Advertisement

ಅಂತರ್ಜಾಲ ಬಳಕೆಯಲ್ಲಿ ಹೆಚ್ಚಿನ ಎಚ್ಚರವಿರಲಿ 

06:20 AM Jul 15, 2018 | |

ಉಡುಪಿ: ತಂತ್ರಜ್ಞಾನ ಬೆಳೆಯುತ್ತಿರುವಂತೆ  ಇದನ್ನು  ಬಳಸಿಕೊಂಡು ನಡೆಯುವ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಂತರ್ಜಾಲ ಅರಿತ ಸೈಬರ್‌ ಕ್ರೈಂ ಭೇದಿಸುವುದು ಪೊಲೀಸರಿಗೂ ಸವಾಲು. ಹಾಗಾಗಿ ಅಂತರ್ಜಾಲ ಸೇರಿದಂತೆ ಸಾಮಾಜಿಕ ಜಾಲತಾಣಗಳಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಅತ್ಯಂತ ಹೆಚ್ಚಿನ ಜಾಗರೂಕತೆ , ಎಚ್ಚರಿಕೆ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ. ಹೇಳಿದರು. 

Advertisement

ಶನಿವಾರ ಪೊಲೀಸ್‌ ಇಲಾಖೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಸೈಬರ್‌ ಅಪರಾಧಗಳ ತನಿಖೆ ಕುರಿತಾದ ಕಾರ್ಯಾಗಾರ  ಉದ್ಘಾಟಿಸಿ ಅವರು ಮಾತನಾಡಿದರು. 

ಇ-ಮೇಲ್‌, ಫೇಸ್‌ಬುಕ್‌ ಮೊದಲಾದವುಗಳ ಬಳಕೆಯ ಸಂದರ್ಭದಲ್ಲಿ ಅವಸರ ಸಲ್ಲದು. ಅಪರಿಚಿತರೊಂದಿಗೆ ಸಂವಹನ ನಡೆಸುವುದರಿಂದ ಅನಾಹುತಗಳ ಸಾಧ್ಯತೆ ಹೆಚ್ಚು. ಮಕ್ಕಳ ಮೇಲೆ ಸಾಮಾಜಿಕ ಜಾಲತಾಣ ದುಷ್ಪರಿಣಾಮ ಬೀರುತ್ತವೆ. ಜತೆಗೆ ವಯೋವೃದ್ಧರು ಮೋಸ ಹೋಗುವ ಸಾಧ್ಯತೆಗಳೂ ಅಧಿಕ. ಎಚ್ಚರಿಕೆಯಿಂದ ಬಳಕೆ ಮಾಡಿದರೆ ಮಾತ್ರ ಸುರಕ್ಷಿತವಾಗಿರುತ್ತದೆ. ಬ್ಯಾಂಕ್‌ ಅಧಿಕಾರಿಗಳೆಂದು ಕರೆ ಮಾಡಿ ವಂಚಿಸುವುದು, ಬಹುಮಾನ ಗೆದ್ದುಕೊಂಡ ಬಗ್ಗೆ ಜಾಹೀರಾತು ನೀಡಿ ಮೋಸ ಮಾಡುವುದು ಮೊದಲಾದವುಗಳು ಹೆಚ್ಚುತ್ತಿವೆ ಎಂದು ನ್ಯಾಯಾಧೀಶರು ಹೇಳಿದರು. 

ಮನೆಯಿಂದಲೇ ಆರಂಭವಾಗಲಿ
ಸೈಬರ್‌ ಅಪರಾಧ ನಿಯಂತ್ರಿಸುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಕಾಯಿದೆ ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿಗಳು ಕೂಡ ಆಗಿವೆ. ಹಲವಾರು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ ಸೈಬರ್‌ ಕ್ರೈಂ ವಿರುದ್ಧದ ಹೋರಾಟ ಮನೆಯಿಂದಲೇ ಆರಂಭವಾಗಬೇಕು. ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಾಧೀಶರು ಹೇಳಿದರು.

ಅಸಾಧ್ಯವಲ್ಲ,ಕಠಿನ
ಸೈಬರ್‌ ಕ್ರೈಂಗಳನ್ನು ಪತ್ತೆ ಹಚ್ಚುವುದು ಅಸಾಧ್ಯ ವೇನಲ್ಲ, ಆದರೆ ಕಷ್ಟಸಾಧ್ಯ. ಸೈಬರ್‌ ಕ್ರೈಂ ಸಮಸ್ಯೆ ಎಲ್ಲ ದೇಶಗಳಲ್ಲಿಯೂ ಇದೆ. ಹೊಸ ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ದುಬೈನಲ್ಲಿ ನಡೆದಿರುವ ಹ್ಯಾಕರ್‌ಗಳ ಸಮ್ಮೇಳನವೇ ಇದಕ್ಕೆ ಸಾಕ್ಷಿ. ಜನತೆ ವಂಚನೆ ಆಗುವ ಮೊದಲೇ ಎಚ್ಚರವಾಗಬೇಕು. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅಧಿಕ ಹಣದ ಆಸೆಯೇ ಮೋಸ ಹೋಗಲು ಕಾರಣವಾಗಿರುತ್ತದೆ ಎಂದರು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾ, ಸರಕಾರಿ ಅಭಿಯೋಜಕಿ ಶಾಂತಿ  ಬಾೖ ಮುಖ್ಯ ಅತಿಥಿಗಳಾಗಿದ್ದರು. ಸಹಾಯಕ (ಹಿರಿಯ) ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್‌, ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್‌ ಉಪಸ್ಥಿತರಿದ್ದರು. ಮೈಸೂರು ಕೆ.ಪಿ.ಎ. ಸೈಬರ್‌ ಕ್ರೈಂ ಲಾ ಮತ್ತು ಸೆಕ್ಯುರಿಟಿ ಟ್ರೈನರ್‌ ಡಾ| ಅನಂತ ಪ್ರಭು, ಫ್ಲೋರಿಡಾ ವಿ.ವಿ. ಸಹಾಯಕ ಪ್ರಾಧ್ಯಾಪಕ ಪ್ರೊ| ವರದರಾಜ್‌, ಅಪರ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿ ಕುಮಾರಸ್ವಾಮಿ ವಂದಿಸಿದರು.

ಪೊಲೀಸರು ತಜ್ಞರ ನೆರವು ಪಡೆಯಿರಿ
ಸೈಬರ್‌ ಕ್ರೈಂಗಳ ತನಿಖೆಯ ಸಂದರ್ಭದಲ್ಲಿ ಪೊಲೀಸರು ತಮ್ಮಲ್ಲೇ ಇರುವ ತಜ್ಞರ ನೆರವು ಪಡೆದುಕೊಳ್ಳಬೇಕು. ಆಗ ಮಾತ್ರ ತನಿಖೆ ಸಮರ್ಪಕವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. ಅಂತೆಯೇ ಅಮಾಯಕರು ಶಿಕ್ಷೆಗೊಳಗಾಗುವುದು ತಪ್ಪುತ್ತದೆ. 
– ವೆಂಕಟೇಶ್‌ ನಾಯ್ಕ ಟಿ.,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next