Advertisement

Bengaluru:ಅಕ್ರಮ ಸಂಬಂಧ ಪ್ರಶ್ನಿಸಿದ ಅಮ್ಮನನ್ನೇ ಕೊಲೆಗೈದ ಮಗಳು, ಆಕೆಯ ಪ್ರಿಯಕರ

01:58 AM Sep 15, 2024 | Team Udayavani |

ಬೆಂಗಳೂರು: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಅಮ್ಮನನ್ನೇ ಮಗಳೊಬ್ಬಳು ಪ್ರಿಯಕರನ ಜತೆ ಸೇರಿ ಕೊಲೆಗೈದಿರುವ ಘಟನೆ ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸೆ. 11ರಂದು ನಡೆದಿದೆ. ಹೊಂಗಸಂದ್ರ ನಿವಾಸಿ ಜಯಲಕ್ಷ್ಮೀ ಕೊಲೆಯಾದವರು. ಪುತ್ರಿ ಪವಿತ್ರಾ (28) ಮತ್ತು ಆಕೆಯ ಪ್ರಿಯಕರ ನವನೀಶ್‌ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪವಿತ್ರಾಗೆ ತಾಯಿಯ ಸಹೋದರ ಸುರೇಶ್‌ ಜತೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು 10 ಮತ್ತು 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಸುರೇಶ್‌ ಮನೆ ಮುಂಭಾಗದ ಮಳಿಗೆಯಲ್ಲಿ ಪ್ರಾವಿಜನ್‌ ಸ್ಟೋರ್‌ ಇಟ್ಟುಕೊಂಡಿದ್ದಾರೆ. ಈ ನಡುವೆ ಅದೇ ಕಟ್ಟಡದ ಬಾಡಿಗೆ ಮನೆಯಲ್ಲಿದ್ದ ನವನೀಶ್‌ ಜತೆಗೆ ಪವಿತ್ರಾಗೆ ಪ್ರೇಮಾಂಕುರವಾಗಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಈ ವಿಚಾರ ತಿಳಿದ ಆಕೆಯ ಗಂಡ ಮತ್ತು ತಾಯಿ ನವನೀಶ್‌ನನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು. ಆದರೆ ಆತ ಸಮೀಪದಲ್ಲೇ ಮತ್ತೂಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

15 ದಿನಗಳ ಹಿಂದೆ ಪತಿ ಮತ್ತು ತಾಯಿ ಹೊರಗಡೆ ಹೋಗಿದ್ದಾಗ ಪವಿತ್ರಾ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಅಷ್ಟರಲ್ಲಿ ಮನೆಗೆ ಬಂದ ತಾಯಿ ಜಯಲಕ್ಷ್ಮೀ ಮಗಳಿಗೆ ಹೊಡೆದು ಬುದ್ಧಿವಾದ ಹೇಳಿದ್ದಲ್ಲದೆ, ನವನೀಶ್‌ಗೂ ಹೊಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದೇ ವಿಚಾರವಾಗಿ ನಿತ್ಯ ತಾಯಿ- ಮಗಳ ನಡುವೆ ಜಗಳ ನಡೆಯುತ್ತಿತ್ತು. ಬಳಿಕ ತಾಯಿಯನ್ನು ಕೊಲೆಗೈಯಲು ನಿರ್ಧರಿಸಿದ ಪವಿತ್ರಾ ಸೆ. 11ರಂದು ಮಧ್ಯಾಹ್ನ ತಾಯಿ ಮಲಗಿದ್ದ ವೇಳೆ ಪ್ರಿಯಕರನನ್ನು ಕರೆಸಿಕೊಂಡು ಟವೆಲ್‌ನಿಂದ ಕುತ್ತಿಗೆ ಬಿಗಿದು ಪ್ರಾಣ ಹರಣ ಮಾಡಿದ್ದಳು. ನವನೀಶ್‌ ಪರಾರಿಯಾಗಿದ್ದ.

ಕಾಲು ಜಾರಿ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ಪುತ್ರಿ!
ತಾಯಿಯನ್ನು ಕೊಂದ ಬಳಿಕ ಆಕೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಮಗಳು ಪವಿತ್ರಾ ಕಥೆ ಕಟ್ಟಿದ್ದಳು. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಗುರುವಾರ ಬಂದ ವರದಿಯಲ್ಲಿ ಕುತ್ತಿಗೆ ಬಿಗಿದು ಸಾವು ಎಂದು ಉಲ್ಲೇಖೀಸಲಾಗಿತ್ತು. ಅನುಮಾನಗೊಂಡ ಪೊಲೀಸರು ಪವಿತ್ರಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಿಯಕರನ ಜತೆ ಸೇರಿ ಎಸಗಿದ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next