ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದ್ದಾರೆ.
ಜಯದೇವ ವೃತ್ತದಲ್ಲಿ ದಿನೇಶ್ ಗುಂಡೂರಾವ್ರ ಭಾವಚಿತ್ರದೊಂದಿಗೆ ಬಳೆ, ಸೀರೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು, ಕೆಪಿಸಿಸಿ ಕಾರ್ಯಾಧ್ಯಕ್ಷರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿಗೆ ಬಳೆ ತೊಡಿಸಬೇಕು ಎಂಬುದಾಗಿ ದಿನೇಶ್ ಗುಂಡುರಾವ್ ಕೇವಲ ನರೇಂದ್ರ ಮೋದಿ ಅವರನ್ನು ಅವಮಾನ ಮಾಡಿದಂತಲ್ಲ.
ಮಹಿಳೆಯರು ಅಬಲೆಯರು, ಅವರ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಪಮಾನ ಮಾಡಿದಂತೆ. ಅವರು ಮಹಿಳೆ ಟೀಕಿಸುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಅಪಮಾನಿಸಿದ್ದಾರೆ. ಜೊತೆಗೆ ಮಹಿಳಾಧ್ಯಕ್ಷರನ್ನು ಹೊಂದಿರುವ ಪಕ್ಷ ದುರ್ಬಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಮೋದಿಯವರ ನಾಯಕತ್ವದಲ್ಲಿನ ಕೇಂದ್ರ ಸರ್ಕಾರ, ನಮ್ಮ ದೇಶದ ಸಾಮರ್ಥ್ಯವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದೆ. ಅವರ ನಾಯಕತ್ವದಿಂದಾಗಿ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಇದೇ ಕಾರಣಕ್ಕೆ ಮೋದಿಯವರನ್ನು ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ನಂತರ ದೇಶದ್ರೋಹಿಗಳ ಪರ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸುವ ಪ್ರತ್ಯೇಕತಾವಾದಿಗಳು ಅಮಾಯಕರು ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಅಣಬೇರು ಶಿವಪ್ರಕಾಶ್, ದಕ್ಷಿಣ ವಲಯ ಅಧ್ಯಕ್ಷ ಟಿ. ಶಿವನಗೌಡ, ಎಸ್.ಜೆ. ಗಣೇಶ್, ಶ್ರೀಕಾಂತ್, ಅಣಜಿ ಗುಡ್ಡೇಶ್, ಟಿಂಕರ್ ಮಂಜಣ್ಣ, ಅಶೋಕ ನಾಯ್ಕ, ಗೌತಮ್ ಜೈನ್, ಟಿ.ಪಿ. ನರೇಶ್ ನೇತೃತ್ವ ವಹಿಸಿದ್ದರು.