Advertisement

ಟಿಕೆಟ್‌ಗಾಗಿ ಭುಗಿಲೆದಿದ್ದ ಬಿಜೆಪಿ ಭಿನ್ನಮತ ಶಮನ

03:12 PM Mar 30, 2019 | Team Udayavani |

ಕೋಲಾರ: ಲೋಕಸಭೆ ಕ್ಷೇತ್ರದ ಟಿಕೆಟ್‌ ಸಂಬಂಧ ಭುಗಿಲೆದ್ದಿದ್ದ ಭಿನ್ನಮತ ಶಮನ ಮಾಡುವಲ್ಲಿ ಬಿಜೆಪಿ ವರಿಷ್ಠರು ಸಫಲರಾಗಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ ನಾಮಪತ್ರ ಹಿಂಪಡೆದರು.

Advertisement

ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದ ವೀರಯ್ಯ, ಹೈಕಮಾಂಡ್‌ ಟಿಕೆಟ್‌ ತಮಗೆ ನೀಡುತ್ತದೆ ಎಂಬ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಅಲ್ಲದೇ, ಕೋಲಾರದಲ್ಲೇ ಕೆಲವು ತಿಂಗಳ ಹಿಂದೆಯೇ ಮನೆ ಮಾಡಿದ್ದರು.

ನನಗೆ ಟಿಕೆಟ್‌ ತಪ್ಪಿಸಲು ಸಂಸದ ಕೆ.ಎಚ್‌.ಮುನಿಯಪ್ಪ ಕೈವಾಡವೇ ಕಾರಣವಾಗಿದೆ. ಪಕ್ಷ ಟಿಕೆಟ್‌ ನೀಡದಿದ್ದಲ್ಲಿ ಪಕ್ಷೇತರನಾಗಿ ನಿಲ್ಲುತ್ತೇನೆ ಎಂದು ಘೋಷಿಸಿದ್ದರು. ಕೊನೆಗೆ ಶುಕ್ರವಾರ ತಮ್ಮ ವಕೀಲ ಸತೀಶ್‌ ಮೂಲಕ ನಾಮಪತ್ರ ಹಿಂಪಡೆದಿದ್ದಾರೆ.

ಸಂಧಾನ ಸೂತ್ರ ಸಿದ್ಧ: ನಗರ ಹೊರವಲಯದ ಅಡಿಗಾಸ್‌ ಹೋಟೆಲ್‌ನಲ್ಲಿ ಗುರುವಾರ ಸಭೆ ಸೇರಿದ್ದ ಬಿಜೆಪಿ ಮುಖಂಡರಾದ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಲಕ್ಷ್ಮಯ್ಯ, ಶ್ರೀರಾಮ್‌, ಸಿ.ಎಂ.ರಘುನಾಥ್‌, ಕೆ.ಎಸ್‌.ರಾಜೇಂದ್ರ, ವೆಂಕಟಸ್ವಾಮಿಗೌಡ, ಕಲ್ಲಪಲ್ಲಿ ಪ್ರಕಾಶ್‌, ಪ್ರಸಾದ್‌, ಗಾಂಧಿನಗರ ವೆಂಕಟೇಶ್‌ ಮತ್ತಿತರರು ವೀರಯ್ಯ ಅವರ ಮನವೊಲಿಕೆಗೆ ಹೈಕಮಾಂಡ್‌ಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಹಳೆ ಕಾರ್ಯಕರ್ತರನ್ನು ಜತೆ ಕರೆದುಕೊಂಡು, ಚುನಾವಣೆ ಎದುರಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ವೀರಯ್ಯ ಅವರಿಗೆ ಸೂಕ್ತ ಸ್ಥಾನಮಾನ ಒದಗಿಸಲು ಹೈಕಮಾಂಡ್‌ ನೀಡಿದ ಅಭಯದಿಂದ ನಾಮಪತ್ರ ವಾಪಸ್ಸಿಗೆ ಅವರು ಒಪ್ಪಿದರು.

Advertisement

ಪಕ್ಷದ ಸೂಚನೆಗೆ ಬದ್ಧ: ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 20 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ, 2004 ಮತ್ತು 2014 ರಲ್ಲಿ ಕ್ರಮವಾಗಿ 11800 ಹಾಗೂ 23 ಸಾವಿರ ಮತಗಳಿಂದ ಸೋತಿದ್ದೇನೆ. ಈ ಬಾರಿ ಜನರ ಬೆಂಬಲ ನನಗಿದ್ದು, ಗೆಲ್ಲುವ ಸಂಪೂರ್ಣ ವಿಶ್ವಾಸವಿತ್ತು ಎಂದು ತಿಳಿಸಿದರು.

ಕುತಂತ್ರ ರಾಜಕಾರಣದ ಮೂಲಕ 7 ಬಾರಿ ಗೆದ್ದು ಹೋಗಿರುವ ಮುನಿಯಪ್ಪಗೆ ಈ ಬಾರಿ ಪಾಠ ಕಲಿಸಲು ಕ್ಷೇತ್ರದ ಮತದಾರರು ಸಿದ್ಧವಾಗಿದ್ದರು. ಸುಲಭವಾಗಿ ಗೆಲುವು ಸಾಧಿಸುವ ವಿಶ್ವಾಸದೊಂದಿಗೆ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದು ನಿರಾಸೆಯಾಗಿದೆ ಎಂದು ಕಣ್ಣೀರು ಹಾಕಿದ್ದರು.

ಬಿಜೆಪಿ ಗೆಲುವಿಗೆ ಸಾಕಾರ: ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಕೆ.ಎಚ್‌.ಎಂ ಸೋಲಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಮುನಿಯಪ್ಪ ವಿರೋಧಿ ಅಲೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿವೆ.

ಬಿಜೆಪಿ ಟಿಕೆಟ್‌ ಪಡೆದಿರುವ ಮುನಿಸ್ವಾಮಿ, ಈಗಾಗಲೇ ಕಾಂಗ್ರೆಸ್‌ ಭಿನ್ನಮತಿಯ ನಾಯಕರೊಂದಿಗೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಪ್ರಚಾರ ತಂತ್ರಗಳ ಕುರಿತು ಅತೃಪ್ತ ಮುಖಂಡರು ಬಿಜೆಪಿ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next