Advertisement

ಸಾರಿಗೆ ನೌಕರರಿಂದ 27ರಂದು ಬೆಂಗಳೂರು ಚಲೋ

01:27 PM Jun 02, 2019 | Team Udayavani |

ಬಳ್ಳಾರಿ: ಸಾರಿಗೆ ನಿಗಮಗಳಲ್ಲಿ ಉಲ್ಬಣಗೊಳ್ಳುತ್ತಿರುವ ಕಾರ್ಮಿಕರ ಸಮಸ್ಯೆಗಳ ನಿಯಂತ್ರಣ ಸೇರಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ವತಿಯಿಂದ ಜೂ.27 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್‌ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ, ಸಾರಿಗೆ ಇಲಾಖೆಯನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದ ಬಳಿಕ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ಎರಡು ದುಷ್ಪರಿಣಾಮಗಳು ಬೀರುತ್ತಿವೆ. ಒಂದು ಹಣಕಾಸಿನ ಮೇಲೆ ತೊಂದರೆಯಾಗಲಿದ್ದು, ಮತ್ತೂಂದು ಫಾರಂ ಪೋರ್‌ರಿಂದ ಚಾಲಕ, ನಿರ್ವಾಹಕರ ಕೆಲಸದ ಭಾರ ಮತ್ತಷ್ಟು ಜಾಸ್ತಿಯಾಗಿದೆ. ಕಾನೂನು ಪ್ರಕಾರ ಓವರ್‌ಟೈಮ್‌ ಕೊಡದೆ, ಕೆಲಸಕ್ಕೆ ಹಾಜರಾದ ನೌಕರರಿಗೆ ನಾನಾ ಕಾರಣ ನೀಡಿ ಅವರನ್ನು ಕರ್ತವ್ಯದ ಮೇಲೆ ಕಳುಹಿಸುತ್ತಿಲ್ಲ. ವಾಹನ ಇಲ್ಲ ಎಂಬ ಕಾರಣ ನೀಡಿ ರಜೆ ಹಾಕುವಂತೆ ಒತ್ತಾಯಿಸಲಾಗುತ್ತಿದೆ. ವಾಹನ ಮತ್ತು ಮಾರ್ಗ ಕೊಡುವುದರಲ್ಲಿ ಬಹುತೇಕ ಘಟಕಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ನಾಲ್ಕು ವಿಭಾಗಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಕಾರ್ಮಿಕರಿಗೆ ಒದಗಿಸಿರುವ ವೈದ್ಯಕೀಯ ವ್ಯವಸ್ಥೆಯು ಅಸಮರ್ಪಕವಾಗಿದೆ. ಕೆಲಸದ ಒತ್ತಡದಿಂದಾಗಿ ಅನಾರೋಗ್ಯಕ್ಕೊಳಗಾಗುವ ಕಾರ್ಮಿಕರಿಗೆ ಮತ್ತವರ ಕುಟುಂಬದ ಆರೋಗ್ಯದ ರಕ್ಷಣೆ ಸಂಪೂರ್ಣವಾಗಿ ವೈದ್ಯಕೀಯ ಖರ್ಚು ಕೊಡುವ ಜವಾಬ್ದಾರಿಯಿದೆ. 2017 ಆ.29ರ ಐತೀರ್ಪಿನಲ್ಲೂ ವೈದ್ಯಕೀಯ ಸೇವೆ ಅಸಮರ್ಪಕವಾಗಿದೆ ಎಂದು ತಿಳಿಸಿದ್ದು, ಫೆಡರೇಷನ್‌ ಜತೆ ಚರ್ಚಿಸಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೂ, ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ಸಾರಿಗೆ ನಿಗಮಗಳಲ್ಲಿ ಮೇಲಧಿಕಾರಿಗಳ ಕಿರುಕುಳ, ಹಿಂಸೆ ತಾಳಲಾರದೆ ಹತಾಶರಾಗಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಹಲವಾರು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಆಕಸ್ಮಿಕವಾಗಿ ಬದುಕುಳಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮದ ನೆಪದಲ್ಲಿ ಆರ್ಥಿಕ ನಷ್ಟದೊಂದಿಗೆ ಮತ್ತಷ್ಟು ಹಿಂಸೆ ಕಿರುಕುಳಗಳಿಗೆ ಒಳಗಾಗಬೇಕಾಗುತ್ತದೆ. ಇಂಥ ಪ್ರಕರಣ ದಾಖಲಾದ ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ ವಿಭಾಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಎರಡು ವರ್ಷಗಳ ಹಿಂದೆ ಆರ್ಥಿಕ ನಷ್ಟದಲ್ಲಿ ಜಿಲ್ಲೆಯಲ್ಲೇ 3ನೇ ಸ್ಥಾನದಲ್ಲಿದ್ದ ಬಳ್ಳಾರಿ ವಿಭಾಗ 9ನೇ ಸ್ಥಾನಕ್ಕೆ ಕುಸಿದಿದೆ. ಡಿಪೋಗಳಲ್ಲಿ ಕೆಟ್ಟು ನಿಂತಿರುವ ಬಸ್‌ಗಳಿಗೆ ಬಿಡಿ ಭಾಗಗಳು ಇಲ್ಲದಂತಾಗಿದ್ದು, 10-15 ಬಸ್‌ಗಳು ಡಿಪೋದಲ್ಲೇ ಸ್ಥಗಿತಗೊಂಡಿವೆ. ಪ್ರತಿ ಘಟಕದಲ್ಲೂ 35-40 ಚಾಲಕರ ಕೊರತೆಯಿದೆ. ಹಳೇ ಬಸ್‌ನಿಲ್ದಾಣದ ಸಂಕೀರ್ಣಗಳನ್ನು ನಿರ್ಮಿಸಿ 2 ವರ್ಷಗಳಾದರೂ ಬಾಡಿಗೆಗೆ ಕೊಡುವಲ್ಲಿ ಮೀನಮೇಷ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದ ಪತ್ರಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂಬ ಪ್ರತಿಕ್ರಿಯೆ ಬಂದಿದೆ. ಇದರಿಂದ ವರ್ಷಕ್ಕೆ ಸುಮಾರು 78 ಲಕ್ಷ ರೂ.ಗಳು ನಿಗಮಕ್ಕೆ ನಷ್ಟವಾಗಿದೆ. ಕಾರ್ಮಿಕರ ಸಂಘಕ್ಕೆ ಪ್ರತಿಯಾಗಿ ಮತ್ತೂಂದು ಸಂಘ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇವರನ್ನು ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘದ ಆದಿಮೂರ್ತಿ, ಕಾಂತಯ್ಯ ಗುತ್ತರಗಿಮಠ, ರಾಯಚೂರು ಘಟಕದ ಶ್ರೀಶೈಲರೆಡ್ಡಿ, ಶಿವಕುಮಾರ್‌, ರೆಹಮಾನ್‌ ನದಾಫ್‌ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next