Advertisement

ಚಿಗರೇನಹಳ್ಳಿ ಬಳಿ ಕೊಳೆಯುತ್ತಿರುವ ಬಿಬಿಎಂಪಿ ಕಸ

03:04 PM Aug 24, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿ ಸಮೀಪದ ಬಿಬಿಎಂಪಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿನ ಕಸದ ರಾಶಿಯಿಂದ ಹೊರ ಬರುತ್ತಿರುವ ಕೊಳಚೆ ನೀರು ಸುತ್ತಮುತ್ತಲ ಗ್ರಾಮಗಳ ಮೂಲಕ ಹರಿಯುತ್ತಿದ್ದು, ಇದರಿಂದ ದುರ್ವಾಸನೆಯಿಂದ ಗ್ರಾಮಸ್ಥರು ಮೂಗು
ಮುಚ್ಚಿಕೊಂಡು ಬದುಕುವ ದುಸ್ಥಿತಿ ಉಂಟಾಗಿದೆ. ಕಸದಿಂದ ಬರುವ ಕೆಟ್ಟ ಗಾಳಿ ಮತ್ತು ನೊಣಗಳ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ‌ ನರಕ ದರ್ಶನವಾಗಿದೆ.

Advertisement

ಮಳೆಗಾಲದಲ್ಲಿ ಎಂಎಸ್‌ಜೆಪಿ ಘಟಕದಲ್ಲಿನ ಕಸದ ರಾಶಿಯಿಂದ ಬರುವ ವಿಷಯುಕ್ತ ನೀರನ್ನು ತಡೆಯುವ ಕಾರಣಕ್ಕೆ ಮಣ್ಣಿನಿಂದ ಕಟ್ಟೆ
ಕಟ್ಟಲಾಗಿದೆ. ಆದರೆ, ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕಟ್ಟೆ ಒಡೆದು ನೀರು ಕೆರೆಗೆ ಹರಿಯುತ್ತಿದೆ. ಎಂಎಸ್‌ಜಿಪಿ ಘಟಕದಿಂದ ಕೂಗಳತೆಯ ದೂರದಲ್ಲಿರುವ ತಣ್ಣೀರಹಳ್ಳಿ ಸುತ್ತಲು ಹರಿಯುವ ಕಾಲುವೆಗೆ ಬಂದಿದೆ.

ವಿಷಯುಕ್ತ ನೀರು: ಈ ವಿಷಯುಕ್ತ ನೀರು ಹರಿಯುವುದರಿಂದ ಕೆಟ್ಟ ವಾಸನೆ ಗ್ರಾಮದ ಸುತ್ತಲೂ ಆವರಿಸಿದೆ. ವಿಷದ ನೀರು ಅಂತರ್ಜಲ ಸೇರುತ್ತಿದೆ. ಇದೇ ನೀರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಜಾನುವಾರುಗಳು ಸಹ ಇದೇ ನೀರು ಕುಡಿಯಬೇಕು. ವಿಷಯುಕ್ತ
ನೀರು ಕುಡಿಯುವುದರಿಂದ ಜನರು ಮತ್ತು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಸದ ರಾಶಿಯಿಂದ ಕೊಳಚೆ ನೀರು ಹೊರಬರಲು ಆರಂಭವಾಗಿದೆ. ಕಸದ ರಾಶಿಯ ಸುತ್ತಲು ಮಣ್ಣಿನಲ್ಲಿ ಹಾಕಲಾಗಿದ್ದ ಕಟ್ಟೆ ಕೊಳಚೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಹೊಡೆದು ಹೋಗಿದೆ. ಹೀಗಾಗಿ ತಣ್ಣೀರನಹಳ್ಳಿ ಗ್ರಾಮದ
ಸಮೀಪದಲ್ಲಿನ ಹಳ್ಳದ ಮೂಲಕ ಕೊಳಚೆ ನೀರು ಮಾವತ್ತೂರು ಕೆರೆಯಕಡೆಗೆ ಹರಿಯ ತೊಡಗಿದೆ.

ಇದನ್ನೂ ಓದಿ:ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ

Advertisement

ಈಡೇರದ ಭರವಸೆ: ಹಳ್ಳದ ಸಾಲಿನಲ್ಲಿ ಜಮೀನುಗಳಲ್ಲಿ ರೈತರು ಬೆಳೆದಿದ್ದ ಅಡಕೆ, ತೆಂಗು ಸೇರಿದಂತೆ ಮರಗಳು ಒಣಗಲು ಆರಂಭಿಸಿವೆ.
ಎಂಎಸ್‌ಜಿಪಿ ಘಟಕದಲ್ಲಿನ ಬಿಬಿಎಂಪಿ ಕಸದ ಹಾವಳಿಯನ್ನು ತಪ್ಪಿಸುವಂತೆ ಈ ಭಾಗದ ಹತ್ತಾರು ಗ್ರಾಮಗಳ ಜನರು ಪಕ್ಷಾತೀತವಾಗಿ ಏಳುದಿನಗಳ ಕಾಲ ನಡೆಸಿದ್ದ ನಿರಂತರ ಧರಣಿ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಧರಣಿ ನಿರತರು ಹಾಗೂ
ಜನಪ್ರತಿನಿಧಿಗಳೊಂದಿಗೆ ವಿಧಾನ ಸೌಧದಲ್ಲಿ ಸಭೆ ನಡೆಸಿದ್ದರು. ಕೊಳಚೆ ನೀರು ಹಳ್ಳದ ಕಡೆಗೆ ಹರಿದು ಬರದಂತೆ ತಡೆಗೋಡೆ ನಿರ್ಮಿಸುವ ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದ ನೂರಾರು ಸಂಖ್ಯೆಯಲ್ಲಿ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬೇರೆಡೆಗೂಹೋಗುವಂತೆ ಮಾಡುವ ಭರವಸೆ ನೀಡಿದ್ದರು. ಆದರೆ ಸಭೆ ನಡೆಸಿ ಒಂದುವರೆ ವರ್ಷ ಕಳೆದಿದ್ದರು ಯಾವುದೇ ಭರವಸೆಯು ಈಡೇರಿಲ್ಲ.

ಯೋಗ್ಯವಲ್ಲ: ಹಳ್ಳದಲ್ಲಿ ಕೊಳಚೆ ನೀರು ಹರಿದು ಬರುವುದು ತಪ್ಪಿಲ್ಲ. ನಮ್ಮೂರಿನ ಸುತ್ತಲಿನ ಕೊಳವೆ ಬಾವಿಗಳಲ್ಲಿ ಬರುವ ನೀರು ಕುಡಿಯಲು
ಯೋಗ್ಯವೇ ಇಲ್ಲ ಎನ್ನುವ ವರದಿ ಬಂದು ವರ್ಷಗಳೇ ಕಳೆದಿವೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟರೆ ದೂರುದ ಗ್ರಾಮಗಳಿಂದ ಕ್ಯಾನ್‌ಗಳಲ್ಲಿ ನೀರು ತಂದು ಕುಡಿಯುವ ಸ್ಥಿತಿ ಇದೆ. ಮಳೆಗಾಲ ಹೊರತು ಬೇಸಿಗೆಯಲ್ಲಿ ಸಂಪೂರ್ಣವಾಗಿ ಕೊಳವೆ ಬಾವಿ ನೀರನ್ನೇ ಬಳಸಿ ತರಕಾರಿ ಮತ್ತಿತರೆ ಬೆಳೆಯನ್ನು ಬೆಳೆಯುವುದೇ ಕಷ್ಟವಾಗಿದೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಣ್ಣೀರನಹಳ್ಳಿ ಗ್ರಾಮದ ರೈತ ರಾಜಣ್ಣ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next