Advertisement

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೆಸರು; ಕೆಸಿಆರ್ ಪುತ್ರಿ ಕವಿತಾ ಆಕ್ರೋಶ

04:26 PM Dec 01, 2022 | Team Udayavani |

ಹೈದರಾಬಾದ್: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೆಸರಿಸಲಾಗಿರುವ ತೆಲಂಗಾಣ ಶಾಸಕಿ ಕೆ.ಕವಿತಾ ಅವರು, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಸಾಕಷ್ಟು ಮುಂಚಿತವಾಗಿಯೇ ಚುನಾವಣೆಯ ರಾಜ್ಯಗಳಿಗೆ ಆಗಮಿಸುತ್ತವೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

“8 ವರ್ಷಗಳ ಹಿಂದೆ ಪ್ರಧಾನಿ ಮೋದಿ ಸರಕಾರ ಬಂದಿತು, ಈ 8 ವರ್ಷಗಳಲ್ಲಿ 9 ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರಗಳು ಉರುಳಿದವು, ಆದರೆ ಬಿಜೆಪಿ ವಾಮ ಮಾರ್ಗಗಳಲ್ಲಿ ಸರಕಾರಗಳನ್ನು ರಚಿಸಿತು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರಿಗಿಂತ ಮೊದಲು ಇಡಿ ಬರುತ್ತದೆ ಎಂಬುದು ದೇಶದ ಪ್ರತಿ ಮಗುವಿಗೆ ತಿಳಿದಿದೆ. ಇದು ತೆಲಂಗಾಣದಲ್ಲಿ ನಡೆದಿದೆ ಎಂದು ಟಿಆರ್‌ಎಸ್ ಶಾಸಕಿ ಕೆ. ಕವಿತಾ ಎಎನ್‌ಐಗೆ ಹೇಳಿಕೆ ನೀಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರ ಪುತ್ರಿ ಮಾತನಾಡಿ, ಮುಂದಿನ ವರ್ಷ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲೂ ಅದೇ ಆಗುತ್ತಿದೆ. ರಾಜ್ಯದಲ್ಲಿ ಪ್ರಧಾನಿ ಮೋದಿಯವರಿಗಿಂತ ಮೊದಲು ಇಡಿ ಬಂದಿದೆ. ನಾವು ಅವರನ್ನು ಸ್ವಾಗತಿಸಿದ್ದೇವೆ ಮತ್ತು ಅವರೊಂದಿಗೆ ಸಹಕರಿಸುತ್ತೇವೆ. ಬಿಜೆಪಿಯವರು ಚೀಪ್ ಟ್ರಿಕ್ಸ್ ಆಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾವು ಮತ್ತು ನಮ್ಮ ಪಕ್ಷದ ನಾಯಕರು ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಟಿಆರ್‌ಎಸ್ ಎಂಎಲ್‌ಸಿ ಕವಿತಾ ಹೇಳಿದರು.

ದೆಹಲಿ ಮದ್ಯ ಹಗರಣ ಪ್ರಕರಣದ ಆರೋಪಿ ಅಮಿತ್ ಅರೋರಾ ಅವರ ಮೇಲೆ ಜಾರಿ ನಿರ್ದೇಶನಾಲಯದ ರಿಮಾಂಡ್ ವರದಿಯಲ್ಲಿ ತನ್ನ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ವರದಿಗಳ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

“ಕವಿತಾ ಕಲ್ವಕತ್ಲಾ” ಎಂಬ ವ್ಯಕ್ತಿ ಎರಡು ಫೋನ್‌ಗಳನ್ನು ಬಳಸಿದ್ದಾರೆ ಮತ್ತು ಅವರ IMEI 10 ಬಾರಿ ಬದಲಾಗಿದೆ ಎಂದು ಕೇಂದ್ರೀಯ ಸಂಸ್ಥೆ ತನ್ನ ರಿಮಾಂಡ್ ವರದಿಯಲ್ಲಿ ತಿಳಿಸಿದೆ. ಇಡಿ ಕ್ರಮವು ತೆಲಂಗಾಣದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ಹೆಚ್ಚಿನ ಸಂಖ್ಯೆಯ ಟಿಆರ್‌ಎಸ್ ಕಾರ್ಯಕರ್ತರು ಕವಿತಾ ಅವರ ನಿವಾಸದಲ್ಲಿ ಜಮಾಯಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next