Advertisement

ಮಂಚಾಲೆಗೆ ಹೋದರೆ  ಬಿಚ್ಚಾಲೆಗೂ ಹೋಗಿ ಬನ್ನಿ 

12:15 PM Apr 28, 2018 | |

ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ಮಾತಿದೆ. ಈ ಇಬ್ಬರನ್ನು ನೋಡಲು ತಿರುಪತಿಗೆ ಹಾಗೂ ಮಂತ್ರಾಲಯಕ್ಕೆ ಲಕ್ಷಾಂತರ ಮಂದಿ ಹೋಗಿ ದರ್ಶನ ಪಡೆದು ಪುನೀತರಾಗುತ್ತಾರೆ. ಆದರೆ ಮಂತ್ರಾಲಯಕ್ಕೆ ಹೋದ ಬಹಳ ಮಂದಿ ಗುರುರಾಯರು ಮತ್ತು ಕೆಲವರು ಗಾಣದಾಳ್‌ನಲ್ಲಿರುವ ಪಂಚಮುಖೀ ಆಂಜನೇಯನ ದರ್ಶನ ಪಡೆದು ವಾಪಸ್‌  ಹೋಗಿ ಬಿಡುತ್ತಾರೆ. ಮಂತ್ರಾಲಯದ ಹತ್ತಿರದಲ್ಲೇ ಇನ್ನೊಂದು ಪವಿತ್ರವಾದ ಕ್ಷೇತ್ರವಿದೆ.  ಅದೇ ಬಿಚ್ಚಾಲೆ, ಬಿಚ್ಚಾಲಿ ಅಥವಾ ಈ ಹಿಂದೆ ಭಿಕ್ಷಾಲಯ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರ. ಇದು ಶ್ರೀಗುರುರಾಘವೇಂದ್ರರ ತಪೋಭೂಮಿ ಎಂದರೆ ತಪ್ಪಾಗಲಾರದು. ಅವರ ಪರಮಾಪ್ತರಾಗಿದ್ದ ಶ್ರೀ ಅಪ್ಪಣ್ಣಾಚಾರ್ಯರ ಊರು ಇದು. 

Advertisement

ಮಂತ್ರಾಲಯದಿಂದ ಕೇವಲ 22 ಕಿಲೋ ಮೀಟರ್‌ ದೂರದಲ್ಲಿರುವ ಇದು, ಅಪ್ಪಣ್ಣಾಚಾರ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಸ್ಥಳ.  ಅಪ್ಪಣ್ಣಾಚಾರ್ಯರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಲು ದೇಶದ ಹಲವೆಡೆಯಿಂದ ಸಾವಿರಾರು ಮಂದಿ ಇಲ್ಲಿಗೆ ಬರುತ್ತಿದ್ದರಂತೆ. ತುಂಗಭದ್ರಾ ದಡದಲ್ಲಿದ್ದ ಅಶ್ವತ್ಥ ವೃಕ್ಷದ ನೆರಳಿನಲ್ಲಿದ್ದ ಈ ಗುರುಕುಲ ತೆರೆದ ವಿಶ್ವವಿದ್ಯಾನಿಲಯದಂತಿತ್ತು. ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಭಿಕ್ಷೆ ಬೇಡಿ ಅಕ್ಕಿಯನ್ನು ತರುತ್ತಿದ್ದರು. 

ಹೀಗೆ ತಂದ ಅಕ್ಕಿಯನ್ನು ತುಂಗಭದ್ರಾ ನದಿಯಲ್ಲಿ ತೊಳೆದು, ಗಂಟು ಕಟ್ಟಿ ಇಲ್ಲಿದ್ದ ಅರಳಿ ಮರಕ್ಕೆ ಕಟ್ಟುತ್ತಿದ್ದರು. ದಿನವೂ ವಿದ್ಯಾಭ್ಯಾಸ ಮುಗಿದ ಮೇಲೆ ಅಪ್ಪಣ್ಣಾಚಾರ್ಯರು ಶ್ರೀ ಅನ್ನಪೂರ್ಣೇಶ್ವರಿಯನ್ನು ಧ್ಯಾನಿಸಿ ತೀರ್ಥವನ್ನು ಪ್ರೋಕ್ಷಿಸಿದರೆ ಗಂಟಿನಲ್ಲಿ ಕಟ್ಟಿಟ್ಟಿದ್ದ ಅಕ್ಕಿ ಅನ್ನವಾಗಿರುತ್ತಿತ್ತಂತೆ. 

ಒಮ್ಮೆ ಇಲ್ಲಿಗೆ ಬಂದ ಶ್ರೀಗುರುರಾಯರು ಪವಿತ್ರವಾದ ಜಪದ ಕಟ್ಟೆ, 60 ವರ್ಷ ಹಳೆಯದಾಗಿದ್ದ ಅಪ್ಪಣ್ಣಾಚಾರ್ಯರ ಮನೆ ಹಾಗೂ ಅವರು ನಡೆಸುತ್ತಿದ್ದ ಗುರುಕುಲದ ಬಗ್ಗೆ ತಿಳಿದು ಪ್ರಭಾವಿತರಾದರು. ಮೊದಲ ಭೇಟಿಯಲ್ಲೇ ಆಪ್ತರಾದ ಇವರ ಸ್ನೇಹ ಎಷ್ಟರ ಮಟ್ಟಿಗೆ ಬೆಳೆಯುತ್ತದೆಂದರೆ ಶ್ರೀಗುರುರಾಯರು ಅಪ್ಪಣ್ಣಾಚಾರ್ಯರ ಮನೆಯಲ್ಲೇ 13 ವರ್ಷಗಳ ಕಾಲ ತಂಗಿದ್ದರಂತೆ.  ಶ್ರೀ ಅಪ್ಪಣ್ಣಾಚಾರ್ಯರ ಮನೆ ಈಗಲೂ ಇದೆ. 

Advertisement

ರಾಯರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವನ್ನು ಈಗಲೂ ಇಲ್ಲಿ ನೋಡಬಹುದು.  ರಾಯರಿಗೆ ಬೇಳೆಯ ಚಟ್ನಿ ಇಷ್ಟವಾದ್ದರಿಂದ ಅಪ್ಪಣ್ಣಾಚಾರ್ಯರು ತಮ್ಮ ಕೈಯ್ನಾರೆ ರುಬ್ಬಿ ಚಟ್ನಿ ಮಾಡಿ ರಾಯರಿಗೆ ಬಡಿಸುತ್ತಿದ್ದರು. ಚಟ್ನಿ ತಿರುವಲು ಬಳಸುತ್ತಿದ್ದ ಒರಳಕಲ್ಲನ್ನು ಇಲ್ಲಿ ನೋಡಬಹುದು. ಸುಮಾರು ಹದಿಮೂರು ವರ್ಷಗಳ ಕಾಲ ರಾಯರು ಇಲ್ಲಿ ಜಪತಪಾದಿಗಳನ್ನು ಮಾಡಿದ್ದರು. ಜಪದ ಕಟ್ಟೆಯಲ್ಲಿ ರಾಯರು ಕುಳಿತಿದ್ದರೆ ಅಪ್ಪಣ್ಣಾಚಾರ್ಯರು ಅವರ ಕಾಲನ್ನು ಒತ್ತುತ್ತಿದ್ದರಂತೆ.  ಅಪ್ಪಣ್ಣಾಚಾರ್ಯರ ಮನೆಯ ಬಿಲದಲ್ಲಿದ್ದ ನಾಗರ ಹಾವು ಕೂಡ ರಾಯರಿಗೆ ಪರಮಾಪ್ತವಾಗಿತ್ತಂತೆ. ಅದು, ಶೇಶದೇವರು ಎಂಬ ಹೆಸರಿನಲ್ಲಿ ರಾಯರ ಹಸ್ತದಿಂದ ಕಲ್ಲಿನರೂಪದಲ್ಲಿ ಈಗಲೂ ಅಪ್ಪಣ್ಣಾಚಾರ್ಯರ ಮನೆಯಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವುದನ್ನು ನೋಡಬಹುದು. 

ರಾಯರ ಅಪ್ಪಣೆ ಪಡೆದು ತೀರ್ಥಯಾತ್ರೆಗೆ ಹೋಗಿದ್ದ ಅಪ್ಪಣ್ಣಾಚಾರ್ಯರಿಗೆ ರಾಯರು ಬೃಂದಾವನಸ್ಥರಾಗುವ ವಿಷಯ ತಿಳಿದು ಕೊನೆಯ ಬಾರಿ ದರ್ಶನ ಮಾಡೋಣವೆಂದು ಹೊರಡುತ್ತಾರೆ. ಆದರೆ ಮಳೆಗಾಲದ ಕಾರಣ ತುಂಗಭದ್ರಾನದಿ ತುಂಬಿ ಹರಿಯುತ್ತಿರುತ್ತದೆ. ಅದರೂ ಲೆಕ್ಕಿಸದೆ ಗುರುರಾಯರ ಸ್ಮರಣೆ ಮಾಡುತ್ತಾ ಮನದಲ್ಲಿ ಅವರನ್ನೇ ತುಂಬಿಕೊಂಡ ಅಪ್ಪಣ್ಣಾಚಾರ್ಯರಿಂದ ಗುರುಸ್ತೋತ್ರವು ತಾನಾಗಿಯೇ ಹೊರಬರುತ್ತಿರಲು ಅದನ್ನೇ ಉಚ್ಚರಿಸುತ್ತಾ ನದಿಯನ್ನು ದಾಟಿ ತೀರ ಸೇರುತ್ತಾರೆ. ಆದರೆ ಇವರು ಬರುವಷ್ಟರಲ್ಲಿ ಬೃಂದಾವನಕ್ಕೆ ಕೊನೆಯ ಶಿಲೆಯನ್ನು ಸೇರಿಸಿಬಿಡುತ್ತಾರೆ. ಇದರಿಂದ ದುಃಖ ಉಮ್ಮಳಿಸಿ ಬಂದು ಅವರು ರಚಿಸುತ್ತಿದ್ದ ಶ್ಲೋಕದ ಕೊನೆಯ ಏಳು ಅಕ್ಷರಗಳು ಹಾಗೆಯೇ ಉಳಿದುಕೊಂಡಾಗ ಬೃಂದಾವನದೊಳಗಿಂದಲೇ ರಾಯರು  ಸಾಕ್ಷೀಹಯಾಸ್ಯೋತ್ರಹಿ ಎಂದು ಶ್ಲೋಕ ವನ್ನು ಪೂರ್ತಿ ಮಾಡುತ್ತಾರೆ. ನೀವು ಭಕ್ತಿಯಿಂದ ಪಠಿಸಿದ ಸ್ತೋತ್ರಕ್ಕೆ ನಾವು ಜಪ ಮಾಡುತ್ತಿರುವ  ಹಯಗ್ರೀವದೇವರೇ ಸಾಕ್ಷಿ$ ಎಂದು ಇದರ ಅರ್ಥ. ಅಂದಿ ನಿಂದ ಅಪ್ಪಣ್ಣಾಚಾರ್ಯರು ರಚಿಸಿದ ಈ ಸ್ತೋತ್ರವನ್ನು 108 ಬಾರಿ ಭಕ್ತಿಯಿಂದ  ಪಾರಾಯಣ ಮಾಡುವವರು ಸಕಲ ಅಭೀಷ್ಟವನ್ನು ಹೊಂದುತ್ತಾರೆ ಎನ್ನಲಾಗುತ್ತದೆ. ನಂತರ ಬಿಚ್ಚಾಲೆಯಲ್ಲಿ ರಾಯರು ಕುಳಿತು ಜಪತಪ ಮಾಡುತ್ತಿದ್ದ ಸ್ಥಳದಲ್ಲಿ ಅಪ್ಪಣ್ಣಾಚಾರ್ಯರು ಕೆತ್ತಿಸಿ ಪ್ರತಿಷ್ಟಾಪಿಸಿದ  ಏಕಶಿಲಾ  ಬೃಂದಾವನವಿದೆ.  ಶ್ರೀಪಾದರಾಜರು ಸ್ಥಾಪಿಸಿದ ಉಗ್ರನರಸಿಂಹ ದೇವರ ಸನ್ನಿಧಾನವೂ ಇದೆ. 

ಇಲ್ಲಿರುವ ಸಾವಿರಾರು ನಾಗಪ್ರತಿಮೆಗಳು ಇಲ್ಲಿ ಹಿಂದೆ ನಾಗಕ್ಷೇತ್ರವಿತ್ತೆಂಬುದಕ್ಕೆ ಸಾಕ್ಷಿ$ಯಾಗಿವೆ. ಶ್ರಾವಣಮಾಸದಲ್ಲಿ ಮಳೆಗಾಲವಾದ್ದರಿಂದ ತುಂಗಭದ್ರೆ ಉಕ್ಕಿ ಗುರುರಾಯರಿಗೆ ಜಲಾಭಿಷೇಕ ಮಾಡುತ್ತಿರುತ್ತಾಳೆ. ಆಗ ಇಲ್ಲಿ  ಆರಾಧನೆಯನ್ನು ಆಚರಿಸುವುದಕ್ಕೆ ಅಗದ ಕಾರಣ ಪುಷ್ಯಮಾಸದಲ್ಲಿ, ವಿಜೃಂಭಣೆಯಿಂದ ಅಪ್ಪಣ್ಣಾಚಾರ್ಯರ ವಂಶಿಕರು ಆರಾಧನೆಯನ್ನು ಮಾಡುತ್ತಾರೆ. 

ಪ್ರಕಾಶ್‌ ಕೆ. ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next