Advertisement

ಬೆಳ್ತಂಗಡಿ: ಕಣಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

01:15 AM Dec 13, 2022 | Team Udayavani |

ಬೆಳ್ತಂಗಡಿ : ತಾಲೂಕು ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ-1 ಸಮೀಪದ ಸೊರಕ್ಯ ಎನ್ನುವಲ್ಲಿ ರಬ್ಬರ್‌ ತೋಟದ ಅಂಚಿನಲ್ಲಿರುವ ಕಣಿಯೊಂದರಲ್ಲಿ ಭಾಗಶಃ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹವೊಂದು ಡಿ. 12ರಂದು ಪತ್ತೆಯಾಗಿದೆ.

Advertisement

ಲಾಯಿಲ ಕೊಲ್ಲಿ ರಸ್ತೆಯಿಂದ ಸಾಗುವಾಗ ಕೇಲ್ತಜೆಯಿಂದ ಸುರ್ಯ ರಸ್ತೆ ಸಾಗುವ 1 ಕಿ.ಮೀ. ದೂರದಲ್ಲಿರುವ ರಬ್ಬರ್‌ ತೋಟದ ಮಾಲಕರು ಮೇವಿಗಾಗಿ ದನ ಕಟ್ಟಲು ಕಾಡಿಗೆ ತೆರಳುವ ವೇಳೆ ದುರ್ನಾತ ಬೀರುವುದನ್ನು ಕಂಡು ಪರಿಶೀಲಿಸಿದಾಗ, ಕಣಿಯಲ್ಲಿ ಮೃತದೇಹ ಪತ್ತೆಯಾಗಿದೆ. ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್‌ ಉಪನಿರೀಕ್ಷಕ ನಂದ ಕುಮಾರ್‌ ಎಂ.ಎಂ. ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ.

ಶೇ. 90 ಸುಟ್ಟ ಮೃತದೇಹ
ದೇಹವು ಶೇ. 90ರಷ್ಟು ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿಲ್ಲ. ಸುಟ್ಟ ದೇಹದ ಮೇಲೆ ಕಟ್ಟಿಗೆ ರಾಶಿ ಹಾಕಿ ಮುಚ್ಚಲಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದಾಗ ಸುಮಾರು 10 ದಿನಗಳ ಹಿಂದೆ ಕೃತ್ಯ ನಡೆದಿರುವ ಸಾಧ್ಯತೆ ಕಂಡುಬಂದಿದ್ದು, ಸ್ಥಳದಲ್ಲಿ ಕಾಲುಂಗುರ ಪತ್ತೆಯಾಗಿದೆ. ಈ ಆಧಾರದಲ್ಲಿ ಮಹಿಳೆ ಮೃತ ದೇಹವಿರಬಹುದು ಎಂದು ಸಂಶಯಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಉದ್ದೇಶಿತ ಕೊಲೆಯಂತೆ ಕಂಡುಬಂದಿದ್ದು, ಪೊಲೀಸ್‌ ತನಿಖೆಯಿಂದ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ಸ್ಥಳೀಯ ಠಾಣೆಯಲ್ಲಿ ಮಹಿಳೆ ನಾಪತ್ತೆ ದೂರು ದಾಖಲಾಗಿರುವುದನ್ನು ಪರಿಶೀಲಿಸಿದ್ದಾರೆ. ಗ್ರಾಮಸ್ಥರಿಂದಲೂ ಮಾಹಿತಿ ಕಲೆ ಹಾಕಲಾಗಿದೆ. ನಿರ್ಜನ ಪ್ರದೇಶವಾದ್ದರಿಂದ ಬೇರೆಡೆಯಿಂದ ಮಹಿಳೆಯನ್ನು ಕೊಲೆಗೈದು ತಂದು ಸುಟ್ಟು ಹಾಕಲಾಗಿದೆಯೋ ಎನ್ನುವ ಬಗ್ಗೆಯೂ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ರಾತ್ರಿಯಾದ ಪರಿಣಾಮ ಶವವು ಸ್ಥಳದಲ್ಲೇ ಇದ್ದು ಮಂಗಳವಾರ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಆಗಮಿಸಿ ಬಳಿಕ ಪ್ರಕ್ರಿಯೆ ನಡೆಯಲಿದೆ ಎಂದು ಬೆಳ್ತಂಗಡಿ ಎಸ್ಸೆ„ ನಂದಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next