Advertisement

ಬೆಳಗಾವಿ: ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ನೀಡಿ- ರಾಹುಲ್‌ ಶಿಂಧೆ

05:45 PM Jul 25, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂದ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವೀಡಿಯೋ
ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಫ್‌ಟಿಕೆ ಕಿಟ್‌ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ
ಕಡ್ಡಾಯವಾಗಿ ವರದಿ ನೀಡಬೇಕು. ಬಹುಗ್ರಾಮ ಕುಡಿಯುವ ನೀರು ಸರಬರಾಜು, ಸ್ಥಗಿತಗೊಂಡಿರುವ ಹಾಗೂ ಕುಡಿಯುವ ನೀರಿಗೆ ಪರ್ಯಾಯ ಮಾರ್ಗದ ಬಗ್ಗೆ ಸಹ ವರದಿ ಮಾಡಬೇಕು ಎಂದರು.

ಗ್ರಾಮದಲ್ಲಿ ನೀರಿನ ಮೂಲಗಳ ಪರೀಕ್ಷೆ ಜೊತೆಗೆ ಕೊನೆಯ ಹಂತದಲ್ಲಿ ತಲುಪುವ ನೀರನ್ನು ಕೂಡ ಪರೀಕ್ಷೆ ಮಾಡಬೇಕು. ಆರೋಗ್ಯ ಅಧಿಕಾರಿಗಳಿಂದ ನೀರಿನ ಮೂಲಗಳ ಪರೀಕ್ಷೆಯ ಮಾದರಿಗಳ ವರದಿಯನ್ನು ತೆಗೆದುಕೊಂಡು ಕ್ರಮ ವಹಿಸಬೇಕು. ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗುವುದರಿಂದ ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸಲು ಗ್ರಾಮಗಳಲ್ಲಿ
ವ್ಯಾಪಕವಾಗಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ವೈಯಕ್ತಿಕ ಶೌಚಾಲಯಗಳ ಫಲಾನುಭವಿಗಳ ಅರ್ಜಿಗಳ ಪರಿಶೀಲನೆ ಮಾಡುವದಲ್ಲದೆ ಕಾರ್ಯಾದೇಶ ನೀಡಲು ಬಾಕಿ ಇರುವ ಗ್ರಾ.ಪಂ. ಗಳಿಗೆ ಒಂದು ವಾರದೊಳಗೆ ಈ ಕಾರ್ಯಪೂರ್ಣಗೊಳಿಸಬೇಕು. ಅಥಣಿ, ಬೈಲಹೊಂಗಲ, ಹುಕ್ಕೇರಿ ಮತ್ತು ಮೂಡಲಗಿ ತಾಲೂಕಿನಲ್ಲಿರುವ ಎಲ್ಲ ಸಮುದಾಯ ಶೌಚಾಲಯಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈಗಾಗಲೇ ಪ್ರತಿ ತಾಲೂಕುಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಆಯಾ ನೋಡಲ್‌ ಅಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿ, ತಾಲೂಕಾ ಮಟ್ಟದ ಸಭೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ ರವಿ ಎನ್‌. ಬಂಗಾರೆಪ್ಪನವರ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ
ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next