Advertisement

ಟಿಪ್ಪು ಜಯಂತಿಗೆ ಭುಗಿಲೆದ್ದ ಆಕ್ರೋಶ

06:00 AM Nov 10, 2018 | Team Udayavani |

ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಸಜ್ಜಾಗಿರುವ ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶದ ಧ್ವನಿ ಜೋರಾಗಿದೆ. ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ, ಮೈಸೂರು, ಮಂಡ್ಯ, ಕೋಲಾರ, ಹಾಸನ ಸೇರಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಮಾಡಲಾಗಿದೆ.

Advertisement

ಚಿಕ್ಕಮಗಳೂರಿನಲ್ಲಿ ನಿಷೇಧಾಜ್ಞೆ ನಡುವೆ ಪ್ರತಿಭಟನೆ ನಡೆಸಲು ಮುಂದಾದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಬಿಜೆಪಿ ಕಚೇರಿಯಿಂದ ಸಿಎಂ ಕುಮಾರಸ್ವಾಮಿ ಪ್ರತಿಕೃತಿ ಹಿಡಿದು ರಾಜ್ಯ ಸರ್ಕಾರ ಹಾಗೂ ಟಿಪ್ಪು ಸುಲ್ತಾನ್‌ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಆಗ ಪೊಲೀಸರು ಬಂಧಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಬೆಳಗಾವಿಯಲ್ಲಿ ಸುರೇಶ ಅಂಗಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ದೇಶದ್ರೋಹಿ, ಮತಾಂಧ ಹಾಗೂ ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ಸರ್ಕಾರ ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಬಾಗಲಕೋಟೆಯಲ್ಲಿ ಟಿಪ್ಪು ಜಯಂತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹರಿಹರದಲ್ಲೂ ಟಿಪ್ಪು ಜಯಂತಿ ವಿರೋಧಿ  ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಬೀದರನಲ್ಲಿ ಬಿಜೆಪಿ, ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಬಂಧಿ ಸಿ ಮಧ್ಯಾಹ್ನದ ನಂತರ ಬಿಡುಗಡೆಗೊಳಿಸಿದರು. 

Advertisement

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮದಕರಿ ನಾಯಕ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಶಾಸಕರು ಸೇರಿ  ಎಲ್ಲ ಕಾರ್ಯಕರ್ತರನ್ನು ಬಂಧಿ ಸಿ ಐಮಂಗಲ ಪೊಲೀಸ್‌ ತರಬೇತಿ ಶಾಲೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು. ಕೆಲಕಾಲ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಹಾವೇರಿಯಲ್ಲೂ ಗದ್ದಲ: ಹಾವೇರಿಯಲ್ಲೂ ಕರಾಳ ದಿನಾಚರಣೆಗೆ ಮುಂದಾಗಿದ್ದ ಬಿಜೆಪಿ ಮುಖಂಡರು ಹಾಗೂ ಮಾಜಿ ಶಾಸಕರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಬಿಜೆಪಿ ಜಿಲ್ಲಾ ಕಚೇರಿಯಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಸರ್ಕಾರದ ಪ್ರತಿಕೃತಿ ದಹಿಸುವ ಯೋಜನೆ ಬಿಜೆಪಿ ಜಿಲ್ಲಾ ಘಟಕ ಹಾಕಿಕೊಂಡಿತ್ತು. ಆದರೆ, ಪಕ್ಷದ ಮುಖಂಡರು, ಕಾರ್ಯಕರ್ತರು ಜಿಲ್ಲಾ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ವಾಹನದಲ್ಲಿ ನಗರ ಪೊಲೀಸ್‌ ಠಾಣೆಗೆ ಕರೆತಂದು, ಬಳಿಕ ಬಿಡುಗಡೆಗೊಳಿಸಿದರು.
ಕಲಬುರಗಿಯಲ್ಲೂ ಬಿಜೆಪಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ‌ರು.

ಮೈಸೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್‌, ಆಮಂತ್ರಣದಲ್ಲಿ ಹೆಸರು ಹಾಕಿಸಿಕೊಳ್ಳದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಸಂದೇಶ ಕೊಟ್ಟಿದ್ದಾರೆ. ಆದರೆ, ರಾಹುಲ್‌ಗಾಂಧಿಯ ಕಾಂಗ್ರೆಸ್‌ ಋಣ  ಕುಮಾರಸ್ವಾಮಿ ತಲೆಯ ಮೇಲಿದೆ. ಹೀಗಾಗಿ ಅಸಹಾಯಕರಾಗಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಕಾರವಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ವಿಜಯಪುರ ಸೇರಿ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆಮಂತ್ರಣ ಪತ್ರಿಕೆಯಿಂದ ಸಚಿವ
ಅನಂತ ಹೆಸರು ಕೈ ಬಿಟ್ಟ ಜಿಲ್ಲಾಡಳಿತ

ಬೆಳಗಾವಿ: ಟಿಪ್ಪು ಜಯಂತಿ ಆಚರಣೆ  ವಿರೋಧಿಸಿ ಯಾವುದೇ ಕಾರಣಕ್ಕೂ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸೂಚಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ. ಆದರೆ ಜಿಲ್ಲೆಯ ಬಿಜೆಪಿ ಮುಖಂಡರ ಹೆಸರನ್ನು ಹಾಕಲಾಗಿದೆ. ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿಯ ಎಲ್ಲ ಜನಪ್ರತಿನಿಧಿಗಳ ಹೆಸರುಗಳಿವೆ. ಬಿಜೆಪಿಯ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಅತಿಥಿಗಳಾಗಿ ಸಂಸದರಾದ ಸುರೇಶ ಅಂಗಡಿ, ಡಾ| ಪ್ರಭಾಕರ ಕೋರೆ ಸೇರಿ ಜಿಲ್ಲೆಯ 18 ಶಾಸಕರ ಹೆಸರುಗಳಿವೆ. ಶಿಷ್ಟಾಚಾರದಂತೆ ಎಲ್ಲರ ಹೆಸರನ್ನೂ ಜಿಲ್ಲಾಡಳಿತ ನಮೂದಿಸಿದೆ.

ಬಿಜೆಪಿ ವಿರೋಧಕ್ಕೆ ಕಾಂಗ್ರೆಸ್‌ ಪ್ರತಿಭಟನೆ
ಟಿಪ್ಪು ಜಯಂತಿ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿಯವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಚಾಮರಾಜ ವಿಧಾನಸಭಾ ಕ್ಷೇತ್ರದ ದೇವರಾಜ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಮೈಸೂರಿನ ಚಿಕ್ಕ ಗಡಿಯಾರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಜನತೆ ಸೌಹಾರ್ದತೆಯಿಂದ ಗಲಭೆ, ಘರ್ಷಣೆಗಳಿಲ್ಲದೆ ಸಹೋದರತ್ವದಿಂದ ಬದುಕುತ್ತಿರುವುದನ್ನು ಸಹಿಸದ ಬಿಜೆಪಿ ಮುಖಂಡರು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಟಿಪ್ಪುಜಯಂತಿ ವಿರೋಧಿಸುವ ಹೆಸರಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಶ್ರೀರಂಗಪಟ್ಟಣದಲ್ಲಿ ಭದ್ರತೆ
ಶ್ರೀರಂಗಪಟ್ಟಣ:
ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್‌ ಇಲಾಖೆ ಶ್ರೀರಂಗಪಟ್ಟಣ ಹಾಗೂ ತಾಲೂಕಿನ ಗಡಿಭಾಗದವರೆಗೂ ಭಾರೀ ಬಿಗಿ ಭದ್ರತೆ ಕೈಗೊಂಡಿದೆ. ಪಟ್ಟಣದಲ್ಲಿ 1 ಎಸ್‌ಪಿ, 2 ಎಎಸ್‌ಪಿ 4 ಡಿವೈಎಸ್ಪಿ, 12 ಸಿಪಿಐ, 20 ಪಿಎಸ್‌ಐ, 2 ಕೆಎಸ್‌ಆರ್‌ಪಿ, 5 ಡಿಆರ್‌ ಸೇರಿ 600ಕ್ಕೂ ಹೆಚ್ಚು ಪೊಲೀಸ್‌ ಹಾಗೂ 250 ಮಂದಿ ಹೋಮ್‌ ಗಾರ್ಡ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಟಿಪ್ಪು ಸುಲ್ತಾನ್‌ ಜಯಂತಿಗೆ ವಿರೋಧ ಮಾಡುತ್ತಿದೆ. ಆದರೆ ಅವರಿಗೆ ಟಿಪ್ಪುವಿನ ಹೋರಾಟದ ಇತಿಹಾಸ ಸರಿಯಾಗಿ ತಿಳಿದಿಲ್ಲ.  ಇತಿಹಾಸ ತಿಳಿಯದೆಯೇ ಮಾತನಾಡುವುದು ಸರಿಯಲ್ಲ. ಜಯಂತಿ ಆಚರಣೆಗೆ ವಿರೋಧ ಸಲ್ಲ.
– ಸೀತಾರಾಮ್‌ ಯಚೂರಿ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next