ಕೊರಟಗೆರೆ: ಕೊರಟಗೆರೆ ತಾಲೂಕಿನ ಹಲವು ಕಡೆ ಸಣ್ಣ ನೀರಾವರಿ ಇಲಾಖೆಯಿಂದ ಮಾಡಲಾದ ಚಿಕ್ ಡ್ಯಾಮ್ , ಬ್ಯಾರೇಜ್ ಕಮ್ ಬ್ರಿಡ್ಜ್ ಹಾಗೂ ಬ್ರಿಡ್ಜ್ ಕಾಮಗಾರಿಯಲ್ಲಿ ದೊಡ್ಡ ಪ್ರಮಾಣದ ಲೋಪ ಕೇಳಿ ಬರುತ್ತಿದ್ದು ಭಕ್ತರಹಳ್ಳಿ ಹಾಗೂ ಚಿಕ್ಕಸಾಗ್ಗೆರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆದಿದೆ ಎಂದು ನೂರಾರು ಜನ ಗ್ರಾಮಸ್ಥರು ಕಾಮಗಾರಿಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ನೀರಾವರಿ ಇಲಾಖೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹಲವು ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿ ಇಲಾಖೆ ಹಾಗೂ ಟೆಂಡರ್ ದಾರರ ಒಳ ಒಪ್ಪಂದದಿಂದ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಕೊರಟಗೆರೆ ತಾಲೂಕಿನ ಭಕ್ತರಹಳ್ಳಿ ಹಾಗೂ ಚಿಕ್ಕಸಾಗ್ಗೆರೆಗೆ ಸಂಪರ್ಕ ಕಲ್ಪಿಸುವ ಗರುಡಾಚಲ ನದಿಗೆ ನಿರ್ಮಿಸಲಾದ ಸೇತುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ನೂರಾರು ಜನ ಗ್ರಾಮಸ್ಥರು ಇಲಾಖೆ ಹಾಗು ಟೆಂಡರ್ ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಕ್ತರಹಳ್ಳಿ ಹಾಗೂ ಚಿಕ್ಕಸಾಗ್ಗೆರೆ ನಡುವೆ ಗರುಡಾಚಲ ನದಿಗೆ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ 1.5 ಕೋಟಿ ರೂಗೆ ಕಾಮಗಾರಿ ನಡೆಯುತ್ತಿದ್ದು, ಇದರ ಟೆಂಡರ್ ನ ಜವಾಬ್ದಾರಿ ಹೊತ್ತ ಹೆಬ್ಬೂರಿನ ಟಿ ಆರ್ ವೆಂಕಟೇಶ್ ಗೌಡ ಕಾಮಗಾರಿ ಕಳಪೆ ಮಾಡಿದ್ದಾರೆ ಕಾಮಗಾರಿ ಗೆ ಪೂರ್ಣ ಮರಳನ್ನು ಗರುಡಾಚಾಲ ನದಿಯಲ್ಲಿ ಬಳಸಿ ಕಾಮಗಾರಿ ಮಾಡಿದ್ದು, ಕಾಮಗಾರಿ ಕಳಪೆಯಿಂದ ಕೂಡಿದ್ದು ಒಂದು ಬಾರಿ ನದಿ ಹರಿದರೂ ಸೇತುವೆ ಕೊಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳಿದ್ದು, ದಯಮಾಡಿ ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟಂತವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಸೇತುವೆ ಕಾಮಗಾರಿಯ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಹಾಗಾಗಿ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಹಾಗೂ ಕರ್ತವ್ಯ ಲೋಪ ತೋರಿರುವ ಇಂಜಿನಿಯರ್ಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯ ಮಾಡಿದ್ದಾರೆ, ಇನ್ನೂ ಕಾಮಗಾರಿ ಮುಗಿಯುವ ಮುನ್ನವೇ ಚೆಕ್ ಡ್ಯಾಂ ಕಾಮಗಾರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿದೆ ಇದನ್ನು ಗಮನಿಸಿರುವ ಗುತ್ತಿಗೆದಾರ ಸೇತುವೆ ಸುತ್ತಲೂ ಸಿಮೆಂಟ್ ತೇಪೆ ಹಾಕಿ ಮುಚ್ಚಲು ಮುಂದಾಗಿರುವುದು ಆ ಭಾಗದ ಸಾರ್ವಜನಿಕರನ್ನು ಕೆರಳಿಸಿದೆ.
Related Articles
ಗೊಂದಲ ಸೃಷ್ಟಿಸಿದ ಹೇಳಿಕೆ
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಮೇಶ್ ಈ ಕಾಮಗಾರಿಗೆ 1.50 ಲಕ್ಷ ಅಂದರೆ 1.5 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಎಂದರೆ ಇದರ ಗುತ್ತಿಗೆದಾರ 90 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ನದಿಯ ಮರಳೆ ಕಾಮಗಾರಿ ಬಳಕೆ
ಸೇತುವೆ ಕಾಮಗಾರಿಗೆ ಗರುಡಾಚಲ ನದಿಯ ಮರಳನ್ನೇ ಬಳಸಿಕೊಂಡಿದ್ದು , ಅಕ್ಕ ಪಕ್ಕದ ಜಮೀನಿನ ಸವಕಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ್ದು ಅಲ್ಲಿನ ರೈತರಿಗೆ ಕಾಮಗಾರಿಗೆ 40 ರಿಂದ 50 ಲೋಡ್ ಮರಳು ಸಾಗಾಣಿಕೆ ಮಾಡಿರುವುದರಿಂದ ಜಮೀನಿನ ಕುಸಿತ ಕಾಣುವ ಭಯ ಕಾಡುತ್ತಿದ್ದು, ರೈತರ ಜಮೀನಿನಲ್ಲಿ ಗರುಡಾಚಲ ನದಿಗೆ ಹೊಂದಿಕೊಂಡಂತೆ ತಡೆಗೋಡೆ ನಿರ್ಮಿಸಿ ಇಲ್ಲವೇ ಸಣ್ಣ ನೀರಾವರಿ ಇಲಾಖೆ ಇಲ್ಲವೇ ಟೆಂಡರ್ ದಾರನಿಂದ ರೈತರಿಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಕಾಮಗಾರಿಗಳ ಬಳಿ ಬೋರ್ಡ್ ನಾಪತ್ತೆ
ಸರ್ಕಾರದಿಂದ ಅನುಷ್ಠಾನಗೊಂಡ ಯಾವುದೇ ಕಾಮಗಾರಿಗಳಿರಲ್ಲೀ ಅನುಷ್ಠಾನದ ದಿನಾಂಕ ಅಂದಾಜು ಮೊತ್ತ ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಕಾಮಗಾರಿಯ ನಡೆಯುವ ಸ್ಥಳದಲ್ಲಿ ನೆಡುವುದು ಸಾಮಾನ್ಯ, ಕಾಮಗಾರಿಯ ಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಿ ಎಂದು ಪಾರದರ್ಶಕ ಕಾಮಗಾರಿ ನೆಡೆಯಲಿ ಯಾವುದೇ ರೀತಿಯಲ್ಲಿ ಕಳಪೆ ಕಾಮಗಾರಿ ಆಗದಿರಲಿ ಎಂಬ ಉದ್ದೇಶದಿಂದ ಎಲ್ಲಾ ರೀತಿಯ ಕಾಮಗಾರಿಗಳಲ್ಲಿಯೂ ಕಾಮಗಾರಿಯ ಮಾಹಿತಿಯ ಬೋರ್ಡ್ ಹಾಕುವುದು ಸಾಮಾನ್ಯ ಆದರೆ ಸಣ್ಣ ನೀರಾವರಿ ಇಲಾಖೆಯ ಯಾವುದೇ ಕಾಮಗಾರಿಯ ಪೂರ್ಣ ಮಾಹಿತಿಯ ಬೋರ್ಡ್ ನೆಡುವುದೇ ಇಲ್ಲ…. ಯಾಕ್ ಸರ್ ಮಾಹಿತಿ ಇರುವ ಬೋರ್ಡ್ ನೆಟ್ಟಿಲ್ಲ. ಎಂದು ಕೇಳಿದರೆ ಅಲ್ಲಿನ ಇಂಜಿನಿಯರ್ ಹಾಗೂ ಗುತ್ತಿಗೆದಾರ ಉಡಾಫೆ ಉತ್ತರ ನೀಡುತ್ತಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಿಸಿದ ಗುತ್ತಿಗೆ ದಾರರು ಮತ್ತು ಎಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು , ಕಾಮಗಾರಿ ವಿಚಾರವಾಗಿ ಮಾಹಿತಿ ಕೇಳಿದರೆ ಇಲ್ಲಿನ ಗುತ್ತಿಗೆದಾರ ಹಾಗೂ ಇಂಜಿನಿಯರ್ ಇಬ್ಬರೂ ಸಹ ಉಡಾಫೆ ಉತ್ತರ ನೀಡುತ್ತಿದ್ದಾರೆ
– ಅಮ್ಜದ್ ಪಾಷಾ. ಗ್ರಾ ಪಂ ಸದಸ್ಯರು
ಸಣ್ಣ ನೀರಾವರಿ ಇಲಾಖೆಯ ಎಷ್ಟೋ ಕಾಮಗಾರಿಗಳು ಗುಣ ಮಟ್ಟಇಲ್ಲದೆ ಕಳಪೆಯಿಂದ ಕೂಡಿದೆ. ಕರ್ತವ್ಯ ಲೋಪವೆಸಗಿರುವ ಎಂಜಿನಿಯರ್ ಮತ್ತು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
– ಜಗದೀಶ್ ಬಿಸಿ…ಮಾಜಿ ಗ್ರಾ ಪಂ ಸದಸ್ಯ
ಸೇತುವೆ ನಿರ್ಮಾಣ ಕಳಪೆಯಿಂದ ಕೂಡಿದೆ ರಸ್ತೆ ನಿರ್ಮಾಣದ ಮಧ್ಯಭಾಗದಲ್ಲಿ ಮೇಲ್ಭಾಗದಲ್ಲಿ ಒಂದೆರಡು ಇಂಚಿನಷ್ಟು ಸಿಮೆಂಟ್ ಮಡ್ಡಿ ಸಾರಿಸಿದ್ದು ಕೆಳಭಾಗದಲ್ಲಿ ಇಲ್ಲಿಯೇ ಇರುವಂತಹ ಗುಂಡು-ಕಲ್ಲು-ಮುಳ್ಳು-ಮಣ್ಣು ತುಂಬಿ ಕಾಮಗಾರಿ ಮುಕ್ತಾಯಗೊಳಿಸಿದ್ದು, ರಸ್ತೆಯ ಕೆಳಭಾಗಕ್ಕೆ ಯಾವುದೇ ಸಿಮೆಂಟ್ ಬಳಸದೆ ಕೇವಲ ಕಲ್ಲು ಮಣ್ಣಿನಲ್ಲೇ ಕಾಮಗಾರಿ ಮುಗಿಸಿರುವುದು ಈ ಕಾಮಗಾರಿಯ ಕಳಪೆಗೆ ಸಾಕ್ಷಿಯಾಗಿದೆ.
– ಪ್ರಕಾಶ್… ಸ್ಥಳೀಯ ಯುವ ಮುಖಂಡ
ಇದನ್ನೂ ಓದಿ: Koratagere: ಆಕಸ್ಮಿಕ ಬೆಂಕಿಗೆ 4 ಗುಡಿಸಲು ಭಸ್ಮ, ಮೂರು ಮೇಕೆಗಳು ಸಜೀವ ದಹನ