Advertisement

ಬಿಳಿಗಿರಿರಂಗ ವೈದಿಕ ಪರಂಪರೆಯ ಸಾಂಸ್ಕೃತಿಕ ವೀರ

07:40 AM Feb 19, 2019 | |

ಚಾಮರಾಜನಗರ: ಮಂಟೇಸ್ವಾಮಿ, ಮಹದೇಶ್ವರ ಶೈವ ಪರಂಪರೆಯ ಸಾಂಸ್ಕೃತಿಕ ನಾಯಕರಾದರೆ, ಬಿಳಿಗಿರಿರಂಗ ವೈದಿಕ ಪರಂಪರೆಯ ಸಾಂಸ್ಕೃತಿಕ ವೀರ ಎಂದು ಮೈಸೂರು ವಿ.ವಿ. ಜಾನಪದ ವಿಭಾಗ ಮುಖ್ಯಸ್ಥ ಡಾ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ನಡೆದ ಗೋಷ್ಠಿಯಲ್ಲಿ ಬಿಳಿಗಿರಿ ರಂಗನ ಕಾವ್ಯ ಕುರಿತು ಮಾತನಾಡಿದರು.

ಜಿಲ್ಲೆ ಜನಪದ ಮಹಾಕಾವ್ಯಗಳ ಹಾಗೂ ಕೆಲವು ಜನಪ್ರಿಯ ಕಥನ ಕಾವ್ಯಗಳ ತವರೂರಾಗಿದ್ದು, ಇಲ್ಲಿಯ ಮಂಟೇಸ್ವಾಮಿ ಮತ್ತು ಮಹದೇಶ್ವರ ಕರ್ನಾಟಕದ ಪ್ರಸಿದ್ದ ಜನಪದ ಮಹಾಕಾವ್ಯಗಳಾಗಿದ್ದರೆ ಬಿಳಿಗಿರಿ ರಂಗ ಅಷ್ಟೇ ಪ್ರಸಿದ್ದ ಕಥನ ಕಾವ್ಯವಾಗಿದೆ. ಜನಪದ ಪ್ರೇಮ ಕಾವ್ಯವಾಗಿದೆ ಎಂದರು.

ಸೋಲಿಗರ ಅಸ್ಮಿತೆ: ಬಿಳಿಗಿರಿ ರಂಗನ ಕಾವ್ಯ ಸೋಲಿಗರ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಈ ಕಾವ್ಯದಲ್ಲಿ ಸೋಲಿಗ ಸಮುದಾಯದ ಧಾರ್ಮಿಕ, ಸಾಮಾಜಿಕ, ಜೀವನಾವರ್ತನದ ಹಲವಾರು ಆಚರಣೆಗಳು ಅನಾವರಣಗೊಂಡಿದೆ. ಇದರಿಂದಾಗಿ ಸೋಲಿಗರ ಅಸ್ಮಿತೆ ಗುರುತಿಸಬಹುದಾಗಿದೆ ಎಂದು ಅಭಿಪ್ರಾಯಿಸಿದರು.

ಉತ್ತಮ ಸಂಬಂಧ: ಬಿಳಿಗಿರಿರಂಗನ ಕಾವ್ಯವನ್ನು ಹಾಗೂ ಸೋಲಿಗರ ಸಂಸ್ಕೃತಿಯನ್ನು ಕುರಿತು ನಡೆಸಿರುವ ಅಧ್ಯಯನಗಳು ಅಥವಾ ಸಂಶೋಧನೆಗಳಿಂದ ತಿಳಿದಿರುವುದು ಆಯಾ ಕ್ಷೇತ್ರಗಳಲ್ಲಿ ದೈವ, ಸ್ಥಳೀಯ ಜನರರ ನಡುವೆ ಉತ್ತಮ ಸಂಬಂಧವನ್ನಿಟ್ಟುಕೊಳ್ಳುವುದಕ್ಕಾಗಿ ಹೆಣ್ಣೊಂದನ್ನು ಕೊಡುವ ಪದ್ಧತಿ ಅನಾದಿಕಾಲದಿಂದಲೂ ಬಂದಿದೆ ಈ ಕಥೆ ಸ್ವಾರಸ್ಯಕರವಾಗಿ ಮೂಡಿಬಂದು ಒಂದು ಕಾವ್ಯದೆತ್ತರಕ್ಕೆ ಬೆಳೆದುನಿಂತಿದೆ ಎಂದು ತಿಳಿಸಿದರು.

Advertisement

ಬಿಳಿಗಿರಿರಂಗ ವೈಷ್ಣವ: ಈ ಕಾವ್ಯ ಶೈವ ಧರ್ಮವನ್ನು ಕೊನೆಗಾಣಿಸಿ ವೈಷ್ಣವ ಧರ್ಮವನ್ನು ಪ್ರತಿಷ್ಠಾಪಿಸುವ ಘಟನೆಯನ್ನು ಸಾಂಕೇತಿಕವಾಗಿ ಕಟ್ಟಿಕೊಡುತ್ತದೆ. ಬಿಳಿಗಿರಿರಂಗ ವೈಷ್ಣವನಾಗಿರುವುದರಿಂದ ಆತ ಸಸ್ಯಾಹಾರಿ.ಇಲ್ಲಿನ ಕಾಡು ಮತ್ತು ನಾಡಿನ ಜನಸಮುದಾಯ ಮಾಂಸಾಹಾರಿಗಳಾಗಿರುವುದರಿಂದ ಪ್ರತಿವರ್ಷ ದೊಡ್ಡಜಾತ್ರೆ ಸಂದರ್ಭದಲ್ಲಿ ಕುರಿ ಕೋಳಿಗಳ ಬಲಿಕೊಟ್ಟು ಹರಿಸೇವೆ ಮಾಡುತ್ತಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಬ್ಬಹಳ್ಳಿ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎನ್‌.ಎಸ್‌. ಮಹದೇವಪ್ರಸಾದ್‌ ಆಶಯ ನುಡಿಗಳನ್ನಾಡಿದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೊಡ್ಡಗವಿಬಸಪ್ಪ  ಮಲೆ ಮಹದೇಶ್ವರ ಕಾವ್ಯ ಗಾಯನ ಮಾಡಿದರೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಸಮುದ್ರ ನಿಂಗಶೆಟ್ಟಿ ಮಂಟೇಸ್ವಾಮಿ ಕಾವ್ಯ ಹಾಡಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೊಡ್ಡಮೋಳೆ ಎಚ್‌.ಸಣ್ಣಶೆಟ್ಟಿ ಬಿಳಿಗಿರಿರಂಗನ ಕಾವ್ಯವನ್ನು ಹಾಡಿದರು.  ಸಮ್ಮೇಳನಾಧ್ಯಕ್ಷ ಡಾ. ಶಿವರಾಜಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ವಿನಯ್‌, ಚಂದ್ರಶೇಖರ್‌, ಕೊಮಾರನಪುರ ರವಿಕುಮಾರ್‌, ಬಳೇಪೇಟೆ ಪ್ರಸಾದ್‌, ಅರ್ಕಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next