)
ಎ5- ಬಿ.ವೈ. ವಿಜಯೇಂದ್ರ, (ಹಿಂದಿನ ಬಿಜೆಪಿ ರಾಜ್ಯ ಉಪಾಧ್ಯಕ್ಷ)
 ಎ6 – ರಾಜ್ಯ ಬಿಜೆಪಿ ಮುಖಂಡರು ಮತ್ತು ಇತರರು

ಯಾವ ಸೆಕ್ಷನ್‌ ಅಡಿ ದೂರು?
ಭಾರತೀಯ ದಂಡ ಸಂಹಿತೆ (ಐಪಿಸಿ) 384 (ಸುಲಿಗೆ)
 120 (ಬಿ) (ಅಪರಾಧಿಕ ಒಳ ಸಂಚು)
 34 (ಒಟ್ಟಿಗೆ ಸೇರಿ ಕೃತ್ಯ)

Advertisement

Udayavani is now on Telegram. Click here to join our channel and stay updated with the latest news.

Next