Advertisement

ಉಕದಲ್ಲೇ ಅತಿ ದೊಡ್ಡ ಅನಾಹುತ 

09:39 PM Mar 23, 2019 | Team Udayavani |

ಹುಬ್ಬಳ್ಳಿ: ಧಾರವಾಡದಲ್ಲಿನ ಬಹುಮಹಡಿ ವಾಣಿಜ್ಯ ಸಂಕೀರ್ಣ ಕುಸಿತ, ಉತ್ತರ ಕರ್ನಾಟಕದಲ್ಲೇ ದೊಡ್ಡ ಅನಾಹುತ ಸೃಷ್ಟಿಸಿದ ಸಾಲಿಗೆ ಸೇರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ದೆಹಲಿಯಿಂದ ರಾತೋರಾತ್ರಿ ವಿಶೇಷ ವಿಮಾನದಲ್ಲಿ ದೌಡಾಯಿಸುವಂತಾಗಿದ್ದು, ಮೂರು ದಶಕಗಳ ಹಿಂದಿನ ಬೆಂಗಳೂರಿನ ಗಂಗಾರಾಮ್‌ ಬಹುಮಹಡಿ ಕಟ್ಟಡ ದುರಂತ ನೆನಪಿಸುವಂತೆ ಮಾಡಿದೆ. 

Advertisement

ಸುಮಾರು 36 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಹು ದೊಡ್ಡ ಅನಾಹುತ ಸೃಷ್ಟಿಸಿದ್ದ ಗಂಗಾರಾಮ್‌ ಬಹುಮಹಡಿ ಕಟ್ಟಡ ಕುಸಿತ ಘಟನೆ ನಂತರ ಬಹುದೊಡ್ಡ ಮಟ್ಟಿಗೆ ಸುದ್ದಿಯಾಗಿರುವುದು ಧಾರವಾಡ ಹೊಸ ಬಸ್‌ ನಿಲ್ದಾಣ ಬಳಿಯ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಐದು ಮಹಡಿ ವಾಣಿಜ್ಯ ಸಂಕೀರ್ಣವಾಗಿದೆ. ಧಾರವಾಡದಲ್ಲಿನ ಬಹುಮಹಡಿ ಕಟ್ಟಡ ಕುಸಿತದಿಂದ ಬುಧವಾರ ರಾತ್ರಿವರೆಗಿನ ವರದಿಯಂತೆ ಸುಮಾರು 6 ಜನ ಮೃತಪಟ್ಟಿದ್ದು, 58 ಜನರನ್ನು ಪಾರು ಮಾಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಹಳೇ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ಕುಸಿದು ಅನಾಹುತಗಳು ಸಂಭವಿಸಿವೆಯಾದರೂ, ದೊಡ್ಡ ಪ್ರಮಾಣದ ಕಟ್ಟಡವೊಂದು ಕುಸಿದು ಹೆಚ್ಚಿನ ಅನಾಹುತ ಸೃಷ್ಟಿಸಿರುವುದು ಇದೇ ಮೊದಲೆನ್ನಬಹುದು.

ಹುಬ್ಬಳ್ಳಿಯಲ್ಲಿ 2016ರ ಫೆಬ್ರವರಿಯಲ್ಲಿ ಸುಮಾರು 80 ವರ್ಷಗಳ ಹಳೆಯದಾದ ರೈಲ್ವೆ ಇಲಾಖೆ ಕಟ್ಟಡ ಕುಸಿತವಾಗಿ ಸುಮಾರು 7 ಜನ ಮೃತಪಟ್ಟಿದ್ದರು. ಕಟ್ಟಡಗಳ ಕುಸಿತದಿಂದ ಮೃತಪಟ್ಟವರ ಸಂಖ್ಯೆ ಗಮನಿಸಿದರೆ ಉತ್ತರ ಕರ್ನಾಟಕದಲ್ಲೇ ಇದು ಹೆಚ್ಚಿನ ಸಂಖ್ಯೆ ಎಂದು ಹೇಳಬಹುದು. ಅದೇ ರೀತಿ 2015ರ ಫೆಬ್ರವರಿಯಲ್ಲಿ ಬೆಳಗಾವಿಯ ಶಿವಾಜಿ ರಸ್ತೆಯಲ್ಲಿನ ಸುಮಾರು 40 ವರ್ಷಗಳ ಹಳೆಯ ಕಟ್ಟಡ ಕುಸಿದಿತ್ತು. ಬಳ್ಳಾರಿಯ ಗಾಂಧಿನಗರದಲ್ಲಿ ಬಾಯ್ಸ್  ಹಾಸ್ಟೆಲ್‌ ಕಟ್ಟಡವೊಂದು 2010 ಜನವರಿಯಲ್ಲಿ ಕುಸಿತವಾಗಿ ವಿದ್ಯಾರ್ಥಿ ಸೇರಿದಂತೆ ಐವರು ಮೃತಪಟ್ಟಿದ್ದರು. ವಿಜಯಪುರದಲ್ಲಿ 2017ರಲ್ಲಿ ಮೂರು ಮೂರು ಅಂತಸ್ತಿನ ಕಟ್ಟಡ ಕುಸಿತವಾಗಿತ್ತು.

ರಾಯಚೂರು ಜಿಲ್ಲೆ ಯಾಪಲದಿನ್ನಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ನೀರಿನ ಟ್ಯಾಂಕ್‌ ಕುಸಿದು ಐವರು ಮೃತಪಟ್ಟ ಘಟನೆ 2015ರ ಜನವರಿಯಲ್ಲಿ ಘಟಿಸಿತ್ತು. ಅದೇ ರೀತಿ ಕೊಪ್ಪಳ ಜಿಲ್ಲೆಯಲ್ಲಿ ನೀರಿನ ಟ್ಯಾಂಕ್‌ ಕುಸಿದು ಇಬ್ಬರು ಮೃತಪಟ್ಟಿದ್ದರು. ಕಲಬುರಗಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸಿಮೆಂಟ್‌ ಫ್ಯಾಕ್ಟರಿಯಲ್ಲಿ ಕ್ರೇನ್‌ ಮುರಿದು ಬಿದ್ದು ಆರು ಜನರು ಮೃತಪಟ್ಟ ಘಟನೆ 2018ರ ಆಗಸ್ಟ್‌ನಲ್ಲಿ ನಡೆದಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ 2018ರಲ್ಲಿ ಸಕ್ಕರೆ ಕಾರ್ಖಾನೆ ಬಾಯ್ಲರ್‌ ಸ್ಫೋಟಗೊಂಡು ಆರು ಜನ ಕಾರ್ಮಿಕರು ಮೃತಪಟ್ಟಿದ್ದರು.

ಉತ್ತರ ಕರ್ನಾಟಕದಲ್ಲಿ ಹಳೇ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ಕುಸಿತವಾಗಿ ಹಲವು ಅನಾಹುತ ಸೃಷ್ಟಿಸಿವೆ. ಅದೇ ರೀತಿ 2009ರಲ್ಲಿ ನ ಕಂಡರಿಯದ ಪ್ರವಾಹ ಹಲವು ಮನೆ, ಕಟ್ಟಡಗಳು ಕುಸಿತವಾಗುವಂತೆ ಮಾಡಿತ್ತಾದರೂ, ದೊಡ್ಡ ಅನಾಹುತ ಸೃಷ್ಟಿಸಿರಲಿಲ್ಲ. ಧಾರವಾಡದಲ್ಲಿನ ಐದು ಅಂತಸ್ತಿನ ಕಟ್ಟಡ ಕುಸಿತ ಮಾತ್ರ ಜೀವ ಹಾನಿ ಹಾಗೂ ಆಸ್ತಿ ಹಾನಿ ವಿಚಾರದಲ್ಲಿ ದೊಡ್ಡ ಪ್ರಮಾಣದ ಅನಾಹುತ ಸೃಷ್ಟಿಸಿದೆ. ಕಟ್ಟಡದಲ್ಲಿ ಇನ್ನಷ್ಟು ಜನ ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆಯೇ ಎಂಬ ಆತಂಕ ಸೃಷ್ಟಿಸಿದೆ.

Advertisement

ಕೆಲವರ ಅನಿಸಿಕೆ ಪ್ರಕಾರ ಮಂಗಳವಾರವಾದ್ದರಿಂದ ಸಂತೆ ಎಂಬ ಕಾರಣಕ್ಕೆ ಹಲವು ಕಾರ್ಮಿಕರು ಕೆಲಸಕ್ಕೆ ಬಂದಿರಲಿಲ್ಲ. ಬೆಳಿಗ್ಗೆ ಅಥವಾ ಸಂಜೆಯಾಗಿದ್ದರೆ ಈ ಕಟ್ಟಡದಲ್ಲಿ ವಿವಿಧ ವ್ಯಾಪಾರಿ ಮಳಿಗೆ, ಹೊಟೇಲ್‌ ಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಅಧಿಕವಾಗಿರುತ್ತಿತ್ತು. ಮಧ್ಯಾಹ್ನ 3:00ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದರಿಂದ ಆಗಬಹುದಾಗಿದ್ದ ಇನ್ನಷ್ಟು ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂಬುದಾಗಿದೆ.

ಗಂಗಾರಾಮ್‌ ಕಟ್ಟಡ ಕಹಿ ನೆನಪು
ಬೆಂಗಳೂರಿನಲ್ಲಿ ಮೆಜೆಸ್ಟಿಕ್‌ ಹತ್ತಿರದ ಸುಭೇದಾರ ಛತ್ರಂ ರಸ್ತೆಯಲ್ಲಿ ಗಂಗಾರಾಮ್‌ ಬಹುಮಹಡಿ ಕಟ್ಟಡ ಕುಸಿತದ ಕಹಿ ನೆನಪು, ಧಾರವಾಡದಲ್ಲಿನ ಬಹುಮಹಡಿ ಕಟ್ಟಡ ಕುಸಿತ ಘಟನೆಯಿಂದ ಮತ್ತೆ ಸ್ಪೃತಿಪಟಲದಲ್ಲಿ ಹಲವರಿಗೆ ಸುಳಿದಾಡುವಂತೆ ಮಾಡಿದೆ. 1983ರ ಸೆಪ್ಟೆಂಬರ್‌ನಲ್ಲಿ ಗಂಗಾರಾಮ್‌ ಬಹುಮಹಡಿ ಕಟ್ಟಡ ಕುಸಿತವಾಗಿ ಸುಮಾರು 123 ಜನರು ಮೃತಪಟ್ಟು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದುರಂತ ಪ್ರಮಾಣ ಎಷ್ಟಿತ್ತೆಂದರೆ ಅಗ್ನಿಶಾಮಕ ದಳ, ಪೊಲೀಸರು, ಕೆಜಿಎಫ್ ಗಣಿಯ 30ಕ್ಕೂ ಹೆಚ್ಚು ನುರಿತ ಕಾರ್ಮಿಕರು, ಸ್ವಯಂ ಸೇವಕರು ಸುಮಾರು 34 ದಿನಗಳವರೆಗೆ ಕಾರ್ಯಾಚರಣೆ ನಡೆಸಬೇಕಾಗಿತ್ತು. ಉತ್ತರ ಕರ್ನಾಟಕದಲ್ಲಿ ಕಟ್ಟಡ ಕುಸಿತ, ಸಿಮೆಂಟ್‌ ಫ್ಯಾಕ್ಟರಿಯಲ್ಲಿ ಕ್ರೇನ್‌ ಕುಸಿತ, ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ, ನೀರಿನ ಟ್ಯಾಂಕ್‌ ಕುಸಿತದಿಂದ ಅನೇಕರು ಮೃತಪಟ್ಟಿದ್ದಾರೆಯಾದರೂ, ಧಾರವಾಡದಲ್ಲಿನ ಕಟ್ಟಡ ಕುಸಿತ ಇವೆಲ್ಲವನ್ನು ಮೀರಿಸುವಂತೆ ಮಾಡಿದೆ.

ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next