Advertisement

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

01:02 AM Oct 27, 2020 | mahesh |

ಸ್ವಾತಿ ನಕ್ಷತ್ರದ ಮಳೆಯಿಂದ ಅನೇಕ ಲಾಭಗಳಿವೆ. ಅಕ್ಟೋಬರ್‌ 23ರಿಂದ ನವೆಂಬರ್‌ 6ರ ವರೆಗೆ ಈ ಮಳೆಯ ಅವಧಿ. ಪ್ರಕೃತಿಯಲ್ಲಿ ಉಚಿತವಾಗಿ ಸಿಗುವ ಈ ಮಳೆಯ ನೀರು ಸಂಗ್ರಹಿಸಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದು.

Advertisement

ಇತ್ತೀಚಿಗಷ್ಟೆ ನಮ್ಮನ್ನಗಲಿದ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠದಿಂದ ಹೊರಹೊಮ್ಮಿದ “ಬಣ್ಣದ ಗೆಜ್ಜೆ’ ಚಲನಚಿತ್ರದ
“ಸ್ವಾತಿ ಮುತ್ತಿನ ಮಳೆ ಹನಿಯೆ|
ಮೆಲ್ಲ ಮೆಲ್ಲನೆ ಧರೆಗಿಳಿಯೆ||..

‘ ಹಾಡು ಎವರ್‌ಗ್ರೀನ್‌ ಹಾಡು ಗಳಲ್ಲಿ ಒಂದು. ಸ್ವಾತಿ ಮಳೆ ಜುಲೈ, ಆಗಸ್ಟ್‌ ವೇಳೆ ಬೀಳುವ ಮಳೆಯಂತಲ್ಲ, ಮೆಲ್ಲ ಮೆಲ್ಲನೆ ನಿಧಾನವಾಗಿ ಧರೆಗಿಳಿಯುವುದು, ಚಿಪ್ಪಿಗೆ ಬಿದ್ದು ಮುತ್ತಾಗುವುದು ಇತ್ಯಾದಿ ಸಾಹಿತ್ಯ ಗಳು ಹಾಡಿನಲ್ಲಿರುವುದರಿಂದಲೇ ಚಲನ ಚಿತ್ರದ ಗೀತೆ ಶಾಸ್ತ್ರೀಯ ಚೌಕಟ್ಟಿನಿಂದ ಸಂಪೂರ್ಣ ಹೊರತಾಗಿರುತ್ತದೆ, ಕೇವಲ ಪ್ರಣಯಮಯ ವಾಗಿರುತ್ತದೆ ಎಂಬ ಮಾತಿಗೆ ಇಂತಹ ಅಪರೂಪದ ಹಳೆಯ ಗೀತೆಗಳು ಅಪವಾದವಾಗಿ ಕಾಣುತ್ತದೆ.

ಒಟ್ಟು 27 ನಕ್ಷತ್ರಗಳನ್ನು ನಿತ್ಯವೂ ಒಂದೊಂದು ನಕ್ಷತ್ರವನ್ನಾಗಿ ವಿಂಗಡಿಸಿದಂತೆ, ಮಳೆಯನುಸಾರ ವಾರ್ಷಿಕ ವಿಂಗಡನೆಯೂ ಇದೆ. ರೋಹಿಣಿ, ಮೃಗಶಿರಾ, ಆದ್ರಾì, ಪುನರ್ವಸು, ಪುಷ್ಯ, ಆಶ್ಲೇಷಾ, ಮಖಾ, ಹುಬ್ಬ, ಉತ್ತರ, ಹಸ್ತ, ಚಿತ್ರಾ, ಸ್ವಾತಿ, ವಿಶಾಖ ಇವು 13 ನಕ್ಷತ್ರಗಳು ಮಳೆ ನಕ್ಷತ್ರಗಳು. ಉಳಿದ ಅಶ್ವಿ‌ನಿ, ಭರಣಿ ಇತ್ಯಾದಿಗಳು ಮಳೆಗಾಲದ ಹೊರತಾದ ಸಮಯದಲ್ಲಿರುತ್ತವೆ. ರೋಹಿಣಿಯಿಂದ ಚಿತ್ರಾ ನಕ್ಷತ್ರದವರೆಗಿನ ಮಳೆ ನಕ್ಷತ್ರ ಮುಗಿಯುತ್ತ ಸ್ವಾತಿ ನಕ್ಷತ್ರದ ಮಳೆಗೆ ಕಾಲ ಸನ್ನಿಹಿತವಾಗಿದೆ. ಅ. 23ರಿಂದ ನ. 6ರ ವರೆಗೆ ಸ್ವಾತಿ ಮಳೆ ಬೀಳಲಿದೆ.

ಮಳೆಗಾಲದ ಕೊನೆಯ ಅವಧಿಯ ಮಳೆ ಒಮ್ಮೆಲೆ ಧುತ್ತೆಂದು ಬರುವುದಿಲ್ಲ, ಬರಲೂಬಾರದು. ಹಾಗೇನಾದರೂ ಬಂದರೆ ಅದು ಅಸಹಜ. ಈಗ ನಮ್ಮ ಜೀವನವೂ ಅಸಹಜವಾಗಿರುವುದರಿಂದ ವಾತಾವರಣದಲ್ಲಿಯೂ ಚಂಡಮಾರುತದಂತಹ ಅಸಹಜ ಬೆಳವಣಿಗೆಗಳು ನಡೆಯುತ್ತಿವೆ. ಹೀಗಿರುವ ಅಸಹಜ ಬೆಳವಣಿಗೆಯ ಮಳೆ ನೀರಿನಿಂದ ಪರಿಪೂರ್ಣ ಪ್ರಯೋಜನ ಸಿಗುತ್ತದೆ ಎನ್ನಲಾಗದು. ನಿಧಾನವಾಗಿ “ಮೆಲ್ಲಮೆಲ್ಲನೆ ಧರೆಗಿಳಿಯೆ’ ರೀತಿ ಮಳೆ ಬಂದರೆ ಅದನ್ನು ಶೇಖರಿಸಿಟ್ಟು ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದು.

Advertisement

ತಾಜಾ ಅನುಭವ
ಹೋದ ವರ್ಷ ಚಂಡಮಾರುತವಿದ್ದರೂ ಸ್ವಾತಿ ಮಳೆಯ ಪರಿಣಾಮವನ್ನು ಕಂಡವರು “ಉದಯವಾಣಿ’ ಪತ್ರಿಕೆಯ ಏಜೆನ್ಸಿ ನಡೆಸುತ್ತಿದ್ದ ಮಣಿಪಾಲ ಅನಂತನಗರದ ನಿವಾಸಿ ಟಿ. ಮಾಯಾ ಜಿ. ಪೈ. ಆಗ ಊರಿಗೆ ಬಂದಿದ್ದ ಮಗಳು ಸ್ವಸ್ತಿಕಾ ಅಮೆರಿಕಕ್ಕೆ ಹೋದಾಗ ಸ್ವಲ್ಪ ನೀರನ್ನು ಕಳುಹಿಸಿದ್ದರು. ತುರಿಕೆ ಬಂದಾಗ ಈ ನೀರು ಹಚ್ಚಿ ಗುಣವಾಯಿತು. ಮನೆ ಆವರಣದ ಗಿಡಗಳಿಗೆ ಫ‌ಂಗಸ್‌ ಬಂದಾಗ ಈ ನೀರನ್ನು ಸಿಂಪಡಿಸಿದ ಪರಿಣಾಮ ಫ‌ಂಗಸ್‌ ಹೋಯಿತು. ಮರದ ತುಂಡೊಂದು ಬಿದ್ದು ಕಾಲಿಗೆ ನೋವು ಆದಾಗ ನೀರು ಹಾಕಿದರು. ಇದರ ಪರಿಣಾಮವೂ ಗೋಚರವಾಯಿತು. ತಲೆ ನೋವು ಬಂದಾಗ ಈಗಲೂ ಹಚ್ಚುತ್ತೇನೆ ಎಂದು ಮಾಯಾ ಪೈ ಹೇಳುತ್ತಾರೆ.

ಬ್ರಾಹ್ಮಿ ಮುಹೂರ್ತ ಉತ್ತಮ
ಬ್ರಾಹ್ಮಿ ಮುಹೂರ್ತದಲ್ಲಿ ಬೀಳುವ ಮಳೆ ಇನ್ನೂ ಉತ್ತಮ. ಇದು ಕಣ್ಣು, ಚರ್ಮ, ಗಾಯ ಇತ್ಯಾದಿಗಳಿಗೆ ಉತ್ತಮ ಎನ್ನುತ್ತಾರೆ ಮಂಗಳೂರು ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ| ಕೆ. ವಿ. ರಾವ್‌ ಅವರ ಸಹೋದರಿ ಬಜಪೆ ನಿವಾಸಿ ಉಷಾ.

ರಾಶಿ, ನಕ್ಷತ್ರ ಪಾಠ
ರಾಶಿ, ನಕ್ಷತ್ರ, ಸಂವತ್ಸರಗಳ ಪಾಠವನ್ನು ಉಪನಯನವಾದ ಬಳಿಕ ಹೇಳಿಕೊಡುವ ಕ್ರಮವಿದೆ. ಮೃಗಶಿರಾ ಮಳೆಗೆ ಮೃಗಗಳ ಹೆಜ್ಜೆಯಲ್ಲಿ ಬೀಜ ಹಾಕಿದರೂ ಸಾಕೆಂಬ (ಬೀಜದ ಸಸಿಗಳು ಬೇಕಾಗಿಲ್ಲ), ಆದ್ರಾì ಮಳೆಗೆ ಬೀಜದ ಸಸಿಗಳು ಬೇಕಾಗದೆ ಬೀಜ ಹಾಕಿದರೂ ಸಾಕೆಂಬ, ಪುನರ್ವಸು, ಪುಷ್ಯ, ಆಶ್ಲೇಷಾ ನಕ್ಷತ್ರದ ಮಳೆ ವೇಳೆ ಮೊಳಕೆ ತರಿಸಿ ಹಾಕಬೇಕೆಂಬ ಮಾತಿದೆ. ಪುನರ್ವಸುವಿನಿಂದ ಆಶ್ಲೇಷಾದವರೆಗೂ ರೋಗಗಳ ಬಾಧೆ ಹೆಚ್ಚಿಗೆ ಇರುತ್ತದೆ. ಮಖಾ ನಕ್ಷತ್ರದ ಮಳೆ ಪ್ರಕೃತಿಗೆ ಮೃಷ್ಟಾನ್ನ ಪಾನ ಮಾಡಿದಂತೆ, ಆಶ್ಲೇಷಾದಲ್ಲಿ ಬಂದ ರೋಗ ಮಖಾದಲ್ಲಿ ನಿವಾರಣೆ, ಮಖಾ-ಹುಬ್ಟಾ ನಕ್ಷತ್ರದ ಮಳೆ ಉತ್ತಮ, ಉತ್ತರಾ ನಕ್ಷತ್ರದ ಮಳೆ ಹೆಚ್ಚಿಗೆ ಬಂದರೆ ಹಾನಿ (ಇತ್ತೀಚಿಗೆ ಬಂದ ಅನುಭವವಿದೆ), ಕೃತ್ತಿಕಾ ನಕ್ಷತ್ರದ ಮಳೆ ವಿಷಕಾರಿ, ಹಸ್ತ, ಚಿತ್ರಾ ನಕ್ಷತ್ರದ ಮಳೆ ಉತ್ತಮ ಎನ್ನುತ್ತಾರೆ ಮೂಡಬಿದಿರೆಯ ಹಿರಿಯ ಕೃಷಿಕ ರಾಮದಾಸ ಶಿಬರಾಯ.

ಸಂಗ್ರಹ ಕ್ರಮ
ಸ್ವಾತಿ ಮಳೆ ಬರುವಾಗ ಚಂಡಮಾರುತವಿದ್ದರೆ ಇದನ್ನು ವಿಶ್ವಾಮಿತ್ರರ ಯಾಗಕ್ಕೆ ಸುಬಾಹು- ಮಾರೀಚನಂತಹ ರಾಕ್ಷಸರಿಗೆ ಹೋಲಿಕೆ ಮಾಡು ತ್ತೇನೆ. ಇದು ಉತ್ತಮವಲ್ಲ. ಸಹಜವಾಗಿ ಮಳೆ ನಿಧಾನವಾಗಿ ಬರುತ್ತಿರಬೇಕು, ಮಣ್ಣಿನ ಪಾತ್ರೆಯಲ್ಲಿ ಆಕಾಶದಿಂದ ನೇರವಾಗಿ ಶೇಖರಿಸಬೇಕು. ಪಿಂಗಾಣಿ ಅಥವಾ ಗಾಜಿನ ಬಾಟಲಿಯಲ್ಲಿ ಇದನ್ನು ಸಂಗ್ರಹಿ ಸಿಟ್ಟು ಬಳಸಬೇಕು. ಗಾಜಿನ (ಕುಪ್ಪಿ) ಬಾಟಲಿಗೆ ಹಿಂದೆ ಬೂಚ್‌ (ಕಾರ್ಕ್‌) ಎಂಬ ಮುಚ್ಚಳವಿತ್ತು. ಇದು ಸಾಧ್ಯವಾದರೆ ಉತ್ತಮ. ಈ ನೀರು ಕಣ್ಣಿನ ಸಮಸ್ಯೆಗಳಿಗೆ, ಜ್ವರ ಬಂದಾಗ ಬಳಸಬಹುದು ಎಂಬ ಅಭಿಪ್ರಾಯ ರಾಮದಾಸ ಶಿಬರಾಯರದು.

ಬಿಸಿಲೂ ಲಾಭ, ಮಳೆಯೂ ಲಾಭ
ಸ್ವಾತಿ ಬಿಸಿಲಿಗೆ ಪುಸ್ತಕ, ಬಟ್ಟೆಗಳನ್ನು ಒಣ ಹಾಕುವ ಕ್ರಮ ಚಾಲ್ತಿಯಲ್ಲಿದೆ. ಬಿಸಿಲೂ ಲಾಭ, ಮಳೆಯೂ ಲಾಭ ಎಂದು ಲೆಕ್ಕಾಚಾರ ಹಾಕಿದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಎಲಿಮನ್ನೋಳಿ ಗ್ರಾಮದ ತಾತ್ಯಾಗೌಡ ಮಲಗೌಡನವರ್‌ ಮತ್ತು ಅವರ ಪತ್ನಿ ಸುಮತಿ ತಮ್ಮ ಜೀವನದಲ್ಲಿ ಅದೆಷ್ಟೋ ರೋಗಿಗಳಿಗೆ ಸ್ವಾತಿ ಮಳೆ ನೀರಿನ ಕುರಿತು ಅನುಭವವನ್ನು ಹಂಚಿಕೊಂಡು ಉಚಿತ ಸೇವೆ ಸಲ್ಲಿಸಿದ್ದಾರೆ. ಭಾರೀ ಓದಿಕೊಂಡ ಆಧುನಿಕ ವಿಜ್ಞಾನಿಗಳು ಔಷಧವನ್ನು ಮೊದಲು ಇಲಿಗಳ ಮೇಲೆ ಪ್ರಯೋಗ ಮಾಡಿದಂತೆ, ಹೆಚ್ಚೇನೂ ಓದದಮ ಅನುಭವದಿಂದಲೇ ಬೆಳೆದ ತಾತ್ಯಾಗೌಡ ದಂಪತಿ ಸ್ವಾತಿ ಮಳೆ ನೀರನ್ನು ಮೊದಲು ಜಾನುವಾರುಗಳ ಮೇಲೆ ಪ್ರಯೋಗ ಮಾಡಿ ಯಶಸ್ಸಿನ ಗುಟ್ಟು ಕಂಡು ಹಿಡಿದು ಬಳಿಕ ಮನುಷ್ಯರ ಮೇಲೆ ಪ್ರಯೋಗಿಸಿದರು.

ಇವರ ಬದುಕೂ ನೈಸರ್ಗಿಕ
ಗ್ಯಾಂಗ್ರಿನ್‌, ಸೊರೋಸಿಸ್‌ (ಚರ್ಮ ರೋಗ), ಕ್ಯಾನ್ಸರ್‌ ಇತ್ಯಾದಿಗಳಿಗೆ ಸ್ವಾತಿ ನೀರನ್ನು ಬಳಸಲು ಸಲಹೆ ಕೊಡುತ್ತೇವೆ. ಅವರವರೇ ಮಳೆ ನೀರು ಸಂಗ್ರಹಿಸಲು ಸಲಹೆ ಕೊಡುತ್ತೇವೆ. ಮನೆಗೆ ಬಂದರೆ ಮಾತ್ರ ಸಂಗ್ರಹಿಸಿದ ನೀರು ಕೊಡುತ್ತೇವೆ. ನಮ್ಮಲ್ಲಿ 20 ವರ್ಷಗಳ ಹಿಂದಿನ ಮಳೆ ನೀರು ಇದೆ. ಏನೂ ಹಾಳಾಗಲಿಲ್ಲ ಎನ್ನುವ ಸುಮಿತಿಯವರು, “ಮಳೆ ದೇವ್ರು ಕೊಟ್ಟದ್ದು. ನಮ್ಗೆ ದುಡ್‌ ಮಾಡೂ ಭಾವನೆ ಇಲ್ಲರೀ’ ಎಂದುತ್ತರಿಸುತ್ತಾರೆ. ಸುಮತಿಯವರು ತಾತ್ಯಾಗೌಡರು ಹಾಕಿಕೊಟ್ಟ ಮಾರ್ಗದರ್ಶನದಂತೆ ನೈಸರ್ಗಿಕ ಕೃಷಿ, ಔಷಧೀಯ ಸಸ್ಯಗಳ ವನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಇವರು ಎಷ್ಟರ ಮಟ್ಟಿಗೆ ನೈಸರ್ಗಿಕವಾಗಿ ಬದುಕುತ್ತಿದ್ದಾರೆಂದರೆ ಮಣ್ಣಿನ ಪಾತ್ರೆಯಲ್ಲಿಯೇ ಅಡುಗೆ, ಉಪ್ಪು ಬಳಸದೆ ಕೇವಲ ಸೈಂಧವ ಲವಣದ ಬಳಕೆ, ಜವಾರಿ ಆಕಳಿನ ಸಾಕಣೆ ಇತ್ಯಾದಿ ರೀತಿಗಳಲ್ಲಿ. ಫ್ರಿಡ್ಜ್ ಇಲ್ಲದ ಕಾರಣ ಕೃತಕ ತಂಪಿನ ವಸ್ತುಗಳ ಬಳಕೆ ಇಲ್ಲವೇ ಇಲ್ಲ. ಆಸಕ್ತರು ಸುಮತಿಯವರನ್ನು ಮುಖತಃ ಅಥವಾ ದೂರವಾಣಿಯಲ್ಲಿ  (ದೂ: 9972159805) ಸಂಪರ್ಕಿಸಿ ಅವರ ಅನುಭವ ಪಡೆದುಕೊಳ್ಳಬಹುದು.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next