Advertisement

Minister B.Nagendra ರಾಜೀನಾಮೆಗೆ ಬಿಜೆಪಿ ಜೂ.6ರ ಗಡುವು; ಕಾಂಗ್ರೆಸ್‌ ಹೈಕಮಾಂಡ್‌ ಗರಂ

01:15 AM May 31, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಗಡುವು ನೀಡಿದೆ. ಜೂ. 6ರೊಳಗೆ ಸಚಿವರ ತಲೆದಂಡ ವಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.

Advertisement

“ದಲಿತರ ಹಣ ನುಂಗಿದ ಕಾಂಗ್ರೆಸ್‌’ ಎಂಬ ಬ್ಯಾನರ್‌ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ದಲಿತರ ಹಣವನ್ನು “ಟಕಾಟಕ್‌’ ಎಂದು ಲೂಟಿ ಮಾಡಿದ ಕಾಂಗ್ರೆಸ್‌ ಸರಕಾರವನ್ನು “ಟಕಾಟಕ್‌’ ಎಂದೇ ಅಧಿಕಾರದಿಂದ ಕೆಳಗಿಳಿಸುವ ದಿನ ದೂರವಿಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಈಶ್ವರಪ್ಪನವರ ಮೇಲೆ ಆರೋಪ ಬಂದಿತ್ತು, ಆಗ ರಣದೀಪ್‌ ಸಿಂಗ್‌ ಸುಜೇìವಾಲ ಪ್ರಶ್ನೆ ಕೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರಂತೂ ಸೆಕ್ಷನ್‌ 302 ಅಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು. ಈಗ ಡೆತ್‌ ನೋಟ್‌ನಲ್ಲಿ ಸಚಿವರ ಹೆಸರಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂಗೆ ಮಾನ ಮರ್ಯಾದೆ ಇಲ್ಲ. ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು.

20 ಕೋಟಿ ರೂ. ಹಣವನ್ನು ವಾಪಸ್‌ ನೀಡಲಾಗಿದೆ ಎಂದು ಸರಕಾರ ಸ್ಪಷ್ಟನೆ ನೀಡುತ್ತಿದೆ. ಹಾಗೆಯೇ ಅಧಿಕಾರಿಯ ಪ್ರಾಣವನ್ನೂ ಮರಳಿ ತರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
187 ಕೋ.ರೂ. ಹಣ ಹೈದರಾಬಾದ್‌ನ ಐಟಿ ಕಂಪೆನಿಗೆ ವರ್ಗಾವಣೆಯಾಗಿದೆ ಎನ್ನಲಾಗುತ್ತಿದ್ದು, ಲೋಕಸಭೆ ಚುನಾವಣೆಗೆ ಬಳಕೆಯಾಗಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

ಹೈಕಮಾಂಡ್‌ಗರಂ: ತಲೆದಂಡಕ್ಕೆ ಒಲವು
ಒಪ್ಪದ ಸಿಎಂ, ಡಿಸಿಎಂ; ಸಿಐಡಿ ವರದಿ ಬಳಿಕ ಕ್ರಮ: ಸಮಜಾಯಿಷಿ

Advertisement

ವಾಲ್ಮೀಕಿ ನಿಗಮ ದಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಜತೆಗೆ ಸರಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಆಗುತ್ತಿರುವ ಹಾನಿ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ದಿಲ್ಲಿಯಲ್ಲಿ ಸಿಎಂ, ಡಿಸಿಎಂ ಜತೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಬುಧವಾರ ತಡರಾತ್ರಿ ನಡೆಸಿದ ಸಭೆಯ ಆರಂಭದಲ್ಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಷ್ಟೊಂದು ದೊಡ್ಡ ಹಗರಣ ನಡೆದಿದ್ದರೂ ಸರಕಾರದ ಗಮನಕ್ಕೆ ಬಂದಿಲ್ಲದಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯ ಸಚಿವರ ಮೌಖೀಕ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆತ್ಮಹತ್ಯೆ ಅಧಿಕಾರಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಮೇಲೆ ಇನ್ನೂ ಏಕೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿಲ್ಲ ಎಂದು ಖರ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಸರಕಾರ ಹಾಗೂ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ಹೇಗೆ ಸರಿಪಡಿಸುತ್ತೀರಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಸಿಐಡಿ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ, ಡಿಸಿಎಂ ಸಮಜಾಯಿಷಿ ನೀಡಿದರೆಂದು ಗೊತ್ತಾಗಿದೆ. ವಿಪಕ್ಷಗಳು ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಸಚಿವರ ರಾಜೀನಾಮೆ ಪಡೆಯುವುದು ಸೂಕ್ತವೆಂದು ಖರ್ಗೆ ಅಭಿಪ್ರಾಯಪಟ್ಟರೆಂದು ಹೇಳಲಾಗುತ್ತಿದೆ.

ತ್ರಿಮೂರ್ತಿಗಳ ಸಭೆಯಲ್ಲಿ ನಡೆದದ್ದೇನು?
ಸಿಎಂ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ್‌, ಬಿ. ನಾಗೇಂದ್ರ ದಿಲ್ಲಿಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. 87 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಸಚಿವ ನಾಗೇಂದ್ರ ಅವರಿಗೆ ಸಂಕಷ್ಟ ತಂದಿದೆ. ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿರುವುದರ ನಡುವೆಯೇ ಈ ತ್ರಿಮೂರ್ತಿಗಳ ಸಭೆಯಲ್ಲಿ ನಡೆದದ್ದೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಸಿಬಿಐ ತನಿಖೆಗೆ ಕೋರಿಕೆ
ಬೆಂಗಳೂರು, ಮೇ 30: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣದ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾದ ಪ್ರಕರಣಕ್ಕೆ ಈಗ ಹೊಸ ತಿರುವು ಲಭಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾವು ಸಿಬಿಐಗೆ ಔಪಚಾರಿಕ ದೂರು ಸಲ್ಲಿಸಿದೆ.
ಹೀಗಾಗಿ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸದೆ ಇದ್ದರೂ ಸಚಿವ ಬಿ.ನಾಗೇಂದ್ರ ಸಿಬಿಐ ವಿಚಾರಣೆ ಎದುರಿಸಬೇಕಾದ ಅನಿವಾರ್ಯಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಪ್ರಕರಣ ರಾಜಕೀಯ ತಿರುವು ತೆಗೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದೆ.

ಬ್ಯಾಂಕ್‌ ಹೇಳಿದ್ದೇನು?

ಅಕ್ರಮ ಬೆಳಕಿಗೆ ಬಂದೊಡನೆ ಕಾನೂನುಬಾಹಿರ ವ್ಯವಹಾರ ಎಂದು ಘೋಷಿಸಿದ್ದೇವೆ.
ಮೂವರು ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.
ಸಂಪೂರ್ಣ ತನಿಖೆ, ಅಪರಾಧಿಗಳ ತ್ವರಿತ ಪತ್ತೆಗಾಗಿ ಅಗತ್ಯ ಕ್ರಮವೇ ನಮ್ಮ ಉದ್ದೇಶ.
ಮೇ 30ರಂದು ಸಿಬಿಐಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next