Advertisement

ಬಿಜೆಪಿಗೆ ಭ್ರಷ್ಟಾಚಾರವೇ ಶಕ್ತಿ: ರಾಹುಲ್‌ ಗಾಂಧಿ

06:00 AM Mar 21, 2018 | Team Udayavani |

ಮಂಗಳೂರು: ಬಿಜೆಪಿಗೆ ಅಧಿಕಾರ ಗಳಿಸುವುದೊಂದೇ ಗುರಿಯಾಗಿದ್ದು, ಅದಕ್ಕಾಗಿ ಎಲ್ಲ ಕುತಂತ್ರಗಳನ್ನೂ ಅವರು ಅನುಸರಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ಮಾತ್ರ ಸತ್ಯ, ನ್ಯಾಯಗಳೇ ಮುಖ್ಯ, ದೇಶದ ರಕ್ಷಣೆ ಕಾಂಗ್ರೆಸ್‌ನ ಪ್ರಥಮ ಆದ್ಯತೆ ಎಂದು ನೆಹರೂ ಮೈದಾನದಲ್ಲಿ ಇಂದು ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಹೇಳಿದರು.

Advertisement

ಮೋದಿ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ದೇಶವನ್ನು  ಸಂಪೂರ್ಣ ಅಧಃಪತನಗೊಳಿಸಿದೆ. ಹಣ ಬಲ, ತೋಳ್ಬಲ, ಒಳಸಂಚುಗಳನ್ನೇ ಅಸ್ತ್ರಗಳಾಗಿ ಬಳಸಿ ಅನ್ಯಾಯದಿಂದ ಅಧಿಕಾರಕ್ಕೆ ಏರುತ್ತಿದೆ. ಆದರೆ ಜನತೆಗೆ ಈಗ ಇದು ಮನವರಿಕೆ ಯಾಗುತ್ತಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತರಲು ಜನತೆ ತೀರ್ಮಾ ನಿಸಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಅಪಾರ ಜನತೆಯೇ ಸಾಕ್ಷಿ. ಕರ್ನಾಟಕದ ಜನತೆಯ, ರೈತರ, ಕಾರ್ಮಿಕರ, ಬಡವರ, ಯುವಜನತೆಯ ಆಶೋತ್ತರ ಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಶಸ್ವಿಯಾಗಿ ಸ್ಪಂದಿ ಸಿದೆ. ವಿವಿಧ ಭಾಗ್ಯಗಳು, ಇಂದಿರಾ ಕ್ಯಾಂಟೀನ್‌ ಯೋಜನೆ, ಹೆಣ್ಣು ಮಕ್ಕಳಿಗೆ ಉಚಿತ  ಶಿಕ್ಷಣ, ರೈತರ ಸಾಲಮನ್ನಾ ಕಾರ್ಯಕ್ರಮಗಳು ಅನುಕರಣೀಯವಾಗಿವೆ.

ಮೋದಿಯವರು ಮುಖ್ಯಮಂತ್ರಿಯಾಗಿದ್ದ ಗುಜರಾತ್‌ನಲ್ಲಿ ಇಂತಹ ಯಾವುದಾದರೂ ಕಾರ್ಯ ನಡೆದಿದೆಯೇ ಎಂದು ರಾಹುಲ್‌ ಪ್ರಶ್ನಿಸಿದರು. ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕೆಲವೇ ಖಾಸಗಿ ಶ್ರೀಮಂತರಿಗೆ ನೀಡಲಾಗಿದೆ, ಉದ್ಯಮಗಳ ಕತೆಯೂ ಅದೇ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಜನಸಾಮಾನ್ಯರ ಸಮಗ್ರ ಹಿತರಕ್ಷಣೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕೇಂದ್ರದ ಭ್ರಷ್ಟಾಚಾರ
ನರೇಂದ್ರ ಮೋದಿಯವರ ಆಪ್ತರು ಲಕ್ಷಾಂತರ ಕೋಟಿ ರೂ.ಗಳ ಹಗರಣ, ಭ್ರಷ್ಟಾಚಾರವನ್ನು ನಡೆಸಿದ್ದು, ನೀರವ್‌ ಮೋದಿ, ಲಲಿತ್‌ ಮೋದಿ, ಮಲ್ಯ ಮುಂತಾದವರ ಹೆಸರನ್ನು ಇಲ್ಲಿ ಉಲ್ಲೇಖೀಸಬಹುದು. ವಾಯುಪಡೆಗಾಗಿ ಯುಪಿಎ ಸರಕಾರ ಎಚ್‌ಎಎಲ್‌ ಸಂಸ್ಥೆಯ ಮೂಲಕ 570 ಕೋ. ರೂ.ಗಳಲ್ಲಿ ಹೆಲಿಕಾಪ್ಟರ್‌ ನಿರ್ಮಾಣಕ್ಕೆ ಸಿದ್ಧವಾಗಿತ್ತು. ಆದರೆ ಮೋದಿಯವರು ಫ್ರಾನ್ಸ್‌ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಒಟ್ಟು ವ್ಯವಹಾರವನ್ನು 16 ಸಾವಿರ ಕೋಟಿ ರೂ.ಗೂ ಅಧಿಕವಾಗಿಸಿದರು. ಇಲ್ಲಿ ಭಾರೀ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ ರಾಹುಲ್‌, ಈ ಮೂಲಕ ಭಾರತೀಯ ಸಂಸ್ಥೆಯಲ್ಲಿ ಯುವಕರ ಉದ್ಯೋಗಾವಕಾಶವನ್ನು ಕಸಿದುಕೊಳ್ಳಲಾಯಿತು ಎಂದು ದೂರಿದರು. ಇದನ್ನು ಮೋದಿ ಸರಕಾರ ಮಾಡಿರುವ “ಚೋರಿ’ ಎನ್ನದೆ ಬೇರೇನೂ ಹೇಳಲು ಸಾಧ್ಯವಿಲ್ಲ ಎಂದರು. 

ಭಾರತದ ಸಾಮರ್ಥ್ಯವನ್ನು ಅಮೆರಿಕವೇ ಪ್ರಶಂಸಿಸಿದೆ. ಆದರೆ ಇಲ್ಲಿ ಈ ಶಕ್ತಿಯನ್ನು ಬಳಸುವ ಕೆಲಸ ಆಗುತ್ತಿಲ್ಲ. ಗಡಿಯಲ್ಲಿ ಚೀನ ಅನೇಕ ಬಾರಿ ಕಿಡಿಗೇಡಿತನ ತೋರಿದೆ. ಅದನ್ನು ಸರಿಯಾಗಿ ನಿಭಾಯಿಸಲಾಗಿಲ್ಲ. ನೋಟು ರದ್ದತಿಯಿಂದ ದೇಶದ ಆರ್ಥಿಕತೆ ಅಲ್ಲೋಲಕಲ್ಲೋಲವಾಯಿತು. ಸದಾ ಸುಳ್ಳಾಡುವುದನ್ನು ಮೋದಿಯವರು ಅಸ್ತ್ರವನ್ನಾ ಗಿಸಿಕೊಂಡಿದ್ದಾರೆ. ಇನ್ನು ಇದನ್ನು ದೇಶದ ಜನತೆ ಸಹಿಸಿಕೊಳ್ಳಲಾರರು ಎಂದರು. ಮೋದಿಯವರ 15 ಮಂದಿ ಆಪ್ತರ 2.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ ಬಡ ರೈತರ ಸಾಲ ಮನ್ನಾಕ್ಕೆ ಕೇಂದ್ರ ಮುಂದಾಗಿಲ್ಲ. ಕರ್ನಾಟಕದಲ್ಲಿ ಮಾತ್ರ ರೈತರ ಸಾಲ ಮನ್ನಾ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ನಡೆದಿದೆ ಎಂದು ಶ್ಲಾಘಿಸಿದರು. ರಾತ್ರಿಯಾಗುತ್ತಿದ್ದರೂ ಅಪಾರ ಸಂಖ್ಯೆಯಲ್ಲಿ ಸೇರಿರುವ ಜನತೆ ಮತ್ತು ಕಾರ್ಯಕರ್ತರಿಗೆ ತನ್ನ ಧನ್ಯವಾದಗಳು ಎಂದು ಭಾಷಣ ಮುಕ್ತಾಯಗೊಳಿಸಿದ ರಾಹುಲ್‌ ಗಾಂಧಿಯವರು ಬಿಜೆಪಿಯನ್ನು ಸೋಲಿಸಿ ತೋರಿಸಿ ಎಂದು ಜನತೆಯಲ್ಲಿ ವಿನಂತಿ ಮಾಡಿಕೊಂಡರು. 

Advertisement

ಕಾಂಗ್ರೆಸ್‌ ಗೆಲುವು ಖಚಿತ: ಸಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕೋಮುವಾದಿಗಳನ್ನು ಹಿಮ್ಮೆಟ್ಟಿಸಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ. ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ ಎಂಬುದು ಎಷ್ಟು ಸತ್ಯವೊ ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ಅಷ್ಟೇ ಸತ್ಯ. ತನ್ನ ಸ್ವ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದರೂ ನಮ್ಮ ರಾಜ್ಯದಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕ್ಷೀರ ಭಾಗ್ಯ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ ಮೊದಲಾದ ಅನೇಕ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನು ಮಾಡಿದೆ. ಕಾಂಗ್ರೆಸ್‌ನ ಜನಪರ, ಅಭಿವೃದ್ಧಿಪರ ಯೋಜನೆಗಳ ಮುಂದೆ ಬಿಜೆಪಿಯ ಕೋಮುವಾದ ನಡೆಯದು. ಕಪ್ಪು ಹಣ ಹೊಂದಿರುವವರ ನಿದ್ದೆಗೆಡಿಸುತ್ತೇನೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರವು ದೇಶದ ಬಡವರು, ರೈತರು ಹಾಗೂ ಸಣ್ಣ ವ್ಯಾಪಾರಿಗಳ ನಿದ್ದೆ ಕೆಡಿಸಿದೆ. ರೈತರ ಸಾಲ ಮನ್ನಾ ಮಾಡುವ ಬದಲು ಕೈಗಾರಿಕೋದ್ಯಮಿಗಳ ಸಾಲ ಮನ್ನಾವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದರು.

ಸಚಿವ ಡಿ. ಕೆ. ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್‌ನ ಶಕ್ತಿ ಪ್ರದರ್ಶನ ಇಂದು ಮಂಗಳೂರಿನಲ್ಲಿ ನಡೆದಿದೆ. ನುಡಿದಂತೆ ನಡೆದ ಕರ್ನಾಟಕದ ಕಾಂಗ್ರೆಸ್‌ ಸರಕಾರಕ್ಕೆ ಬೆಂಬಲ ಕೊಡುತ್ತೇವೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಇಲ್ಲಿಯ ಜನತೆ ರವಾನಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಮಾತನಾಡಿ, 2013ರಲ್ಲಿ ಉಳ್ಳಾಲದಿಂದ ಮಲ್ಪೆ ವರೆಗೆ ಕಾಂಗ್ರೆಸ್‌ “ಕಾಂಗ್ರೆಸ್‌ ನಡಿಗೆ ಸಾಮರಸ್ಯದ ಕಡೆಗೆ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಿತು. ಜಿಲ್ಲೆಯ ಜನತೆ ಇದಕ್ಕೆ ಸ್ಪಂದಿಸಿದರು. 2013ರ ಚುನಾವಣೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ 13 ವಿಧಾನಸಭಾ ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತು. ಶಾಂತಿ, ಸಾಮರಸ್ಯ, ಅಭಿವೃದ್ಧಿಯನ್ನು ಬಯಸುವ ರಾಜ್ಯದ ಜನತೆ ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಬಿಜೆಪಿಯ ಕೋಮುವಾದ ನೀತಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಸಚಿವ ಬಿ. ರಮಾನಾಥ ರೈ ಸ್ವಾಗತಿಸಿದರು. ಸಚಿವ ಬಿ.ಎಚ್‌. ಖಾದರ್‌ ವಂದಿಸಿದರು. ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ನಿರೂಪಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಡಾ| ಎಂ. ವೀರಪ್ಪ ಮೊಲಿ, ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ಶಾಸಕರಾದ ಕೆ. ವಸಂತ ಬಂಗೇರ, ಕೆ. ಅಭಯಚಂದ್ರ, ವಿನಯ ಕುಮಾರ್‌ ಸೊರಕೆ, ಶಕುಂತಳಾ ಶೆಟ್ಟಿ, ಜೆ.ಆರ್‌. ಲೋಬೋ, ಮೊದಿನ್‌ ಬಾವಾ, ಮೇಯರ್‌ ಭಾಸ್ಕರ್‌ ಕೆ., ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಕಾರ್ಯದರ್ಶಿ ವಿಷ್ಣುನಾಥನ್‌, ಮುಖಂಡರಾದ ಮಂಜುನಾಥ ಭಂಡಾರಿ, ದೇವಿಪ್ರಸಾದ್‌ ಶೆಟ್ಟಿ, ಮಹಮ್ಮದ್‌ ಮಸೂದ್‌, ವಿಜಯ ಕುಮಾರ್‌ ಶೆಟ್ಟಿ, ಮಿಥುನ್‌ ರೈ, ಪಿ.ವಿ. ಮೋಹನ್‌, ರಾಕೇಶ್‌ ಮಲ್ಲಿ, ಮಹಮ್ಮದ್‌ ಮಸೂದ್‌, ಸಲೀಂ ಅಹಮ್ಮದ್‌, ಬಿ.ಎಚ್‌. ಖಾದರ್‌, ಇಬ್ರಾಹಿಂ ಕೋಡಿಜಾಲ್‌, ಯು.ಕೆ. ಮೋನು. ಕೆ.ಎಂ. ಇಬ್ರಾಹಿಂ , ಧನಂಜಯ ಅಡ³ಂಗಾಯ, ಮಾಜಿ ಮೇಯರ್‌ ಕವಿತಾ ಸನಿಲ್‌, ಶಾಲೆಟ್‌ ಪಿಂಟೋ, ಮಮತಾ ಗಟ್ಟಿ, ಟಿ.ಎಂ.ಶಹೀದ್‌, ಎಂ.ಎಸ್‌. ಮಹಮ್ಮದ್‌, ನವೀನ್‌ ಡಿ’ಸೋಜಾ, ವೆಂಕಪ್ಪ ಗೌಡ, ನವೀನ್‌ ಭಂಡಾರಿ, ಪುರುಷೋತ್ತಮ ಚಿತ್ರಾಪುರ, ವಹೀದಾ ಇಸ್ಮಾಯಿಲ್‌, ಯು.ಬಿ. ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಕ್ಯಾ ಹೋಗಯ ?
“ನರೇಂದ್ರ ಮೋದಿಯವರೇ ಅಧಿಕಾರ ಬರುವ ಮೊದಲು ಅಚ್ಛೇ ದಿನ್‌ ಆಯೇಗಾ, ಸಬ್‌ ಕಾ ಸಾಥ್‌… ಸಬ್‌ ಕಾ ವಿಕಾಸ್‌ ಎಂದು ಹೇಳಿದ್ದೀರಿ. ಮೋದಿಯವರೇ ಅಬ್‌ ಕ್ಯಾ ಹೋಗಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಬ್‌ ಕಾ ವಿಕಾಸದ ಬದಲು ಸಬ್‌ಕಾ ವಿನಾಶ್‌ ಹೋಗಯ … ಬಿಜೆಪಿ ಸರಕಾರ ಕೋಮುವಾದದ ವಿಷ ಬೀಜವನ್ನು ಬಿತ್ತಿ ಸಬ್‌ ಕಾ ವಿನಾಶ್‌ ಮಾಡಲು ಹೊರಟಿದೆ’ ಎಂದು ಟೀಕಿಸಿದರು.

ಸತ್ತಾ ಔರ್‌ ಸಚ್ಚಾಯಿ!
“ಬಿಜೆಪಿ ತೋ ಸತ್ತಾಕಿ ಪಕ್‌ ಹೆ, ಮಗರ್‌ ಕಾಂಗ್ರೆಸ್‌ ತೋ ಸಚ್ಚಾಯೀಕೀ ಪಕ್‌ ಹೆ’ (ಬಿಜೆಪಿಯು ಅಧಿಕಾರದಾಹಿ ಪಕ್ಷ, ಆದರೆ ಕಾಂಗ್ರೆಸ್‌ ಸತ್ಯದ ಪಕ್ಷ) ಎಂದರು ರಾಹುಲ್‌ ಗಾಂಧಿ. ಆದ್ದರಿಂದ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬರಲಿದೆ. ದೇಶಾದ್ಯಂತ ಈಗ ಬಿಜೆಪಿಯ ವಿರುದ್ಧ ಜನತೆಯ ಭಾವನೆ ಸೃಷ್ಟಿಯಾಗಿದೆ. ಕೊಲೆ ಆರೋಪಿಯನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಹೊಂದಿರುವ ಬಿಜೆಪಿಯ ಕರ್ನಾಟಕದ ಸಭೆಗಳಲ್ಲಿ ಕನಿಷ್ಠ ನಾಲ್ಕು ಮಂದಿಯಾದರೂ ಜೈಲಿಗೆ ಹೋಗಿ ಬಂದ ಸಚಿವರೇ ಇರುವುದು ವಿಪರ್ಯಾಸ ಎಂದು ಲೇವಡಿ ಮಾಡಿದರು.  ತುಳುನಾಡಿನ ಸಾಂಪ್ರದಾಯಿಕ ಶಿರಸ್ತ್ರಾಣ “ಮುಟ್ಟಾಳೆ’ಯನ್ನು ಧರಿಸಿಯೇ ಅವರು ಸಭೆಯಲ್ಲಿ  ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next