ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದು ನಗರಕ್ಕೆ ಬಂದಿದ್ದ ಟೀ ಮಾರಾಟಗಾರನನ್ನು ಪರಿಚಿತರೇ ಅಪಹರಿಸಿ 15 ಲಕ್ಷ ರೂ. ಲಪಟಾಯಿಸಿದ್ದಾರೆ.
ಶ್ರೀನಗರದ ನಿವಾಸಿ ತಿಲಕ್ ಮಣಿಕಂಠ (32) ಅಪಹರಣಕ್ಕೆ ಒಳಗಾದವ. ಆತ ನೀಡಿದ ದೂರಿನ ಮೇರೆಗೆ ಐವರು ಅಪಹರಣಕಾರರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್ ಗೋವಾಕ್ಕೆ ತೆರಳಿ ಅಲ್ಲಿ ಕ್ಯಾಸಿನೊ ಆಡಿ ದುಡ್ಡು ಮಾಡಲು ಮುಂದಾಗಿದ್ದ. ಇದರಂತೆ 4 ಲಕ್ಷ ರೂ.ಹಣ ಹೊಂದಿಸಿಕೊಂಡು ಸ್ನೇಹಿತರೊಂದಿಗೆ ಜು.30ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದ.
ಮೂರು-ನಾಲ್ಕು ದಿನ ಅಲ್ಲೇ ಉಳಿದು ಅಲ್ಲಿನ ಕ್ಯಾಸಿನೋದಲ್ಲಿ ಜೂಜಾಡಿ 25 ಲಕ್ಷ ರೂ. ಗೆದಿದ್ದ. 25 ಲಕ್ಷ ರೂ. ಹಣ ಗೆದ್ದ ವಿಚಾರ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ. ಆ.5 ರಂದು ಕಾರಿನಲ್ಲಿ ಬಂದಿದ್ದ ಪರಿಚಿತರು ತಿಲಕ್ನನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸಿ ಅಪಹರಿಸಿದ್ದಾರೆ.
ಬ್ಯಾಂಕ್ ಖಾತೆಗೆ ದುಡ್ಡು ವರ್ಗಾವಣೆ: ಜ್ಞಾನಭಾರತಿ ವಿವಿ ಬಳಿ ನಿರ್ಜನ ಪ್ರದೇಶದಲ್ಲಿ ಕರೆದೊಯ್ದು ಇಸ್ಟೀಟ್ ಆಟದ ಬಗ್ಗೆ ಕ್ಯಾತೆ ತೆಗೆದು ಜಗಳ ಮಾಡಿದ್ದಾರೆ. ಬಳಿಕ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದಿರುವ ವಿಚಾರ ನಮಗೆ ಗೊತ್ತಿದೆ ಎಂದು ಹೇಳಿ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ. ಬಳಿಕ ಮೊಬೈಲ್ ಕಸಿದುಕೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ 25 ಲಕ್ಷ ರೂ. ಇರುವುದು ಗೊತ್ತಾಗಿದೆ. 25 ಲಕ್ಷ ರೂ.ನಲ್ಲಿ 15 ಲಕ್ಷ ರೂ. ಅನ್ನು ತಿಲಕ್ಗೆ ಬೆದರಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು.
ಬಳಿಕ ನೆಲಮಂಗಲ ಗೊಲ್ಲಹಳ್ಳಿ ಬಳಿಯಿರುವ ರೆಸಾರ್ಟ್ಗೆ ತಿಲಕ್ನನ್ನು ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಪಹರಣಕಾರರು, ನಮ್ಮಿಂದ ಇಸ್ಟೀಟ್ ಮೋಸದಾಟದಲ್ಲಿ ಗೆದ್ದಿರುವ ದುಡ್ಡು ಇದು. ಹೀಗಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದೇವೆ ಎಂದು ಹೇಳಿಸಿ ಮೊಬೈಲ್ನಲ್ಲಿ ವಿಡಿಯೋ ಮಾಡಿಸಿಕೊಂಡಿದ್ದರು. ಬೆಂಗಳೂರು ಸಮೀಪ ತಿಲಕ್ನನ್ನು ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: 40% ಕಮಿಷನ್ ತನಿಖೆಯಾಗದೆ ಬಿಲ್ ಬಿಡುಗಡೆ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ