ಮೈಸೂರು/ರಾಮನಗರ: ಹಳೇ ಮೈಸೂರು ಭಾಗದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಎಂದೇ ಗುರುತಿಸಿಕೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್ಪ್ರಸ್ ಹೈವೇ ಉದ್ಘಾಟನೆಗೆ ಸಿದ್ಧಗೊಂಡಿದೆ. ಇದು ದಶಪಥ ಹೆದ್ದಾರಿಯಾಗಿದ್ದು ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಅವಧಿಯನ್ನು 75 ನಿಮಿಷಗಳಿಗೆ ಕಡಿತಗೊಳಿಸಿದೆ.
ಬೆಂಗಳೂರಿನ ನೈಸ್ರಸ್ತೆ ಜಂಕ್ಷನ್ನಿಂದ ಮೈಸೂರಿನ ಕೊಲಂಬಿಯಾ ಏಷಿಯಾ ವೃತ್ತದವರೆಗೆ ಸುಮಾರು 117 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣವಾಗಿದೆ.
ಹೆದ್ದಾರಿ ವಿಶೇಷ
119 ಕಿ.ಮೀ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ
Related Articles
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಯೋಜನೆಯು ರಾಷ್ಟ್ರೀಯ ಹೆದ್ದಾರಿ-275ರ ದಶಪಥ ರಸ್ತೆ ಒಟ್ಟು 119 ಕಿ.ಮೀ ಉದ್ದದ ಯೋಜನೆ ಇದಾಗಿದೆ. ಬೆಂಗಳೂರಿನ ಪಂಚಮುಖೀ ದೇವಸ್ಥಾನದ ಕ್ರೆçಸ್ಟ್ ಕಾಲೇಜಿನಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯವರೆಗೂ ರಸ್ತೆ ನಿರ್ಮಾಣ ಮಾಡಲಾಗಿದೆ.
ಎಕ್ಸ್ಪ್ರೆಸ್ವೇ ಮಾರ್ಚ್ 2023ರಲ್ಲಿ ಉದ್ಘಾಟನೆಯಾಗಲಿದ್ದು, 2022ರ ಅಕ್ಟೋಬರ್ನಲ್ಲಿಯೇ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ, ಇನ್ನೂ ಕೆಲವು ಕಡೆ ಕಾಮಗಾರಿ ನಡೆಯುತ್ತಲೇ ಇದೆ. ಎರಡು ಹಂತಗಳಲ್ಲಿ ಕಾಮಗಾರಿ ಒಳಗೊಂಡಿದೆ. ಮೊದಲ ಹಂತ ಬೆಂಗಳೂರು-ನಿಡಘಟ್ಟ ನಡುವೆ 58 ಕಿ.ಮೀ ಮತ್ತು ಎರಡನೇ ಹಂತ ನಿಡಘಟ್ಟ-ಮೈಸೂರು ನಡುವೆ 61 ಕಿ.ಮೀ ಇದೆ. ಇದು ಒಟ್ಟು 19 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು 4 ರೈಲ್ವೆ ಮೇಲ್ಸೇತುವೆಗಳು ಮತ್ತು ವಾಹನಗಳು, ಪಾದಚಾರಿಗಳಿಗೆ 50 ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಲಾಗಿದೆ.
ಐದು ಕಡೆ ಬೈಪಾಸ್
ಐದು ಕಡೆ ಬೈಪಾಸ್ ಹಾದು ಹೋಗಲಿದೆ. ಬಿಡದಿ ಬಳಿ 7 ಕಿಮೀ, ರಾಮನಗರ-ಚನ್ನಪಟ್ಟಣ ಸೇರಿದಂತೆ ಒಟ್ಟು 22 ಕಿ.ಮೀ, ಮದ್ದೂರು 7 ಕಿ.ಮೀ, ಮಂಡ್ಯ 10 ಕಿ.ಮೀ. ಮತ್ತು ಶ್ರೀರಂಗಪಟ್ಟಣ 7 ಕಿ.ಮೀ ಸುತ್ತ ಬೈಪಾಸ್ಗಳನ್ನು ನಿರ್ಮಾಣ ಮಾಡಲಾಗಿದೆ. ಕುಂಬಳಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬೂತ್ ನಿರ್ಮಿಸಲಾಗಿದೆ. ಯೋಜನೆಯ ಅಂದಾಜು ವೆಚ್ಚ 8,066 ಕೋಟಿ ರೂ. ಇದ್ದು, ಇತ್ತೀಚೆಗೆ ಇದರ ವೆಚ್ಚ ಏರಿಸಲಾಗಿದೆ.