Advertisement

ಸಂದಿ-ಗೊಂದಿ, ಬೋಳು-ಗಲ್ಲಿಗಳೇ ಜೀವಾಳ

07:07 PM Aug 30, 2021 | Team Udayavani |

ವರದಿ: ಭೈರೋಬಾ ಕಾಂಬಳೆ

Advertisement

ಬೆಳಗಾವಿ: ನಗರದ ಹೃದಯ ಭಾಗವೇ ಆಗಿರುವ ಈ ವಾರ್ಡುಗಳು ಇನ್ನೂ ತನ್ನ ಹಳೆಯ ವೈಶಿಷ್ಟ್ಯವನ್ನೇ ಇಟ್ಟುಕೊಂಡು ಮುಂದುವರಿದಿದ್ದು, ಗಿಜಿಗಿಡುವ ಪಕ್ಕಾ ಮಾರುಕಟ್ಟೆಯಲ್ಲಿಯೇ ಉಳಿದಿರುವ ಈ ವಾರ್ಡುಗಳು ನಗರ ಪ್ರದೇಶದಲ್ಲಿದ್ದರೂ ಗಲ್ಲಿಗಳ ಸ್ವರೂಪವನ್ನೇ ಹೊಂದಿವೆ.

ಸಂದಿ-ಗೊಂದಿ, ಬೋಳು-ಗಲ್ಲಿ, ಓಣಿಗಳ ಪರಿಕಲ್ಪನೆಯೇ ಇಲ್ಲಿಯ ಜೀವಾಳ. ಒಂದೆಡೆ ಮಾರ್ಕೆಟ್‌ನ ಗಲಿಬಿಲಿ ಹಾಗೂ ಇನ್ನೊಂದೆಡೆ ಜನಜೀವನದ ಧಾವಂತ ಇರುವಾಗಲೇ ಈಗ ಮತ್ತೂಂದು ಚುನಾವಣೆಗೆ ಸಿದ್ಧರಾಗಿದ್ದಾರೆ ಇಲ್ಲಿಯ ನಿವಾಸಿಗಳು.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡುಗಳ ಪೈಕಿ 1ರಿಂದ 10 ವಾರ್ಡುಗಳು ಪಕ್ಕಾ ಹೃದಯ ಭಾಗದಲ್ಲಿವೆ. ಕನ್ನಡ-ಮರಾಠಿ ಭಾಷಿಕರನ್ನು ಒಳಗೊಂಡಿರುವ ಈ ಪ್ರದೇಶಕ್ಕೆ ಭಾಷಾ ವಿವಾದ ಜೊತೆಗೆ ಜೊತೆಗೆ ಹಿಂದೂ-ಮುಸ್ಲಿಂ ಸಮುದಾಯಯ ಹೆಚ್ಚಾಗಿ ಇರುವುದರಿಂದ ಕೋಮು ಗಲಭೆಯ ಹಣೆ ಪಟ್ಟಿಯೂ ಇದೆ. ಆದರೆ ಇತ್ತೀಚಿನ ಒಂದೆರಡು ವರ್ಷಗಳಿಂದ ಕೋಮು ಸಂಘರ್ಷದಿಂದ ಮುಕ್ತವಾಗಿದೆ. ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಈ ಜನರಿಗೆ ಸ್ಮಾರ್ಟ್‌ ಸಿಟಿಯ ಪಟ್ಟವಂತೂ ಹೆಸರಿಗಷ್ಟೇ ಆಗಿದೆ.

ಸ್ಮಾರ್ಟ್‌ ಸಿಟಿಯಂತೂ ಇತ್ತ ಸುಳಿದಿಲ್ಲ: ಬೆಳಗಾವಿ ನಗರದ ಕೇಂದ್ರ ಬಸ್‌ ನಿಲ್ದಾಣ ದಾಟಿ ಸ್ವಲ್ಪ ದೂರ ಸಾಗಿದರೆ ಸಾಕು ಈ 1ರಿಂದ 10 ವಾರ್ಡುಗಳ ದರ್ಶನ ಆಗುತ್ತದೆ. ಉತ್ತರ ಮತ ಕ್ಷೇತ್ರದಲ್ಲಿಯೇ ಇರುವ ವಾರ್ಡುಗಳಿಗೆ ಇನ್ನೂ ಅಭಿವೃದ್ಧಿ ಮರೀಚಿಕೆ ಆಗಿದೆ. ಮಾಸ್ಟರ್‌ ಪ್ಲಾನ್‌ನಲ್ಲಿ ಈ ವಾರ್ಡುಗಳು ಅಭಿವೃದ್ಧಿ ಆಗಿದ್ದರೂ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಸ್ಮಾರ್ಟ್‌ ಸಿಟಿ ಎಂಬ ಮಹತ್ವಾಕಾಂಕ್ಷೆ ಯೋಜನೆ ಬೆಳಗಾವಿ ನಗರಕ್ಕೆ ಬಂದು ತಲುಪಿದ್ದರೂ ಈ ವಾರ್ಡ್‌ಗಳಿಗೆ ಸಂಬಂಧವೇ ಇಲ್ಲದಂತಿದೆ. ಇನ್ನೂ ಅನೇಕ ಪ್ರದೇಶಗಳಿಗೆ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ತಲುಪುವುದು ಯಾವಾಗ ಎಂಬುದೇ ಈ ಭಾಗದ ಜನರ ಪ್ರಮುಖ ಪ್ರಶ್ನೆಯಾಗಿದೆ.

Advertisement

ಶೆಟ್ಟಿ ಗಲ್ಲಿಯಿಂದ ಹಿಡಿದು ಆರಂಭವಾಗುವ ವಾರ್ಡುಗಳು ಶನಿವಾರ ಕೂಟ, ಮೆಣಸಿ ಗಲ್ಲಿ, ಖಡೇಬಜಾರ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಖಂಜರ ಗಲ್ಲಿ, ಭಡಕಲ್‌ ಗಲ್ಲಿ, ಖಡಕ್‌ ಗಲ್ಲಿ, ಶನಿಮಂದಿರ, ಕಾಕತಿ ವೇಸ್‌, ರಿಸಾಲ್ದಾರ ಗಲ್ಲಿ, ಕೋರ್ಟ್‌ ಏರಿಯಾ, ಅನಂತಶಯನ ಗಲ್ಲಿ, ಟಿಳಕ ಚೌಕ್‌, ಸಮಾದೇವಿ ಗಲ್ಲಿ, ಕಿರ್ಲೋಸ್ಕರ್‌ ರೋಡ್‌, ಚನ್ನಮ್ಮ ವೃತ್ತ, ಚವಾಟ ಗಲ್ಲಿ, ದರ್ಬಾರ ಗಲ್ಲಿ, ಟೋಪಿ ಗಲ್ಲಿ, ಜತೆಗೆ ದಕ್ಷಿಣ ಮತಕ್ಷೇತ್ರದ ವಾರ್ಡ್‌ 10ರಲ್ಲಿ ಕಪಿಲೇಶ್ವರಕಾಲೋನಿಯಿಂದ ಹಿಡಿದು ತಾನಾಜಿ ಗಲ್ಲಿ, ಮಹಾದ್ವಾರ ರೋಡ್‌ ಕ್ರಾಸ್‌, ಪಾಟೀಲ ಮಾಳ ಕ್ರಾಸ್‌, ರೈಲ್ವೆ ಗೇಟ್‌ ದಕ್ಷಿಣ ಭಾಗದವರೆಗೂ ಈ ವಾರ್ಡುಗಳು ವ್ಯಾಪಿಸಿಕೊಂಡಿವೆ.

ಕಿರಿದಾದ ರಸ್ತೆಯ ಓಣಿಗಳು: ಸಂದಿ-ಗೊಂದಿ, ಬೋಳು, ಗಲ್ಲಿ-ಓಣಿ, ಕಿರಿದಾದ ರಸ್ತೆಗಳಿದಲೇ ಕೂಡಿರುವ ಈ ಭಾಗದಲ್ಲಿ ಪಾರ್ಕಿಂಗ್‌ ಸಮಸ್ಯೆಯಂತೂ ಹೇಳತೀರದಾಗಿದೆ. ಜನವಸತಿ ಹೆಚ್ಚಾಗಿರುವುದರಿಂದ ಮನೆಗೆ ಕಂಪೌಂಡ್‌ಗಳಿಲ್ಲದೇ ಮನೆ ಎದುರಿನ ರಸ್ತೆ ಮೇಲೆಯೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತದೆ. ಒಂದೊಂದು ಓಣಿಯಂತೂ ನಾಲ್ಕು ಚಕ್ರದ ವಾಹನಗಳು ಹೋಗಲಾರದಷ್ಟುಕಿರಿದಾದ ರಸ್ತೆಹೊಂದಿವೆ.ಟೋಪಿಗಲ್ಲಿ,ಚವಾಟ ಗಲ್ಲಿ, ಖಡಕ್‌ ಗಲ್ಲಿ, ಶೆಟ್ಟಿ ಗಲ್ಲಿಯಲ್ಲಿ ದೊಡ್ಡದಾದ ವಾಹನಗಳಿಗೆ ಹೋಗಲು ಅಗಲವಾದ ರಸ್ತೆಗಳು ಇಲ್ಲದಿರುವುದು ಈ ಭಾಗ ಸ್ಮಾರ್ಟ್‌ ಆಗಲು ಹೇಗೆ ಸಾಧ್ಯ ಎಂಬುದೇ ಬಹುತೇಕ ನಾಗರಿಕರ ಪ್ರಶ್ನೆ. ಮಾಸ್ಟರ್‌ ಪ್ಲ್ಯಾನ್‌ ಎಂಬುದೇ ಇಲ್ಲಿ ಗಗನಕುಸುಮವಾಗಿದೆ. ಮಾಸ್ಟರ್‌ ಪ್ಲಾ ಪ್ಲ್ಯಾನ್‌ ಅಡಿ ಕೆಲವೇ ಪ್ರದೇಶಗಳಲ್ಲಿ ಮಾತ್ರ ರಸ್ತೆ ಅಗಲೀಖರಣ, ಚರಂಡಿ ಹಾಗೂ ಕಾಲುವೆಗಳ ನಿರ್ಮಾಣ ಆಗಿದ್ದು ಬಿಟ್ಟರೆ ಇನ್ನುಳಿದ ಭಾಗದಲ್ಲಿ ಇಲ್ಲಿ ಯಾವುದೇ ಅಂಥ ಶಾಶ್ವತ ಕೆಲಸಗಳೇ ಆಗಿಲ್ಲ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದ ಮೂಲಕ ಕಾಲೇಜು ರಸ್ತೆವರೆಗೆ ಮಾಸ್ಟರ್‌ ಪ್ಲ್ಯಾನ್‌ ಅಡಿಯಲ್ಲಿ ರಸ್ತೆ ಅಗಲೀಕರಣ ಆಗಿದೆ. ಈ ರಸ್ತೆಗಳೇ ಈಗ ಬಹುತೇಕ ಕಿರಿದಾಗುತ್ತಿವೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಮಾಸ್ಟರ್‌ ಪ್ಲ್ಯಾನ್‌ ಕೆಲಸ ಆಗಿಲ್ಲ ಎಂಬಂತೆ ಭಾಸವಾಗುತ್ತದೆ. ಇನ್ನು ಮುಂದೆ ಮಾಸ್ಟರ್‌ ಪ್ಲ್ಯಾನ್‌ ಆಗುವುದು ಕಷ್ಟಕರವಾಗಿದೆ. ಖಡೇಬಜಾರ್‌ ಒಂದು ಬಿಟ್ಟರೆ ಇನ್ನುಳಿದ ಯಾವ ಪ್ರದೇಶದಲ್ಲೂ ಮಾಸ್ಟರ್‌ ಪ್ಲ್ಯಾನ್‌ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next