Advertisement

ಜಾಗತಿಕ ಮಟ್ಟದ ಕನ್ನಡ ಪ್ರತಿಭೆ ಭೈರಪ್ಪ

07:27 AM Jan 20, 2019 | |

ಮೈಸೂರು: ಕನ್ನಡ ಪ್ರಸಿದ್ಧ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರ ಬರಹದಲ್ಲಿ ವ್ಯಾಪಕ ಅಧ್ಯಯನ, ಆಳವಾದ ಸಂಶೋಧನೆ, ಗಹನವಾದ ಚಿಂತನೆ, ಪೂರ್ವಗ್ರಹರಹಿತ ಗ್ರಹಿಕೆ, ಐತಿಹಾಸಿಕ ಪರಿಪೇಕ್ಷ ಎಂಬ ಐದು ಅಂಶಗಳು ಪ್ರಧಾನವಾಗಿವೆ ಎಂದು ಲೇಖಕ, ಭಾಷಾ ಶಾಸ್ತ್ರಜ್ಞ ಡಾ. ಪ್ರಧಾನ ಗುರುದತ್ತ ವಿಶ್ಲೇಷಿಸಿದರು.

Advertisement

ನಗರದ ಕಲಾಮಂದಿರದಲ್ಲಿ ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಎಸ್‌.ಎಲ್‌. ಭೈರಪ್ಪ ಸಾಹಿತ್ಯೋತ್ಸವ-2019 ಕಾರ್ಯಕ್ರಮದಲ್ಲಿ ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಚಿಂತನ ಮಂಥನ 16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶನ ಮಾಡಿರುವ ಕೃತಿ. 16 ಜನ ಲೇಖಕರು ಎತ್ತಿರುವ ಪ್ರಶ್ನೆಗಳಿಗೆ ಭೈರಪ್ಪನವರು ಕೊಟ್ಟಿರುವ ಉತ್ತರ, ಜಾಗತಿಕ ಮಟ್ಟದ ಕನ್ನಡ ಪ್ರತಿಭೆಯನ್ನು ಎತ್ತಿ ತೋರುತ್ತದೆ. ಚಿಂತನ-ಮಂಥನ ಕೃತಿಯಲ್ಲಿ ಕೆಲವೊಂದು ಪ್ರಶ್ನೆಗಳು ಅರ್ಧಪುಟಕ್ಕೆ ವಿಸ್ತರಿಸಿದೆ. ಇದಕ್ಕೆ ಭೈರಪ್ಪನವರು ನೀಡಿರುವ ಉತ್ತರ ಎರಡು ಮೂರು ಪುಟಗಳಷ್ಟಿದೆ.

ಎಲ್ಲಾ ಪ್ರಶ್ನೆಗಳಿಗೂ ಇತಿಹಾಸದ ಹಿನ್ನೆಲೆಯ ಮೂಲಕವೇ ಭೈರಪ್ಪನವರು ಉತ್ತರಿಸಿದ್ದಾರೆ. ಇದು ಅವರ ಅಧ್ಯಯನದ ವಿಸ್ತಾರತೆಯನ್ನು ಹೇಳುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭೈರಪ್ಪನವರ ಕಾದಂಬರಿ ಮಲಯಾಳಂ ಭಾಷೆಗೆ ಭಾಷಾಂತರವಾಗಿರಲಿಲ್ಲ. ಕರ್ನಾಟಕದ ಕೆಲವು ಬುದ್ಧಿಜೀವಿಗಳು ಭೈರಪ್ಪನವರು ಬಲಪಂಥೀಯ, ಹಿಂದುತ್ವವಾದಿ ಎಂದು ಹೇಳಿ, ಭೈರಪ್ಪನವರ ಕೃತಿ ಮಲಯಾಳಂಗೆ ತಲುಪದಂತೆ ಮಾಡಿದ್ದರು.

ಅವರ ಪರ್ವ ಆವರಣ ಮಲಯಾಳಂಗೆ ಅನುವಾದಗೊಂಡ ಮೇಲೆ ವಾತಾವರಣ ಬದಲಾಗಿದೆ. ಜನಾಂಗದ ಕಣ್ಣು ತೆರೆಸುವ ಸಾಹಿತಿ ಭೈರಪ್ಪ. ಭೈರಪ್ಪನವರು ಅನೇಕ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ.  ತರುಣ ಲೇಖಕರಿಗೆ ಆ ಪ್ರಶಸ್ತಿ ದೊರಕಲಿ ಎಂಬ ಉದ್ದೇಶದಿಂದ ಹಾಗೆ ಮಾಡಿದರು ಎಂದು ಹೇಳಿದರು. 

Advertisement

ಭೈರಪ್ಪ ಅವರ ಸಮಕಾಲೀನ ಚಿಂತನೆಗಳನ್ನು ಚಿಂತನ ಮಂಥನ ವ್ಯಕ್ತಪಡಿಸುತ್ತದೆ. ಅಹಿಂಸೆ ಮತ್ತು ಸತ್ಯಗಳಷ್ಟೇ ಅಲ್ಲದೇ ಕ್ಷಾತ್ರ ಗುಣವೂ ಬೇಕು ಎನ್ನುತ್ತಾರೆ ಭೈರಪ್ಪ. ಭೈರಪ್ಪನವರು ಉತ್ತರ ಕಾಂಡ ಬರೆದಾಗ ಕೆಲವು ಸಂಪ್ರದಾಯವಾದಿಗಳೇ ಅಸಂತೋಷಗೊಂಡಿದ್ದರು. ಭೈರಪ್ಪನವರು ಯಾವುದನ್ನೂ ಮುಚ್ಚಿಡದೇ ಬರೆವ ಸಾಹಿತಿ. ರಾಮನನ್ನೂ ವಿಮರ್ಶೆಗೆ ಒಳಪಡಿಸಿದ್ದು ಸಂಪ್ರದಾಯವಾದಿಗಳಿಗೆ ಬೇಸರ ತರಿಸಿತ್ತು. ಹೀಗಿರುವಾಗ ಭೈರಪ್ಪನವರು ಒಂದು ಪಂಥಕ್ಕೆ ಸೇರಿದವರು ಎಂಬ ಟೀಕೆಗಳು ಸರಿಯಲ್ಲ ಎಂದರು.

ಭೈರಪ್ಪನವರು ಹಿಂದುತ್ವವಾದಿ ಎಂದು ಹೇಳುವವರು, ಪ್ಲೇಟೋನನ್ನು ಸರಿಯಾಗಿ ಓದಿಕೊಂಡಿಲ್ಲ. ಓದಿಕೊಂಡಿದ್ದರೂ ಅರ್ಥ ಮಾಡಿಕೊಂಡಿಲ್ಲ. ತಪ್ತಾಗಿ ಅರ್ಥೈಸಿದ್ದಾರೆ. ಅವರು ಬ್ರಿಟಿಷ್‌ ಸಾಹಿತಿಗಳಂತೆ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಅವರ ಅವಿವೇಕಕ್ಕೆ ಏನು ಹೇಳಬೇಕು? ಎಂದು ಭೈರಪ್ಪನವರು ಪ್ರಶ್ನಿಸುತ್ತಾರೆ. ಇಂಥವರಿಗೆ ಭೈರಪ್ಪನವರು ಉತ್ತರ ಕೊಡಲು ಹೋಗಿಲ್ಲ. ಉತ್ತರ ಕೊಡಲು ಹೋಗಿದ್ದರೆ ನನ್ನ ಬರವಣಿಗೆಯ ಸತ್ವ ಹೋಗುತ್ತಿತ್ತು . ಆದ್ದರಿಂದ ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಭೈರಪ್ಪನವರು ತಿಳಿಸಿದ್ದಾರೆ ಎಂದು ವಿವರಿಸಿದರು.

16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶಿಸಿರುವ  ಚಿಂತನ ಮಂಥನ ಕೃತಿಯನ್ನು ಡಾ. ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ, ಶತಾವಧಾನಿ ಗಣೇಶ್‌, ಲೇಖಕಿ ಶೆಫಾಲಿ ವೈದ್ಯ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಉಪಸ್ಥಿತರಿದ್ದರು.

ಅವರಣ ಬರೆಯಲು 132 ಕೃತಿ ಅಧ್ಯಯನ: ಅಖೀಲ ಭಾರತೀಯ ಸ್ತರದ ಏಕೈಕ ಸಾಹಿತಿ ಡಾ. ಭೈರಪ್ಪ ಎಂದು ಲೇಖಕ ಎಸ್‌. ರಾಮಸ್ವಾಮಿ ಹೇಳಿದ್ದಾರೆ. ಅವರ ಆವರಣ, ಸಾರ್ತ ಕಾದಂಬರಿಗಳನ್ನು ಹಿಂದಿಗೆ ಭಾಷಾಂತರ ಮಾಡುವ ಭಾಗ್ಯ ನನಗೆ ದೊರೆತಿದೆ. ಭೈರಪ್ಪನವರು 132 ಕೃತಿಗಳನ್ನು ಅಧ್ಯಯನ ಮಾಡಿ ಆವರಣ ಕೃತಿ ಬರೆದರು. ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡವು.

ಅವರ ಆವರಣ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಬೇರೆ ಭಾಷೆಯವರು ಈ ಕೃತಿಯ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅದರೆ, ಕರ್ನಾಟಕ ವಿಚ್ಛಿದ್ರ ಶಕ್ತಿಗಳು ಭೈರಪ್ಪನವರ ಆವರಣ ಕೃತಿಗೆ ಟೀಕೆ ವ್ಯಕ್ತಪಡಿಸಿದರು ಎಂದು ಗುರುದತ್ತ ವಿಷಾದಿಸಿದರು. ಭೈರಪ್ಪನವರು ಬರೆದಿರುವ ಕಾದಂಬರಿಗಳಲ್ಲಿ ಒಂದರಲ್ಲಿ ಬಂದ ವಿಷಯ ಇನ್ನೊಂದರಲ್ಲಿ ಪುನರಾವರ್ತನೆಯಾಗಿಲ್ಲ. ಒಂದೊಂದು ಕಾದಂಬರಿಯೂ ಒಂದೊಂದು ವೈಶಿಷ್ಟéತೆ ಹೊಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next