Advertisement

ಭಟ್ಟರಿಗೆ ಸಿಕ್ತು ಭರ್ಜರಿ ಚೆಕ್‌

10:25 AM Sep 12, 2017 | Team Udayavani |

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸೋಮವಾರ ಯೋಗರಾಜ್‌ ಭಟ್ಟರು ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರ ವಿರುದ್ಧ ಕೋರ್ಟಿಗೆ ಹೋಗಬೇಕಿತ್ತು. “ದನ ಕಾಯೋನು’ ಚಿತ್ರಕ್ಕೆ ಸಂಬಂಧಿಸಿದಂತೆ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಪಡೆಯುವುದಕ್ಕೆ ಕೋರ್ಟು ಮೆಟ್ಟಿಲು ಹತ್ತಬೇಕಿತ್ತು. ಆದರೆ, ಅದಕ್ಕೆ ಮುನ್ನವೇ ಸಮಸ್ಯೆ ಬಗೆಹರಿದಂತಿದೆ. 

Advertisement

ಕನಕಪುರ ಶ್ರೀನಿವಾಸ್‌, ಯೋಗರಾಜ್‌ ಭಟ್‌ಗೆ ಮೂರು ಚೆಕ್‌ಗಳನ್ನು ಕೊಟ್ಟಿದ್ದು, ಅದನ್ನು ಪಡೆದು ಭಟ್ಟರು ಮನೆಗೆ ಬಂದಿದ್ದಾರೆ. ಅದನ್ನು ಸದ್ಯದಲ್ಲೇ ಬ್ಯಾಂಕಿಗೆ ಹಾಕುತ್ತಾರಂತೆ. ಪಾಸ್‌ ಆದರೆ ಓಕೆ, ಇಲ್ಲದಿದ್ದರೆ ಬಾಕಿ ವಿಷಯ ಬ್ರೇಕ್‌ ಕೆ ಬಾದ್‌. ಹೌದು, ನಿನ್ನೆ ಯೋಗರಾಜ್‌ ಭಟ್‌ ಮತ್ತು ಕನಕಪುರ ಶ್ರೀನಿವಾಸ್‌ ಮಧ್ಯೆ ಒಂದು ರಾಜಿ ಸಂಧಾನವಾಗಿದೆ.

ರಾಜಿ ಮಾಡಿಸಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು. ಕೋರ್ಟ್‌ಗೆ ಹೋಗುತ್ತೀನಿ ಎನ್ನುತ್ತಿದ್ದ ಭಟ್ಟರನ್ನು ತಡೆದು ಮೂರು ಚೆಕ್‌ ಕೊಡಿಸಿದ್ದಾರಂತೆ. ಅಷ್ಟೇ ಅಲ್ಲ, ಅದು ಬೌನ್ಸ್‌ ಆಗುವುದಿಲ್ಲ, ಧೈರ್ಯವಾಗಿರಿ ಎಂದು ಆಶ್ವಾಸನೆ ಕೊಟ್ಟಿದ್ದಾರಂತೆ. ಗೋವಿಂದು ಅವರು ಮುಂದೆ ನಿಂತು ಎಲ್ಲವನ್ನೂ ನಡೆಸಿಕೊಟ್ಟಿರುವುದರಿಂದ, ಭಟ್ಟರು ತಮ್ಮ ತೀರ್ಮಾನವನ್ನು ಬದಲಾಯಿಸಿದ್ದಾರೆ.

ಅವರು ಕೊಟ್ಟ ಚೆಕ್‌ ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಈ ಬಾರಿ ಚೆಕ್‌ ಹಾಕಿ ನೋಡೋಣ, ಮತ್ತೆ ಏನಾದರೂ ಸಮಸ್ಯೆಯಾದರೆ ಕೋರ್ಟ್‌ ಇದ್ದೇ ಇದೆ ಎಂದು ವಾಪಸ್ಸು ಬಂದಿದ್ದಾರೆ. ಅಲ್ಲಿಗೆ ಪ್ರಕರಣ ಸದ್ಯಕ್ಕೆ ಬಗೆಹರಿದಂತಿದೆ. ಬಾಕಿ ವಿಷಯ ಚೆಕ್‌ ಪಾಸ್‌ ಆದ್ಮೇಲೆ …

Advertisement

Udayavani is now on Telegram. Click here to join our channel and stay updated with the latest news.

Next