Advertisement

ಎಚ್‌.ಕೆ.ಪಾಟೀಲ್‌ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ

07:08 AM Jun 03, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ನಿಯಂತ್ರಣ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ಆರೋಪ ಸಂಬಂಧ ಸ್ಪೀಕರ್‌ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಎಚ್‌.ಕೆ. ಪಾಟೀಲ್‌ ವಿರುದ್ಧ ಬಿಜೆಪಿ  ಸದಸ್ಯರು ಬೇಸರ ಹೊರಹಾಕಿದ್ದಾರೆಂದು ಹೇಳಲಾಗಿದೆ. ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ 20 ಸದಸ್ಯರ ಪೈಕಿ ಈಶ್ವರ್‌ ಖಂಡ್ರೆ ಹೊರತುಪಡಿಸಿ 19 ಸದಸ್ಯರು ಹಾಜರಿದ್ದು, ಆ ಪೈಕಿ ಬಿಜೆಪಿಯ ಸದಸ್ಯರು, ಸಮಿತಿಯ  ಅಧ್ಯಕ್ಷರಾದ ನೀವು ಸಮಿತಿಯ ಚೌಕಟ್ಟು ಮೀರಿದ್ದೀರಿ, ಪತ್ರಿಕೆಗಳ ಮುಂದೆ ಹೋಗಿ ನಿಮಗೆ ಬೇಕಾದ್ದು ಮಾತ್ರ ಹೇಳಿದ್ದೀರಿ.

Advertisement

ಹೀಗಾಗಿ, ನಿಮ್ಮ ವಿರುದ್ಧವೇ ಹಕ್ಕುಚ್ಯುತಿ ಯಾಕೆ ಮಂಡಿಸಬಾರದು ಎಂದು ಪ್ರಶ್ನಿಸಿದರು ಎಂದು ತಿಳಿದು  ಬಂದಿದೆ. ಸಮಿತಿಯ ಕೆಲಸ ಮಾಹಿತಿ ಸಂಗ್ರಹಿಸಿ ನೋಟಿಸ್‌ ಜಾರಿ ಮಾಡಿ ವರದಿ ಸಲ್ಲಿಸುವುದು. ಆ ವರದಿ ಬಗ್ಗೆ ಸ್ಪೀಕರ್‌ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಕ್ರಮ. ಅದು ಬಿಟ್ಟು ಈಗಲೇ ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ  ಎಂದು ಕೆ.ಜಿ.ಬೋಪಯ್ಯ ಸೇರಿ ಹಲವು ಸದಸ್ಯರು ಮುಗಿಬಿದ್ದರು.

ಈಹಂತದಲ್ಲಿ ಸಭೆಯಲ್ಲಿದ್ದ ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಅವರು ಸಹ, ಸ್ಪೀಕರ್‌ ವಿವೇಚನೆ ಹಾಗೂ ಅಧಿಕಾರ ಪ್ರಶ್ನಿಸುವುದು ಸರಿಯಲ್ಲ. ನಾವು ಸಮಿತಿಯ ಗೌರವವನ್ನೂ ಕಾಪಾಡಬೇಕು.  ಸ್ಪೀಕರ್‌ ಅವರ ಬಳಿಯೇ ಚರ್ಚಿಸಿ ಪ್ರಕರಣ ಅಂತ್ಯ ಹಾಡೋಣ ಎಂದು ಸಲಹೆ ನೀಡಿದರು ಎಂದು ಹೇಳಲಾಗಿದೆ. ಸಭೆಯ ನಂತರ ಮಾತನಾಡಿದ ಎಚ್‌. ಕೆ.ಪಾಟೀಲ್‌, ಇಂದಿನ ಸಭೆಯಲ್ಲಿ ಸ್ಪೀಕರ್‌ ಹಾಗೂ ನಾನು ಒಂದು ಸಭೆ ನಡೆಸಬೇಕು  ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಅವರ ಜತೆ ಸಭೆ ನಡೆಸಿ ಭ್ರಷ್ಟಾಚಾರ ದೂರಿನ ಬಗ್ಗೆ ಪರಿಶೀಲನೆಗೆ ಅವಕಾಶ ಕೋರಲಾಗುವುದು. ಈ ಸಮಿತಿಯನ್ನು ವಿಧಾನಸಭೆಯೇ ರಚನೆ ಮಾಡಿದೆ. ಎರಡೂ ಸದನಗಳ ಸದಸ್ಯರು ಇದ್ದಾರೆ. ಸ್ಪೀಕರ್‌  ವಿರುದ್ಧ ಹಕ್ಕುಚ್ಯುತಿ ಮಂಡಿಸುವ ವಿಚಾರ ಚರ್ಚೆಗೆ ಬಂತಾದರೂ ಅದಕ್ಕೆ ಮೊದಲು ಸ್ಪೀಕರ್‌ ಜತೆ ಸಭೆ ನಡೆಸಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next