Advertisement

ಈ ವರ್ಷ ನಡೆದೀತೇ ಟಿ20 ವಿಶ್ವಕಪ್‌ ಕ್ರಿಕೆಟ್‌?

01:51 AM Jul 20, 2020 | Hari Prasad |

ದುಬಾೖ: ಕಳೆದೆರಡು ತಿಂಗಳಿಂದ ತೂಗುಯ್ಯಾಲೆಯಲ್ಲಿದ್ದ ಬಹು ನಿರೀಕ್ಷೆಯ ಟಿ20 ವಿಶ್ವಕಪ್‌ ಪಂದ್ಯಾವಳಿಯ ಭವಿಷ್ಯ ಸೋಮವಾರದ ಐಸಿಸಿ ಸಭೆಯಲ್ಲಿ ಇತ್ಯರ್ಥವಾಗುವ ಸಾಧ್ಯತೆ ನಿಚ್ಚಳವಾಗಿದೆ.

Advertisement

ಇದು ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆದೀತೇ ಅಥವಾ ಮುಂದುವರಿದೀತೇ, ಅಕಸ್ಮಾತ್‌ ಮುಂದೂಡಲ್ಪಟ್ಟರೆ ಈ ಅವಧಿಯಲ್ಲಿ ಐಪಿಎಲ್‌ ಪಂದ್ಯಾವಳಿಗೆ ಹಾದಿ ಸುಗಮಗೊಂಡೀತೇ ಎಂಬ ಕುತೂಹಲಕ್ಕೆಲ್ಲ ಪೂರ್ಣ ವಿರಾಮ ಬೀಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಮೂಲ ವೇಳಾಪಟ್ಟಿಯಂತೆ ಟಿ20 ವಿಶ್ವಕಪ್‌ ಪಂದ್ಯಾವಳಿ ಅ. 18ರಿಂದ ನ. 15ರ ತನಕ ಆಸ್ಟ್ರೇಲಿಯದಲ್ಲಿ ನಡೆಯಬೇಕಿದೆ. ಆದರೆ ಕೋವಿಡ್ 19 ಭೀತಿಯಿಂದಾಗಿ ಕೂಟದ ಭವಿಷ್ಯ ಅತಂತ್ರಗೊಂಡಿದೆ.

ವಿಕ್ಟೋರಿಯಾ ಪ್ರಾಂತ್ಯದಲ್ಲಿ ಕೋವಿಡ್ 19 ದ್ವಿತೀಯ ಹಂತದಲ್ಲಿ ವ್ಯಾಪಿಸತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ. ಉಳಿದೆಡೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಮಹತ್ವದ ನಿರ್ಧಾರ
ಐಸಿಸಿ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯ ಸೇರಿಕೊಂಡು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಈ ಪಂದ್ಯಾವಳಿ ಮುಂದೂಡಲ್ಪಟ್ಟರೆ 2022ರಲ್ಲಿ ಮತ್ತೆ ಆಸ್ಟ್ರೇಲಿಯ ಆತಿಥ್ಯದಲ್ಲೇ ನಡೆಯುವ ಸಾಧ್ಯತೆ ಇದೆ. 2021ರಲ್ಲೂ ಟಿ20 ವಿಶ್ವಕಪ್‌ ನಡೆಯಲಿದ್ದು, ಇದರ ಆತಿಥ್ಯ ಭಾರತದ್ದಾಗಿದೆ. ಇದರ ಹಕ್ಕನ್ನು ಭಾರತ ಬಿಟ್ಟುಕೊಡುವ ಸಾಧ್ಯತೆ ಇಲ್ಲ.

Advertisement

ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಐಸಿಸಿ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಬಹಳ ಮುಖ್ಯ. ಅದು ಪಂದ್ಯಾವಳಿಗೆ ಹಸಿರು ನಿಶಾನೆ ನೀಡಿದರೆ ಐಸಿಸಿ ಇದಕ್ಕೆ ಸಮ್ಮತಿಸಲೇಬೇಕಾಗುತ್ತದೆ, ಕ್ರಿಕೆಟ್‌ ಆಸ್ಟ್ರೇಲಿಯ ಮುಂದಡಿ ಇಡಬೇಕಾಗುತ್ತದೆ. ಆಗ ಕ್ರಿಕೆಟಿಗರ ಪ್ರಯಾಣ, ವಸತಿ, ಸುರಕ್ಷೆಯ ಜವಾಬ್ದಾರಿಯನ್ನೆಲ್ಲ ಆಸ್ಟ್ರೇಲಿಯ ಸರಕಾರ ಮತ್ತು ಅಲ್ಲಿನ ಕ್ರಿಕೆಟ್‌ ಮಂಡಳಿ ನೋಡಿಕೊಳ್ಳಬೇಕಾಗುತ್ತದೆ.

ಕೋವಿಡ್ 19 ಕಾಲದಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ ನಡೆಸಲು ಸಾಧ್ಯ ಎಂಬುದನ್ನು ಈಗಾಗಲೇ ಇಂಗ್ಲೆಂಡ್‌ ತೋರಿಸಿಕೊಟ್ಟಿದೆ. ಇದು ಆಸ್ಟ್ರೇಲಿಯಕ್ಕೆ ಸ್ಫೂರ್ತಿ ಆಗಲೂಬಹುದು. ಅಲ್ಲದೇ ಆಸೀಸ್‌ ತಂಡ ಕೂಡ ಸೀಮಿತ ಓವರ್‌ಗಳ ಸರಣಿಗಾಗಿ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

ಭಾರತಕ್ಕೆ ಐಪಿಎಲ್‌ ಕನಸು
ಇತ್ತ ಭಾರತಕ್ಕೆ ಐಪಿಎಲ್‌ನದೇ ಕನವರಿಕೆ. ಟಿ20 ವಿಶ್ವಕಪ್‌ ಮುಂದೂಡಲ್ಪಟ್ಟರಷ್ಟೇ ಈ ಶ್ರೀಮಂತ ಲೀಗ್‌ ನಡೆಸಲು ಸಾಧ್ಯವಾಗುತ್ತದೆ ಎಂಬುದು ಸದ್ಯಸ ಸ್ಥಿತಿ. ಆಗ ಯುಎಇಯಲ್ಲಿ ಇದನ್ನು ಸಂಘಟಿಸುವುದು ಬಿಸಿಸಿಐ ಯೋಜನೆಯಾಗಿದೆ. ಇದರ ತಾತ್ಕಾಲಿಕ ವೇಳಾಪಟ್ಟಿ ಕೂಡ ಹರಿದಾಡತೊಡಗಿದೆ (ಸೆ. 26ರಿಂದ ನ. 7)

ಐಸಿಸಿಗೆ ಬಾಸ್‌ ಯಾರು?
ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ನೂತನ ಅಧ್ಯಕ್ಷರ್ಯಾರು, ಶಶಾಂಕ್‌ ಮನೋಹರ್‌ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗಬಹುದು ಎಂಬುದು ಕೂಡ ಸೋಮವಾರದ ಸಭೆಯ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.

ಇಸಿಬಿಯ ಕಾಲಿನ್‌ ಗ್ರೇವ್ಸ್‌, ಭಾರತದ ಸೌರವ್‌ ಗಂಗೂಲಿ, ನ್ಯೂಜಿಲ್ಯಾಂಡಿನ ಗ್ರೆಗರ್‌ ಬಾರ್ಕ್ಲೆ, ಹಾಂಕಾಂಗ್‌ನ ಇಮ್ರಾನ್‌ ಖ್ವಾಜಾ ಕೂಡ ರೇಸ್‌ನಲ್ಲಿದ್ದಾರೆ. ಆದರೆ ಸತತ 2ನೇ ಅವಧಿಗೆ ಇದು ಭಾರತೀಯರ ಪಾಲಾಗುವುದು ಅನುಮಾನ. ಅಲ್ಲದೇ ಸೌರವ್‌ ಗಂಗೂಲಿ ಕೂಡ ತನಗೆ ಐಸಿಸಿ ಹುದ್ದೆ ಬಗ್ಗೆ ಗಡಿಬಿಡಿ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next