Advertisement

Bengaluru: ಗ್ರ್ಯಾಚುಟಿ ಮೊತ್ತಕ್ಕೆ ವಿಮೆ ಕಡ್ಡಾಯ ಆದೇಶ ರ‌ದ್ದತಿಗೆ ಮನವಿ

12:15 PM Oct 26, 2024 | Team Udayavani |

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರ್ಯಾಚುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಕರ್ನಾಟಕ ಕಡ್ಡಾಯ ಗ್ರ್ಯಾಚುಟಿ ವಿಮಾ ನಿಯಮಗಳು-2024′ ಇದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ವಿಚಾರವಾಗಿ ಬೃಹತ್‌ ಬೆಂಗಳೂರು ಹೋಟೆಲ್ಸ್‌ ಅಸೋಸಿಯೇಷನ್‌ ಸಲ್ಲಿಸಿರುವ ತಕರಾರು ಅರ್ಜಿಯು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಆಗಿ ಅವರ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲಾಗುವುದಿಲ್ಲ ಎಂದು ಹೇಳಿ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರ್ಯಾಚುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು “ಕರ್ನಾಟಕ ಕಡ್ಡಾಯ ಗ್ರ್ಯಾಚ್ಯುಟಿ ವಿಮಾ ನಿಯಮಗಳು-2024 ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜ.10ರಂದು ಅಧಿಸೂಚನೆ ಹೊರಡಿಸಿತ್ತು. ಅದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಉದ್ಯೋಗದಾತರೊಂದಿಗೆ ಸಮಾಲೋಚನೆ ನಡೆಸದೆ ಈಗ ಏಕಾಏಕಿ ನಿಯಮಗಳನ್ನು ಜಾರಿಗೆ ತರಲಾಗಿದೆ.

10 ಜನ ಮೇಲ್ಪಟ್ಟ ಉದ್ಯೋಗಿಗಳು ಹೊಂದಿದ ಸಂಸ್ಥೆಗಳು ಕಡ್ಡಾಯವಾಗಿ 60 ದಿನಗಳಲ್ಲಿ ವಿಮೆಯನ್ನು ಅಳವಡಿಸಿಕೊಳ್ಳಬೇಕೆಂದಿದೆ. ವಿಮಾ ಪಾಲಿಸಿ ಅಳವಡಿಸಿಕೊಳ್ಳಬೇಕಾದರೆ ಇಂಡಿಯನ್‌ ಟ್ರಸ್ಟ್‌ ಕಾಯ್ದೆ-1882ರಲ್ಲಿ ಗ್ರ್ಯಾಚ್ಯುಟಿ ಟ್ರಸ್ಟ್‌ ಸ್ಥಾಪಿಸಬೇಕು. ಹೀಗಿದ್ದಾಗ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಸಂಸ್ಥೆಗಳಿಗೆ ಗ್ರ್ಯಾಚುಟಿ ಟ್ರಸ್ಟ್‌ ಸ್ಥಾಪಿಸುವ ಹೊರೆ ಬೀಳಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Advertisement

ಸರ್ಕಾರದ ಅಧಿಸೂಚನೆಯನ್ನು ಕಾನೂನಿನ ದೋಷಗಳಿಂದ ಕೂಡಿದ್ದು, ವಿವೇಕ ಬಳಸದೆ ಅದನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಅಧಿಸೂಚನೆಯನ್ನು ರದ್ದುಪಡಿಸಬೇಕು. ಅರ್ಜಿಯ ವಿಚಾರಣೆ ಮುಗಿಯುವ ತನಕ ಅಧಿಸೂಚನೆ ಜಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next