Advertisement

ಬಿಲ್ಲವ ಸೇವಾ ಸಂಘ ಕುಂದಾಪುರ:29ನೇ ವಾರ್ಷಿಕ ಮಹಾಸಭೆ

03:26 PM Sep 13, 2017 | Team Udayavani |

ಮುಂಬಯಿ: ಸಮಾಜದ ಸಂಸ್ಥೆಯು ಅಭಿವೃದ್ಧಿ ಯಾದಾಗ ನಮ್ಮ ಸಮಾಜವು ಅಭಿವೃದ್ಧಿ ಯಾಗುತ್ತದೆ. ಸಂಸ್ಥೆಯು ಬೆಳೆದಂತೆ ಅದರ ಕಾರ್ಯ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯಲು ಸ್ವಂತ ಭವನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕುಂದಾಪುರ ಬಿಲ್ಲವ ಸಂಘ ಮುಂಬಯಿ ಸಂಸ್ಥೆಗೆ ಸುಸಜ್ಜಿತ ಭವನವೊಂದರ ಅಗತ್ಯವಿದೆ. ಸಮಾಜ ಬಾಂಧವರು ಈ ಬೃಹತ್‌ ಯೋಜನೆಗೆ ಕೈಜೋಡಿಸಬೇಕು ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಅಧ್ಯಕ್ಷ ಮಂಜುನಾಥ ಎ. ಬಿಲ್ಲವ ಶಿರೂರು ಅವರು ನುಡಿದರು.

Advertisement

ಸೆ. 10ರಂದು ವಡಾಲ ಎನ್‌ಕೆಇಎಸ್‌ ಶಾಲಾ ಸಭಾಂಗಣದಲ್ಲಿ ನಡೆದ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ 29ನೇ ವಾರ್ಷಿಕ ಮಹಾಸಭೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಂಸ್ಕೃತಿಕ ವೈವಿಧ್ಯ ಸಂದರ್ಭದಲ್ಲಿ  ಸಭಾ ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದು ಮಾತನಾಡಿದ ಅವರು, ಪ್ರಸ್ತುತ ಯುವ ಜನಾಂಗವು ಸಂಘದ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಾಗಿ ಸಕ್ರಿಯವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅವರ ಸಮಾಜ ಸೇವೆಗೆ ನಾವು ಅವಕಾಶ ಹಾಗೂ ಪ್ರೋತ್ಸಾಹವನ್ನು ನೀಡಬೇಕು ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಸಂಘದ ಗೌರವಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ ಅವರು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ತಾರೆಯರು. ಅವರಿಗೆ ಎಲ್ಲ ರೀತಿಯ ಸಹಾಯವನ್ನು ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಕಾರ್ಯನಿರ್ವಹಿಸಬೇಕು. ಸಂಸ್ಥೆಯ ನಿರ್ಮಿಸಲಿರುವ ಭವನಕ್ಕೆ ನನ್ನಿಂದಾಗುವ ಸಹಾಯವನ್ನು ಖಂಡಿತವಾಗಿಯೂ ಮಾಡಲಿದ್ದೇನೆ ಎಂದರು.

ಮಹಿಳಾ ವಿಭಾಗದ ಗೌರವಾಧ್ಯಕ್ಷ ಸಂತೋಷಿ ಎಸ್‌. ಪೂಜಾರಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಸಮಾಜದ ಮಕ್ಕಳಿಗೆ ಒಂದು ರೀತಿಯ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ. ಇದರಿಂದ ಅವರು ಎಲ್ಲಿ ಹೋದರೂ ಅಂಜಿಕೆಯಿಲ್ಲದೆ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್‌. ಪೂಜಾರಿ ಅವರು ಮಾತನಾಡಿ, ಬಿಲ್ಲವ ಸೇವಾ ಸಂಘ ಕುಂದಾಪುರವು ಇಂದು ಬೆಳೆಯುತ್ತಿರುವ ಒಂದು ಸಂಸ್ಥೆಯಾಗಿದೆ. ಥಾಣೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ  ಸಂಘದ ಕಾರ್ಯಚಟುವಟಿಕೆಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭವನ ನಿರ್ಮಾಣದತ್ತ ಎಲ್ಲರೂ ಮುಂದಾಗಬೇಕು. ಸಮಾಜ ಬಾಂಧವರು ಅದಕ್ಕಾಗಿ ತಮ್ಮಿಂದಾದ ಸಹಾಯವನ್ನು ಮಾಡಬೇಕು ಎಂದರು.
ಸಭಾ ಕಾರ್ಯಕ್ರಮವನ್ನು ಗೌರವಾಧ್ಯಕ್ಷ  ಹಾಗೂ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ಸೀಮಾ ಲೋಕೇಶ್‌ ಅವರು ಸ್ವಾಗತಿಸಿದರು. ವೇದಿಕೆಯಲ್ಲಿ ಗೌರವ ಕೋಶಾಧಿಕಾರಿ ಅಶೋಕ ಎನ್‌. ಪೂಜಾರಿ, ಉಪಾಧ್ಯಕ್ಷರಾದ  ಎನ್‌. ಜಿ. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್‌. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ ಪೂಜಾರಿ ಕೊಡೇರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಎಸ್‌. ಕೆ. ಪೂಜಾರಿ, ಸಂಘದ ಭಜನ ಮಂಡಳಿಯ ಸಂಚಾಲಕರಾದ ಸುಶೀಲಾ ಎಸ್‌. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಆಡಳಿತ ಮಂಡಳಿ, ಉಪ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಸಂಘದ ಗೌರವಾಧ್ಯಕ್ಷ ಸುರೇಶ ಎಸ್‌. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ, ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ  ಮನೋರಂಜನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ದೇವರ ಮಂಟಪವನ್ನು ಸದಾನಂದ ಪೂಜಾರಿ ಅವರು ಅಲಂಕರಿಸಿದ್ದರು. ಕಾರ್ಯಕ್ರಮವನ್ನು ಯಶೋದಾ ಸತೀಶ್‌ ಪೂಜಾರಿ, ಸೀಮಾ ಅನಿಲ್‌ ಪೂಜಾರಿ ಮೊದಲಾದವರು ನಿರ್ವಹಿಸಿದರು. ನರಸಿಂಹ ಎಂ. ಬಿಲ್ಲವ, ಜತೆ ಕಾರ್ಯದರ್ಶಿಗಳಾದ  ಶಂಕರ ಎಂ. ಪೂಜಾರಿ, ಸೀಮಾ ಎಲ್‌. ಪೂಜಾರಿ, ಜತೆ ಕೋಶಾಧಿಕಾರಿಗಳಾದ ಜಗನ್ನಾಥ  ಆರ್‌. ಪೂಜಾರಿ, ಶ್ರೀಧರ ವಿ. ಪೂಜಾರಿ, ಕಾರ್ಯದರ್ಶಿ ಯಶೋದಾ ಎಸ್‌. ಪೂಜಾರಿ, ಕಾರ್ಯದರ್ಶಿ ಜಯಶ್ರೀ ಎ. ಕೋಡಿ, ಕಾರ್ಯದರ್ಶಿ ಅಶೋಕ ಎಂ. ಪೂಜಾರಿ, ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜದ ಮಕ್ಕಳಿಂದ, ಮಹಿಳೆಯರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನೆರವೇರಿದವು. 
ಚಿತ್ರ-ವರದಿ : ಸುಭಾಷ್‌   ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next