Advertisement

2014ರ ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರವೇ ಆದ್ಯತೆ: ಶಿಮ್ಲಾ ರ್‍ಯಾಲಿಯಲ್ಲಿ ಮೋದಿ ಟೀಕೆ

10:32 PM May 31, 2022 | Team Udayavani |

ಶಿಮ್ಲಾ/ಗಾಂಧಿನಗರ: ಭ್ರಷ್ಟಾಚಾರ ಎನ್ನುವುದು 2014ರ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರದ ಪ್ರಧಾನ ಅಂಶವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರೋಡ್‌ ಶೋ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆಯ ನಿಲುವು ತಳೆಯಲಾಗಿತ್ತು ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. “ನಮ್ಮ ದೇಶದ ಗಡಿಗಳು 2014ಕ್ಕಿಂತಲೂ ಈಗ ಸುರಕ್ಷಿತವಾಗಿವೆ’ ಎಂದು ಹೇಳಿದ್ದಾರೆ ಪ್ರಧಾನಿ.

ನಕಲಿಗಳಿಗೆ ಆಟಕ್ಕೆ ಕಡಿವಾಣ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ 9 ಕೋಟಿ ನಕಲಿ ಹೆಸರು ಮತ್ತು ವಿವರಗಳನ್ನು ಪತ್ತೆ ಹಚ್ಚಲಾಗಿದೆ. ಇಂಥ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಥವಾ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ಯೋಜನೆಗಳ ಲಾಭವನ್ನು ಅರ್ಹರಿಗೇ ಸಲ್ಲುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2014ರ ಹಿಂದೆ ಭ್ರಷ್ಟಾಚಾರ ಎನ್ನುವುದು ಸರ್ಕಾರದ ಅವಿಭಾಜ್ಯ ಅಂಗವಾಗಿತ್ತು ಎಂದೂ ಹೇಳಿದ್ದಾರೆ.

Advertisement

ಕೊರೊನಾ ಪರಿಸ್ಥಿತಿ ಸೂಕ್ತ ನಿರ್ವಹಣೆ
ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ ಪ್ರಧಾನಿ. ದೇಶದಲ್ಲಿ ಇದುವರೆಗೆ 200 ಕೋಟಿ ಡೋಸ್‌ ಲಸಿಕೆಗಳನ್ನು ವಿತರಿಸಲಾಗಿದೆ. ಜತೆಗೆ ವಿದೇಶಗಳಿಗೆ ಕೂಡ ಲಸಿಕೆಗಳನ್ನು ರಫ್ತು ಮಾಡಲಾಗಿದೆ ಎಂದು ಘೋಷಿಸಿದ್ದಾರೆ ಪ್ರಧಾನಿ. ದೇಶಕ್ಕೆ ಕೊರೊನಾ ಲಸಿಕೆಗಳನ್ನು ನೀಡುವಲ್ಲಿ ಹಿಮಾಚಲ ಪ್ರದೇಶದ ಬಡ್ಡಿ ಕೈಗಾರಿಕಾ ಪ್ರದೇಶದ ಯೋಗದಾನ ಮಹತ್ವದ್ದು ಎಂದು ಕೊಂಡಾಡಿದ್ದಾರೆ.

ಪ್ರಧಾನ ಸೇವಕ:
“ನಾನು ದೇಶದ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸೇವಕ’ ಎಂದು ನರೇಂದ್ರ ಮೋದಿ ಹೇಳಿಕೊಂಡರು. ಬಿಲಾಸ್‌ಪುರದಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ಮಾಣವಾಗುತ್ತಿರುವುದರ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ದೇಶದ ಪ್ರತಿ ಜಿಲ್ಲೆಯಲ್ಲಿ ಕೂಡ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

ಮುದ್ರಾ ಯೋಜನೆಯಿಂದ ಲಾಭ
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಿಂದ ಬಹಳಷ್ಟು ಲಾಭವಾಗಿದೆ ಎಂದು ಗುಜರಾತ್‌ನ ಮೆಹಸಾನಾ ಜಿಲ್ಲೆಯ ಅರವಿಂದ ಪಟೇಲ್‌ ಎಂಬುವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ಮುದ್ರಾ ಯೋಜನೆ ಬಗ್ಗೆ ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಯೋಜನೆಯಿಂದಾಗಿ ತಮಗೆ 7.20 ಲಕ್ಷ ರೂ. ಸಾಲ ಸಿಕ್ಕಿತು. ಇದರಿಂದಾಗಿ ಮದುವೆ ಕಾರ್ಯಕ್ರಮಗಳಿಗೆ ವಿನ್ಯಾಸ ಮಾಡುವ ಮಳಿಗೆ ತೆರೆದೆ ಎಂದು ಹೇಳಿಕೊಂಡರು. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ “ನೀವು ಉದ್ಯೋಗ ಬೇಡುವ ಬದಲು, ಉದ್ಯೋಗ ನೀಡುವವರಾಗಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

22 ಲಕ್ಷ ಕೋಟಿ ರೂ. ಖಾತೆಗೆ:
ಕೇಂದ್ರ ಸರ್ಕಾರದ ವಿವಿಧ ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಮೂಲಕ ಸಿಗಬಹುದಾದ ನಗದು ಮೊತ್ತವನ್ನು ಫ‌ಲಾನುಭವಿಗಳ ಖಾತೆಗೇ ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದುವರೆಗೆ ಒಟ್ಟು 22 ಲಕ್ಷ ಕೋಟಿ ರೂ. ಮೊತ್ತವನ್ನು ಫ‌ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದರು. ದೇಶದಲ್ಲಿ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದೂ ಪ್ರಧಾನಿ ಹೇಳಿಕೊಂಡಿದ್ದಾರೆ. ಅದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳೂ ಕೂಡ ಒಪ್ಪಿಕೊಂಡಿವೆ ಎಂದರು.

10 ಕೋಟಿ ಮಂದಿಗೆ 21 ಸಾವಿರ ಕೋಟಿ ವರ್ಗಾವಣೆ
ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌) ಯೋಜನೆಯ ಅಡಿ 10 ಕೋಟಿ ರೈತರಿಗೆ ಪ್ರಧಾನಿ ಮೋದಿಯವರು 21 ಸಾವಿರ ಕೋಟಿ ರೂ. ಮೊತ್ತವನ್ನು ಅವರವರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಯೋಜನೆಯ ಹನ್ನೊಂದನೇ ಕಂತಿನ ಮೊತ್ತ ಇದಾಗಿದೆ. ಜತೆಗೆ ಫ‌ಲಾನುಭವಿಗಳ ಜತೆಗೆ ಸಂವಾದವನ್ನೂ ನಡೆಸಿದ್ದಾರೆ.

ಭಾವನೆಗಳ ಬೆಸೆದ “ಭಾವಚಿತ್ರ’
ಶಿಮ್ಲಾದಲ್ಲಿ ರ್‍ಯಾಲಿ ಮುಗಿಸಿ ವಾಪಸ್‌ ಹೊರಡುವಾಗ ಮೋದಿ, ತಮ್ಮ ಕಾರನ್ನು ನಿಲ್ಲಿಸಿ, ಜನಜಂಗುಳಿಯಲ್ಲಿ ಮೋದಿಯವರತ್ತ ಕೈ ಬೀಸುತ್ತಾ ನಿಂತಿದ್ದ ಒಬ್ಬ ಯುವತಿಯ ಬಳಿಗೆ ಸಾಗಿಹೋಗಿ ಆಕೆಯ ಕೈಯ್ಯಲ್ಲಿದ್ದ ಚಿತ್ರವನ್ನು ಪಡೆದು ಆಕೆಗೆ ಆಶೀರ್ವದಿಸಿದ ಹೃದಯಂಗಮ ಸನ್ನಿವೇಶವೊಂದು ಜರುಗಿತು.

ಆಕೆಯ ಕೈಯ್ಯಲ್ಲಿದ್ದ ಚಿತ್ರ ಮೋದಿಯವರದ್ದೇನಲ್ಲ! ಮೋದಿಯವರ ತಾಯಿ ಹೀರಾಬೆನ್‌ ಅವರ ಪೆನ್ಸಿಲ್‌ ಸ್ಕೆಚ್‌ ಅದಾಗಿತ್ತು. ಕಾರಿನಲ್ಲಿ ಕುಳಿತು ಜನರತ್ತ ಕೈಬೀಸುತ್ತಾ ಸಾಗಿದ ಮೋದಿಯವರು ಕಾರು ನಿಲ್ಲಿಸಿ ಹೋಗಿ ಆ ಸ್ಕೆಚ್‌ ಅನ್ನು ಹತ್ತಿರದಿಂದ ನೋಡುವಂತಾಗಲು ಆಕೆಯ ಸ್ಕೆಚ್‌ನಲ್ಲಿರುವ ನೈಪುಣ್ಯತೆಯೇ ಕಾರಣ.

ಯುವತಿಯನ್ನು ಹತ್ತಿರದಿಂದ ಮಾತನಾಡಿಸಿದ ಅವರು, ಆ ಭಾವಚಿತ್ರವನ್ನು ಬರೆಯಲು ಎಷ್ಟು ದಿನ ಬೇಕಾಯಿತು ಎಂದು ಹಿಂದಿಯಲ್ಲಿ ಕೇಳಿದರು. ಅದನ್ನು ತಾನು ಒಂದು ದಿನದಲ್ಲಿ ಬರೆದಿರುವುದಾಗಿ ಆ ಯುವತಿ ತಿಳಿಸಿದರು.
ಆನಂತರ, ಆ ಚಿತ್ರವನ್ನು ಯುವತಿಯಿಂದ ಪಡೆದು ಆಕೆಗೆ ಧನ್ಯವಾದ ತಿಳಿಸಿದ ಅವರು, ತಮ್ಮ ಕೈಯ್ಯನ್ನು ಆಕೆಯ ತಲೆಯ ಮೇಲಿಟ್ಟು ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next