Advertisement

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

11:57 PM Oct 21, 2020 | mahesh |

ಬೆಂಗಳೂರು: ದೇಶದಲ್ಲಿ ಸಾಮಾನ್ಯ ಯುವಕರಿಗೂ ಸ್ಥಾನಮಾನ, ರಾಜಕೀಯದಲ್ಲಿ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಬೇರೆ ಎಲ್ಲ ಪಕ್ಷಗಳಲ್ಲಿ “ಇಂದಿನ ಯುವಕರು ನಾಳಿನ ನಾಯಕರು’ ಎಂದು ಹೇಳಿದರೂ ಆ ನಾಳೆ ಎಂದೂ ಬರುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸವಿರಿಸಿ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

Advertisement

-ಇದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾದ ಸಂಸದ ತೇಜಸ್ವಿ ಸೂರ್ಯ ಅವರ ಆತ್ಮವಿಶ್ವಾಸದ ನುಡಿ. ಅಧಿಕಾರಕ್ಕೇರುತ್ತಿದ್ದಂತೆ ಪಶ್ಚಿಮ ಬಂಗಾಲಕ್ಕೆ ತೆರಳಿ, ಅಲ್ಲಿನ ಸರಕಾರಕ್ಕೆ ಯುವ ಮೋರ್ಚಾದ ಬಿಸಿ ಮುಟ್ಟಿಸಿ ದಿಲ್ಲಿ ನಾಯಕರಿಂದ ಶಹಬ್ಟಾಸ್‌ ಗಿಟ್ಟಿಸಿಕೊಂಡ ತೇಜಸ್ವಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾತನಾಡಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ನೀವು ನಡೆಸಿದ ರ್ಯಾಲಿ ಬಗ್ಗೆ ಏನು ಹೇಳುತ್ತೀರಿ?
ಪ. ಬಂಗಾಲದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಲವಲೇಶದಷ್ಟೂ ಗೌರವವಿಲ್ಲದ ಫ್ಯಾಸಿಸ್ಟ್‌ ಸರಕಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಅಸ್ತಿತ್ವದಲ್ಲಿದೆ. ಈ ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 120 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ನನ್ನ ರ್ಯಾಲಿ ಮೇಲೆ 8- 10 ನಾಡಬಾಂಬ್‌ ಎಸೆಯಲಾಗಿತ್ತು. ಇಷ್ಟಾದರೂ ಬುದ್ಧಿಜೀವಿಗಳು ಖಂಡಿಸಿಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಮುಂದಿನ ವಾರ ಮತ್ತೆ ಪ.ಬಂಗಾಲಕ್ಕೆ ಭೇಟಿ ನೀಡಲಿದ್ದೇನೆ. 2021ರಲ್ಲಿ ಅಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ.

 ನಿಮ್ಮ ಹೇಳಿಕೆಗಳು ವಿವಾದಗಳನ್ನು ಹುಟ್ಟುಹಾಕುತ್ತವೆಯೇ ಅಥವಾ ನೀವು ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತೀರೋ?
ಸತ್ಯ ಹೇಳದಿರುವುದು ರಾಜಕೀಯವಾಗಿ ಸರಿ ಎಂಬಂತಾಗಿದೆ. ಸತ್ಯ ಹೇಳಿದರೂ ನಾಜೂಕಾಗಿ ಹೇಳಬೇಕು, ಇನ್ನೊಬ್ಬರಿಗೆ ಬೇಜಾರಾಗುತ್ತದೆ ಎಂದೆಲ್ಲ ಭಾವಿಸಲಾಗುತ್ತದೆ. ನನ್ನ ಪ್ರಕಾರ ಸತ್ಯ ಹೇಳುವುದು ರಾಜಕೀಯವಾಗಿ ಸರಿ. ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಘಟನೆಯನ್ನು ಖಂಡಿಸಲು ಹಿಂಜರಿಯುವವರಿಂದ ಸತ್ಯ ಹೇಳುವ, ಸರಿಯಾಗಿ ಹೇಳಿಕೆ ನೀಡುವ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ. ಅವರಿಗೆ ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿ ಇರಬಹುದು. ನಮಗೆ ಆ ಸಮಸ್ಯೆ, ಅನಿವಾರ್ಯ ಇಲ್ಲ.

 ನಿಮ್ಮ ನಡೆ, ನುಡಿ, ಕಾರ್ಯ ವೈಖರಿಯನ್ನು ಅನಂತ ಕುಮಾರ್‌ ಅವರಿಗೆ ಹೋಲಿಸುತ್ತಾರೆ. ಅದು ವರದಾನವೋ, ಹೊರೆಯೋ?
ಅನಂತ ಕುಮಾರ್‌ಗೆ ನನ್ನನ್ನು ಹೋಲಿಸುವುದು ತಪ್ಪು. ಅವರು ನನ್ನ ಗುರುಗಳು. ಅವರಂತೆಯೇ ಬೆಂಗ ಳೂರು ದಕ್ಷಿಣ ಕ್ಷೇತ್ರದ ಸಂಸದನಾಗಿ ನಡೆದುಕೊಳ್ಳಬೇಕು ಆಶಯ ನನಗಿದೆ.

Advertisement

 ಕೆಐಎಎಲ್‌ನಿಂದ ಮಾಸ್ಕ್ ಧರಿಸದೆ ಮೆರವಣಿಗೆಯಲ್ಲಿ ತೆರಳಿದ್ದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ?
ನಾವು ಮಾಸ್ಕ್ ಹಾಕಿದ್ದೆವು. ಆದರೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಸಾಕಷ್ಟು ಬಾರಿ ಮೈಕ್‌ ನಲ್ಲಿಯೂ ಮಾಸ್ಕ್ ಧರಿಸುವಂತೆ ಮನವಿ ಮಾಡಲಾಗಿತ್ತು.

 ಯುವಜನತೆ ಏಕೆ ನಿಮ್ಮ ಪಕ್ಷವನ್ನು ಬೆಂಬಲಿಸಬೇಕು?
ದೇಶದಲ್ಲಿ ಸಾಮಾನ್ಯ ಯುವಕರು ಸ್ಥಾನಮಾನ ಪಡೆಯುವುದು, ರಾಜ ಕೀಯದಲ್ಲಿ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಬೇರೆ ಪಕ್ಷದಲ್ಲಿ ಇಂಥ ಅವಕಾಶವಿಲ್ಲ.

 ಪ್ರಾದೇಶಿಕ ಭಿನ್ನತೆ, ವೈವಿಧ್ಯ ಗಳ ನಡುವೆ ದೇಶಾದ್ಯಂತ ಯುವ ಜನತೆಯನ್ನು ಹೇಗೆ ಸಂಘಟಿಸುತ್ತೀರಿ?
2014ರ ಅನಂತರ ಚುನಾವಣೆ ಯಲ್ಲಿ ಅಭಿವೃದ್ಧಿಯನ್ನೇ ಪ್ರಮುಖ ಚರ್ಚೆಯ ವಿಷಯವನ್ನಾಗಿ ಮಾಡಿದ್ದು ಪ್ರಧಾನಿ ಮೋದಿಯವರ ಸಾಧನೆ. ವೈವಿಧ್ಯ, ಭಿನ್ನತೆ ನಡುವೆಯೂ ದೇಶ ಅಭಿವೃದ್ಧಿಯಾದಾಗ ವೈಯಕ್ತಿಕ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಯನ್ನು ಯುವಜನತೆಯಲ್ಲಿ ಅವರು ಮೂಡಿಸಿದ್ದು, ಅದರ ಆಧಾರದ ಮೇಲೆ ಪಕ್ಷ ಸಂಘಟನೆ ಮಾಡುತ್ತೇವೆ.

 ನಿಮ್ಮ ಮುಂದಿರುವ ಸವಾಲು?
ಹೊಸ ತಲೆಮಾರಿನಲ್ಲಿ ವೈಚಾರಿಕತೆ ಹೇಗೆ ಬದಲಾಗಬೇಕು, ಮುಂದಿನ 100 ವರ್ಷಗಳಲ್ಲಿ ಹಿಂದುತ್ವದ ಪಾತ್ರವೇನು, ಹಿಂದುತ್ವ, ಧರ್ಮದ ಆಧಾರದ ಮೇಲೆ ಸಮಾಜ ರಾಜಕೀಯವಾಗಿ ಹೇಗೆ ಮುಂದುವರಿಯಬೇಕು ಎಂದು ಚಿಂತಿಸಬೇಕಿದೆ.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ನಿಮ್ಮ ಮುಂದಿನ ಅಜೆಂಡಾ ಏನು?
ಸದ್ಯದಲ್ಲೇ ಹೊಸ ತಂಡ ರಚನೆಯಾಗಲಿದೆ. ಪ್ರಮುಖವಾಗಿ ಮೂರು ಆದ್ಯತೆಗಳಿವೆ. ಪಶ್ಚಿಮ ಬಂಗಾಲ, ಕೇರಳದಲ್ಲಿ ಸಂಘಟನೆಗೆ ಒತ್ತು. ಪಕ್ಷದ ಸರಕಾರವಿರುವ ಕಡೆ ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಸೇವಾ ಚಟುವಟಿಕೆ ನಡೆಸುವುದು. ಪಕ್ಷದ ಸರಕಾರವಿಲ್ಲದ ಕಡೆ ಸಂಘರ್ಷ. ಕೊನೆಯದಾಗಿ 21ನೇ ಶತಮಾನಕ್ಕೆ ಬೇಕಾಗುವ ರಾಜಕೀಯ ಕಾರ್ಯಕರ್ತರು, ನಾಯಕರನ್ನು ರೂಪಿಸುವುದು.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next