Advertisement

BJP 22 vs Congress 70! ; ಸಿಎಂ ಆರೋಪ ಪಟ್ಟಿಗೆ ಕೇಸರಿ ಪಾಳಯ ತಿರುಗೇಟು

12:17 AM Jul 21, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣಗಳಿಗೆ ಸಂಬಂಧಿಸಿ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ 22 ಹಗರಣಗಳ “ಆರೋಪ’ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್‌ ಅವಧಿಯಲ್ಲಿ ನಡೆದಿದೆ ಎನ್ನಲಾದ 70 ಹಗರಣಗಳ ಪುಸ್ತಕವನ್ನೇ ಬಿಡುಗಡೆ ಮಾಡಿದೆ. ಜತೆಗೆ ಒಟ್ಟಾರೆ 35,000 ಕೋಟಿ ರೂ.ಗಳ ಹಗರಣ ಆಗಿದೆ ಎಂದು ಆರೋಪಿಸಿದೆ.

Advertisement

ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ಅಧಿಕಾರ
ದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಯೋಗಿಸಿದ್ದ 70 ಹಗರಣಗಳ ಕಿರು ಪುಸ್ತಕವನ್ನು ಪತ್ರಿಕಾ ಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಈ ವೇಳೆ ಮಾತನಾಡಿ, ನಮ್ಮ ಆಡಳಿತ ಕಾಲದ 22 ಹಗರಣಗಳ ಬಗ್ಗೆ ಆರೋಪ ಮಾಡಿದ್ದೀರಿ. ಆದರೆ ನಾವು ಕೂಡ ನಿಮ್ಮ 70 ಹಗರಣಗಳನ್ನು ದಾಖಲೆ ಸಮೇತ ಮುದ್ರಿಸಿದ್ದೇವೆ. ಇದೆಲ್ಲವೂ ತನಿಖೆ ಆದರೆ ನಿಮ್ಮ ಕಥೆ ಏನಾಗುತ್ತದೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ ಯಾರ ಅಪ್ಪಣೆ ಮೇಲೆ ನಡೆದಿದೆ? ತಾಕತ್ತಿದ್ದರೆ ಇ.ಡಿ. ಪತ್ರಿಕಾ ಹೇಳಿಕೆ ಮೇಲೆ ಕೇಸ್‌ ಹಾಕಿ ನೋಡೋಣ? ಸದನದಲ್ಲಿ ನಾನು ಕೊಟ್ಟಿರುವ ದಾಖಲೆಗಳ ಬಗ್ಗೆ ಸಿದ್ದರಾಮಯ್ಯ ಚಕಾರ ಎತ್ತಿಲ್ಲ. “ಪದ್ಮನಾಭ, ಪದ್ಮನಾಭ’ ಎಂದಿದ್ದು ಬಿಟ್ಟರೆ ಮುಂದೆ ಹೋಗಿಲ್ಲ. ನಾವು ವಾಲ್ಮೀಕಿ ಹಗರಣದ ಬಗ್ಗೆ ಚರ್ಚೆಗೆ ಕೇಳಿದರೆ ಇವರು ಹಿಂದಿನ ಸರಕಾರದ ಬಗ್ಗೆ ಪ್ರಸ್ತಾವಿಸುತ್ತಾರೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಜಾಹೀರಾತು ಕೊಟ್ಟು ಕೋರ್ಟ್‌ನಲ್ಲಿ ಹೋಗಿ ನಿಂತದ್ದು ಮರೆತು ಹೋಯಿತೇ? ಅಧಿಕಾರಕ್ಕೆ ಬಂದು 15 ತಿಂಗಳಾಯಿತು. 40 ಪರ್ಸೆಂಟ್‌ ಆರೋಪದ ತನಿಖೆ ಏನಾಯಿತು? ಹಿಂದಿನ ಸರಕಾರ ಹಗರಣ ಮಾಡಿದ್ದರೆ ಅದನ್ನು ತನಿಖೆ ಮಾಡಲು ಇಷ್ಟು ಸಮಯ ಬೇಕೇ? ಇನ್ನು ನಿಮಗೆ ಮೂರೂವರೆ ವರ್ಷ ಮಾತ್ರ ಇರುವುದು. ಆಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯ ಅವರೇ ನಿಮಗೆ ಈಗಲೂ ಆಗದಿದ್ದರೆ ಅಧಿಕಾರದಿಂದ ಕೆಳಕ್ಕಿಳಿದು ನಮಗೆ
ಅಧಿಕಾರ ನೀಡಿ, ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ 21 ಹಗರಣಗಳನ್ನು ನಾವೇ ತನಿಖೆ ಮಾಡುತ್ತೇವೆ
ಎಂದು ಸವಾಲು ಹಾಕಿದರು.

ಬೆದರಿಕೆ ತಂತ್ರಗಳನ್ನೆಲ್ಲ ಬಿಟ್ಟುಬಿಡಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮಾಜಿ ಸಚಿವ ನಾಗೇಂದ್ರ, ಬಸವನಗೌಡ ದದ್ದಲ್‌ ಏನೂ ಮಾಡಿಲ್ಲ, ಎಲ್ಲವೂ ಅಧಿಕಾರಿಗಳ ತಪ್ಪು ಎನ್ನುವ ಸಿಎಂ ಸಿದ್ದರಾಮಯ್ಯನವರು ಆಡಳಿತ ನಡೆಸದೇ ಕತ್ತೆ ಕಾಯುತ್ತಿದ್ದರಾ? ಬೆದರಿಕೆ ತಂತ್ರಗಳನ್ನೆಲ್ಲ ಬಿಟ್ಟುಬಿಡಿ ಎಂದು ಅಶೋಕ್‌ ಎಚ್ಚರಿಕೆ ನೀಡಿದರು.

Advertisement

ಎಸ್‌ಸಿ, ಎಸ್‌ಟಿ ಹಣ ಮುಟ್ಟಿದರೆ ಸರ್ವನಾಶ ಆಗುತ್ತಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆಲ್ಲ ಸಿದ್ದರಾಮಯ್ಯ ಕ್ಲೀನ್‌ ಚಿಟ್‌ ಕೊಟ್ಟರು. ನಿಗಮದ ಅಧ್ಯಕ್ಷರು, ಸಚಿವರು ಏನೂ ಮಾಡಿಲ್ಲ, ಅಧಿಕಾರಿಗಳು ಮಾಡಿದ್ದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಬ್ಬರು ಜೈಲಿನಲ್ಲಿದ್ದು, ಇನ್ನೊಬ್ಬರು ಜೈಲಿಗೆ ಹೋಗುವ ಹಂತದಲ್ಲಿ ಇದ್ದಾರೆ. ಆದರೂ ಸರಕಾರ ಈ ಹಗರಣವನ್ನು ಮುಚ್ಚಿಹಾಕಲು ಹೊರಟಿದೆ ಎಂದು ಟೀಕಿಸಿದರು.

ತ್ರಿಬಲ್‌ ಎಸ್‌ಐಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದ್ದು, ಅವರೆಷ್ಟು ಶುದ್ಧ ಹಸ್ತರು ಎಂದು ಬಯಲಾಗಿದೆ. ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರಕಾರ. ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಾತ್ರವೇ ಇಲ್ಲ. ಬ್ಯಾಂಕ್‌ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ ರಾಜ್ಯ ಸರಕಾರ ತ್ರಿಬಲ್‌ ಎಸ್‌ಐಟಿಗೆ ಪ್ರಕರಣ ಕೊಟ್ಟು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ತ್ರಿಬಲ್‌ ಎಸ್‌ಐಟಿ ಎಂದರೆ “ಸಿದ್ದರಾಮಯ್ಯ, ಶಿವಕುಮಾರ್‌, ಸುಜೇìವಾಲಾ’ ಎಂದು ಅಶೋಕ್‌ ವ್ಯಂಗ್ಯವಾಡಿದರು.

ವಾಲ್ಮೀಕಿ ಹಗರಣದಲ್ಲಿ ಸಚಿವರು ಭಾಗಿಯಾಗಿಲ್ಲ ಅಂದರೆ ನಾಗೇಂದ್ರ ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಟ್ಟರು? ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ನಾಗೇಂದ್ರ ಕೆಲಸ ಮಾಡಿ¨ªಾರೆ. ಬ್ಯಾಂಕ್‌ ಬದಲಿಸಿ, ಶಾಂಗ್ರಿಲಾದಲ್ಲಿ ಡೀಲ್‌ ಮಾಡಿದ್ದಾರೆ. ನಿಮಗಾಗಿ ಕಷ್ಟಪಟ್ಟ ನಾಗೇಂದ್ರನಿಗೆ ನೀವು ಮಾಡಿದ್ದು ದ್ರೋಹ ಅಲ್ಲವೇ ಎಂದೂ ಅಶೋಕ್‌ ವ್ಯಂಗ್ಯವಾಡಿದರು.

ಭೋವಿ ನಿಗಮದಲ್ಲೂ 60 ಕೋಟಿ ರೂ. ಅಕ್ರಮ :  ಬಿಜೆಪಿಯ ಮತ್ತಷ್ಟು ಹಗರಣ ತೆರೆದಿಟ್ಟ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಬಿಜೆಪಿ ಆಡಳಿತವಿದ್ದಾಗ ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂಪಾಯಿ ಅಕ್ರಮ ನಡೆದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹಗರಣಗಳ ಕಿರುಪುಸ್ತಕ ಬಿಡುಗಡೆ ಮಾಡಿರುವಂತೆಯೇ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ವಿರುದ್ಧ ಟೀಕಾ
ಪ್ರಹಾರ ಮುಂದುವರಿಸಿ ಮತ್ತಷ್ಟು ಆರೋಪ ಗಳನ್ನು ಮಾಡಿದರು.

ಭೋವಿ ಅಭಿವೃದ್ಧಿ ನಿಗಮದಲ್ಲಿ ಮಾತ್ರವಲ್ಲ, ಟ್ರಕ್‌ ಟರ್ಮಿನಲ್‌ನಲ್ಲೂ 47 ಕೋಟಿ ರೂ. ಅಕ್ರಮ ನಡೆದಿತ್ತು. ಈ ಅಕ್ರಮ ಮಾಡಿ ದವರು ಯಾರು, ಜೈಲಿಗೆ ಹೋದವರು ಯಾರು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹಗರಣ ಮಾಡಿದಾಗ ಇ.ಡಿ. ಬರಲಿಲ್ಲ. ಈಗ ನಾವು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದೇವೆ. ಆದರೂ ಇ.ಡಿ. ಯಾಕೆ ಬಂದಿದೆ ಎಂದು ಕಿಡಿಕಾರಿದರು. ನಾವು ಯಾರನ್ನೂ ಬೆದರಿಸುವ ಕೆಲಸ ಮಾಡುತ್ತಿಲ್ಲ. ವಸ್ತು ಸ್ಥಿತಿಯನ್ನು ಸದನದಲ್ಲಿ ಇಟ್ಟಿದ್ದೇವೆ ಅಷ್ಟೇ ಎಂದರು.

”ವಾಲ್ಮೀಕಿ ನಿಗಮದ ಹಗರಣ ವಿರೋಧಿಸಿ ಹೋರಾಟ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗಾಬರಿಯಾಗಿ ದ್ದಾರೆ. ಬಿಜೆಪಿ ಆಡಳಿತಾವ ಧಿಯ ಭ್ರಷ್ಟಾಚಾರ ತನಿಖೆ ಮಾಡಿಸುವುದಾಗಿ ಧಮ್ಕಿ ಹಾಕಿದ್ದಾರೆ. ಅವರ ಗೊಡ್ಡು ಬೆದರಿಕೆಗೆಲ್ಲ ನಾವು ಹೆದರುವುದಿಲ್ಲ.”
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next