Advertisement

ಹೊಸ ಕ್ಷಿತಿಜ ತೋರಿಸಿದ ಭರತ ನೃತ್ಯ

06:00 AM Dec 14, 2018 | Team Udayavani |

ಭರತನಾಟ್ಯದ ಇನ್ನೊಂದು ಆಯಾಮವೇ ಭರತ ನೃತ್ಯ. ಸುಂದರವಾದ ಕರಣ ಹಾಗೂ ಚಾರಿಗಳನ್ನೊಳಗೊಂಡ ಭರತ ನೃತ್ಯವು ಬೆಂಗಳೂರಿನ ವಿ| ಕ್ಷಿತಿಜಾ ಕಾಸರವಳ್ಳಿಯವರಿಂದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು. 

Advertisement

ಸುಂದರವಾದ ಕನ್ನಡದ ರಚನೆಯುಳ್ಳ ವಿದ್ವಾನ್‌ ಜಿ.ಗುರುಮೂರ್ತಿಯವರಿಂದ ರಚಿತವಾದ,ಹಾಗೂ ವಿದ್ವಾನ್‌ ಬಾಲಸುಬ್ರಮಣ್ಯ ಶರ್ಮಾ ಇವರಿಂದ ರಾಗ ಸಂಯೋಜಿಸಲ್ಪಟ್ಟ ನರಸಿಂಹ ಕೌತ್ವಂನ ಮೂಲಕ ನರಸಿಂಹ ದೇವರ ವಿವಿಧ ಸ್ವರೂಪಗಳ ವರ್ಣನೆಯೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.ನರಸಿಂಹನ ವರ್ಣನೆಗೆ ಸಂಬಂಧಪಟ್ಟ ಆಯಾ ಭಾವನೆಗಳಿಗೆ ತಕ್ಕುದಾದ ರಾಗಗಳನ್ನೊಳಗೊಂಡ ಈ ಕೌತ್ವಂ ಅನ್ನು ವಿವಿಧ ಚಾರಿ, ಕರಣ,ಭಂಗಿಗಳ ಮೂಲಕ ಪ್ರೇಕ್ಷಕರ ಚಪ್ಪಾಳೆಯ ಮೆಚ್ಚುಗೆಗೆ ಪಾತ್ರರಾದರು.

ನಂತರ ಶುದ್ಧ ಸಂಗೀತ ಪ್ರಕಾರದ ರಚನಾ ವಿಶೇಷತೆಯಾದ ಕೃತಿಯ ಮೂಲಕ ತಂಜಾವೂರು ಶಂಕರ್‌ ಅಯ್ಯರ್‌ರವರ ರಚನೆಯಾದ ದೇವಿಯನ್ನು ವರ್ಣಿಸುವ ರಂಜನಿ ಮಾಲೆಯನ್ನು ಅವರ ನೃತ್ಯ ಶೈಲಿಯ ಮೂಲಕ ಪ್ರಸ್ತುತ ಪಡಿಸಿದರು.ಕರ್ನಾಟಕ ಸಂಗೀತದ ನಾಲ್ಕು ವಿಶೇಷವಾದ ರಂಜನಿ, ಶ್ರೀ ರಂಜನಿ, ಮೇಘರಂಜನಿ ಮತ್ತು ಜನರಂಜನಿ ರಾಗಗಳ ರಾಗಮುದ್ರೆಯನ್ನೊಳಗೊಂಡ ಸಾಹಿತ್ಯಕ್ಕೆ ಕಲಾವಿದೆಯು ತಮ್ಮ ಕಲಾಪೌಢಿಮೆಯ ಮೂಲಕ ರಸಿಕರ ಮನಗೆದ್ದರು.

 ಕೃಷ್ಣನಿಲ್ಲದೆ ಬದುಕಲಾರದೆ ತೊಳಲಾಡುತ್ತಿರುವ ದಾಸಿಯು, ತನ್ನ ಬದುಕು ಕಮಲವಿಲ್ಲದ ಕೆರೆಯಂತೆ,ಚಂದ್ರನಿಲ್ಲದ ರಾತ್ರಿಯಂತೆ ಭಾಸವಾಗುತ್ತಿದೆ ಎಂಬ ಸಾಹಿತ್ಯವನ್ನೊಳಗೊಂಡ ನಾಡಿನ ಹೆಸರಾಂತ ಕವಿ ಶ್ರೀ ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್‌ ರವರು ರಚಿಸಿದ “ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ…’ಎಂಬ ಭಾವಗೀತೆಯ ಮೂಲಕ ಕೃಷ್ಣನಿಗಾಗಿ ಪರಿತಪಿಸಿ ನಿದ್ದೆಯೂ ಬಾರದೆ, ಆಹಾರವು ಸೇರದೆ ಕೊನೆಗೆ ಅಂತರ್ಯಾಮಿಯಾಗಿ ಒಳಗಿರುವ ಚೈತನ್ಯ ರೂಪಿಯಾದ ಕೃಷ್ಣನನ್ನೇ ಹೊರಗೆ ಅವಿರ್ಭವಿಸು ಎಂದು ಕರೆಕೊಡುವ,ಮೊರೆಯಿಡುವ ನಾಯಕಿಯ ವಿರಹವೇದನೆಯನ್ನು ತನ್ನ ಅಭಿನಯದಿಂದ ಪ್ರೇಕ್ಷಕರನ್ನು ರೋಮಾಂಚಿತರನ್ನಾಗಿ ಮಾಡಿದರು.

ನಿರಂತರ ಪ್ರೀತಿ ಮತ್ತು ಭಕ್ತಿಯಂದ ಕೃಷ್ಣನನ್ನು ಆರಾಧಿಸುವುದರಿಂದ ದೇವರ ಸಾನಿಧ್ಯ ಪಡೆಯಬಹುದು ಎಂದು ವೇದ ಸಿದ್ಧಾಂತವು ಹೇಳಿದೆ.ಈ ಸಿದ್ಧಾಂತವನ್ನು ಪುಷ್ಟಿಮಾರ್ಗ ಎಂದು ವಲ್ಲಭಾಚಾರ್ಯರು ಕರೆದರು.ಅವರು ಸಂಸ್ಕೃತದಲ್ಲಿ ರಚಿಸಿದ “ಮಧುರಾಷ್ಟಕಂ’ ಅನ್ನು ಕಲಾವಿದೆಯು ವಿವಿಧ ಚಾರಿ ಕರಣಗಳನ್ನು ಅಳವಡಿಸಿಕೊಂಡು ಅಭಿನಯಿಸಿದರು. ಕೃಷ್ಣನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಮಧುರವಾಗಿದೆ ಎಂದು ಕೃಷ್ಣನ ಕೆಲವು ಲೀಲೆಗಳನ್ನು ತೋರಿಸುವ ಮೂಲಕ ಸುಂದರವಾಗಿ ಪ್ರದರ್ಶಿಸಿದರು.

Advertisement

ಭರತನಾಟ್ಯದಲ್ಲಿ ಕೊನೆಯದಾಗಿ ಪ್ರಸ್ತುತಗೊಳ್ಳುವ ಚುರುಕಾದ, ಲವಲವಿಕೆಯ, ಕ್ಷಿಪ್ರಗತಿಯ ನೃತ್ಯಬಂಧವೇ ತಿಲ್ಲಾನ. ಕ್ಷಿತಿಜಾರವರು ವಿದ್ವಾನ್‌ ಡಿ.ವಿ ಪ್ರಸನ್ನ ಕುಮಾರ್‌ರವರ ರಚನೆ ಹಾಗೂ ವಿ| ಕೆ.ಎಸ್‌. ಜಯರಾಮ್‌ರವರ ಸಂಗೀತ ಸಂಯೋಜನೆಯ ತಿಲ್ಲಾನವನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next