Advertisement

18 ಶಾಸಕರಲ್ಲಿ ಒಬ್ಬರಿಗೂ ಸಿಗದ ಮಂತ್ರಿಗಿರಿ!

11:20 PM Aug 20, 2019 | Lakshmi GovindaRaj |

ಬೆಂಗಳೂರು: ಕರಾವಳಿಯ ನಾಲ್ಕು ಜಿಲ್ಲೆಗಳಿಂದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಐವರು, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮೂರು ಕಾಂಗ್ರೆಸ್‌ ಶಾಸಕರಲ್ಲಿ ಇಬ್ಬರು ಸಚಿವರಾಗಿದ್ದರು. ನಾಲ್ಕೂ ಜಿಲ್ಲೆ ಗಳಲ್ಲಿ ಬಿಜೆಪಿಗೆ ಸಂಘಟನಾತ್ಮಕ ಶಕ್ತಿ ತುಂಬಿ 18 ಶಾಸಕ ರನ್ನು ಕಳುಹಿಸಿಕೊಟ್ಟರೂ ಒಂದೇ ಒಂದು ಸಚಿವಸ್ಥಾನ ಸಿಕ್ಕಿಲ್ಲ! ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ವಿಧಾನಪರಿಷತ್‌ ಕೋಟಾದಡಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಚಿವರನ್ನಾಗಿ “ಕರಾವಳಿ ಹೆಸರಿನಲ್ಲಿ’ ಮಂತ್ರಿ ಮಾಡಿ ದ್ದಾರೆ.(ಇವರು ಕರಾವಳಿಯವರೇ ಆದರೂ, ವಿಧಾನಸಭಾ ಸದಸ್ಯರ ವ್ಯಾಪ್ತಿಯಲ್ಲಿ ಬರುವುದಿಲ್ಲ).

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಆದರೆ, ಕರಾವಳಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಅಷ್ಟು ಮಾತ್ರವಲ್ಲದೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕರಾದ ಎಸ್‌.ಅಂಗಾರ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಈ ಬಾರಿಯೂ ಕಡೆಗಣಿಸಲಾಗಿದೆ. “ಒಟ್ಟಿನಲ್ಲಿ ಪಕ್ಷ ಸಂಘಟನೆಗೆ ಕರಾವಳಿ, ಕರಾವಳಿಗರು ಬೇಕು. ಅಧಿಕಾರ ಹಂಚಿಕೆಯಲ್ಲಿ ಕರಾವಳಿಗರು ಬೇಕೆಂದಿಲ್ಲ ಎಂಬ ಮಾನಸಿಕತೆ ಬಿಜೆಪಿ ರಾಜ್ಯ ನಾಯಕರಲ್ಲೂ ಬಂದು ಬಿಟ್ಟಿದೆ.

ಹೇಗಿದ್ದರೂ, ಇಲ್ಲಿನ ಜನ ಬಿಜೆಪಿಗೆ ಮತ ಹಾಕು ತ್ತಾರೆಂಬ ಧೋರಣೆ ತಾಳಿದ್ದಾರೆ’ ಎಂದು ಮುಖಂಡರು, ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ 21 ಕ್ಷೇತ್ರಗಳಲ್ಲಿ ಉಲ್ಲಾಳ, ಹಳಿಯಾಳ, ಯಲ್ಲಾಪುರದಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಚುನಾವಣೆಯ ನಂತರ ರಾಜ್ಯದ ಚುಕ್ಕಾಣಿ ಹಿಡಿದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉಲ್ಲಾಳ ಶಾಸಕ ಯು.ಟಿ.ಖಾದರ್‌ ಅವರಿಗೆ ನಗರಾಭಿವೃದ್ಧಿ ಖಾತೆ

ಹಾಗೂ ಹಳಿಯಾಳ ಶಾಸಕ ಆರ್‌.ವಿ. ದೇಶಪಾಂಡೆಯವರಿಗೆ ಕಂದಾಯ ಖಾತೆ ನೀಡಲಾಗಿತ್ತು. ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿತ್ತಾದರೂ, ಗೆದ್ದ ಮೂವರಲ್ಲಿ ಇಬ್ಬರಿಗೆ ಸಚಿವಸ್ಥಾನ ನೀಡಿ ಗೌರವಯುತವಾಗಿ ಆ ಕ್ಷೇತ್ರಗಳ ಮತದಾರರನ್ನು ನೋಡಿಕೊಂಡಿತ್ತು. ಆದರೆ, ಬಿಜೆಪಿ ಹಾಗೆ ಮಾಡಿಲ್ಲ. 21 ಕ್ಷೇತ್ರಗಳಲ್ಲಿ 18 ಶಾಸಕರನ್ನು ನೀಡಿದ್ದರೂ ಒಬ್ಬರನ್ನು ಸಚಿವರನ್ನಾಗಿ ಮಾಡಿಲ್ಲ. ಇದು ಇಡೀ ಕರಾವಳಿಯಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಇಲ್ಲ ಅನುದಾನ: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಯಾವುದೇ ಅನುದಾನ ನೀಡಿಲ್ಲ ಮತ್ತು ಜಿಲ್ಲೆಯ ಹೆಸರುಗಳನ್ನು ಉಲ್ಲೇಖೀಸಿ ಒಂದು ಕಾರ್ಯಕ್ರಮವನ್ನೂ ಘೋಷಿಸಿರಲಿಲ್ಲ. ಆದರೂ, ಇಲ್ಲಿನ ಜನರು ಸಹಿಸಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಸಚಿವ ಸ್ಥಾನ ಸಿಗಬಹುದು, ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ನಂಬಿದ್ದರು.

Advertisement

21ರಲ್ಲಿ 18 ಬಿಜೆಪಿ ಶಾಸಕರು: ಉಡುಪಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್‌ ಕುಮಾರ್‌, ರಘುಪತಿ ಭಟ್‌, ಲಾಲಾಜಿ ಆರ್‌.ಮೆಂಡನ್‌, ಸುಕುಮಾರಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‌.ಅಂಗಾರ, ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ಸಂಜೀವ ಮಟ್ಟಂದೂರು, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ, ಹರೀಶ್‌ ಪುಂಜಾ ಶಾಸಕರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುನಿಲ್‌ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ವಿಶ್ವೇಶರ ಹೆಗಡೆ ಕಾಗೇರಿ (ಸ್ವೀಕರ್‌) ಹಾಗೂ ಕೊಡಗು ಜಿಲ್ಲೆಯಿಂದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌ ಬಿಜೆಪಿಯ ಶಾಸಕರಾಗಿ ದ್ದಾರೆ. ನಾಲ್ಕು ಜಿಲ್ಲೆಯ 21 ಕ್ಷೇತ್ರದಲ್ಲಿ ಸದ್ಯ ಇಬ್ಬರು ಮಾತ್ರ ಕಾಂಗ್ರೆಸ್‌ ಶಾಸಕರಿರುವುದು. ಯಲ್ಲಾಪುರದ ಶಿವರಾಮ್‌ ಹೆಬ್ಬಾರ್‌ ಈಗ ಅನರ್ಹಗೊಂಡಿದ್ದಾರೆ.

ಶಾಸಕ, ಸಂಸದರಿಗೆ ನಿರಂತರ ಫೋನ್‌ ಕರೆ: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಕರಾವಳಿಯ 18 ಬಿಜೆಪಿ ಶಾಸಕರು ಹಾಗೂ ಇಬ್ಬರು ಲೋಕಸಭಾ ಸದಸ್ಯರಿಗೆ ಕಾರ್ಯಕರ್ತರು ಮೇಲಿಂದ ಮೇಲೆ ದೂರವಾಣಿ ಕರೆ ಮಾಡಿ ಕರಾವಳಿಯನ್ನು ಯಾಕಿಷ್ಟು ಕಡೆ ಗಣಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡ ಲಾರಂಭಿಸಿದ್ದರು. ಹೈಕಮಾಂಡ್‌ ಕೊಟ್ಟಿರುವ ಪಟ್ಟಿ ಎಂದು ತೇಪೆಯ ಉತ್ತರ ವನ್ನು ಸಂಸದ, ಶಾಸಕರು ನೀಡಿದರೂ, ಕಾರ್ಯಕರ್ತರು ಸಮಾಧಾನ ಗೊಳ್ಳುತ್ತಿಲ್ಲ. ಶಾಸಕರಿಗೆ ಕಾರ್ಯಕರ್ತರು ಫೋನ್‌ ಮಾಡಿ ಬೈಯುತ್ತಿರುವ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿವೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next