Advertisement

ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಂಕಣ ತೊಡಿ

05:58 PM Dec 18, 2021 | Team Udayavani |

ಗದಗ: ಈ ಬಾರಿ ನಗರಸಭೆ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ಭದ್ರ ಬುನಾದಿಯಾಗಲಿದೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮ ವಹಿಸಿದರೆ ಗದಗ-ಬೆಟಗೇರಿ ನಗರಸಭೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಫಲಿತಾಂಶ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭವಿಷ್ಯ ನುಡಿದರು.

Advertisement

ಇಲ್ಲಿನ ವಿಠಲರೂಢಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ನಗರಸಭೆ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಕಳೆದ ಬಾರಿ ನಮ್ಮ ಸ್ವಲ್ಪ ತಪ್ಪಿನಿಂದ ವಿಧಾನಸಭಾ ಚುನಾವಣೆಯಲ್ಲಿ ಗದಗ ಮತಕ್ಷೇತ್ರ ಬಿಜೆಪಿ ಕೈತಪ್ಪಿದೆ.

ಮತ್ತೂಮ್ಮೆ ಅಂತಹ ಪರಿಸ್ಥಿ ತಿ ಮರುಕಳಿಸಬಾರದು ಎಂದು ಈ ಬಾರಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಎಲ್ಲ ಹಂತದಲ್ಲಿ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ನಮ್ಮ ಸ್ವಪ್ರತಿಷ್ಠೆ ಬದಿಗಿಟ್ಟು ಅಭ್ಯರ್ಥಿಗಳ ಆಯ್ಕೆ ಸಮಿತಿಯ ಒಕ್ಕೊರಲ ಅಭಿಪ್ರಾಯಕ್ಕೆ ತಲೆ ಬಾಗಿದ್ದೇನೆ. ಪಕ್ಷದ ಗೆಲುವಿಗಾಗಿ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕೆಂದು ಕರೆ ನೀಡಿದರು.

ಅವಳಿ ನಗರದ ಅಭಿವೃದ್ಧಿಗೆ ಆರಂಭಿಕ ಹಂತದಲ್ಲಿ ಸುಮಾರು 50 ಕೋಟಿ ರೂ. ಒದಗಿಸಿಕೊಡುವುದಾಗಿ ಭರವಸೆ ನೀಡಿದ ಅವರು, ಅಭಿವೃದ್ಧಿಯಿಂದ ವಂಚಿತವಾಗಿರುವ ಅವಳಿ ನಗರದಲ್ಲಿ ಅಭಿವೃದ್ಧಿಗೆ ಮರು ಚಾಲನೆ ನೀಡುತ್ತೇವೆ. ಜಿಡ್ಡುಗಟ್ಟಿರುವ ಆಡಳಿತವನ್ನು ಚುರುಕುಗೊಳಿಸಲಾಗುವುದು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕು ಎಂದು ಹೇಳಿದರು.

ಬಿಜೆಪಿ ಯುವ ಮುಖಂಡರಾದ ಅನಿಲ್‌ ಮೆಣಸಿನಕಾಯಿ ಮಾತನಾಡಿ, ಈಗಾಗಲೇ ಗದಗ-ಬೆಟಗೇರಿಯ ಎಲ್ಲ 35 ವಾರ್ಡ್‌ಗಳಲ್ಲಿ ಬಿಜೆಪಿ ಅಲೆ ಶುರುವಾಗಿದೆ. ಈಗಾಗಲೇ ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳು ದೊರಕಿಲ್ಲ. ಕೆಲವೆಡೆ ನಮ್ಮವರನ್ನೇ ಕರೆದೊಯ್ದು ಸ್ಪರ್ಧೆಗಿಳಿಸಿದ್ದಾರೆ. ಆದರೂ, ಈ ಬಾರಿ ಬಿಜೆಪಿಯಿಂದ ಕನಿಷ್ಟ 25 ಜನ ಅಭ್ಯರ್ಥಿಗಳು ಜಯ ಸಾ ಧಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಿಜೆಪಿ ಸರಕಾರದಲ್ಲಿ ಮಂಜೂರಾಗಿದ್ದ ತುಂಗಭದ್ರಾ 2ನೇ ಹಂತದ ಕುಡಿಯುವ ನೀರಿನ ಯೋಜನೆ(24*7)ಯನ್ನು ಉದ್ಘಾಟಿಸಿರುವ ಶಾಸಕ ಎಚ್‌.ಕೆ.ಪಾಟೀಲ, ಯೋಜನೆಯನ್ನು ತಮ್ಮದೆಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಗರದ ಒಳಚರಂಡಿ ಮತ್ತು ರಸ್ತೆಗಳು ಹಾಳಾಗಿದ್ದು, ಕಾಂಗ್ರೆಸ್‌ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕೇವಲ ದುಡ್ಡು, ಜಾತಿಯಿಂದ ಚುನಾವಣೆ ಗೆಲ್ಲುತ್ತೇವೆ ಎಂಬುದು ಭ್ರಮಯಷ್ಟೇ. ಮತದಾರರೊಂದಿಗಿನ ಸ್ನೇಹ, ಬಾಂಧವ್ಯವೇ ಕೈಹಿಡಿಯಲಿದೆ. ಎಲ್ಲ ಅಭ್ಯರ್ಥಿ ಗಳು ಕನಿಷ್ಟ 4-5 ಬಾರಿ ಮತದಾರರ ಮನೆ ಬಾಗಿಲಿಗೆ ತೆರಳಬೇಕು. ತಮ್ಮ ಅಭಿವೃದ್ಧಿಯ ದೃಷ್ಟಿಕೋನ ವಿವರಿಸಿ ಮತ ಪಡೆದುಕೊಳ್ಳಬೇಕು. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದವರಿಗೆ ಹಿರಿಯರು ಮಾರ್ಗದರ್ಶನ ಮಾಡಬೇಕು. ಪಕ್ಷದ ಕಾರ್ಯಕರ್ತರು
ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್‌ ಮಾಳಶೆಟ್ಟಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿಯು ಮೂರು ಭಾಗಗಳಾಗಿ ಹಂಚಿಹೋಗಿತ್ತು. ಇದರ ಲಾಭ ಪಡೆದುಕೊಂಡು ಕಾಂಗ್ರೆಸ್‌ ಅಧಿಕಾರಕ್ಕೆ ಏರಿತ್ತು. ಆದರೆ, ಈ ಬಾರಿ ಬಿಜೆಪಿಯ ಎಲ್ಲ ನಾಯಕರು ಒಂದಾಗಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ನಡುಕ ಹುಟ್ಟಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಸ್ಪ ರ್ಧಿಸಿದ್ದ ಶಿವಲೀಲಾ ಓದುಮಠ ಅವರು ಕಣದಿಂದ ಹಿಂದೆ ಸರಿದು, ಬಿಜೆಪಿ ಗೆಲುವಿಗೆ
ಶ್ರಮಿಸುವುದಾಗಿ ಘೋಷಿಸಿದರು.

ವೇದಿಕೆ ಮೇಲೆ ವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ್‌, ಬಿಜೆಪಿ ಶಹರ ಅಧ್ಯಕ್ಷ ಮಹಾಂತೇಶ್‌ ನಾಲವಾಡ್‌, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸಂಗಮೇಶ್‌ ದುಂದೂರ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್‌. ಕರಿಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ಕಾಂತಿಲಾಲ್‌ ಬನಸಾಲಿ, ಶಾರದಾ ಹಿರೇಮಠ, ಕಾಂತಿಲಾಲ್‌ ಬನ್ಸಾಲಿ ಉಪಸ್ಥಿತರಿದ್ದರು.

ಅವಳಿ ನಗರದ 35 ವಾರ್ಡ್‌ಗಳಲ್ಲೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರೂ ಸ್ಪರ್ಧೆಗೆ ಅರ್ಹರಾಗಿದ್ದರೂ, ಅಳೆದೂ ತೂಗಿ ಟಿಕೆಟ್‌ ನೀಡಲಾಗಿದೆ. ಆದರೆ, ಪಕ್ಷದ ಟಿಕೆಟ್‌ ದೊರೆಯದ ಕಾರಣ ಅಸಮಾಧಾನಗೊಂಡು ಕೆಲವೊಬ್ಬರು ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಅವರು ತಮ್ಮ ವಾರ್ಡ್‌ನಲ್ಲಿ ಕಾಂಗ್ರೆಸ್‌ ಬರಬೇಕೆಂದರೆ, ಸ್ವತಂತ್ರ ಅಭ್ಯರ್ಥಿಯಾಗಿ ಮುಂದುವರಿಯಲಿ. ಬಿಜೆಪಿಗೆ ಗೆಲುವಾಗಲಿ ಎನ್ನುವುದಾದರೆ ನಾಳೆ ನಾಮಪತ್ರ ಹಿಂಪಡೆಯಬೇಕು. ತಮ್ಮಲ್ಲಿರುವ ಭಿನ್ನಮತ, ಅಸಮಾಧಾನ ಬದಿಗೊತ್ತಿ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಸಿ.ಸಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next