Advertisement

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ನಂದಿಕೂರು ಕೈಗಾರಿಕೆ ಪ್ರದೇಶ : ಚರಂಡಿ, ಬೀದಿ ದೀಪವಿಲ್ಲ

02:30 PM Oct 13, 2022 | Team Udayavani |

ಉಡುಪಿ : ನಂದಿಕೂರು ಕೈಗಾರಿಕೆ ಪ್ರದೇಶಕ್ಕೆ ಸುಮಾರು ಹನ್ನೊಂದು ವರ್ಷ ತುಂಬಿದರೂ ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.

Advertisement

ಹತ್ತು ವರ್ಷಗಳಲ್ಲಿ ಹಲವರು ಜನಪ್ರತಿನಿಧಿಗಳು ಬಂದರು, ಜಿಲ್ಲಾ ಉಸ್ತುವಾರಿ ಸಚಿವರು ಬದಲಾದರು, ಸಂಸದರೂ ಕಾರ್ಯ ನಿರ್ವಹಿಸಿದರು. ಆದರೂ ಈ ಕೈಗಾರಿಕೆ ಪ್ರದೇಶದ ಪರಿಸ್ಥಿತಿ ಬದಲಾಗಲಿಲ್ಲ.

2011ರಲ್ಲಿ ಹಂಚಿಕೆ ಮಾಡಲಾದ ಕೈಗಾರಿಕಾ ಪ್ರದೇಶವಿದು. 86.64 ಎಕ್ರೆಯಲ್ಲಿ76 ನಿವೇಶನಗಳನ್ನು ಅಭಿವೃದ್ಧಿಪಡಿಸಿ 75 ಹಂಚಲಾಗಿದೆ. ಆದರೆ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಕಾರ್ಕಳ-ಬೆಳ್ಮಣ್‌-ಪಡುಬಿದ್ರಿ ಹೆದ್ದಾರಿಗೆ ತಾಗಿಕೊಂಡಿರುವ ಪ್ರದೇಶವಿದು. ಬೆಳಪು ಕೈಗಾರಿಕೆ ಪ್ರದೇಶದಿಂದಲೂ ಸಂಪರ್ಕವಿದೆ. ಪಡುಬಿದ್ರಿ ಪೇಟೆಯಿಂದ 3-4 ಕಿಮೀ ಅಂತರದಲ್ಲಿದೆ. ಮದರಂಗಡಿ-ನಂದಿಕೂರು ಮಾರ್ಗವಾಗಿಯೂ ತಲುಪಬಹುದು.

ಈ ಕೈಗಾರಿಕೆ ಪ್ರದೇಶದ ಒಳಗಿನ ರಸ್ತೆಗಳು ವಿಶಾಲವಾಗಿವೆ. ಹಂಚಿಕೆಯಾಗಿರುವ ನಿವೇಶನಗಳಲ್ಲಿ ಕೆಲವು ಕಾರ್ಯಾರಂಭ ಮಾಡಿದ್ದರೆ, ಕೆಲವು ನಿರ್ಮಾಣ ಹಂತ ದಲ್ಲಿವೆ. ಆದರೆ ಇಲ್ಲಿ ರಸ್ತೆ ಹೊರತುಪಡಿಸಿ ಬೇರೆ ಯಾವ ಮೂಲ ಸೌಕರ್ಯವೂ ಸರಿಯಿಲ್ಲ.

ಬೀದಿ ದೀಪವಿಲ್ಲ
ಕೈಗಾರಿಕೆ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯದ ಸಮಸ್ಯೆ ಹೆಚ್ಚಿತ್ತು. ಇತ್ತೀಚೆಗೆ ಸ್ವಲ್ಪ ಬಗೆಹರಿದಿದೆ. ಆದರೆ ವೋಲ್ಟೆಜ್‌ ಕಡಿಮೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ನಿರಂತರ ವಿದ್ಯುತ್‌ ಪೂರೈಸಬೇಕು. ಜತೆಗೆ ಕೈಗಾರಿಕೆ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲ. ರಾತ್ರಿವೇಳೆ ಕೈಗಾರಿಕೆ ಪ್ರದೇಶ ಸಂಪೂರ್ಣ ಕತ್ತಲಲ್ಲಿದೆ. ಹಾಗಾಗಿ ಕಳ್ಳರ ಕಾಟವೂ ಹೆಚ್ಚು. ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.

Advertisement

ನಿರ್ವಹಣೆ ಕೊರತೆ
ಸಮತಟ್ಟಲ್ಲದ ನಿವೇಶವನ್ನು ಹಂಚಿಕೆ ಮಾಡಿದ್ದರಿಂದ ಬಹುತೇಕ ಕೈಗಾರಿಕೋದ್ಯಮಿಗಳು ತಮ್ಮ ನಿವೇಶನವನ್ನು ಸರಿಪಡಿಸಿಕೊಂಡು ಕೈಗಾರಿಕೆ ಆರಂಭಿಸಿದ್ದಾರೆ. ಕರಾರು ಇನ್ನೂ ಮುಗಿಯದೇ ಇರುವುದರಿಂದ ಮಾಲಕತ್ವ ಸಂಪೂರ್ಣವಾಗಿ ಕೈಗಾರಿಕೆಗಳಿಗೆ ಬಂದಿಲ್ಲ. ಹೀಗಾಗಿ ನಿರ್ವಹಣೆಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಯವರು ಮಾಡಬೇಕು ಅಥವಾ ನಮ್ಮಿಂದ ತೆರಿಗೆ ಸಂಗ್ರಹಿಸುವ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ಮಾಡಬೇಕು. ಯಾರೂ ಈ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿಲ್ಲ. ತೆರಿಗೆ ಮಾತ್ರ ಕಾಲಕಾಲಕ್ಕೆ ಪಡೆಯಲಾಗುತ್ತಿದೆ ಎಂಬುದು ಕೈಗಾರಿಕೋದ್ಯಮಿಗಳ ಟೀಕೆ.

ನಿಗಾ ವ್ಯವಸ್ಥೆ ಆಗಬೇಕು
ಕೈಗಾರಿಕೆ ಪ್ರದೇಶದ ಒಳಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಇಲ್ಲ. ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರ ಭದ್ರತೆಯ ಜತೆಗೆ ಅವರ ಚಟುವಟಿಕೆಗಳ ಮೇಲೂ ನಿಗಾ ವಹಿಸಬೇಕಿದೆ. ಹಾಗೆಯೇ ಕೈಗಾರಿಕೆ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಮತ್ತು ದ್ವಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಭದ್ರತಾ ಸಿಬಂದಿ ನೇಮಕವೂ ಮಾಡಬೇಕು ಎಂಬುದು ಹಲವರ ಅಭಿಪ್ರಾಯ.

ಚರಂಡಿ ವ್ಯವಸ್ಥೆ ಇಲ್ಲ
ಕೈಗಾರಿಕೆ ಪ್ರದೇಶದ ಒಳಗೆ ಆಳೆತ್ತರ ಗಿಡಗಂಟಿಗಳು ಬೆಳೆದಿವೆ. ಸ್ವತ್ಛತೆಗೆ ಆದ್ಯತೆ ಇಲ್ಲದೇ ಇರುವುದರಿಂದ ಕಸವೂ ಅಲ್ಲಲ್ಲಿ ರಾಶಿ ಬೀಳುತ್ತಿರುತ್ತದೆ. ಸ್ಥಳೀಯಾಡಳಿತಗಳು ಕಸವನ್ನು ಕೊಂಡೊಯ್ಯುವುದಿಲ್ಲ. ಇದೆಲ್ಲದಕ್ಕಿಂತ ಮುಖ್ಯವಾಗಿ ಕೈಗಾರಿಕೆಗಳ ತ್ಯಾಜ್ಯ ನೀರು ಬಿಡಲು ವ್ಯವಸ್ಥೆ ಇಲ್ಲ. ಚರಂಡಿಯನ್ನು ಸರಿಯಾಗಿ ನಿರ್ಮಿಸದೇ ಇರುವುದರಿಂದ ಮುಂದೆ ಬಹುದೊಡ್ಡ ಸಮಸ್ಯೆಯಾಗುವ ಸಂಭವವಿದೆ. ಕೊಳಚೆ ನೀರು ಬಿಡಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಆಗ್ರಹವೂ ಇದೆ.

ಸಂಪರ್ಕ ರಸ್ತೆಯ ಸಮಸ್ಯೆ
ಬೆಳಪು ಹಾಗೂ ನಂದಿಕೂರು ಕೈಗಾರಿಕೆ ಪ್ರದೇಶ ಅಕ್ಕಪಕ್ಕದಲ್ಲೇ ಇದ್ದರೂ ಸರಿಯಾದ ಸಂಪರ್ಕ ರಸ್ತೆಯಿಲ್ಲ. ಇರುವ ರಸ್ತೆಗಳು ಕಿರಿದಾಗಿದ್ದು, ಎಲ್ಲೆಡೆ ಹೊಂಡಗಳೇ ಇವೆ.ಈ ಎರಡು ಕೈಗಾರಿಕೆ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ರಸ್ತೆಯನ್ನು ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯವಾಗಿ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಕೈಗಾರಿಕೆಗಳು ಇನ್ನಷ್ಟು ಹೂಡಿಕೆ ಮಾಡಬಹುದು. ಎರಡು ಕೂಡ ಇತ್ತೀಚಿನ ವರ್ಷದಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕೆ ಪ್ರದೇಶ ಆಗಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೂ ಅವಕಾಶ ಹೆಚ್ಚಿದೆ. ಈ ಬಗ್ಗೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ವಿಶೇಷ ಗಮನ ಹರಿಸಬೇಕು ಎಂದು ಕೈಗಾರಿಕೆ ಮಾಲಕರ ಆಗ್ರಹ.

ಅಗ್ನಿಶಾಮಕ ದಳ, ಆಸ್ಪತ್ರೆ ಬೇಕು
ಕಾಪು ತಾಲೂಕು ವ್ಯಾಪ್ತಿಯ ಸುಮಾರು 15 ಕಿ.ಮೀ. ಅಂತರದಲ್ಲಿ ನಂದಿಕೂರು ಹಾಗೂ ಬೆಳಪು ಕೈಗಾರಿಕೆ ಪ್ರದೇಶವಿದೆ. ಎರಡೂ ಪ್ರದೇಶಗಳಲ್ಲಿ ಒಟ್ಟಾರೆ 150ಕ್ಕೂ ಅಧಿಕ ಎಕ್ರೆ ಭೂಮಿಯನ್ನು ಹಂಚಲಾಗಿದೆ. ಸುಮಾರು 100ಕ್ಕೂ ಅಧಿಕ ಕೈಗಾರಿಕೆಗಳಿಗೆ ನಿವೇಶನ ಹಂಚಲಾಗಿದೆ. ಕಾಪು ಕೇಂದ್ರವಾಗಿ ಅಥವಾ ಪಡುಬಿದ್ರಿ ಕೇಂದ್ರವಾಗಿಟ್ಟುಕೊಂಡು ಒಂದು ಅಗ್ನಿಶಾಮಕ ದಳದ ಠಾಣೆ ಸ್ಥಾಪನೆಯಾಗಬೇಕಿದೆ. ಅಗ್ನಿ ಅನಾಹುತಗಳು ಸಂಭವಿಸಿದಾಗ ಉಡುಪಿಯಿಂದಲೇ ಸಿಬಂದಿ ಬರಬೇಕಾಗುತ್ತದೆ. ಹೀಗಾಗಿ ಒಂದು ಅಗ್ನಿಶಾಮಕ ಠಾಣೆಯ ವ್ಯವಸ್ಥೆ ಮಾಡಬೇಕು. ಹಾಗೆಯೇ ತಾಲೂಕಿನಲ್ಲಿ ಸುಸಜ್ಜಿತವಾದ ಸರಕಾರ ಆಸ್ಪತ್ರೆಯಿಲ್ಲ. ಏನೇ ಆರೋಗ್ಯದ ಸಮಸ್ಯೆ ಬಂದರೂ ಉಡುಪಿ, ಮಣಿಪಾಲಕ್ಕೆ ಬರಬೇಕು. ಕೈಗಾರಿಕೆಗಳು ಹೆಚ್ಚು ಇರುವುದರಿಂದ ಸುಸಜ್ಜಿತ ತಾಲೂಕು ಆಸ್ಪತ್ರೆಯನ್ನು ನಿರ್ಮಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ಕೈಗಾರಿಕೆ ಪ್ರದೇಶದ ಒಳಗೆ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕ್ರಮ ಆಗಬೇಕು. ಮೂಲಸೌಕರ್ಯ ಅಭಿವೃದ್ಧಿ ವಿಷಯವಾಗಿ ಮೊದಲು ಚರಂಡಿ ವ್ಯವಸ್ಥೆ ಸರಿಮಾಡಬೇಕು. ಚರಂಡಿ ಸಮಸ್ಯೆ ಸರಿಯಾಗದಿದ್ದರೆ ಭವಿಷ್ಯದಲ್ಲಿ ಸ್ಥಳೀಯರಿಗೆ ಹೆಚ್ಚು ಸಮಸ್ಯೆಯಾಗುವ ಸಾಧ್ಯತೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next