Advertisement

ಬಿಬಿಎಂಪಿ ಬಜೆಟ್‌ಗೆ ಸರ್ಕಾರದ ಕತ್ತರಿ?

12:46 AM Apr 27, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಂಡಿಸಿದ 2019-20ನೇ ಸಾಲಿನ ಬಜೆಟ್‌ ಗಾತ್ರಕ್ಕೆ ಸರ್ಕಾರದಿಂದ ಕತ್ತರಿ ಬೀಳಲಿದ್ದು, ಶೀಘ್ರದಲ್ಲಿಯೇ ಈ ಕುರಿತು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸುವ ಸಾಧ್ಯತೆಯಿದೆ.

Advertisement

ಫೆಬ್ರವರಿಯಲ್ಲಿ ಸತತ ನಾಲ್ಕನೇ ಅವಧಿಗೆ ಪಾಲಿಕೆಯಲ್ಲಿ ಮೈತ್ರಿ ಆಡಳಿತ ಬಜೆಟ್‌ ಮಂಡಿಸಿತ್ತು. ಆರಂಭದಲ್ಲಿ 10,688 ಕೋಟಿ ರೂ. ಗಾತ್ರವಿದ್ದ ಬಜೆಟ್‌, ಚರ್ಚೆ ಬಳಿಕ ಏಕಾಏಕಿ 12,957 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈ ಕುರಿತು ಬಿಜೆಪಿಯಿಂದ ವಿರೋಧ ವ್ಯಕ್ತವಾದರೂ ಕೌನ್ಸಿಲ್‌ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿತ್ತು.

ಏಕಾಏಕಿ 3 ಸಾವಿರ ಕೋಟಿ ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, “ಬಜೆಟ್‌ ಅವೈಜ್ಞಾನಿಕವಾಗಿರುವ ಕಾರಣ, ಅನುಷ್ಠಾನ ಸಾಧ್ಯವಾಗುವುದಿಲ್ಲ. ಬಜೆಟ್‌ ಗಾತ್ರವನ್ನು 9 ಸಾವಿರ ಕೋಟಿಗೆ ಇಳಿಸಿದಾಗ ಮಾತ್ರ ಅನುಷ್ಠಾನ ಸಾಧ್ಯ’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆಯುಕ್ತರ ಪತ್ರದ ಆಧಾರದ ಮೇಲೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಜೆಟ್‌ ಗಾತ್ರವನ್ನು 9 ಸಾವಿರ ಕೋಟಿ ರೂ.ಗೆ ಸೀಮಿತಗೊಳಿಸಬೇಕು ಎಂದು ಕೋರಿ ಬಜೆಟ್‌ನ್ನು ನಗರಾಭಿವೃದ್ಧಿ ಇಲಾಖೆ ಸಚಿವರ ಮುಂದೆ ಮಂಡಿಸಿದ್ದಾರೆ. ಸಚಿವರು ಒಪ್ಪಿದ ಕೂಡಲೇ ಇಲಾಖೆ ಆದೇಶ ಹೊರಡಿಸಲಿದೆ.

ಮೇಯರ್‌ ರಾಜಿನಾಮೆ ನೀಡಲಿ: ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ ಮಂಡಿಸಿದ್ದ 13 ಸಾವಿರ ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ಸರ್ಕಾರ 9 ಸಾವಿರ ಕೋಟಿ ರೂ.ಗೆ ಇಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಬಜೆಟ್‌ ಮಂಡನೆಗೆ ಕಾರಣರಾದ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next