Advertisement

ಆ ಹುಡುಗಿ ನಿಜವಾಗಿಯೂ ಹೇಳಲು ಹೊರಟಿದ್ದೇನು?

08:23 PM Feb 27, 2017 | Karthik A |

‘ನನ್ನ ತಂದೆಯನ್ನು ಕೊಂದದ್ದು ಯುದ್ಧವೇ ಹೊರತು ಪಾಕಿಸ್ಥಾನವಲ್ಲ’ ಎಂಬ ಅರ್ಥಬರುವ ರೀತಿಯ ಬರಹವನ್ನು ಹಿಡಿದುಕೊಂಡಿರುವ ಗುರ್ ಮೆಹರ್ ಕೌರ್ ಎಂಬ ಹುಡುಗಿಯ ಕುರಿತಾಗಿ ಈಗ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. 1999ರ ಕಾರ್ಗಿಲ್‌ ಯುದ್ಧದದಲ್ಲಿ ವೀರಮರಣವನ್ನಪ್ಪಿದ ಕಾ| ಮನ್‌ ದೀಪ್‌ ಸಿಂಗ್‌ ಎಂಬ ಸೇನಾನಿಯ ಮಗಳಾಗಿರುವ ಈಕೆ ಈಗ ದೇಶಪ್ರೇಮದ ಪರ – ವಿರೋಧ ಚರ್ಚೆಯ ವಸ್ತುವಾಗಿದ್ದಾಳೆ. ಆದರೆ ವಿಷಯ ಏನೆಂದರೆ ಆಕೆಯ ಆ ಒಂದು ಫೊಟೋ ಮಾತ್ರವೇ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರಿಂದಾಗಿ ಆಕೆ ಪಾಕಿಸ್ಥಾನದ ಪರ ಒಲವಿರುವವಳು ಎಂಬ ಟೀಕೆಗೆ ಗುರಿಯಾಗಬೇಕಾದ ಸನ್ನಿವೇಶ ಒದಗಿಬಂದಿದೆ. ಆದರೆ ನಿಜಾಂಶ ಏನೆಂದರೆ, ಈಗ ಚರ್ಚೆಗೆ ಗ್ರಾಸವಾಗಿರುವ ಆ ಒಂದು ಚಿತ್ರ ಸುಮಾರು 4.20 ನಿಮಿಷಗಳಿಷ್ಟಿರುವ ವಿಡಿಯೋ ಒಂದರ ತುಣುಕು ಮಾತ್ರ. ಯುದ್ಧದ ಕೆಡುಕನ್ನು ಸಾರುವ ಒಂದು ಸಂದೇಶವುಳ್ಳ ವಿಡಿಯೋ ಇದಾಗಿದ್ದು ತಾನು ಎರಡು ವರ್ಷ ಪ್ರಾಯದ ಹಸುಳೆಯಾಗಿದ್ದಾಗಲೇ ಯುದ್ಧದದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಮೌನವಾಗಿ ಪೋಸ್ಟರ್‌ ಬರಹಗಳ ಮೂಲಕ ಈ ವಿಡಿಯೋದುದ್ದಕ್ಕೂ ಕೌರ್‌ ಪ್ರದರ್ಶಿಸುತ್ತಾ ಹೋಗುತ್ತಾಳೆ. ಈ ಸಂಪೂರ್ಣ ವಿಡಿಯೋವನ್ನು ಇಲ್ಲಿ ಪ್ರಕಟಿಸಲಾಗಿದ್ದು ಇದರಲ್ಲಿರುವ ಇಂಗ್ಲಿಷ್‌ ಬರಹಗಳ ಕನ್ನಡ ಅನುವಾದವನ್ನೂ ಸಹ ಇಲ್ಲಿ ಓದುಗರಿಗಾಗಿ ನೀಡಲಾಗಿದೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಅಂಶಗಳೂ ನಿಜವಾಗಿರುವುದಿಲ್ಲ ಎಂಬುದನ್ನು ಓರ್ವ ಪ್ರಜ್ಞಾವಂತ ಇಂಟರ್ನೆಟ್‌ ಬಳಕೆದಾರರಾಗಿ ನಾವೆಲ್ಲಾ ಅರ್ಥಮಾಡಿಕೊಳ್ಳಬೇಕಾಗಿರುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋವನ್ನು ತಾಳ್ಮೆಯಿಂದ ವೀಕ್ಷಿಸಿದಲ್ಲಿ ನಿಜವು ತಿಳಿಯುವುದು…!

ಗುರ್ ಮೆಹರ್ ಕೌರ್ ಭಾವನೆಗಳ ಕನ್ನಡಾನುವಾದ…
ಹಾಯ್‌
 ನನ್ನ ಹೆಸರು ಗುರ್ ಮೆಹರ್ ಕೌರ್
– ನಾನು ಭಾರತದ ಜಲಂಧರ್‌ನವಳು
– ಇವರು ನನ್ನ ತಂದೆ ಕ್ಯಾ|ಮನ್‌ದೀಪ್‌ ಸಿಂಗ್‌ (ತಂದೆಯ ಭಾವಚಿತ್ರವನ್ನು ತೋರಿಸುತ್ತಾಳೆ)
– ಇವರು 1999ರ ಕಾರ್ಗಿಲ್‌ ಯುದ್ಧದಲ್ಲಿ ಕೊಲ್ಲಲ್ಪಟ್ಟರು (ಪೋಸ್ಟರ್‌ನಲ್ಲಿ ಆಕೆ Killed ಎಂಬ ಶಬ್ದವನ್ನೇ ಬಳಸಿದ್ದಾಳೆ)
– ಅವರು ಸಾಯುವ ಸಂದರ್ಭದಲ್ಲಿ ನಾನು ಎರಡು ವರ್ಷ ಪ್ರಾಯದವಳಾಗಿದ್ದೆ. ಅವರ ಕುರಿತಾಗಿ ನನ್ನ ನೆನಪು ತುಂಬಾ ಕ್ಷೀಣವಾಗಿದೆ.
– ಆದರೆ ತಂದೆಯೇ ಇಲ್ಲದಿರುವ ನೋವಿಗೆ ಸಂಬಂಧಿಸಿದಂತೆ ನನ್ನಲ್ಲಿ ಸಾಕಷ್ಟು ನೆನಪುಗಳಿವೆ!
– ನನ್ನ ತಂದೆಯನ್ನು ಕೊಂದವರು ಎಂಬ ಕಾರಣಕ್ಕಾಗಿ ನಾನು ಪಾಕಿಸ್ಥಾನವನ್ನು ಹಾಗೂ ಪಾಕಿಸ್ಥಾನೀಯರನ್ನು ನಾನೆಷ್ಟು ದ್ವೇಷಿಸುತ್ತಿದ್ದೆ ಎಂಬುದೂ ಸಹ ನನಗೆ ಚೆನ್ನಾಗಿ ನೆನಪಿದೆ.
– ಮಾತ್ರವಲ್ಲದೆ ನಾನು ಮುಸ್ಲಿಂರನ್ನೂ ಸಹ ದ್ವೇಷಿಸುತ್ತಿದ್ದೆ ಯಾಕೆಂದರೆ ಎಲ್ಲಾ ಮುಸ್ಲಿಂರು ಪಾಕಿಸ್ಥಾನೀಯರೆಂದೇ ನಾನು ತಿಳಿದಿದ್ದೇ.
– ನಾನು 6 ವರ್ಷ ಪ್ರಾಯದವಳಿದ್ದಾಗ ಬುರ್ಖಾ ಧರಿಸಿ ಓಡಾಡುತ್ತಿದ್ದ ಓರ್ವ ಮಹಿಳೆಯನ್ನು ನಾನು ಇರಿಯಲು ಪ್ರಯತ್ನಿಸಿದ್ದೇ!
– ಯಾಕೆಂದರೆ ಕೆಲವೊಂದು ವಿಚಿತ್ರ ಕಾರಣಗಳಿಗಾಗಿ ಆಕೆ ನನ್ನ ತಂದೆಯ ಸಾವಿಗೆ ಕಾರಣಳು ಎಂದು ನಾನು ಭಾವಿಸಿದ್ದೆ.
– ಆಗ ನನ್ನ ತಾಯಿ ನನ್ನನ್ನು ತಡೆದು, ಪಾಕಿಸ್ಥಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿತು ಎಂಬ ವಿಷಯ ನನಗೆ ಅರ್ಥವಾಗುವಂತೆ ಮಾಡಿದರು.
– ಆದರೆ ಇದು ಅರ್ಥವಾಗಲು ನನಗೆ ಸ್ವಲ್ಪ ಸಮಯ ಹಿಡಿಯಿತು, ಆದರೆ ಇವತ್ತು ನನ್ನ ಮನಸ್ಸಿನಲ್ಲಿದ್ದ ದ್ವೇಷ ಭಾವನೆಯನ್ನು ನಾನು ಹೋಗಲಾಡಿಸಿದ್ದೇನೆ.
– ಈ ರೀತಿ ಯೋಚಿಸುವುದು ಸುಲಭವಲ್ಲ ಆದರೆ ಇದು ಕಷ್ಟಕರವೂ ಅಲ್ಲ
– ನಾನು ಹೀಗೆ ಮಾಡಬಹುದು ಎಂದಾದರೆ, ನೀವು ಸಹ ಹೀಗೆ ಮಾಡಬಹುದು.
– ಇವತ್ತು, ನಾನು ನನ್ನ ತಂದೆಯ ಹಾಗೆಯೇ ಓರ್ವ ಯೋಧಳಾಗಿದ್ದೇನೆ.
– ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿಗಾಗಿ ನಾನು ಹೋರಾಡುತ್ತಿದ್ದೇನೆ.
– ಯಾಕೆಂದರೆ, ಒಂದುವೇಳೆ ನಮ್ಮ ನಡುವೆ ಯುದ್ಧ ನಡೆಯದೇ ಇರುತ್ತಿದ್ದಲ್ಲಿ ಇವತ್ತು ನನ್ನ ತಂದೆ ಬದುಕಿರುತ್ತಿದ್ದರು!
– ನಾನು ಈ ವಿಡಿಯೋವನ್ನು ಮಾಡುತ್ತಿರುವ ಉದ್ದೇಶವೇನೆಂದರೆ ಎರಡೂ ದೇಶಗಳ ಸರಕಾರಗಳು ನಟನೆಯನ್ನು ನಿಲ್ಲಿಸಬೇಕು…
– ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.
– 2 ವಿಶ್ವಯುದ್ಧಗಳ ಬಳಿಕ ಫ್ರಾನ್ಸ್‌ ಮತ್ತು ಜರ್ಮನಿ ಮಿತ್ರರಾಷ್ಟ್ರಗಳಾಗಲು ಸಾಧ್ಯವೆಂದಾದರೆ…
– ಜಪಾನ್‌ ಮತ್ತು ಅಮೆರಿಕಾ ತಮ್ಮ ನಡುವಿನ ದ್ವೇಷವನ್ನು ಮರೆತು ಪ್ರಗತಿಗಾಗಿ ಒಗ್ಗೂಡಲು ಸಾಧ್ಯವಿದೆಯೆಂದಾದರೆ…

– ನಾವ್ಯಾಕೆ ಒಂದಾಗಲು ಸಾಧ್ಯವಿಲ್ಲ…??
– ಭಾರತ ಮತ್ತು ಪಾಕಿಸ್ಥಾನದ ಸಾಮಾನ್ಯ ಪ್ರಜೆಗಳು ಶಾಂತಿಯನ್ನು ಬಯಸುತ್ತಾರೆ… ಯುದ್ಧವನ್ನಲ್ಲ.
– ಎರಡೂ ರಾಷ್ಟ್ರಗಳ ರಾಜಕೀಯ ನಾಯಕತ್ವದ ಇಚ್ಛಾಶಕ್ತಿಯನ್ನು ನಾನು ಪ್ರಶ್ನಿಸುತ್ತಿದ್ದೇನೆ.
– ತೃತೀಯ ದರ್ಜೆಯ ನಾಯಕತ್ವದಡಿಯಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗುವ ಕನಸನ್ನು ನಾವು ಕಾಣುವುದಕ್ಕೆ ಸಾಧ್ಯವಿಲ್ಲ.
– ದಯವಿಟ್ಟು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಪರಿಣಾಮಕಾರಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಸಮಸ್ಯೆಯನ್ನು ಪರಿಹರಿಸಿ
– ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಳ್ಳಲಿ…
– ಸರಕಾರಿ ಪ್ರಾಯೋಜಿತ ಗೂಢಚಾರಿಕೆ ನಿಲ್ಲಲಿ…
– ಸರಕಾರಿ ಪ್ರಾಯೋಜಿತ ದ್ವೇಷ ಅಂತ್ಯವಾಗಲಿ…
– ಎರಡೂ ಕಡೆಯ ಗಡಿಗಳಲ್ಲಿ ಜನರು ಸಾಯುವುದು ಇನ್ನು ಸಾಕು.
– ಎಲ್ಲವೂ ಕೊನೆಯಾಗಲಿ…!
– ತನ್ನ ತಂದೆಯನ್ನು ಕಳೆದುಕೊಂಡ ಇನಷ್ಟು ಗುರ್ ಮೆಹರ್ ಕೌರ್ ಇಲ್ಲದ ಜಗತ್ತಿನಲ್ಲಿ ನಾನು ವಾಸಿಸಲು ಬಯಸುತ್ತಿದ್ದೇನೆ.
– ಇದು ನನ್ನೊಬ್ಬಳ ನೋವಿನ ಕಥೆಯಲ್ಲ ; ನನ್ನಂತೆ ಅನೇಕರು ಇದೇ ರೀತಿಯ ನೋವನ್ನು ಅನುಭವಿಸುತ್ತಿದ್ದಾರೆ.
– ಶಾಂತಿಗಾಗಿ ಧ್ವನಿಗೂಡಿಸೋಣ ; ಒಂದಾಗೋಣ…
– ನೀವೂ ಶಾಂತಿಯನ್ನು ಬಯಸುವವರಾಗಿದ್ದಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿ…
… ಎಂಬಲ್ಲಿಗೆ ಈ ವಿಡಿಯೋ ಮುಕ್ತಾಯಗೊಳ್ಳುತ್ತದೆ. ಈ ಪ್ರಕರಣದಲ್ಲಿ ಗುರ್ ಮೆಹರ್ ಕೌರ್ ಮಾಡಿದ ತಪ್ಪಾದರೂ ಏನು ಎಂಬುದನ್ನು ನಾಡಿನ ಪ್ರಜ್ಞಾವಂತ ನಾಗರಿಕರೇ ನಿರ್ಧರಿಸಬೇಕಷ್ಟೇ…!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next