Advertisement

Belagavi: ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿ-ಗೃಹಸಚಿವ ಜಿ.ಪರಮೇಶ್ವರ್‌

05:41 PM Nov 21, 2023 | Team Udayavani |

ಬೆಳಗಾವಿ: ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳು ಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್‌ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಪೊಲೀಸ್‌ ಆಯುಕ್ತಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸಾಮಾಜಿಕ ಜಾಲತಾಣ ನಿಗಾ ಘಟಕ, ನಿಯಂತ್ರಣ ಕೊಠಡಿಗಳನ್ನು ವೀಕ್ಷಿಸಿದ ನಂತರ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.

ಸಾಮಾಜಿಕ ಜಾಲತಾಣಗಳ ನಿಗಾ ಘಟಕಕ್ಕೆ ಭೇಟಿ ನೀಡಿದ ಅವರು, ಆಕ್ಷೇಪಾರ್ಹ ಮಾಹಿತಿ, ಸುಳ್ಳುಸುದ್ದಿಗಳು ಬಂದಾಗ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಿದರು.

ನಂತರ ನಗರ ನಿಯಂತ್ರಣ ಕೊಠಡಿ ಹಾಗೂ ವೈರ್‌ಲೆಸ್‌ ವಿಭಾಗದ ಕಾರ್ಯಚಟುವಟಿಕೆಗಳು ಹಾಗೂ ದಾಖಲೆ ಕೊಠಡಿಯನ್ನು ವೀಕ್ಷಿಸಿದ ಅವರು, ನಿಯಂತ್ರಣ ಕೊಠಡಿಗೆ ಬರುವ ಕರೆಗಳು ಹಾಗೂ ಮಾಹಿತಿಯ ಪ್ರತಿಯೊಂದು ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಕಟ್ಟಲು ಏಳು ದಿನಗಳ ಕಾಲಾವಕಾಶ ನೀಡಬೇಕು. ಇದಾದ ಬಳಿಕ ನ್ಯಾಯಾಲಯದಿಂದ ಸಮನ್ಸ್‌ ಹೋಗಬೇಕು. ಆಗಲೂ ದಂಡ ಕಟ್ಟದಿದ್ದರೆ ಅಥವಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ವಾಹನ ವಶಪಡಿಸಿಕೊಳ್ಳಬೇಕು ಎಂದು ಗೃಹ ಸಚಿವರು ನಿರ್ದೇಶನ ನೀಡಿದರು.

Advertisement

ನಂತರ ಬೆಳಗಾವಿ ನಗರದ ವಿವಿಧ ವೃತ್ತಗಳು ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ಅವರು, ಸಿಸಿಟಿವಿ ಮೇಲೆ ನಿಗಾವಹಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಯೊಂದು ಕ್ಯಾಮೆರಾ
ಅಳವಡಿಸಿರುವ ವೃತ್ತ ಮತ್ತು ರಸ್ತೆ ಕುರಿತು ಸಂಪೂರ್ಣ ಮಾಹಿತಿ ಇರಬೇಕು. ಇದಲ್ಲದೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೇಲೆ ಕೂಡ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

ಪೊಲೀಸ್‌ ಆಯುಕ್ತರಾದ ಎಸ್‌.ಎನ್‌. ಸಿದ್ದರಾಮಪ್ಪ ಅವರು, ವಿವಿಧ ಘಟಕಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿ ಸಾಮಾಜಿಕ ಜಾಲತಾಣ ನಿಗಾ ಘಟಕವು ಕ್ರಿಯಾಶೀಲವಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. ಇತ್ತೀಚೆಗೆ ಪ್ರಕರಣಗಳನ್ನು ಕೂಡ ದಾಖಲಿಸಲಾಗಿದೆ ಎಂದರು.

ನಗರದಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಪೋಸ್ಟ್‌ಗಳು, ಕೋಮುಭಾವನೆ ಕೆರಳಿಸುವ ಪೋಸ್ಟ್‌, ಪ್ರಚೋದಾತ್ಮಕ ಹೇಳಿಕೆ, ಘಟನೆಗಳು ಕಂಡುಬಂದರೆ ಕೂಡಲೇ ಐಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಡಿಸಿಪಿ ರೋಹನ್‌ ಜಗದೀಶ್‌ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್‌ ಗುಳೇದ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧೀಕ್ಷಕ ಡಾ| ರವೀಂದ್ರ ಗಡಾದಿ, ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಸ್ನೇಹಾ,
ನಗರ ಪೊಲೀಸ್‌ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂಡಲಗಾ ಜೈಲು ಆಧುನೀಕರಣ ಬೆಳಗಾವಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಬೆಳಗಾವಿಯ ಹಿಂಡಲಗಾ
ಕಾರಾಗೃಹವನ್ನು ಆಧುನೀಕರಣಗೊಳಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಹಿಂಡಲಗಾ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜೈಲಿನ ಅವಶ್ಯಕತೆ, ಬ್ಯಾರೆಕ್‌ಗಳಲ್ಲಿ ಕ್ಯಾಮೆರಾ, ಜಾಮರ್‌ ಗಳು ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಆಧುನಿಕತೆಗೆ ತಕ್ಕಂತೆ ಸೌಲಭ್ಯ ನೀಡಲಾಗುವುದು ಎಂದರು.

ಇದೇ ಕಾರಾಗೃಹದಿಂದ ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ ಬಂದ ಪ್ರಕರಣದ ಹಿನ್ನೆಲೆಯಲ್ಲಿ ಈ ರೀತಿ ಮುಂದೆ ಆಗದಂತೆ ಕ್ರಮ ವಹಿಸಲಾಗುವುದು.ಹಿಂಡಲಗಾ ಕಾರಾಗೃಹ ರಾಜ್ಯದಲ್ಲೇ ಹೈ ಸೆಕ್ಯುರಿಟಿ ಇರುವ ಜೈಲು. ಅದಕ್ಕೆ ಜೈಲಿಗೆ ಬೇಕಾದ ಸೌಲಭ್ಯ ಕೊಡಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಜೈಲಿನ ಮುಂಭಾಗದಲ್ಲಿ ಕೈದಿಗಳ ಭೇಟಿಗೆ ಬಂದಿದ್ದ ಸಂಬಂಧಿಕರ ಜೊತೆಗೆ ಎಷ್ಟು ಗಂಟೆಗೆ ಒಳಗೆ ಬಿಡುತ್ತಾರೆ. ಎಲ್ಲಾ ವ್ಯವಸ್ಥೆ ಸರಿ ಇದೆಯಾ ಎಂಬುದರ ಬಗ್ಗೆ ಮಾಹಿತಿ ಪಡೆದು, ನಂತರ ಕೈದಿಗಳಿಂದ ಹಾಗೂ ಜೈಲಿನಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಜೈಲಿನ ಒಳಗಡೆ ಮೊಬೈಲ್‌ ಹೇಗೆ ಬರುತ್ತಿವೆ ಎಂದು ಅಧಿಕಾರಿಗಳಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next