Advertisement

Bescom; ವಿದ್ಯುತ್‌ ಅವಘಡ‌: ಬೆಸ್ಕಾಂ ನಿರ್ಲಕ್ಷ್ಯ ತರವಲ್ಲ

12:45 AM Nov 21, 2023 | Team Udayavani |

ಬೆಂಗಳೂರಿನ ವೈಟ್‌ಫೀಲ್ಡ್‌ನ ಹೋಪ್‌ಫಾರಂ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಗೆ ತಾಯಿ ಮತ್ತು ಒಂಬತ್ತು ತಿಂಗಳ ಹೆಣ್ಣು ಮಗು ಸುಟ್ಟು ಕರಕಲಾದ ಘಟನೆ ವಿಷಾದ ಮತ್ತು ಖಂಡನೀಯ. ಈ ನಿಟ್ಟಿನಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ (ಬೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ನಸುಕಿನಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದ ಸುಟ್ಟು ಕರಕಲಾಗುವ ಪತ್ನಿ ಮತ್ತು ಪುತ್ರಿಯ ದಾರುಣ ದೃಶ್ಯವನ್ನು ಪತಿ ಸಂತೋಷ್‌ ಅನಿವಾರ್ಯವಾಗಿ ನೋಡುತ್ತಾ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

Advertisement

ರವಿವಾರ ಬೆಳಗ್ಗೆ 3:30ಕ್ಕೆ ಆ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಅದನ್ನು ಗಮನಿಸಿದ ಸಿಬಂದಿ ಕೂಡಲೇ ಅಧಿಕಾರಿಗಳಿಗೆ ತಿಳಿಸಿ ದುರಸ್ತಿಗೆ ಮನಸ್ಸು ಮಾಡಿದ್ದರೆ ಇಂಥ ದಾರುಣ ಘಟನೆ ನಡೆಯುತ್ತಿರಲಿಲ್ಲ. 11 ಕೆವಿ ಫೀಡರ್‌ನ ಲೈನ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾದರೆ ಪ್ರತೀ ಹಂತದಲ್ಲೂ ಸಂಕೇತಗಳು ಬಂದೇ ಬರುತ್ತದೆ. ಅದಕ್ಕೆ ತಕ್ಕಂತೆ ಎಂಜಿನಿಯರ್‌ಗಳು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಎಲ್ಲೇ ಸಂಪರ್ಕ ಕಡಿದು ಹೋದರೂ ಕೂಡಲೇ ಸಂಕೇತ ಬರುತ್ತದೆ. ಅದನ್ನು ಗಮನಿಸಿಕೊಂಡು ಎಂಜಿನಿಯರ್‌ಗಳು ನಿಗಾವಹಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಹಾಗೆ ಆಗಲಿಲ್ಲ ಎನ್ನುವುದು ಸ್ಪಷ್ಟ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಾರ್ವಜನಿಕರೂ ಕೂಡ ಬೆಸ್ಕಾಂಗೆ ತಂತಿ ಕಡಿದು ಬಿದ್ದಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆ ಹೆಚ್ಚಿನ ಗಮನ ನೀಡದೆ ಇದುದ್ದರಿಂದ ಎರಡು ಜೀವಗಳು ಬಲಿಯಾಗಿವೆ.

ಹಿಂದಿನ ಸಂದರ್ಭಗಳಲ್ಲಿಯೂ ಕೂಡ ಇಂಥ ಅನಾಹುತಗಳು ಸಂಭವಿಸಿದ್ದವು. ಅವುಗಳ ವಿರುದ್ಧ ಸೂಕ್ತ ತನಿಖೆ ನಡೆಸದೆ ಮುಚ್ಚಿ ಹಾಕುವ ಪ್ರಯತ್ನವೇ ನಡೆಯುತ್ತದೆ. ಒಂದು ವೇಳೆ ಕಟ್ಟುನಿಟ್ಟಿನ ಆದೇಶಗಳು ಬಂದರೂ ಅವುಗಳ ಪಾಲನೆಯತ್ತ ಗಮನಹರಿಸುವುದೂ ಇಲ್ಲ, 11 ಕೆವಿ ವಿದ್ಯುತ್‌ ಮಾರ್ಗವನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಬಗ್ಗೆ ಕೆಇಆರ್‌ಸಿ ಮಾರ್ಗದರ್ಶಿ ಸೂತ್ರ ರೂಪಿಸಿದೆ. ಅದನ್ನು ಅನುಸರಿಸದೆ ಇದ್ದಾಗ ಕೆಇಆರ್‌ಸಿ ಕ್ರಮ ಕೈಗೊಳ್ಳಬೇಕು. ಆ ಕೆಲಸವೂ ನಡೆಯುತ್ತಿಲ್ಲ. ವಿದ್ಯುತ್‌ ನಿಯಮದಂತೆ ಪ್ರತೀ ವರ್ಷ ತಾಂತ್ರಿಕ ಲೆಕ್ಕ ತಪಾಸಣೆ ನಡೆಯಬೇಕು. ಅದೂ ಕೂಡ ನಿಯಮಿತವಾಗಿ ನಡೆಯುತ್ತಿಲ್ಲ. ವಿದ್ಯುತ್‌ ಅಪಘಾತಗಳ ಬಗ್ಗೆ ಹೈಕೋರ್ಟ್‌ ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ. ಪ್ರತೀ ಬಾರಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ.

ಸದರಿ ಘಟನೆಯಲ್ಲಿ ಬೆಸ್ಕಾಂ, ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಇಬ್ಬರಿಗೆ ಕಾರಣ ಕೇಳಿ ನೋಟಿಸ್‌ ನೀಡಿದೆ. ಈ ಮಧ್ಯೆ ಪೊಲೀಸರು ಕೂಡ ಐವರು ಅಧಿಕಾರಿಗಳನ್ನು ವಶಕ್ಕೆ ಪಡೆದು, ಅನಂತರ ಬಿಡುಗಡೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ.
ಸಾಮಾನ್ಯವಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಬಹುತೇಕ ಎಲ್ಲ 11 ಕೆವಿ ವಿದ್ಯುತ್‌ಲೈನ್‌ಗಳನ್ನು ನೆಲದಡಿ ಅಳವಡಿಕೆ ಮಾಡಲಾಗಿದೆ. ಹಾಗಿದ್ದರೆ ಘಟನೆಗೆ ಕಾರಣವಾದ ಲೈನ್‌ ಮಾತ್ರ ಮೇಲಿನಿಂದ ಹಾದುಹೋಗಿದ್ದು ಯಾಕೆ? ಆ ತಂತಿ ತುಂಡಾಗಿದ್ದು ಯಾಕೆ? ಅಷ್ಟಕ್ಕೂ ಸಾಮಾನ್ಯವಾಗಿ 11 ಕೆವಿ ಫೀಡರ್‌ನಲ್ಲಿ ಪ್ರತೀ ಹಂತದಲ್ಲೂ ಸಂಕೇತಗಳು ಬಂದೇ ಬರುತ್ತವೆ. ಅದಕ್ಕೆ ತಕ್ಕಂತೆ ಎಂಜಿನಿಯರ್‌ಗಳು ತತ್‌ಕ್ಷಣ ಕ್ರಮ ಕೈಗೊಂಡಿದ್ದಾರೆಯೇ? ಇಂತಹ ಹಲವು ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next