Advertisement

ಹಳ್ಳಿಗಳಲ್ಲಿ ಶ್ರಮದಾನ : ಸ್ವಚ್ಛತೆಯ ಅಭಿಯಾನ

01:28 PM Feb 11, 2021 | Team Udayavani |

ಬೆಳಗಾವಿ: ಸ್ವತ್ಛತೆಯ ಪರಿಕಲ್ಪನೆ ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ಮೂಡಬೇಕಿದೆ. ಯುವ ಸಮುದಾಯ ಮನಸ್ಸು ಮಾಡಿದರೆ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರವೇ ಬದಲಾಗಬಹುದು. ಇದಕ್ಕೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಯುವಕರ ಗುಂಪೇ ಸಾಕ್ಷಿ.

Advertisement

ನಮ್ಮ ನಡೆ ಸ್ವತ್ಛತೆಯ ಕಡೆ. ನನ್ನ ಕ್ಷೇತ್ರ ಸ್ವತ್ಛ ಕ್ಷೇತ್ರ. ನನ್ನ ಗ್ರಾಮ ಸ್ವತ್ಛ ಗ್ರಾಮ ಎಂಬ ಅಭಿಯಾನದಡಿ ಯುವಕರ ಗುಂಪು ತಮ್ಮ ಗ್ರಾಮಗಳಲ್ಲಿ ಸ್ವತ್ಛತೆಯ ಕ್ರಾಂತಿ ಮಾಡುತ್ತಿದ್ದಾರೆ. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಿ ಗ್ರಾಮಗಳ ಬಗ್ಗೆ ಜನರಲ್ಲಿರುವ ಅಸಡ್ಡೆಯನ್ನು ದೂರ ಮಾಡುವ ಮಹತ್ಕಾರ್ಯಕ್ಕೆ  ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಯಾವುದೇ ನಿರ್ದಿಷ್ಟ ಗುಂಪು ರಚನೆ ಮಾಡಿಲ್ಲ. ಆದರೆ ಸ್ವತ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಮಾರುತಿ ಅಷ್ಟಗಿ ನೇತೃತ್ವದಲ್ಲಿ ಕೆಲವು ಯುವಕರು ಒಂದು ಸಣ್ಣ ತಂಡ ಕಟ್ಟಿಕೊಂಡಿದ್ದಾರೆ. ಈ ತಂಡ ಪ್ರತಿ ರವಿವಾರ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಬೆಳಿಗ್ಗೆ ಅಲ್ಲಿಗೆ ಹೋಗಿ ಗ್ರಾಮದ ಯುವಕರ ಜತೆ ಚರ್ಚಿಸಿ ಅವರನ್ನು ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ. ನಂತರ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಬೇಕು ಎಂಬ ಸಂದೇಶವನ್ನು ಗ್ರಾಮದ ಜನರಿಗೆ ಹಂಚುವುದಲ್ಲದೆ ಅವರ ಮನ ಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತದೆ.

ಯುವಕರ ಈ ಕಾರ್ಯ ಕಳೆದ ಹಲವಾರು ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಮೊದಲು ತಿಂಗಳಿಗೊಮ್ಮೆ ಮಾತ್ರ ಗ್ರಾಮದ ಸ್ವತ್ಛತಾ ಕಾರ್ಯ ನಡೆಸುತ್ತಿದ್ದ ಯುವಕರು ಇದರಿಂದ ನಮ್ಮ ಉದ್ದೇಶ ಈಡೇರುವುದಿಲ್ಲ. ಗ್ರಾಮದ ಸ್ವತ್ಛತೆ ಪರಿಕಲ್ಪನೆ ಜನರಲ್ಲಿ ಪರಿಣಾಮಕಾರಿಯಾಗಿ ಕಾಣುವುದಿಲ್ಲ ಎಂಬ  ಕಾರಣದಿಂದ ತಮ್ಮ ಸ್ವತ್ಛತಾ ಕಾರ್ಯವನ್ನು ವಾರಕ್ಕೊಮ್ಮೆ ಬದಲಾಯಿಸಿದರು. ಅದರಂತೆ ಪ್ರತಿ ರವಿವಾರ ಒಂದು ಗ್ರಾಮದಲ್ಲಿ ಶ್ರಮದಾನ ಮಾಡಲು ನಿರ್ಧರಿಸಲಾಯಿತು.

ಯಾವ ಗ್ರಾಮಕ್ಕೆ ಹೋಗಬೇಕು ಎಂಬುದನ್ನು ಹಿಂದಿನ ದಿನ ನಿರ್ಧರಿಸಿ ನೇರವಾಗಿ ಅಲ್ಲಿಗೆ ಹೋಗುವ ಯುವಕರ ತಂಡ ತಾವು ಆಯ್ಕೆ ಮಾಡಿದ ಗ್ರಾಮದ ಯುವಕರನ್ನೇ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವದು ವಿಶೇಷ. ಇದರಿಂದ ಗ್ರಾಮದ ಸ್ವತ್ಛತೆ ಮತ್ತು ಸುಂದರ ಪರಿಸರದ ಅರಿವು ಅವರಲ್ಲಿ ಸಹ ಮೂಡುತ್ತದೆ ಎಂಬುದು ಇದರ ಉದ್ದೇಶ. ಗ್ರಾಮದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ದೇವಸ್ಥಾನದ ಆವರಣ, ಪ್ರಾಥಮಿಕ ಶಾಲೆ, ಪ್ರಾಥಮಿಕ ಅರೋಗ್ಯ ಕೇಂದ್ರ, ಮೊದಲಾದ ಸ್ಥಳಗಳಲ್ಲಿ ಈ ಸ್ವತ್ಛತಾ ಕಾರ್ಯ ನಡೆಯುತ್ತದೆ. ಶ್ರಮದಾನ ಕಾರ್ಯ ಪೂರ್ಣಗೊಂಡ ನಂತರ ಇದೇ ಆವರಣದಲ್ಲಿ ಒಂದೆರಡು ಗಿಡಗಳನ್ನು ಸಹ ನೆಡಲಾಗುತ್ತದೆ. ಈ ಮೂಲಕ ಸ್ವತ್ಛತೆ ಮಾಡುವುದರ ಜತೆಗೆ ಪರಿಸರವನ್ನು ಬೆಳೆಸುವುದು ನಮ್ಮ ಮುಖ್ಯ ಉದ್ದೇಶ ಎಂಬುದು ಯುವಕರ ಗುಂಪಿನ ನಾಯಕ ಮಾರುತಿ ಅಷ್ಟಗಿ ಅವರ ಹೇಳಿಕೆ.

40 ಹಳ್ಳಿಗಳಲ್ಲಿ ಶ್ರಮದಾನ: ಇದುವರೆಗೆ ನಮ್ಮ ನಡಿಗೆ ಸ್ವತ್ಛತೆಯ ಕಡೆಗೆ ಎಂಬ ಅಭಿಯಾನ ಹುಕ್ಕೇರಿ ಮತ್ತು ಬೆಳಗಾವಿ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಯಶಸ್ವಿಯಾಗಿ ನಡೆದಿದೆ. 500ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದ್ದು ಅದರ ಪೋಷಣೆ ಸಹ ನಡೆದಿದೆ. ಈ ಅಭಿಯಾನ ಗ್ರಾಮದ ಜನರಲ್ಲಿ ಬಹಳ ಪರಿಣಾಮ ಬೀರಿದೆ. ವಿಶೇಷವಾಗಿ ಯುವಕರು ಜಾಗೃತರಾಗಿದ್ದಾರೆ. ಗ್ರಾಮಸ್ಥರೇ ಉಳಿದವರಿಗೆ ಕಸ ಎಲ್ಲೆಂದರಲ್ಲಿ ಹಾಕಬೇಡಿ. ದೇವಸ್ಥಾನದ ಆವರಣವನ್ನು ಸ್ವತ್ಛವಾಗಿಡಿ ಎಂದು ತಿಳಿಹೇಳುತ್ತಿದ್ದಾರೆ.

Advertisement

ನಮ್ಮ ಹಳ್ಳಿಗಳಲ್ಲಿರುವ ಪುರಾತನ ದೇವಸ್ಥಾನಗಳನ್ನು ನಾವು ಚೆನ್ನಾಗಿ ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಅದನ್ನು ತೋರಿಸಬಹುದು. ಊರಲ್ಲಿರುವ ಎಲ್ಲ ಗಲೀಜನ್ನು ಪೌರ ಕಾರ್ಮಿಕರೇ ತೆಗೆಯಬೇಕು ಎಂಬ ನಮ್ಮ ಭಾವನೆ ಸರಿಯಲ್ಲ. ಎಲ್ಲೆಂದರಲ್ಲಿ ಬೆಳೆದ ಕಸಕಡ್ಡಿಗಳನ್ನು ತೆಗೆಯುವುದು ಅವರಿಗೂ ಕಷ್ಟ. ಇದನ್ನು ನಾವು ಯುವಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕೊನೆಗೆ ಅವರೇ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ನಮ್ಮ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ.

ಇದನ್ನೂ ಓದಿ :ಕೈಲಿ ವಿಷ-ಕೊರಳಲ್ಲಿ ಹಗ್ಗ -ರೈತರ ಪ್ರತಿಭಟನೆ

ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ, ಪುರಾತನ ದೇವಸ್ಥಾನಗಳು ನಮ್ಮ ಪ್ರಥಮ ಆದ್ಯತೆ ಎಂಬುದು ಮಾರುತಿ ಅಷ್ಟಗಿ ಹೇಳಿಕೆ. ಯುವಕರ ಶ್ರಮದಾನದಿಂದ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಹಾಲಸಿದ್ಧನಾಥ ದೇವಸ್ಥಾನ, ಯಮಕನಮರಡಿಯ ಪುರಾತನ ಸ್ಮಾರಕ, ಐದು ದೇವರ ಗುಡಿ, ಕಾಕತಿಯ ಕಿಲ್ಲಾ ಆವರಣ, ಕರಗುಪ್ಪಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣ, ಬೆಳ್ಳಂಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣ, ಹತ್ತರಗಿ ಗ್ರಾಮದ ಹರಿಮಂದಿರ ಆವರಣ ಸೇರಿದಂತೆ ಅನೇಕ ಸ್ಥಳಗಳು ಈಗ ಹೊಸ ರೂಪ ಪಡೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next