Advertisement

ಶಾಲಾ-ಕಾಲೇಜುಗಳಲ್ಲಿ ಜ್ಞಾನಾರ್ಜನೆಗಿರಲಿ ಪ್ರಾಶಸ್ತ್ಯ

06:09 PM Feb 22, 2022 | Team Udayavani |
- ವಿದ್ಯಾ ಅಮ್ಮಣ್ಣಾಯ, ಕಾಪುಶಿಸ್ತು ಪಾಲನೆ ಹಾಗೂ ಸಮಾನತೆಯ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡು ಬಂದ ನಿಯಮ. ಬೇರೆ ಬೇರೆ ಕಾಲೇಜುಗಳು ವಿದ್ಯಾರ್ಥಿಗಳ ಅನುಕೂಲತೆಗಳನ್ನು ಆಧರಿಸಿಕೊಂಡು ಬೇರೆ ಬೇರೆ ರೀತಿಯ ಸಮವಸ್ತ್ರವನ್ನು ಕಡ್ಡಾಯಗೊಳಿಸುತ್ತವೆ. ಸಮವಸ್ತ್ರ ಬೇಡ ಎಂದು ಯಾವ ವಿದ್ಯಾರ್ಥಿಗಳೂ ಹೇಳುವುದಿಲ್ಲ ಕಾರಣ ಅವರಿಗೂ ಅದರಿಂದ ಅನುಕೂಲತೆಗಳೇ ಹೆಚ್ಚು. ಶ್ರೀಮಂತ ಕುಟುಂಬ ದಲ್ಲಿ ಜನಿಸಿದ ವಿದ್ಯಾರ್ಥಿಗಳು ಧರಿಸುವ ಉಡುಗೆ-ತೊಡುಗೆಗಳು ಇತರ ವಿದ್ಯಾರ್ಥಿಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು. ಎಷ್ಟೋ ಪೋಷಕರಿಗೆ ಹೆಚ್ಚು ಬಟ್ಟೆಗಳನ್ನು ಕೊಡಿ ಸಲು ಸಾಧ್ಯವಾಗದಿರಬಹುದು. ಇದರಿಂದಾಗಿ ಪೋಷಕರಿಗೆ ಅನಪೇಕ್ಷಿತ ಒತ್ತಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲದೆ ಈಗಿನ ಯುವಕ ಯುವತಿಯರು ಧರಿಸುವ ಆಧುನಿಕ...
Now pay only for what you want!
This is Premium Content
Click to unlock
Pay with

ಕಳೆದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕ ರೋಗದ ಅಬ್ಬರದಲ್ಲಿ ಶಿಕ್ಷಣ ಕ್ಷೇತ್ರ ನಲುಗಿ ಹೋಯಿತು. ಕೊರೊನಾದ ಅಲೆಗಳ ಹೊಡೆತಕ್ಕೆ ಸಿಲುಕಿ ಇಡೀ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಯಿತು. ಈಗಷ್ಟೇ ಚೇತರಿಸಿಕೊಳ್ಳತೊಡಗಿದ ಶಿಕ್ಷಣ ವ್ಯವಸ್ಥೆಗೆ ಈಗ ಮತ್ತೂಂದು ಸಾಂಕ್ರಾಮಿಕ ಅಲೆ ಬಡಿದಿದೆ. ಮೊದಲ ಅಲೆ ಜನರ ದೇಹಾರೋಗ್ಯದ ಮೇಲೆ ಪರಿಣಾಮ ಬೀರಿದರೆ ಈಗಿನ ಅಲೆ ಶಾಂತಿ ವ್ಯವಸ್ಥೆಯನ್ನು ಕೆಡಿಸತೊಡಗಿದೆ.

Advertisement

ನಮ್ಮದು ಜಾತ್ಯತೀತ ರಾಷ್ಟ್ರ. ಸರ್ವಧರ್ಮಗಳು ಸಮನ್ವಯತೆಯಿಂದ ಇದ್ದರಷ್ಟೇ ದೇಶ ಶಾಂತಿ ಯುತವಾಗಿರಲು ಸಾಧ್ಯ. ಆದರೆ ಎಲ್ಲರೂ ಸಮಾನರು ಎನ್ನುವುದು ಕೇವಲ ಹೇಳಿಕೆಗೆ, ವೇದಿಕೆಗಳಲ್ಲಿನ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಆದರೆ ವಾಸ್ತವ ಹಾಗಿಲ್ಲ. ಜಾತಿ, ಧರ್ಮ, ಹಣ, ರಾಜಕೀಯಗಳೇ ಇಲ್ಲಿ ಎಲ್ಲವನ್ನೂ ಪ್ರಭಾವಿಸುವುದು, ಇವುಗಳನ್ನು ಬೇಕಾದ ಹಾಗೆ ಬಳಸಿಕೊಳ್ಳುವ ಹಿತಾಸಕ್ತಿಗಳೇ ದೇಶದ ಪ್ರಗತಿಗೆ ಮಾರಕ.

ಕಲಿತು ಜ್ಞಾನ ಗಳಿಸಬೇಕಾದ ದೇಶದ ಯುವ ಸಂಪತ್ತು ಅನಾವಶ್ಯಕ ವಿಚಾರಗಳಲ್ಲಿ ಸಮಯ ಕಳೆಯುತ್ತಾ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ದುರಂತ. ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಸರ್ವಧರ್ಮ ಸಮನ್ವಯ ಹಾಳಾಗಲು ಯುವ ಸಮೂಹ ಕಾರಣವಾಗಬಾರದು. ಹಲವು ಭಾಷೆ, ಜಾತಿ, ಧರ್ಮ, ಜನಾಂಗ, ಸಂಸ್ಕೃತಿಗಳ ನೆಲ ಇದು. ಅದೆಷ್ಟೋ ವಿದೇಶೀ ಆಕ್ರಮಣಗಳ ಹೊರತಾಗಿಯೂ ಭಾರತ ಗಟ್ಟಿಯಾಗಿದೆ ಎಂದರೆ ಅದು ಈ ನೆಲದ ಹಿರಿಮೆ. ವಿದೇಶೀಯರ ಎದುರು ಸರಿಸಮಾನವಾಗಿ ನಾವು ನಿಲ್ಲುತ್ತಿರುವಾಗ ಇಂತಹ ಗಲಭೆಗಳು ನಮ್ಮ ದೇಶದ ಹೆಸರನ್ನು ಹಾಳು ಮಾಡದಿರದು. ದೇಶದ ಗೌರವ, ಘನತೆಯನ್ನು ಎತ್ತರಕ್ಕೆ ಕೊಂಡೊಯ್ಯಲು ಯುವಸಮೂಹ ಪ್ರಯತ್ನಿಸಬೇಕೇ ಹೊರತು ಅವನತಿಗೆ ತಳ್ಳಬಾರದು. ಆದರೆ ನಮ್ಮೆದುರು ಬೆಳೆಯುತ್ತಿರುವ ಯುವಜನತೆ ದಾರಿ ತಪ್ಪುತ್ತಿರುವುದು ಆತಂಕದ ವಿಷಯ.

ಶಿಕ್ಷಣ ಮನಸ್ಸು ಹಾಗೂ ಬುದ್ಧಿಯನ್ನು ವಿಶಾಲ ಗೊಳಿಸಬೇಕೇ ಹೊರತು ಸಂಕುಚಿತಗೊಳಿಸಬಾರದು. ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹರಿಯುವ ನದಿಯಂತಿರಬೇಕೇ ಹೊರತು ನಿಂತ ನೀರಾಗಬಾರದು. ವಿವಿಧ ಧರ್ಮ, ಜಾತಿಗಳನ್ನು ಒಳಗೊಂಡ ಈ ದೇಶದಲ್ಲಿ ಎಲ್ಲರೂ ಸಮಾನರೆಂದು ಹೇಳಲಾಗುತ್ತಿದೆ. ಅಂದರೆ ಸಾರ್ವಜನಿಕ ಜೀವನದಲ್ಲಿ ನಾವೆಲ್ಲರೂ ಸಮಾನರು. ಸಮಾನ ಅವಕಾಶ, ಸಮಾನ ಹಕ್ಕು ನಮಗಿದೆ. ನಮಗೆ ನಮ್ಮ ನಮ್ಮ ಹಕ್ಕುಗಳನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವೂ ಇದೆ ನಿಜ. ಆದರೆ ಇದರ ಜತೆಯಲ್ಲಿ ನಮ್ಮ ಕರ್ತವ್ಯಗಳನ್ನೂ ಮರೆಯಬಾರದು. ದೇಶದ ಏಕತೆಗೆ ಧಕ್ಕೆಯಾಗದಂತೆ ವರ್ತಿಸುವುದು ನಮ್ಮ ಜವಾಬ್ದಾರಿ. ಆದರೆ ಭಾಷೆ, ಜಾತಿ, ಧರ್ಮಗಳ ಆಧಾರದಲ್ಲಿ ನಾವು ಹೋಳು ಹೋಳಾಗುತ್ತಿರುವುದು ಖೇದಕರ. ಯುವ ಸಮೂಹದಲ್ಲಿ ದ್ವೇಷದ ಬೀಜ ಬಿತ್ತುವುದರಿಂದ ಮುಂದಿನ ದಿನಗಳು ಉತ್ತಮವಾಗಿರದು.

ನಮಗಿರುವ ಸ್ವಾತಂತ್ರ್ಯವನ್ನು ಎಲ್ಲಿ, ಹೇಗೆ, ಯಾವಾಗ ಬಳಸಿಕೊಳ್ಳಬೇಕು ಎಂಬ ಜ್ಞಾನವಿರದಿದ್ದರೆ ಸ್ವಾತಂತ್ರ್ಯದ ದುರುಪಯೋಗ ಆಗುವ ಸಾಧ್ಯತೆಗಳೇ ಹೆಚ್ಚು.

Advertisement

ಶಾಲಾಕಾಲೇಜುಗಳಲ್ಲಿ ಸಮವಸ್ತ್ರದ ನಿಯಮ ಬಂದಿರುವುದು ಬೆಳೆಯುವ ಮನಸ್ಸುಗಳಲ್ಲಿ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ. ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಸರಕಾರದ ಕಡ್ಡಾಯವಾದ ನಿಯಮವಲ್ಲವಾದರೂ ಸಹ ಶಿಸ್ತು ಪಾಲನೆಗೆ ಇದು ಮುಖ್ಯ. ಸಾಮಾನ್ಯವಾಗಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು ತಮ್ಮದೇ ಆದ ಸಮವಸ್ತ್ರದ ನಿಯಮವನ್ನು ಪಾಲಿಸುತ್ತವೆ. ಅದು ಸರಕಾರಿ, ಖಾಸಗಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಾಗಿರಬಹುದು. ಈಗ ಹೆಚ್ಚಿನ ಕಾಲೇಜುಗಳು ಏಕರೂಪದ ವಸ್ತ್ರ ಸಂಹಿತೆಯನ್ನು ತಾವಾಗಿಯೇ ನಿರ್ಧರಿಸಿ, ಅನುಸರಿಸುತ್ತವೆ.

ಸಮವಸ್ತ್ರ ಧಾರಣೆಯಿಂದ ತರಗತಿಯ ಎಲ್ಲ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ ವಾಗುತ್ತದೆ. ಜಾತಿ, ಧರ್ಮ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲ ಮಕ್ಕಳು ಸಮಾನರೆಂಬ ಭಾವನೆ ಯಿಂದ ಕಲಿಯಲು, ಕಲಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಏಕತೆಯ ಭಾವನೆ ಮೂಡಿ ಪರಸ್ಪರ ಸೌಹಾರ್ದತೆಯಿಂದ ಕಲಿಯಲು ಅವಕಾಶ ನೀಡುತ್ತದೆ. ಮಾತ್ರವಲ್ಲ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಹೊರಗಡೆ ಹೋದಾಗಲೂ ಅವರನ್ನು ಗುರುತಿಸಲು ಸಾಧ್ಯವಾಗುತ್ತದೆ. ಸಮವಸ್ತ್ರ ಧಾರಣೆ ವಿದ್ಯಾರ್ಥಿಗಳಲ್ಲಿ ತನ್ನಷ್ಟಕ್ಕೇ ಅರಿವಿಲ್ಲದಂತೆ ಒಂದು ಶಿಸ್ತನ್ನು ಮೂಡಿಸುತ್ತದೆ.

ಹಾಗೆಂದು ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕುರಿತು ಸರಕಾರದ ಕಾನೂನು ನಿಯಮಾವಳಿಗಳಲ್ಲಿ ಹುಡುಕಿದರೆ ಸಿಗಲಾರದು. ಇದು ಶೈಕ್ಷಣಿಕ ಸಂಸ್ಥೆಗಳು ಶಿಸ್ತು ಪಾಲನೆ ಹಾಗೂ ಸಮಾನತೆಯ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡು ಬಂದ ನಿಯಮ. ಬೇರೆ ಬೇರೆ ಕಾಲೇಜುಗಳು ವಿದ್ಯಾರ್ಥಿಗಳ ಅನುಕೂಲತೆಗಳನ್ನು ಆಧರಿಸಿಕೊಂಡು ಬೇರೆ ಬೇರೆ ರೀತಿಯ ಸಮವಸ್ತ್ರವನ್ನು ಕಡ್ಡಾಯಗೊಳಿಸುತ್ತವೆ. ಸಮವಸ್ತ್ರ ಬೇಡ ಎಂದು ಯಾವ ವಿದ್ಯಾರ್ಥಿಗಳೂ ಹೇಳುವುದಿಲ್ಲ ಕಾರಣ ಅವರಿಗೂ ಅದರಿಂದ ಅನುಕೂಲತೆಗಳೇ ಹೆಚ್ಚು. ಶ್ರೀಮಂತ ಕುಟುಂಬ ದಲ್ಲಿ ಜನಿಸಿದ ವಿದ್ಯಾರ್ಥಿಗಳು ಧರಿಸುವ ಉಡುಗೆ-ತೊಡುಗೆಗಳು ಇತರ ವಿದ್ಯಾರ್ಥಿಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು. ಎಷ್ಟೋ ಪೋಷಕರಿಗೆ ಹೆಚ್ಚು ಬಟ್ಟೆಗಳನ್ನು ಕೊಡಿ ಸಲು ಸಾಧ್ಯವಾಗದಿರಬಹುದು. ಇದರಿಂದಾಗಿ ಪೋಷಕರಿಗೆ ಅನಪೇಕ್ಷಿತ ಒತ್ತಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲದೆ ಈಗಿನ ಯುವಕ ಯುವತಿಯರು ಧರಿಸುವ ಆಧುನಿಕ ಶೈಲಿಯ ವಸ್ತ್ರಗಳು ಕಾಲೇಜಿನೊಳಗೂ ಬಂದರೆ ಶೈಕ್ಷಣಿಕ ವಾತಾವರಣವೇ ಕೆಟ್ಟು ಹೋಗುವುದು ಖಂಡಿತ.

ವಿದ್ಯಾರ್ಥಿಗಳ ನಡುವೆ ಉಡುಗೆ ತೊಡುಗೆ ಗಳಲ್ಲಿಯೇ ಆತಂಕಕಾರಿಯಾದ ಪೈಪೋಟಿ ಕಾಣಿಸಿ ಕೊಳ್ಳಬಹುದು. ಇದರ ಪರಿಣಾಮವಾಗಿ ವಿದ್ಯಾಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ಸಾಧಿಸು ವುದು ಕಷ್ಟಕರವಾಗಬಹುದು. ಈ ಎಲ್ಲ ಮುಂದಾ ಲೋಚನೆಗಳೇ ಶೈಕ್ಷಣಿಕ ಸಂಸ್ಥೆಗಳು ಸಮವಸ್ತ್ರ ನಿಯಮ ಗಳನ್ನು ಅನುಸರಿಸುವುದಕ್ಕೆ ಮುಖ್ಯ ಕಾರಣ.

ಆದರೆ ಸಮವಸ್ತ್ರದ ಕುರಿತು ಈಗ ತೀರಾ ಅನಪೇಕ್ಷಿತವಾದ ಆತಂಕಕಾರಿ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ ಗಾಬರಿ ಹುಟ್ಟಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳ ಹಾಗೂ ಹೆತ್ತವರ ಹಿತದೃಷ್ಟಿಯಿಂದ ಇದು ಖಂಡಿತಾ ಒಳ್ಳೆಯ ಲಕ್ಷಣ ಅಲ್ಲ. ದೇಶದ ಪ್ರಗತಿಯ ದೃಷ್ಟಿಯಿಂದಲೂ ಇದು ಕೆಟ್ಟ ಸಂದೇಶ. ಶಾಲಾ ಕಾಲೇಜುಗಳು ಶಿಕ್ಷಣಕ್ಕಾಗಿ ಹೋರಾಡುವ ಸಂಸ್ಥೆಗಳಾಗಬೇಕೇ ಹೊರತು ಅನಾವಶ್ಯಕ ವಿಷಯಗಳ ಬಗೆಗಿನ ಹೋರಾಟಕ್ಕಾಗಿ ಅಲ್ಲ. ಎಲ್ಲ ವಿಧದ, ಎಲ್ಲ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಮಕ್ಕಳು ಒಂದೇ ಕಡೆಯಲ್ಲಿ ಸೇರುವ, ದೀರ್ಘ‌ಕಾಲ ಜತೆಗೂಡಿ ಕಲಿಯುವ, ಆ ಮೂಲಕ ಜ್ಞಾನವನ್ನು ಗಳಿಸುವ ಏಕೈಕ ಸಂಸ್ಥೆ ಎಂದರೆ ಅದು ಶಾಲಾ ಕಾಲೇಜುಗಳು ಮಾತ್ರ. ಈಗಷ್ಟೇ ಜತೆಜತೆಯಲ್ಲಿ ಚಿಗುರುತ್ತಿರುವ ಮನಸ್ಸುಗಳಲ್ಲಿ ದ್ವೇಷದ ವಿಷ ಬೀಜ ಬಿತ್ತಿದರೆ ಭವ್ಯ ಭಾರತದ ಕನಸು ನುಚ್ಚು ನೂರಾಗಬಹುದು. ನಿಂತ ನೆಲದ ಶಾಂತಿ, ಕಾನೂನು ನಿಯಮಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಜವಾಬ್ದಾರಿ ಮತ್ತು ಕರ್ತವ್ಯ ಕೂಡ ಹೌದು.

– ವಿದ್ಯಾ ಅಮ್ಮಣ್ಣಾಯ, ಕಾಪು

Advertisement

Udayavani is now on Telegram. Click here to join our channel and stay updated with the latest news.