Advertisement

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

12:11 AM Sep 18, 2024 | Team Udayavani |

ಬಿಜೆಪಿಗೆ ಇಡಿ ರಾಜ್ಯವೇ ಒಪ್ಪಿಕೊಳ್ಳುವ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ ಪಕ್ಷದ ಹಿರಿಯ ನಾಯಕರು ಈಗ ನೇಪಥ್ಯಕ್ಕೆ ಸರಿದಿರುವುದರಿಂದ ಸಹಜವಾಗಿಯೇ ನಾಯಕತ್ವಕ್ಕಾಗಿ ಸಂಘರ್ಷ ಕಾಣಿಸಿಕೊಳ್ಳುತ್ತಿರುವುದು ಸಹಜ. ಪಕ್ಷಕ್ಕೆ ಇದೊಂದು ಸಂಕ್ರಮಣ ಕಾಲವಾಗಿದ್ದು, ಹಿರಿಯ ತಲೆಮಾರಿನ ಅನಂತರ ಬಿಜೆಪಿಗೆ ಇಡಿ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ. ಹಾಗೆಂದು ಇದನ್ನು ಭಿನ್ನಮತ ಎಂದು ಹೇಳುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌ ಅಭಿಪ್ರಾಯಪಟ್ಟರು. ಉದಯವಾಣಿಯ ನೇರಾನೇರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಪಕ್ಷದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಿದರು.

Advertisement

ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಸಾಮಾನ್ಯವಾಗಿ ಆಡಳಿತ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಳಜಗಳ ವಿಪಕ್ಷ ಬಿಜೆಪಿಯನ್ನು ಕಾಡುತ್ತಿದೆ. ಯಾಕೆ ಈ ಸಂಘರ್ಷ ? ಇದು ಸರಿಪಡಿಸಲಾಗದ ಸಮಸ್ಯೆಯೇ ?
ಹೌದು. ನಮ್ಮಲ್ಲಿ ಸಂಘರ್ಷ ಇರುವುದು ಎಲ್ಲರಿಗೂ ಕಾಣುತ್ತಿದೆ. ಜಗಳ, ಅಸಮಾಧಾನ, ಟೀಕೆ, ನಾಯಕತ್ವಕ್ಕಾಗಿನ ಮೇಲಾಟ ಎಲ್ಲವೂ ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿರುವುದು ಸತ್ಯ. ಆದರೆ ಅದಕ್ಕೊಂದು ಪ್ರಬಲ ಕಾರಣವಿದೆ. ನಿಮಗೆಲ್ಲ ಗೊತ್ತಿರುವಂತೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರುಗಳಾದ ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಡಿ.ವಿ.ಸದಾನಂದ ಗೌಡ, ರಾಮಚಂದ್ರೇಗೌಡ ಸೇರಿದಂತೆ ಹಿರಿಯರು ಸಕ್ರಿಯ ರಾಜಕಾರಣದಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಸಂಘಟನೆ ಹಾಗೂ ನಾಯಕತ್ವದ ದೃಷ್ಟಿಯಿಂದ ಇದು ಬಿಜೆಪಿಗೆ ಸಂಕ್ರಮಣದ ಕಾಲ. ಎರಡನೇ ತಲೆಮಾರಿನ ಮಹತ್ವಾಕಾಂಕ್ಷಿಗಳಿಗೆ ಇದು ತಮ್ಮ ನಾಯಕತ್ವವನ್ನು ಪ್ರತಿಷ್ಠಾಪಿಸಿಕೊಳ್ಳುವ ಸವಾಲಿನ ಸಂದರ್ಭ. ಹೀಗಾಗಿ ಸಂಘರ್ಷ ಸಹಜ.

ಅಂದರೆ ಎಲ್ಲರೂ ಒಪ್ಪುವ ನಾಯಕತ್ವಕ್ಕಾಗಿನ ಪೈಪೋಟಿಯೇ ?
ಹಿರಿಯ ತಲೆಮಾರಿನ ನಂತರ ಬಿಜೆಪಿಗೆ ಇಡಿ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ. ಈಗಿರುವ ಹೊಸ ತಂಡ ಒಂದೊಂದು ಪ್ರದೇಶಕಷ್ಟೇ ಸೀಮಿತವಾದ ಶಕ್ತಿಯನ್ನು ಸಂಚಯಿಸಿಕೊಂಡಿದೆ. ಇಡೀ ರಾಜ್ಯಕ್ಕೆ ತನ್ನ ಪ್ರಭಾ ವಲಯವನ್ನು ಹಿಗ್ಗಿಸಿಕೊಳ್ಳುವಂಥ ನಾಯಕತ್ವ ಇನ್ನಷ್ಟೇ ಲಭಿಸಬೇಕಿದೆ. ಎಲ್ಲ ವರ್ಗ, ಪ್ರದೇಶ, ಜಾತಿ, ಸಮುದಾಯ ಒಪ್ಪುವಂಥ ನಾಯಕತ್ವ ಬೆಳೆಯಬೇಕು. ಹೀಗಾಗಿ ಬಿಜೆಪಿಯಲ್ಲಿ ಈಗ ಸಂಘರ್ಷದಂತೆ ಕಾಣುವ ಬೆಳವಣಿಗೆಗಳು ಕಾಣಿಸುತ್ತಿದೆ. ಇದು ಸಾಮರ್ಥ್ಯ ಸಾಬೀತು ಮಾಡುವ ಹಂತದ ಸಹಜ ಕ್ರಿಯೆಯಷ್ಟೇ. ಇದನ್ನು ಭಿನ್ನಮತ ಎಂದು ವ್ಯಾಖ್ಯಾನಿಸುವುದು ತಪ್ಪು. ಹಂತ ಹಂತವಾಗಿ ಇದು ತಿಳಿಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ.

ಬಿಜೆಪಿ ಎಂದರೆ ಹಿಂದುತ್ವ ಹಾಗೂ ಸಿದ್ಧಾಂತದ ಪಕ್ಷ. ಆದರೆ ಈಗ ಐಡಿಯಾಲಜಿ ಹಿನ್ನೆಲೆಯ ನಾಯಕತ್ವ ಕ್ಷೀಣಿಸುತ್ತಿದೆಯೇ ?
ನಾವು ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿಯ ಆಧಾರದಲ್ಲಿ ಪಕ್ಷ ಕಟ್ಟಿ ಬೆಳೆದವರು. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಇರುವವರು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಆದರೆ ಈ ಹಿಂದೆ ಸರಕಾರ ರಚನೆ ಮಾಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಹೊಸಬರು ಹಾಗೂ ಅನ್ಯಪಕ್ಷದವರು ಬಿಜೆಪಿಗೆ ವಲಸೆ ಬಂದರು. ಆಗ ನಮ್ಮ ಸೈದ್ಧಾಂತಿಕ “ಹೊಳಪು’ ತೋರಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈಗ ಹೊಸಬರನ್ನು ನಮ್ಮ ಸಿದ್ಧಾಂತದ ಜತೆಗೆ ಜೋಡಿಸುತ್ತಾ ಬಿಜೆಪಿಯ ವಾಸ್ತವ ವಿಚಾರಧಾರೆಯನ್ನು ಗಟ್ಟಿಯಾಗಿಸಬೇಕಿದೆ. ಇದನ್ನೇ ಜನರು ನಿರೀಕ್ಷೆ ಮಾಡುತ್ತಿದ್ದಾರೆ.

ಸಂಕ್ರಮಣ ಕಾಲದ ಸಂಘರ್ಷ ಶಮನಕ್ಕೆ ಸಂಘ ಸಮನ್ವಯಕ್ಕೆ ಬರಬೇಕಾಯಿತಾ?
ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಬೇಕು ಎಂಬ ಕೂಗು ಇದ್ದುದರಿಂದ ಸಮನ್ವಯ ಸಭೆ ನಡೆದಿದೆ. 30-40 ಜನ ಶಾಸಕರನ್ನು ಒಳಗೊಂಡ ಸಾಂ ಕ ಶಕ್ತಿಯೊಂದಿಗೆ ಬಿಜೆಪಿಯನ್ನು ಮುನ್ನಡೆಸಬೇಕೆಂಬ ಅಭಿಪ್ರಾಯ ಸಹ ಕೇಳಿ ಬಂದಿದೆ. ಸಂವಾದ, ಸಲಹೆ, ಸಾಮೂಹಿಕ ನಾಯಕತ್ವ ಹಾಗೂ ಸಮನ್ವಯದ ಮೂಲಕ ಪಕ್ಷವನ್ನು ಮುನ್ನಡೆಸಬೇಕಾದ ಅಗತ್ಯದ ಕುರಿತು ಚರ್ಚೆ ನಡೆದಿದೆ.

Advertisement

ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ಕಾರ್ಯಶೈಲಿ ಹಾಗೂ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತವಾಯಿತು ಎಂಬ ಸುದ್ದಿ ಹರಡಿದೆ. ನಿಜವಾ ?
ಅಸಮಾಧಾನ ಸಹಜ. ಇದು ಪಕ್ಷದ ಆಂತರಿಕ ವಿಚಾರ. ನಾವು ಪಕ್ಷದೊಳಗಿನ ಆಂತರಿಕ ವೇದಿಕೆಯಲ್ಲೇ ಇದಕ್ಕೆ ಪರಿಹಾರ ಹುಡುಕುತ್ತೇವೆ. ಉತ್ತರ ಸಿಗುತ್ತದೆ.

ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಆಕ್ಷೇಪವಾದ ಬಗ್ಗೆ ನೀವು ಸ್ಪಷ್ಟೀಕರಣ ಕೊಟ್ಟಿಲ್ಲ…
ನಾನು ಪಕ್ಷದ ಹಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಈ ಬಗ್ಗೆ ಮಾತನಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅವರ ಸಮವಯಸ್ಕನಾಗಿ ಒಂದು ಮಾತು ಹೇಳಬಲ್ಲೆ. ಒಟ್ಟಾರೆಯಾಗಿ ನಾನು ಈ ವಿದ್ಯಮಾನವನ್ನು ಅರ್ಥೈಸಿಕೊಂಡ ಪ್ರಕಾರ, ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ರಾಜ್ಯಮಟ್ಟದ ಸಂಘಟನಾತ್ಮಕ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಇದೇ ಮೊದಲು. ಅವರಿಗೆ ಇದು ಹೊಸ ಅನುಭವ ಆಗಿರುವುದರಿಂದ ಸವಾಲು ಸಹಜ. ಒಂದು ಪಕ್ಷದ ರಾಜ್ಯ ಘಟಕವನ್ನು ಮುನ್ನಡೆಸುವುದು ಸುಲಭವಲ್ಲ. ಅದಕ್ಕೆ ಅನುಭವ ಹಾಗೂ ಹಿರಿಯರ ಸಮ್ಮತಿ ಬೇಕಾಗುತ್ತದೆ. ಬಹುಶಃ ಅವರಿಗೆ ಸರ್ವಸ್ಪರ್ಶಿಯಾಗುವುದಕ್ಕೆ ಸಮಯಬೇಕಾಗಬಹುದು. ಆ ನಿಟ್ಟಿನಲ್ಲಿ ಅವರು ಪ್ರಯತ್ನಿಸಬಹುದು ಎಂದು ಭಾವಿಸುತ್ತೇನೆ. ನನಗೆ ಆ ಬಗ್ಗೆ ನಿರೀಕ್ಷೆ ಹಾಗೂ ವಿಶ್ವಾಸವಿದೆ.

ಅದೆಲ್ಲ ಸರಿ, ಪರಶುರಾಮ ಥೀಂ ಪಾರ್ಕ್‌ ವಿವಾದ ಕಳೆದ ಒಂದೂವರೆ ವರ್ಷದಿಂದ ನಿಮ್ಮನ್ನು ಕಾಡುತ್ತಿದೆ ಅದು ಎಲ್ಲಿಯವರೆಗೆ ಬಂತು… ?
ಹ್‌ ಹ್‌ ಹ್‌… ನಿಜ, ಕಳೆದ ಒಂದುವರೆ ವರ್ಷದಿಂದ ಅಕಾರಣವಾಗಿ ಇದು ನನ್ನನ್ನು ಕಾಡುತ್ತಿದೆ. ಸತ್ಯಾಸತ್ಯತೆಯ ಅರಿವಿದ್ದರೂ ಕಾಂಗ್ರೆಸ್‌ನ ಟೂಲ್‌ ಕಿಟ್‌ ಹೋರಾಟಗಾರರು ನನ್ನ ವ್ಯಕ್ತಿತ್ವವನ್ನು ಹಾಳು ಮಾಡುವುದಕ್ಕೆ ಉದ್ದೇಶಪೂರ್ವಕವಾಗಿಯೇ ಇದನ್ನು ಬಳಸಿಕೊಂಡರು. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, “ಪರಶುರಾಮ ಥೀಂ ಪಾರ್ಕ್‌ ನನ್ನ ಕನಸಿನ ಕೂಸು’. ಮುಂದಿನ ಹತ್ತು ವರ್ಷದಲ್ಲಿ ಇಡೀ ರಾಜ್ಯದ ಅತ್ಯಂತ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಈ ಥೀಂ ಪಾರ್ಕ್‌ನ್ನು ಮುಂದೊಂದು ದಿನ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ನನಗಿತ್ತು. ಆದರೆ ವೈಯಕ್ತಿಕ ರಾಜಕಾರಣಕ್ಕಾಗಿ ಇದಕ್ಕೆ ಅಡ್ಡಿಪಡಿಸಿದರು. ಕಾರ್ಕಳದ ಪ್ರವಾಸೋದ್ಯಮವನ್ನು ಹಾಳುಗೆಡವಿದರು.

ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಮೂರ್ತಿ ಫೈಬರ್‌ನಿಂದ ಮಾಡಿದ್ದು ಎಂಬ ಆರೋಪಕ್ಕೆ ನೀವು ಉತ್ತರಿಸಿಲ್ಲ…
ನಾನು 20 ವರ್ಷದಿಂದ ಶಾಸಕನಾಗಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಹೇಗೆ ವರ್ತಿಸಬೇಕೆಂಬ ಸಂಸ್ಕಾರವಿದೆ. ಹೀಗಿರುವಾಗ ಪರಶುರಾಮನ ವಿಗ್ರಹಕ್ಕೆ ಬಿಡುಗಡೆಯಾದ 2 ಕೋಟಿ ರೂ.ನಲ್ಲಿ ದುಡ್ಡು ಹೊಡೆಯುವ ಅಥವಾ ಪರ್ಸೆಂಟೇಜ್‌ ಪಡೆಯುವ ನೈತಿಕ ದಾರಿದ್ರé ನನಗೆ ಬಂದಿಲ್ಲ ! ಇಷ್ಟಕ್ಕೂ ಈ ಯೋಜನೆಗೆ ನಿಗದಿಯಾದ ಪೂರ್ಣ ಹಣ ಬಿಡುಗಡೆ ಯಾಗಿಯೇ ಇರಲಿಲ್ಲ. ಹೀಗಿರುವಾಗ ಭ್ರಷ್ಟಾಚಾರದ ಮಾತೆಲ್ಲಿಂದ ಬಂತು ? ಇನ್ನು ಫೈಬರ್‌ ಮೂರ್ತಿಯ ವಿಚಾರಕ್ಕೆ ಬರೋಣ, ಈ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಸಾರ್ವಜನಿಕವಾಗಿ ಲಭ್ಯವಿದೆ. ಮೂರ್ತಿ ಫೈಬರ್‌ನದ್ದಲ್ಲ ಎಂದು ಎನ್‌ಐಟಿಕೆಯ ತಂತ್ರಜ್ಞರು ವರದಿ ನೀಡಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಇಷ್ಟು ದಿನ ಮಾಡಿದ ಅಪಪ್ರಚಾರ ಸುಳ್ಳಲ್ಲವೇ? ಇದನ್ನು ಜನ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

ಬಿಜೆಪಿ ಕಾಲದ ಅಕ್ರಮಗಳ ತನಿಖೆಗೆ ಕಾಂಗ್ರೆಸ್‌ ಈಗ ಸಮಿತಿಯನ್ನೇ ಮಾಡಿದೆಯಲ್ಲ…
ಈ ಸಮಿತಿಗೆ ಸತ್ಯಾಸತ್ಯತೆಯ ಶೋಧಕ್ಕಿಂತ ದ್ವೇಷ ಸಾಧಿಸಬೇಕೆಂಬ ಭಾವನೆ ಇದೆ. ಸರಕಾರ ಬಂದು ಒಂದೂವರೆ ವರ್ಷವಾಯಿತು. ಇಷ್ಟೂ ದಿನ ಸರಕಾರ ಸುಮ್ಮನಿತ್ತು. ಈಗ ದಿನಕ್ಕೊಂದು ಕಾಂಗ್ರೆಸ್‌ ಸರಕಾರದ ಹಗರಣ ಆಚೆಗೆ ಬರುತ್ತಿದೆ. ಇದನ್ನು ಮುಚ್ಚಿಕೊಳ್ಳುವು­ದಕ್ಕಾಗಿ ತನಿಖಾ ಸಮಿತಿಯನ್ನು ಮುಂದಿಟ್ಟುಕೊಂಡು ಬೆದರಿಕೆಯ ಆಟ ಆಡುತ್ತಿದ್ದಾರೆ.

ಹಾಗಾದರೆ ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಹೋರಾಟದ ಸ್ವರೂಪವೇನು ?
ಇದೊಂದು ಅಭಿವೃದ್ಧಿ ಶೂನ್ಯ, ಹಗರಣಗಳ ಸರಕಾರ. ಇವರ ಹಗರಣದ ವಿರುದ್ಧ ದಿನಕ್ಕೊಂದು ಹೋರಾಟ ಮಾಡಿದರೂ ದಿನ ಕಡಿಮೆಯಾಬಹುದೇ ವಿನಾ ಹಗರಣ ಕಡಿಮೆಯಾಗುವುದಿಲ್ಲ. ನಾವು ಈಗಾಗಲೇ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೇವೆ, ಮೈಸೂರು ಚಲೋ ಪಾದಯಾತ್ರೆ ಮಾಡಿದ್ದೇವೆ. ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸರಕಾರದ ವಿರುದ್ಧ ಜನಾಂದೋಲನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪಕ್ಷ ನಡೆಸುತ್ತಿದೆ.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಅರ್ಹರ ನೇಮಕ ಸಂದರ್ಭದಲ್ಲಿ ನಿಮ್ಮ ಹೆಸರೂ ಕೇಳಿ ಬಂದಿತ್ತು. ಆದರೆ ಎರಡೂ ಸಿಗಲಿಲ್ಲ. ಇದಕ್ಕೆ ಜಾತಿ ಹಾಗೂ ವಂಶವಾದ ಅಡ್ಡಿಯಾಯಿತೇ ?
ನಾನು ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡವನ್ನಲ್ಲ. ಪಕ್ಷ ಯಾವಾಗ ಯಾವ ಜವಾಬ್ದಾರಿ ಕೊಟ್ಟಿದೆಯೋ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಯಾವುದೇ ಕಪ್ಪು ಚುಕ್ಕೆ, ಕಳಂಕ ಇಲ್ಲದೇ ಎರಡು ಇಲಾಖೆ ನಿರ್ವಹಿಸಿದ್ದೇನೆ. ಇಂದಲ್ಲ ನಾಳೆ ಒಳ್ಳೆಯ ದಿನ ಬಂದೇ ಬರುತ್ತದೆ.

ಬಿಜೆಪಿಯಲ್ಲಿ ಲಿಂಗಾಯತ ಲಾಬಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬರುತ್ತಿದೆಯಲ್ಲ….
ಮೇಲ್ನೋಟಕ್ಕೆ ಇದು ನಿಜ ಅನ್ನಿಸಬಹುದು. ಆದರೆ ನಾವು ಹಿಂದುತ್ವದ ಆಧಾರದಲ್ಲಿ ಎಲ್ಲ ಸಮುದಾಯವನ್ನು ಒಟ್ಟಿಗೆ ಮುನ್ನಡೆಸುತ್ತೇವೆ. ಹಿಂದುಳಿದ ವರ್ಗಕ್ಕೆ, ಸಣ್ಣ ಸಣ್ಣ ಸಮುದಾಯಕ್ಕೆ ಸ್ಥಾನಮಾನ ಸಿಗಬೇಕೆಂಬ ಕೂಗು ಇದ್ದೇ ಇದೆ. ಅದು ಸಹಜವೂ ಹೌದು.

ಉದಯವಾಣಿ ಸಂದರ್ಶನ: ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next