Advertisement

ರೆಸಾರ್ಟ್‌ನಲ್ಲಿ ಚರ್ಚೆ, ಕ್ರೀಡೆಯೊಂದಿಗೆ ದಿನ ಕಳೆದ ಬಿಜೆಪಿ ಶಾಸಕರು

11:06 PM Jul 16, 2019 | Team Udayavani |

ಬೆಂಗಳೂರು: ಮಂಗಳವಾರ ವಿಧಾನಸಭೆ ಕಲಾಪ ಇರದ ಕಾರಣ ಯಲಹಂಕ ಬಳಿಯ ರೆಸಾರ್ಟ್‌ನಲ್ಲಿ ತಂಗಿರುವ ಬಿಜೆಪಿ ಶಾಸಕರು ಇಡೀ ದಿನ ಸುಪ್ರೀಂಕೋರ್ಟ್‌ ವಿಚಾರಣೆ ಕುರಿತು ಮಾತುಕತೆ, ಹಿರಿಯ ನಾಯಕರೊಂದಿಗೆ ಚರ್ಚೆ, ಸಂವಾದದಲ್ಲಿ ಕಳೆದರು.

Advertisement

ಗುರು ಪೂರ್ಣಿಮೆ ಪ್ರಯುಕ್ತ ಕೆಲವರು ಸಮೀಪದ ದೇವಸ್ಥಾನಗಳಿಗೆ ತೆರಳಿದರೆ ಇನ್ನೂ ಹಲವು ಶಾಸಕರು ರೆಸಾರ್ಟ್‌ನಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರವೂ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಲಿರುವ ಶಾಸಕರು, ಗುರುವಾರ ಬೆಳಗ್ಗೆ ನೇರವಾಗಿ ವಿಧಾನಸಭೆಗೆ ಆಗಮಿಸಲಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತಂತೆ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 3ರವರೆಗೆ ವಾದ- ಪ್ರತಿವಾದ ಆಲಿಸಿತು. ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ನಿರ್ಣಾಯಕರೆನಿಸಿರುವ ಶಾಸಕರ ರಾಜೀನಾಮೆ ಅಂಗೀಕಾರ ಕುರಿತಂತೆ ವಾದಿ, ಪ್ರತಿವಾದಿಗಳು ಮಂಡಿಸಿದ ವಿಚಾರದ ಬಗ್ಗೆಯೇ ಶಾಸಕರು ಚರ್ಚೆ ನಡೆಸಿದರು. ಕೆಲವರು ಸುದ್ದಿವಾಹಿನಿ, ಆಪ್ತರು, ಕಾನೂನು ತಜ್ಞರಿಂದ ಮಾಹಿತಿ ಪಡೆದು ಮಾತುಕತೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಸುಪ್ರೀಂಕೋರ್ಟ್‌ ತೀರ್ಪಿನತ್ತ ಚಿತ್ತ: ವಾದ- ಪ್ರತಿ ವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್‌ ಬುಧವಾರ ತೀರ್ಪು ಪ್ರಕಟಿಸಲಿದ್ದು, ಮೈತ್ರಿ ಪಕ್ಷಗಳು, ಅತೃಪ್ತ ಶಾಸಕರಂತೆ ಬಿಜೆಪಿ ಕೂಡ ತೀರ್ಪಿನತ್ತಲೇ ದೃಷ್ಟಿ ನೆಟ್ಟಿದೆ. ಮಂಗಳವಾರದ ವಿಚಾರಣೆ ಬಳಿಕ ಹಿರಿಯ ನಾಯಕರು ಕಾನೂನು ತಜ್ಞರೊಂದಿಗೂ ಚರ್ಚೆ ನಡೆಸಿದ್ದು, ಉತ್ತಮ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಸಂಜೆ ಹೊತ್ತಿಗೆ ಬಹಳಷ್ಟು ಶಾಸಕರು ನಿರಾಳರಾಗಿದ್ದರು.

ಸೋಮವಾರದಿಂದ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮೀಪದ ಸಾಯಿ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದರು. ಇನ್ನೂ ಕೆಲ ಶಾಸಕರ ಗುಂಪು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಿತು.

Advertisement

ಕ್ರಿಕೆಟ್‌ ಆಡಿ ಸಂಭ್ರಮ: ಸಂಜೆ ಹೊತ್ತಿಗೆ ಶಾಸಕರು ಕ್ರಿಕೆಟ್‌ ಆಟವಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬ್ಯಾಟಿಂಗ್‌ ಮಾಡುವ ಮೂಲಕ ಶಾಸಕರನ್ನು ಹುರಿದುಂಬಿಸಿದರು.

ಹಿರಿಯ- ಕಿರಿಯರ ಸಂವಾದ: ಯಡಿಯೂರಪ್ಪ ಸೇರಿ ಹಿರಿಯ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಇತರರು ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿರುವುದರಿಂದ ಕಿರಿಯ ಶಾಸಕರು ಅವರೊಂದಿಗೆ ಆಗಾಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಮಧ್ಯಾಹ್ನ ಯಡಿಯೂರಪ್ಪ ಅವರೊಂದಿಗೆ ಒಟ್ಟಿಗೆ ಊಟ ಸವಿದ ಶಾಸಕರು, ಬಳಿಕ ಅವರೊಂದಿಗೂ ಕೆಲ ಹೊತ್ತು ಮಾತುಕತೆ ನಡೆಸಿದರು ಎನ್ನಲಾಗಿದೆ.

ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಸಮೀಪದ ಚಲ್ಲಹಳ್ಳಿ ಗ್ರಾಮದವರು ರೆಸಾರ್ಟ್‌ನಲ್ಲಿ ಭಜನೆ, ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಕುಮಾರ್‌ ಬಂಗಾರಪ್ಪ, ಎಂ.ಪಿ.ಕುಮಾರಸ್ವಾಮಿ, ಎಸ್‌.ಆರ್‌.ವಿಶ್ವನಾಥ್‌, ಕಳಕಪ್ಪ ಬಂಡಿ ಅವರು ಗೀತ ಗಾಯನ ನಡೆಸಿ, ಗಮನ ಸೆಳೆದರು.

ಹಿರಿಯ ನಾಯಕರ ವಿಶ್ವಾಸ: ಸುಪ್ರೀಂಕೋರ್ಟ್‌ ಬುಧವಾರ ನೀಡಲಿರುವ ತೀರ್ಪು ಅತೃಪ್ತ ಶಾಸಕರ ಪರವಾಗಿಯೇ ಇರಲಿದೆ ಎಂಬ ವಿಶ್ವಾಸ ಪಕ್ಷದ ಹಿರಿಯ ನಾಯಕರಲ್ಲಿದ್ದಂತಿದೆ. ಹಾಗಾಗಿ, ಇದೇ ವಿಚಾರವನ್ನು ಶಾಸಕರಿಗೂ ತಿಳಿಸಿ ಎಲ್ಲರೂ ಒಟ್ಟಿಗೆ ಸಂಘಟಿತರಾಗಿರುವಂತೆ ಹಿರಿಯ ನಾಯಕರು ಸೂಚಿಸಿದರು ಎಂದು ಮೂಲಗಳು ಹೇಳಿವೆ.

ತೀರ್ಪು ಆಧರಿಸಿ ರಾಜೀನಾಮೆ ಬಗ್ಗೆ ನಿರ್ಧಾರ: ಇನ್ನೂ ಮೂರ್‍ನಾಲ್ಕು ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಬುಧವಾರ ಸುಪ್ರೀಂಕೋರ್ಟ್‌ ನೀಡುವ ತೀರ್ಪು ಆಧರಿಸಿ ಅವರು ಮುಂದುವರಿಯಲಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪು ನಿರ್ಣಾಯಕವೆನಿಸಿದ್ದು, ಅದನ್ನು ಆಧರಿಸಿ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕೆಲ ಶಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next