Advertisement

Bidar; ಯುವ ರೈತನ ಬರ್ಬರ ಹತ್ಯೆ: ಐವರು ಆರೋಪಿಗಳ ಸೆರೆ

07:36 PM Dec 31, 2023 | Team Udayavani |

ಬೀದರ್ : ತಾಲೂಕಿನ ಅಲಿಯಂಬರ್ ಗ್ರಾಮದ ಹೊರವಲಯದಲ್ಲಿ ನ. 11ರ ಮಧ್ಯರಾತ್ರಿ ನಡೆದಿದ್ದ ಯುವ ರೈತನ ಕೊಲೆ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸಿ, ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಮುಖ್ಯ ಆರೋಪಿ ಜತೆಗೆ ಮೃತನ ಪತ್ನಿಯ ಅನೈತಿಕ ಸಂಬಂಧವೇ ಕಾರಣ ಎಂಬುದು ತನಿಖೆಯಿಂದ ದೃಢವಾಗಿದೆ. ಇನ್ನೂ ಪ್ರಕರಣದಲ್ಲಿ ದೂರುದಾರಳೆ ಕೊಲೆ ಸಂಚಿನ ಆರೋಪಿಯಾಗಿದ್ದಾಳೆ.

Advertisement

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಮಾಹಿತಿ ನೀಡಿದರು. ಬೈಕ್ ಮೇಲೆ ತೆರಳಿದ್ದ ವಿಳಾಸಪುರ ಗ್ರಾಮದ ಅಮಿತ್ ಲಕ್ಷ್ಮಣರಾವ್ ಎಂಬ ಯುವ ರೈತನನ್ನು ಅಪರಿಚಿತರು ಅಡ್ಡಗಟ್ಟಿ ಕಬ್ಬಿಣದ ಆಯುಧಗಳಿಂದ ಹೊಡೆದು ಕೊಲೆಗೈದಿದ್ದರು. ಘಟನೆ ಸಂಬಂಧ ಪತ್ನಿ ಚೈತ್ರಾ ಅವರ ದೂರಿನ ಮೇರೆಗೆ ಜನವಾಡಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ಸಿಪಿಐ ಶ್ರೀನಿವಾಸ ಅಲ್ಲಾಪುರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು ಎಂದರು.

ಈ ಹಿಂದೆ ಕುಟುಂಬದ ಜತೆ ಮೈಸೂರಿನಲ್ಲಿದ್ದ ಅಮಿತ್ ಕಳೆದ ಮೂರು ವರ್ಷಗಳಿಂದ ಸ್ವಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದ. ಈತನ ಗೆಳೆಯ ಹೊನ್ನಿಕೇರಿ ಗ್ರಾಮದ ರವಿ ಪಾಟೀಲ ಕೃಷಿಗೆ ಸಲಹೆ ಮಾಡುತ್ತಿದ್ದ. ಈ ವೇಳೆ ರವಿ ಮತ್ತು ಮೃತ ಅಮಿತ್‌ನ ಪತ್ನಿ ಚೈತ್ರಾ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಹೆಂಡತಿಯ ನಡುವಳಿಕೆಯಿಂದ ಅಮಿತ್ ಸಂಶಯಗೊಂಡು ಆಕೆಯ ಜತೆಗೆ ಜಗಳವಾಡಿದ್ದಾನೆ. ಈ ಬಗ್ಗೆ ಚೈತ್ರಾ, ರವಿ ಪಾಟೀಲಗೆ ತಿಳಿಸಿ, ತನ್ನ ಪತಿಯನ್ನು ಏನಾದರೂ ಮಾಡು ಎಂದು ಹೇಳಿದ್ದಾರೆ. ತನ್ನ ಮರ್ಯಾದೆಗೆ ಹೆದರಿ ರವಿ, ವೆಂಕಟ ಗಿರಿಮಾಜೆ ಮತ್ತು ಆತನ ಮಗ ಆಕಾಶಗೆ ಸುಪಾರಿ ಕೊಟ್ಟಿದ್ದು, ಸ್ಪಿಂಕ್ಲರ್ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು.

ಆದರೆ, ಆರೋಪಿ ರವಿ ಈ ಮೊದಲು ನ. 4ರಂದೇ ಅಮಿತ್‌ನನ್ನು ಹತ್ಯೆ ಮಾಡಲು ಸಿಕಿಂದರ್ ಶಹಾ ಎಂಬಾತನಿಗೆ 2 ಲಕ್ಷ ರೂ.ಗಳಿಗೆ ಸುಫಾರಿ ನೀಡಿದ್ದ. ಆತ ನ.5 ರಂದು ಸ್ಕಾರ್ಪಿಯೋ ವಾಹನದ ಮೂಲಕ ಡಿಕ್ಕಿ ಹೊಡೆದು ಸಾಯಿಸಲು ಯತ್ನಿಸಿದ್ದು ವಿಫಲವಾಗಿತ್ತು. ನನಗೆ ಯಾರೋ ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ಅಮಿತ್ ತನ್ನ ನೆರೆ ಮನೆಯ ಸ್ನೇಹಿತನ ಬಳಿ ಹೇಳಿಕೊಂಡಿದ್ದ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ತನಿಖಾ ತಂಡ ಕೊಲೆ ಯತ್ನದ ಸ್ಥಳದಲ್ಲಿನ ಸಿಸಿ ಕೆಮರಾಗಳು ಪರಿಶೀಲಿಸಿ ಮತ್ತು ಸಿಗರೇಟ್ ಪಡೆದಿದ್ದ ಧಾಬಾದ ಮಾಲೀಕನ ಮಾಹಿತಿಯಿಂದ ಸ್ಕಾರ್ಪಿಯೋದ ವಾಹನ ಸಂಖ್ಯೆ ಕಲೆ ಹಾಕಿ ಸಿಕಿಂದರ್ ಶಹಾನನ್ನು ವಶಕ್ಕೆ ಪಡೆದಿದ್ದರು. ಇತನನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಸಂಚಿನ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಶನಿವಾರ ಸಿಕಿಂದರ್ ಶಹಾ ಜತೆಗೆ ವೆಂಕಟ ಗಿರಿಮಾಜೆ ಮತ್ತು ಆಕಾಶನನ್ನು, ರವಿವಾರ ರವಿ ಪಾಟೀಲ, ಚೈತ್ರಾಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಹಂತದಲ್ಲಿ ಆರೋಪಿಗಳು ತನ್ನ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಪ್ರಕರಣದ ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ಹುಲ್ಲೆಪ್ಪಾ, ಸಂತೋಷ, ಸಿದ್ದಲಿಂಗ ಮತ್ತು ಸಿಬಂದಿಗಳು ಭಾಗವಹಿಸಿದ್ದರು. ತಂಡದ ಕಾರ್ಯವನ್ನು ಪ್ರಶಂಸಿಸಿ ಬಹುಮಾನ ನೀಡಲಾಗಿದೆ ಎಂದು ಎಸ್‌ಪಿ ಚನ್ನಬಸವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next