Advertisement

ಟಿ20 “ಫೈನಲ್‌’ನಲ್ಲಿ ಕಾದಿದೆ ಬ್ಯಾಟಿಂಗ್‌ ಚಾಲೆಂಜ್‌

08:03 AM Mar 20, 2021 | Team Udayavani |

ಅಹ್ಮದಾಬಾದ್‌: “ಒಂದು ಅವರಿಗೆ, ಒಂದು ನಮಗೆ’ ಎಂಬ ಲೆಕ್ಕಾಚಾರದಂತೆ ಭಾರತ-ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟಿ20 ಸರಣಿಯೀಗ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಸರಣಿ 2-2 ಸಮಬಲದಲ್ಲಿ ನೆಲೆಸಿದ್ದು, ಮೂರನೇ ಪಂದ್ಯವನ್ನು ಗೆದ್ದು, ಟ್ರೋಫಿಯೊಂದಿಗೆ ಗ್ರೂಪ್‌ ಫೋಟೊ ತೆಗೆಸಿಕೊಳ್ಳಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ. ಶನಿವಾರ 5ನೇ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಕುತೂಹಲ ತಣಿಯಲು ತಡ ರಾತ್ರಿ ತನಕ ಕಾಯಬೇಕಿದೆ.

Advertisement

ಟೆಸ್ಟ್‌ ಸರಣಿ ಜಯಭೇರಿ ಬಳಿಕ ನಂ.1 ಟಿ20 ತಂಡವಾದ ಇಂಗ್ಲೆಂಡಿಗೆ ಸರಿಸಮನಾಗಿ ಪೈಪೋಟಿಯೊಡ್ಡುತ್ತಲೇ ಬಂದದ್ದು ಭಾರತದ ಹೆಗ್ಗಳಿಕೆ. 4ನೇ ಪಂದ್ಯದಲ್ಲಿ ಅನೇಕ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ ಗೆದ್ದು ಬಂದದ್ದು ಟೀಮ್‌ ಇಂಡಿಯಾ ಪಾಲಿಗೊಂದು ಬೋನಸ್‌. ಇಲ್ಲಿ “ಟಾಸ್‌ ಗೆದ್ದವನೇ ಬಾಸ್‌’ ಎಂಬ ನಂಬಿಕೆ ಸಂಪೂರ್ಣವಾಗಿ ಹುಸಿಯಾಗಿತ್ತು. ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆರಿಸಿಕೊಂಡು, ಬಳಿಕ ಚೇಸ್‌ ಮಾಡಿ ಗೆಲ್ಲುತ್ತದೆ ಎಂಬುದು ಮೊದಲ 3 ಪಂದ್ಯಗಳಲ್ಲಿ ನಿಜವಾಗಿತ್ತು. ಆದರೆ ಗುರುವಾರದ ನಿರ್ಣಾಯಕ ಮುಖಾಮುಖೀಯಲ್ಲಿ ಭಾರತ ಇದನ್ನು ಸುಳ್ಳಾಗಿಸಿತು. ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ಇಂಗ್ಲೆಂಡ್‌ ಚೇಸಿಂಗ್‌ನಲ್ಲಿ ಎಡವಿತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಏನೂ ಆದೀತು ಎಂದೇ ಭಾವಿಸಬೇಕಿದೆ.

ಭಾರತದ ಓಪನಿಂಗ್‌ ವೈಫ‌ಲ್ಯ

ಮೊದಲು ಬ್ಯಾಟಿಂಗ್‌ ನಡೆಸುವ ತಂಡ ಇನ್ನೂರರ ಸಮೀಪ ಸಾಗಿದರೆ “ಸೇಫ್’ ಎಂದು ತೀರ್ಮಾನಿಸಲಡ್ಡಿಯಿಲ್ಲ. ಎರಡೂ ತಂಡಗಳಲ್ಲಿ ಇಂಥದೊಂದು ಸಾಮರ್ಥ್ಯವಿದೆ. ಅಕಸ್ಮಾತ್‌ ಬೃಹತ್‌ ಮೊತ್ತವನ್ನು ಚೇಸ್‌ ಮಾಡುವ ಸವಾಲು ಎದುರಾದರೆ ಇಲ್ಲಿ ಇಂಗ್ಲೆಂಡಿಗೆ ಅವಕಾಶ ಜಾಸ್ತಿ. ಕಾರಣ, ಆಂಗ್ಲರ ಓಪನಿಂಗ್‌ ಹಾಗೂ ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌.

ಇನ್ನೊಂದೆಡೆ ಭಾರತ ಓಪನಿಂಗ್‌ ಹಾಗೂ ಪವರ್‌ ಪ್ಲೇ ವೈಫ‌ಲ್ಯದ ಸಮಸ್ಯೆಯಿಂದ ಬಳಲುತ್ತಿದೆ. 4 ಪಂದ್ಯ ಮುಗಿದರೂ ಭಾರತಕ್ಕಿನ್ನೂ ಸಮರ್ಥ ಆರಂಭ ದೊರೆತಿಲ್ಲ, ನಿರ್ದಿಷ್ಟ ಓಪನಿಂಗ್‌ ಜೋಡಿಯೂ ಲಭಿಸಿಲ್ಲ. 2, 0, 7 ಮತ್ತು 21 ರನ್‌… ಇದು ಕಳೆದ 4 ಪಂದ್ಯಗಳಲ್ಲಿ ಭಾರತದ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ರನ್‌. ಚೇಸಿಂಗ್‌ ವೇಳೆ ಇಂಥ ಓಪನಿಂಗ್‌ ವೈಫ‌ಲ್ಯ ಸಹಜವಾಗಿಯೇ ಮಿಡ್ಲ್ ಆರ್ಡರ್‌ ಮೇಲೆ ಒತ್ತಡ ಹೇರುತ್ತದೆ.
ಈ ಸರಣಿಯಲ್ಲಿ ಭಾರತದ ಕಡೆಯಿಂದ ಅರ್ಧ ಶತಕ ಬಾರಿಸಿದ ಏಕೈಕ ಆರಂಭಿಕನೆಂದರೆ ಇಶಾನ್‌ ಕಿಶನ್‌. ಅವರು ಪದಾರ್ಪಣ ಪಂದ್ಯದಲ್ಲೇ ಸಿಡಿದು ನಿಂತಿದ್ದರು. ಆದರೆ ಅನುಭವಿಗಳಾದ ರಾಹುಲ್‌, ಧವನ್‌ ಮತ್ತು ರೋಹಿತ್‌ ಅವರ ಬ್ಯಾಟ್‌ ಮುಷ್ಕರ ಇನ್ನೂ ಕೊನೆಗೊಂಡಂತಿಲ್ಲ. ಹೀಗಾಗಿ 5ನೇ ಪಂದ್ಯದಲ್ಲಿ ಮತ್ತೆ ಇಶಾನ್‌ ಕಿಶನ್‌ ಓಪನಿಂಗ್‌ ಬರುವ ಸಾಧ್ಯತೆಯೊಂದು ಗೋಚರಿಸುತ್ತಿದೆ.
ಭಾರತದ ಮಧ್ಯಮ ಕ್ರಮಾಂಕದ ಸಾಮರ್ಥ್ಯವನ್ನು ಅನುಮಾನಿಸು ವಂತಿಲ್ಲ. ಕೊಹ್ಲಿ, ಅಯ್ಯರ್‌, ಪಂತ್‌, ನೂತನ ಹೀರೋ ಸೂರ್ಯಕುಮಾರ್‌, ಪಾಂಡ್ಯ ಅವರೆಲ್ಲ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

Advertisement

ಇದನ್ನೂ ಓದಿ:ವಿಜಯಪುರ ಬಿಎಸ್ಎನ್ಎಲ್ ಕಚೇರಿ ಮೇಲೆ ಸಿಬಿಐ ದಾಳಿ

ಬೌಲಿಂಗ್‌ನಲ್ಲಿದೆ ವೆರೈಟಿ

ಟೀಮ್‌ ಇಂಡಿಯಾದ ಬೌಲಿಂಗ್‌ ಇಂಗ್ಲೆಂಡಿನಷ್ಟು ಹರಿತವಲ್ಲ, ಆದರೆ ಬೌಲಿಂಗ್‌ನಲ್ಲಿ ವೆರೈಟಿ ಇರುವುದು ಸುಳ್ಳಲ್ಲ. ಭುವನೇಶ್ವರ್‌, ಠಾಕೂರ್‌, ಪಾಂಡ್ಯ, ಚಹರ್‌ ಕಳೆದ ಪಂದ್ಯದಲ್ಲಿ ತಮ್ಮ ಜವಾಬ್ದಾರಿಯನ್ನು ಚೊಕ್ಕವಾಗಿ ನಿಭಾಯಿಸಿದ್ದಾರೆ. ಸುಂದರ್‌ ಮಾತ್ರ ದುಬಾರಿಯಾದರು. ಈ ಸ್ಥಾನಕ್ಕೆ ರಾಹುಲ್‌ ತೇವಟಿಯಾ ಅಥವಾ ಟಿ. ನಟರಾಜನ್‌ ಬರಲೂಬಹುದು.

ಮಸ್ಟ್‌ ವಿನ್‌ ಗೇಮ್‌

ಇಂಗ್ಲೆಂಡ್‌ ಎಲ್ಲ ವಿಭಾಗಗಳಲ್ಲೂ ಸದೃಢವಾಗಿರುವ ಟಿ20 ಸ್ಪೆಷಲಿಸ್ಟ್‌ ತಂಡ. ಟಿ20 ವಿಶ್ವಕಪ್‌ಗೆ ಅದು ಈಗಾಗಲೇ “ವಿನ್ನಿಂಗ್‌ ಕಾಂಬಿನೇಶನ್‌’ ಒಂದನ್ನು ರೂಪಿಸಿದರೆ ಅಚ್ಚರಿಯೇನಿಲ್ಲ. ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವುದಷ್ಟೇ ಆಂಗ್ಲರ ಮುಂದಿರುವ ಸವಾಲು. ಮಾರ್ಗನ್‌ ಕೂಡ ಇದನ್ನೇ ಹೇಳಿದ್ದಾರೆ. ಹಾಗೆಯೇ ಮಸ್ಟ್‌ ವಿನ್‌ ಪಂದ್ಯದಲ್ಲಿ ಆಡುವುದು, ತವರಿನಾಚೆ ಗೆಲ್ಲುವುದನ್ನು ನಾವು ಸದಾ ಇಷ್ಟಪಡುತ್ತೇವೆ ಎಂದಿದ್ದಾರೆ ಇಂಗ್ಲೆಂಡ್‌ ಕಪ್ತಾನ.

ಇಂಗ್ಲೆಂಡ್‌ ತಂಡಕ್ಕೆ ದಂಡ

ಗುರುವಾರದ 4ನೇ ಟಿ20 ಪಂದ್ಯದಲ್ಲಿ ಓವರ್‌ ಗತಿ ಕಾಯ್ದು ಕೊಳ್ಳು ವಲ್ಲಿ ಸಂಪೂರ್ಣ ವಿಫ‌ಲವಾದ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ದಂಡ ವಿಧಿಸಲಾಗಿದೆ. ನಾಯಕ ಮಾರ್ಗನ್‌ ಹಾಗೂ ಆಟಗಾರರೆಲ್ಲ ಪಂದ್ಯದ ಸಂಭಾವನೆಯ ಶೇ. 20ರಷ್ಟು ಜುಲ್ಮಾನೆ ತೆರಬೇಕಾಗಿದೆ. ಅಂಗಳದ ಅಂಪಾಯರ್‌ಗಳಾದ ಕೆ.ಎನ್‌. ಅನಂತಪದ್ಮನಾಭನ್‌, ನಿತಿನ್‌ ಮೆನನ್‌ ಮತ್ತು ತೃತೀಯ ಅಂಪಾಯರ್‌ ವೀರೇಂದರ್‌ ಶರ್ಮ ಸಲ್ಲಿಸಿದ ವರದಿಯಂತೆ ಮ್ಯಾಚ್‌ ರೆಫ್ರಿ ಜಾವಗಲ್‌ ಶ್ರೀನಾಥ್‌ ಯಾವುದೇ ವಿಚಾರಣೆ ನಡೆಸದೆ ಈ ಕ್ರಮ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next