ಬೆಂಗಳೂರು: ಅನೈತಿಕ ಸಂಬಂಧ ಮುಂದುವರಿಸುವಂತೆ ಪೀಡಿಸುತ್ತಿದ್ದ ಕೂಲಿ ಕಾರ್ಮಿಕನ ಕತ್ತು ಕೊಯ್ದು ಸೀರೆಯಲ್ಲಿ ಮೃತದೇಹ ಮುಚ್ಚಿಟ್ಟಿದ್ದ ಪ್ರಕರಣ ಬೇಧಿಸಿರುವ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಿಹಾರ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ರಾಜೇಶ್ ಕುಮಾರ್ (34) ಮತ್ತು ಆತನ ಪತ್ನಿ ನೇಹಾ ಕುಮಾರಿ(21) ಬಂಧಿತರು. ಆರೋಪಿಗಳು ಅ.15ರ ರಾತ್ರಿ ಬಿಹಾರ ಮೂಲದ ಸಜ್ಜನ್ ಸಿಂಗ್(33) ಎಂಬಾತನ ಕತ್ತುಕೊಯ್ದು ಕೊಲೆಗೈದು ಸೋಮೇಶ್ವರನಗರ ಗಲ್ಲಿಯೊಂದರಲ್ಲಿ ಸೀರೆಯಿಂದ ಮೃತದೇಹ ಮುಚ್ಚಿ ಎಸೆದಿದ್ದರು.
ಕೊಲೆಯಾದ ಸಜ್ಜನ್ ಸಿಂಗ್ ಮತ್ತು ಆರೋಪಿತ ದಂಪತಿ ಬಿಹಾರ ಮೂಲದವರು. ಕೆಲ ವರ್ಷಗಳ ಹಿಂದೆ ಉದ್ಯೋಗ ಅರಿಸಿ ಬೆಂಗಳೂರಿಗೆ ಬಂದು ಆರ್ಎಂಸಿ ಯಾರ್ಡ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಆರೋಪಿ ನೇಹಾ ಕುಮಾರಿ ಮತ್ತು ಮೃತ ಸಜ್ಜನ್ ಸಿಂಗ್ ಪರಿಚಿತರಾಗಿ ಆತ್ಮೀಯತೆ ಬೆಳೆದು ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ರಾಜೇಶ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಪತಿಯ ಬುದ್ಧಿವಾದಿಂದ ಎಚ್ಚೆತ್ತುಕೊಂಡ ನೇಹಾ ಕೆಲ ದಿನಗಳಿಂದ ಸಜ್ಜನ್ಸಿಂಗ್ನಿಂದ ದೂರವಾಗಿದ್ದಳು. ಆದರೆ, ಸಜ್ಜನ್ ಸಿಂಗ್ ತನ್ನೊಂದಿಗಿನ ಅನೈತಿಕ ಸಂಬಂಧ ಮುಂದುವರಿಸುವಂತೆ ನೇಹಾಳಿಗೆ ಪೀಡಿಸುತ್ತಿದ್ದ. ಈತನ ಕಾಟದಿಂದ ಬೇಸತ್ತಿದ್ದ ನೇಹಾ, ಈ ವಿಚಾರವನ್ನು ಪತಿ ರಾಜೇಶ್ಗೆ ತಿಳಿಸಿದ್ದಳು. ಅದರಿಂದ ರೊಚ್ಚಿಗೆದ್ದ ರಾಜೇಶ್, ಸಜ್ಜನ್ ಸಿಂಗ್ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು.
ಕತ್ತು ಕೊಯ್ದು ಕೊಲೆ:
ಅ.15ರಂದು ರಾತ್ರಿ ಸೋಮೇಶ್ವರನಗರದಲ್ಲಿ ಸಜ್ಜನ್ ಸಿಂಗ್ ಮತ್ತು ರಾಜೇಶ್ ದಂಪತಿ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ರಾಜೇಶ್ ಚಾಕುವಿನಿಂದ ಸಜ್ಜನ್ ಸಿಂಗ್ನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಬಳಿಕ ಮೃತದೇಹಕ್ಕೆ ಸೀರೆ ಸುತ್ತಿ ಗಲ್ಲಿಯೊಂದರಲ್ಲಿ ಕಸ ಎಸೆಯುವ ಜಾಗದಲ್ಲಿ ಎಸೆದು ದಂಪತಿ ಪರಾರಿಯಾಗಿದ್ದರು. ಅ.16ರ ಬೆಳಗ್ಗೆ ಸಾರ್ವಜನಿಕರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ದಂಪತಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.