Advertisement

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

01:04 AM Sep 29, 2024 | Team Udayavani |

ಬೆಂಗಳೂರು: ಮುಂದಿನ ಒಂದು ತಿಂಗಳೊಳಗೆ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯಡಿ ಪ್ರತಿಯೊಬ್ಬರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುವವರನ್ನು ಗುರುತಿಸಿ ಅಗತ್ಯ ಚಿಕಿತ್ಸೆ ಹಾಗೂ ಔಷಧ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹಾರ್ಟ್‌-ಟು-ಹಾರ್ಟ್‌ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಎನ್ನುವುದು ಹೊಟ್ಟೆಯಲ್ಲಿರುವ ಮಗುವಿನಿಂದ ಪ್ರಾರಂಭವಾಗುತ್ತದೆ. ಗರ್ಭಿಣಿ ಆರೋಗ್ಯ ಉತ್ತಮವಿದ್ದರೆ, ಶಿಶುವಿನ ಬೆಳವಣೆಗೆ ಆರೋಗ್ಯಕರವಾಗಿರಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಪ್ರಾರಂಭಿಕ ಹಂತದಲ್ಲಿ ರೋಗ ಲಕ್ಷಣಗಳನ್ನು ಪತ್ತೆ ಮಾಡಿ, ಅಗತ್ಯ ಚಿಕಿತ್ಸೆಯನ್ನು ನೀಡಲು ಮುಂದಾಗಿದೆ. ಜತೆಗೆ ರೋಗ ತಡೆಗೆ ಅಗತ್ಯವಿರುವ ಅರಿವು ಮೂಡಿಸಲು ಸಿದ್ಧತೆ ನಡೆಸುತ್ತಿದೆ. ಗೃಹ ಆರೋಗ್ಯ ಯೋಜನೆಯಡಿ ಆಶಾ ಕಾರ್ಯಕರ್ತರು ಮತ್ತು ಪ್ರಾ. ಆರೋಗ್ಯ ಅಧಿಕಾರಿಗಳನ್ನು ಒಳಗೊಂಡ ತಂಡ ಮನೆ-ಮನೆಗೆ ತಪಾಸಣೆ ನಡೆಸಿ ಔಷಧ ವಿತರಿಸುವುದರ ಜತೆಗೆ ಗರ್ಭಕಂಠದ, ಸ್ತನ ಮತ್ತು ಬಾಯಿಯ ಕ್ಯಾನ್ಸರ್‌ ಸ್ಕ್ರೀನಿಂಗ್‌ ನಡೆಸಲಿದ್ದಾರೆ ಎಂದರು.

ತಂತ್ರಜ್ಞಾನದ ಬಳಕೆಯೊಂದಿಗೆ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದು. ಈ ವಿಧಾನವನ್ನು ಆರೋಗ್ಯ ಇಲಾಖೆ ತನ್ನ ವ್ಯವಸ್ಥೆಯಲ್ಲಿ ಆಳವಡಿಸಿಕೊಂಡಿದೆ. ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆಯ ಡಿ 83 ಸರಕಾರಿ ಆಸ್ಪತ್ರೆಯನ್ನು ಬೆಂಗಳೂರಿನ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಹೃದಯ ಸಮಸ್ಯೆಗಳೊಂದಿಗೆ ಸಮುದಾಯ, ತಾಲೂಕು, ಜಿಲ್ಲಾಸ್ಪತ್ರೆಗಳಿಗೆ ಬರುವವರಿಗೆ ಉಚಿತವಾಗಿ ಇಸಿಜಿ ಮಾಡಲಾಗುತ್ತದೆ. ಇಲ್ಲಿ ಏರುಪೇರುಗಳು ಕಂಡು ಬಂದರೆ ಆನ್‌ಲೈನ್‌ ಮೂಲಕ ಬೆಂಗಳೂರು ಕೇಂದ್ರವನ್ನು ಸಂಪರ್ಕಿಸಲಾಗುತ್ತದೆ. ಇಲ್ಲಿನ ವೈದ್ಯರು ವರದಿಯನ್ನು ಪರಿಶೀಲಿಸಿ ಅಗತ್ಯವಿರುವ ಕ್ರಮಕೈಗೊಳ್ಳಲು ವೈದ್ಯರಿಗೆ ಸೂಚಿಸುತ್ತಾರೆ. ಈ ವ್ಯವಸ್ಥೆಯಿಂದ ತುರ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 75 ರೋಗಿಗಳ ಜೀವ ಉಳಿಸಲು ಸಾಧ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next