Advertisement

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

07:58 PM Jul 22, 2024 | Team Udayavani |

ವಿಜಯಪುರ : ನಾನು ಬಿಜೆಪಿ ಸೇರುವ ಚರ್ಚೆ ಆಗಬೇಕು ಎಂಬುದರ ಜೊತೆಗೆ ಬಿಜೆಪಿ ಪಕ್ಷದಲ್ಲಿರುವ ಗೊಂದಲಗಳನ್ನು ಪರಿಹರಿಸಲು ಕೇಂದ್ರದ ವರಿಷ್ಠರು, ರಾಜ್ಯದ ನಾಯಕರು, ಸಂಘ ಪರಿವಾರದವರು ಗಮನಹರಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

Advertisement

ಸೋಮವಾರ ನಗರದಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಲ್ಲಿನ ಗೊಂದಲ ಮಾತ್ರವಲ್ಲ ಶುದ್ದೀಕರಣವೂ ಆಗಬೇಕಿದೆ. ಈ ಕುರಿತು ಗಮನ ಸೆಳೆಯುವ ಉದ್ದೇಶದಿಂದಲೇ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ಎಂದು ಬಿಜೆಪಿ ಪಕ್ಷದಲ್ಲಿದ್ದಾಗ ತಾವು ಕೈಗೊಂಡಿದ್ದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧದ ತಮ್ಮ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಲೋಕಸಭೆ ಚುನಾವಣೆ ಮುಗಿದಿದೆ, ಈಗ ಎಲ್ಲರೂ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ ಸುಮ್ಮನೇ ಹೋಗೋದಿಲ್ಲ. ಏನಾಗಬೇಕು ಎಂಬ ಕುಳಿತು ಚರ್ಚೆ ಮಾಡಿ ತೀರ್ಮಾನಿಸಿ, ನಂತರ ಹೋಗುವ ನಿರ್ಧಾರ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ ಈಶ್ವರಪ್ಪ, ಇಡೀ ದೇಶದ ಇತರೆ ಕಡೆಗಳಲ್ಲಿ ಬಿಜೆಪಿ ಅಪ್ಪ, ಮಕ್ಕಳು ಅಂತೆಲ್ಲ ಕುಟುಂಬದ ನಿಯಂತ್ರಣದಲ್ಲಿ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಯಡಿಯೂರಪ್ಪ ಕೇಂದ್ರ ಚುನಾವಣಾ ಸಮಿತಿ ಸದಸ್ಯ, ಅವರ ಪುತ್ರ ರಾಘವೇಂದ್ರ ಸಂಸದ, ಮತ್ತೋರ್ವ ಮಗ ವಿಜಯೇಂದ್ರ ಶಾಸಕ ಮಾತ್ರವಲ್ಲ ಬಿಜೆಪಿ ರಾಜ್ಯಾದ್ಯಕ್ಷ ಎಂದು ಕುಟುಕಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಕುಟುಂಬ ರಾಜಕೀಯದಿಂದ ಮುಕ್ತಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಭೇಗಳಲ್ಲಿ ಭಾಷಣ ಮಾಡುತ್ತಾರೆ. ಹಾಗಾದರೆ ರಾಜ್ಯ ಬಿಜೆಪಿ ಕೇಂದ್ರದ ಕಂಟ್ರೋಲ್ ನಲ್ಲಿ ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದರು.

Advertisement

ನನ್ನ ಮನೆಯೊಳಗೆ ಹೋಗಲು ಬರಲು ಷರತ್ತು ಎಂಬುದೇ ಇಲ್ಲ, ಆದರೆ ಶುದ್ದೀಕರಣ ಆಗಬೇಕು ಎಂಬುದು ನನ್ನ ಬೇಡಿಕೆ. ಇಂತಹ ವಿಷಯಗಳ ಚರ್ಚೆ ಮಾಡಿ ನಂತರ ಬಿಜೆಪಿ ಸೇರ್ಪಡೆ ಕುರಿತು ತೀರ್ಮಾಣ ಮಾಡುತ್ತೇನೆ ಎಂದರು.

ಇದು ನನ್ನ ವೈಯುಕ್ತಿವಲ್ಲ, ಪಕ್ಷ ಶುದ್ದೀಕರಣಕ್ಕಾಗಿ ದೇಶಕ್ಕಾಗಿ ಒಂದೇ ನೀತಿ-ನಿಯಮ ಇರಬೇಕು ಎಂಬುದು ನನ್ನ ಆಶಯ. ಕರ್ನಾಟಕಕ್ಕೆ ಒಂದು ನಿಯಮ ಬೇರೆ ಬೇರೆ ರಾಜ್ಯಗಳಿಗೆ ಒಂದು ಇರಬಾರದು. ಈ ಕುರಿತು ಚರ್ಚೆ ಮಾಡುತ್ತೇನೆ ಎಂದರು.

ಬಿಜೆಪಿ ವ್ಯವಸ್ಥಿತವಾಗಿ ಹೋಗಬೇಕು ಸಾಮೂಹಿತ ನಾಯಕತ್ವ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಬಿಜೆಪಿ ಈ ಹಿಂದೆ ಅನಂತಕುಮಾರ, ನಾನು ಯಡಿಯೂರಪ್ಪ, ವಿ.ಎಸ್.ಆಚಾರ್ಯ ಸೇರಿದಂತೆ ಇತರರ ಸಾಮೂಹಿತ ನಾಯಕತ್ವದಲ್ಲಿತ್ತು. ಈಗ ಅಪ್ಪ-ಮಕ್ಕಳ ಕೈಯ್ಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಕುಟುಂಬ ರಾಜಕಾರಣದ ವಿರುದ್ಧ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಸರಿ ಎಂದು ಈಗಲೂ ಸಾವಿರಾರು ಕರೆಗಳು ಬರುತ್ತಿವೆ. ಆದರೆ ಇದನ್ನೇ ದೈರ್ಯದಿಂಧ ಬಹಿರಂಗವಾಗಿ ಹೇಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದರು.

ನಾನೊಬ್ಬನೇ ಬಿಜೆಪಿ ಪಾರ್ಟಿ ಕಟ್ಟಿಲ್ಲ, ನನ್ನಂತೆ ಅನೇಕರ ಪರಿಶ್ರಮ ಹಾಕಿ, ತಪಸ್ಸು ಮಾಡಿ ಬಿಜೆಪಿ ಕಟ್ಟಿದ್ದಾರೆ. ಈಗ ಬಿಜೆಪಿ ಪಕ್ಷದಲ್ಲಿ ಅಧಿಕಾರ ಇರಬಹುದು ಆನಂದ ಇಲ್ಲ. ಹೀಗಾಗಿಯೇ ಶೀಘ್ರವೇ ರಾಜ್ಯ ಬಿಜೆಪಿ ಶುದ್ದೀಕರಣ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ದೇಶದ ಎಲ್ಲ ರಾಜ್ಯಗಳಲ್ಲೂ ಅಧಿಕಾರಕ್ಕೆ ಬರುತ್ತದೆ, ಯಾವ ಪಕ್ಷದವರೂ ಒಂದಾಗಿಲ್ಲ. ಕಾಂಗ್ರೆಸ್ ದಿವಾಳಿಯಾಗಿದೆ. ರಾಜ್ಯ ಕಾಂಗ್ರೆಸ್ ನೋಡಿದರೆ ಅಯ್ಯೋ ಅನಿಸುತ್ತದೆ ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷ ಕೋಟ ಶ್ರೀನಿವಾಸ ಪೂಜಾರಿ ಅವರ ಕ್ಷಮೆ ಯಾಚಿಸಲಿ

ಸಿದ್ಧರಾಮಯ್ಯ ನೇತೃತ್ವ ಸರ್ಕಾರದ ಹತ್ತಾರು ಹಗರಣಗಳು ಹೊರಬೀಳುವ ಮೂಲಕ ಕಾಂಗ್ರೆಸ್ ಬೆತ್ತಲಾಗಿದೆ. ಜೈಲಿಗೆ ಹೋಗುವಲ್ಲಿಯೂ ಸಿದ್ದರಾಮಯ್ಯ ನಾಯಕತ್ವ ವಹಿಸಲಿದ್ದು, ಈ ಸರ್ಕಾರ ನಾಲ್ಕು ವರ್ಷ ಇರುವುದಿಲ್ಲ, ಶೀಘ್ರ ಚುನಾವಣೆ ಬರಲಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಒಂದೊಂದಾಗಿ ಹತ್ತಾರು ಹಗರಣಗಳು ಬಯಲಾಗಿದ್ದು, ಎಲ್ಲವನ್ನೂ ಸಿಬಿಐ ತನಿಖೆಗೆ ವಹಿಸಬೇಕು. ಸಿದ್ಧರಾಮಯ್ಯ ಮಖ್ಯಮಂತ್ರಿ ಸ್ಥಾನಕ್ಕೆ ನೀಡಿ ರಾಜೀನಾಮೆ ನೀಡಿ, ಸಿಬಿಐ ತನಿಖೆಯಲ್ಲಿ ಕ್ಲೀನ್ ಚಿಟ್ ತಂದು ಬಳಿಕ ಮುಖ್ಯಮಂತ್ರಿಯಾಗಲಿ. ಅಹಿಂದ ಅಹಿಂದ ಎಂದು ಹೇಳಿ ರಾಜ್ಯದಲ್ಲಿ ಆಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅವರ ಹಣವನ್ನೇ ಲೂಟಿ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಸಲ್ಲಬೇಕಿದ್ದ 187 ಕೋಟಿ ರೂ. ಲೂಟಿ ಹೊಡೆದಿರುವುದು ಬಯಲಾದ ಬಳಿಕ ಈಗ ಅವ್ಯವಹಾರ ಆಗಿದೆ ಎನ್ನುತ್ತಿದ್ದಾರೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿ ಬಳಿಯೇ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರದ ಸಚಿವರೇ ಜೈಲಿಗೆ ಹೋಗುವ ವರೆಗೂ ಏನೂ ಆಗಿಲ್ಲವೆಂದು ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಹೇಳುತ್ತ ಬರುತ್ತಿದ್ದರು ಎಂದು ಹರಿಹಾಯ್ದರು.ಅಲ್ಪಸಂಖ್ಯಾತ ಇಲಾಖೆಯಲ್ಲಿ ಲೂಟಿಯಾಗುತ್ತಿದೆ ಎಂದು ವರದಿ ಬಂದಿದೆ. ಅಹಿಂದ ಜನರಿಗೆ ಮೋಸ ಮಾಡಿ ಇಷ್ಟು ಕಾಂಗ್ರೆಸ್ ಪಕ್ಷದವರು ಮುಚ್ಚಿಹಾಕೊಂಡು ಅಧಿಕಾರ ನಡೆಸಿದ್ದು, ಇನ್ನು ನಡೆಯಲ್ಲ ಎಂದರು.

ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿಗಳೇ ನೇರ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನನ್ನು ಬಿಟ್ಟರೆ ನಾನೆ ಅಂತ ಹೇಳಿಕೊಳ್ಳುತ್ತಿದ್ದರು. ಇದೀಗ ಹಗರಣಗಳು ಹೊರ ಬಂದು ಕಾಂಗ್ರೆಸ್ ಸರ್ಕಾರ ನೇರವಾಗಿ ಬಹಿರಂಗವಾಗಿ ಬೆತ್ತಲಾಗಿದೆ ಎಂದರು.

ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಪಟ್ಟಿ ಮಾಡಿರುವಂತೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿವೆ ಎಂದಿರುವ 22 ಹಗರಣಗಳನ್ನೂ ಸಿಬೀಐ ತನಖೆಗೆ ಕೊಡಲಿ, ಈ ಸರ್ಕಾರದ ಎಲ್ಲ ಹಗರಣಗಳನ್ನೂ ಸಿಬಿಐ ತನಿಖೆಗೆ ಕೊಡಲಿ. ಸಿಬಿಐ ಅಧಿಕಾರಿಗಳು ಕಳ್ಳರು ಯಾರೆಂದು ಪತ್ತೆಹಚ್ಚಿ ಹಿಡಿಯುತ್ತಾರೆ, ಆಗ ಲೂಟಿ ಮಾಡಿದವರು ಜೈಲಿಗೆ ಹೋಗುತ್ತಾರೆ. ಜೈಲಿಗೆ ಹೋಗುವವರ ನಾಯಕತ್ವ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ ಅನುಮಾನವೇ ಇಲ್ಲ ಎಂದು ಟೀಕಿಸಿದರು.

ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಲಾಗಿದ್ದು ಕಾಂಗ್ರೆಸ್ ಪಕ್ಷ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next