Advertisement

BJP: ಮೋದಿ, ಶಾ ಭೇಟಿಯಾದ ವಿಜಯೇಂದ್ರ

11:05 PM Dec 21, 2023 | Team Udayavani |

ಬೆಂಗಳೂರು: ರಾಷ್ಟ್ರ ರಾಜಧಾನಿ ದಿಲ್ಲಿಯು ಗುರುವಾರ ಕರ್ನಾಟಕದ ರಾಜಕೀಯ ವಿದ್ಯ ಮಾನದ ಕೇಂದ್ರಬಿಂದುವಾಯಿತು.

Advertisement

ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿ.ವೈ. ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಮತ್ತೂಂದೆಡೆ, ಎನ್‌ಡಿಎ ಮಿತ್ರಕೂಟಕ್ಕೆ ಬೆಂಬಲ ಸೂಚಿಸಿರುವ ದಳಪತಿಗಳ (ಜೆಡಿಎಸ್‌) ನಿಯೋಗ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚಿಸಿತು.

ಇದೇ ವೇಳೆ ಉಭಯ ನಾಯಕರು ರಾಜ್ಯ ರಾಜಕಾರಣ ಮತ್ತು ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಸಹಿತ ಹಲವು ವಿಚಾರಗಳ ಕುರಿತು ಸಮಾಲೋಚಿಸಿದರು. ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡಿದರು.

ಪ್ರಧಾನಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್‌ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ರಾಷ್ಟ್ರ ಭಕ್ತಿ, ಸಂಘ ನಿಷ್ಠೆ, ಸಮರ್ಪಣೆ, ಶಿಸ್ತು, ಬದ್ಧತೆ, ಕ್ರಿಯಾಶೀಲತೆ, ಸಾಧಿಸುವ ಛಲದ ಗುರಿ ಇವೆಲ್ಲಕ್ಕೂ ಭಾರತದ ಇತಿಹಾಸದಲ್ಲಿ ಉದಾಹರಿಸಬಲ್ಲ ಏಕೈಕ ವ್ಯಕ್ತಿತ್ವ ಅಂದರೆ ಅದು ಪ್ರಧಾನಿ ಮೋದಿ. ಅವರ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟುವ ಮಹಾನ್‌ ಸಂಕಲ್ಪ ಪರಿಪೂರ್ಣವಾಗಿ ಈಡೇರಿದರೆ ವಿಶ್ವಮಟ್ಟದಲ್ಲಿ ನಮ್ಮ ಭವ್ಯ ಭಾರತ ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಈ ನಿಟ್ಟಿನಲ್ಲಿ ಅವರೊಂದಿಗೆ ಹೆಗಲು ಕೊಡುವ ಪುಣ್ಯದ ಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ಬಿಜೆಪಿ-ಕರ್ನಾಟಕದ ರಥವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಟ್ಟಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ.
2024ರ ಮಹಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೋದಿ ಅವರ ಮಡಿಲಿಗೆ ಸಮರ್ಪಿಸಬೇಕೆಂಬ ನನ್ನ ಹೆಗ್ಗುರಿಯ ಹೆಜ್ಜೆಗೆ ಗುರುವಾರದ ಭೇಟಿ ವೇಳೆ ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಅದಮ್ಯ ಆತ್ಮ ವಿಶ್ವಾಸ ಮೂಡಿಸಿದೆ ಎಂದು ಹೇಳಿದ್ದಾರೆ.

Advertisement

ಗೆಲುವಿನ ರಣತಂತ್ರ
ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿಜಯೇಂದ್ರ, ಶಾ ಅವರ ರಾಷ್ಟ್ರಭಕ್ತಿ-ಪಕ್ಷ ನಿಷ್ಠೆ, ನಿಮ್ಮ ಧ್ಯೇಯ, ಬದ್ಧತೆ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ಗೆಲುವಿನ ರಣತಂತ್ರ ನಮ್ಮಂಥ ಯುವಕರಿಗೆ ನಿತ್ಯ ಸ್ಫೂರ್ತಿಯಾಗಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಾಧನೆಗಾಗಿ ಆತ್ಮೀಯ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು ಎಂದು ತಿಳಿಸಿದ್ದಾರೆ. ಅಮಿತ್‌ ಶಾ ಭೇಟಿ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಂಸದರಾದ ಪ್ರತಾಪಸಿಂಹ, ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next