Advertisement

­ಮುರುಘಾ ಮಠದಲ್ಲಿ ಪರಿಷತ್‌ ಸಭಾಪತಿ ಹೊರಟ್ಟಿಗೆ ಸನ್ಮಾನ

05:04 PM Feb 26, 2021 | Team Udayavani |

ಚಿತ್ರದುರ್ಗ: ಸಮಾಜದಲ್ಲಿ ಸಜ್ಜನರು ಸಿಗುತ್ತಾರೆ. ಆದರೆ, ಪ್ರಜ್ಞಾವಂತರು ಸಿಗುವುದಿಲ್ಲ. ಪ್ರಬುದ್ಧರಿದ್ದಲ್ಲಿ ಯಾವುದೇ ಅನಾಹುತ ಆಗುವುದಿಲ್ಲ. ಪ್ರಬುದ್ಧರು ಆಯ್ಕೆಯಾದರೆ ಅಪ್ರಬುದ್ಧರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

Advertisement

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಗುರುವಾರ ವಿಧಾನ ಪರಿಷತ್‌ ಸಭಾಪತಿಯಾಗಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊರಟ್ಟಿಯವರು ಪ್ರಜ್ಞಾವಂತ ಪ್ರಬುದ್ಧ ರಾಜಕಾರಣಿ. ಅವರದು ಹೋರಾಟದ ಬದುಕು. ಸಮಾಜದ ಹಿತಕ್ಕಾಗಿ, ಶಿಕ್ಷಕರ ಕ್ಷೇಮಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ಹೊರಟ್ಟಿಯವರದ್ದು ಸಾರ್ಥಕವಾಗಿರುವ ಜೀವನ.

7ನೇ ಬಾರಿ ಆಯ್ಕೆಯಾಗಿರುವ ಸಂದರ್ಭ ಹೊರಟ್ಟಿಯವರಿಗೆ ಸಿಕ್ಕಿದೆ. ಅವರ ಆಯ್ಕೆಯ ಕ್ಷೇತ್ರ ಅಪರೂಪವಾದುದು. ವಿಧಾನ ಪರಿಷತ್‌ ಬುದ್ಧಿವಂತರ, ವಿದ್ಯಾವಂತರ ಕ್ಷೇತ್ರ. ಯಾವ ಶಿಕ್ಷಕರನ್ನು ಕೇಳಿದರು ಹೊರಟ್ಟಿಯವರು ಸಹಕಾರ ನೀಡಿದ್ದಾರೆ ಎನ್ನುತ್ತಾರೆ. ಅವರದು ಸಹಕಾರ ತತ್ವ. ವ್ಯಕ್ತಿಗೆ ಬದ್ಧತೆ ಇರಬೇಕು. ಕೇವಲ ಆಶ್ವಾಸನೆಗಳಿಂದ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ. ರಾಷ್ಟ್ರಕ್ಕೆ, ರಾಜ್ಯಕ್ಕೆ ಬದ್ಧತೆಯ ರಾಜಕಾರಣಿಗಳು ಬೇಕಿದೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಸವರಾಜ ಹೊರಟ್ಟಿ, 116 ವರ್ಷಗಳ ಭವ್ಯ ಇತಿಹಾಸವಿರುವ ವಿಧಾನ ಪರಿಷತ್‌ ಭಾರತದ ಸರ್ವ ಶ್ರೇಷ್ಠವಾದುದು. ನನ್ನ ಅರ್ಧ ಆಯಸ್ಸನ್ನು ಸದನದಲ್ಲಿ ಕಳೆದಿದ್ದೇನೆ. ಕರ್ನಾಟಕದಲ್ಲಿ ಯಾರಿಗೂ ಸಿಗದ ಸೌಭಾಗ್ಯ ನನಗೆ ಸಿಕ್ಕಿದೆ. ಎರಡೂ ಸದನಗಳಲ್ಲಿ ನಾನು ಹಿರಿಯ ಸದಸ್ಯ. ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ನಾನು ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ನನ್ನ ವಿರುದ್ಧ ಚುನಾವಣೆಯಲ್ಲಿ ಅನೇಕರು ನಿಂತಿದ್ದರೂ ನನ್ನನ್ನು ಶಿಕ್ಷಕರು ಗೆಲ್ಲಿಸಿದ್ದಾರೆ.

ಶಿಕ್ಷಕರ ಪ್ರತಿನಿಧಿಯಾಗಿರುವ ಮೊದಲ ಸಭಾಪತಿ ನಾನು. ನನಗೆ ಈ ಸ್ಥಾನ ಕೊಟ್ಟವರು ಶಿಕ್ಷಕರು. ಹಾಗಾಗಿ ಈ ಸ್ಥಾನವನ್ನು ಅವರಿಗೆ ಅರ್ಪಿಸುತ್ತೇನೆ. ವಿಧಾನ ಪರಿಷತ್ತನ್ನು ಯಾರು ಅಪವಿತ್ರ ಮಾಡಬಾರದು. ಸದನದ ಘನತೆ ಗೌರವವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು ಎಂದರು.

Advertisement

ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಅಭಿನಂದನಾ ನುಡಿಗಳನ್ನಾಡಿ, ವಿಧಾನ ಪರಿಷತ್‌  ಬಹುತ್ವದಿಂದ ಕೂಡಿದ್ದು, ಬುದ್ಧಿಜೀವಿಗಳ ಘನತೆಯನ್ನು ಹೊಂದಿದೆ. ರಾಜಕಾರಣದಿಂದ ಇಚ್ಛಾಶಕ್ತಿ ಮತ್ತು ಘನತೆ ಪಡೆದುಕೊಂಡವರು ಹೊರಟ್ಟಿಯವರು. ರಾಜಕಾರಣದಲ್ಲಿ ಅನೇಕರು ಆಸ್ತಿ ಕಳೆದುಕೊಂಡಿದ್ದಾರೆ. ಹಣ ಮಾಡಿಕೊಂಡವರಿದ್ದಾರೆ. ಆದರೆ ಹೊರಟ್ಟಿಯವರ ವ್ಯಕ್ತಿತ್ವ ಇದಕ್ಕೆ ಭಿನ್ನ. ನಾಡು ಕಂಡ ಅಪರೂಪದ ಶಿಕ್ಷಣ ತಜ್ಞರು. ಶಿಕ್ಷಕ ಸಮುದಾಯದಲ್ಲಿ ಬದಲಾವಣೆ ಆಗಿದೆ ಎಂದರೆ ಅದಕ್ಕೆ ಕಾರಣ ಹೊರಟ್ಟಿಯವರು. ಸ್ನೇಹಜೀವಿ, ಸಜ್ಜನರು. ಹೊರಟ್ಟಿಯವರಿಗೆ ಬುದ್ಧನ ಕಾರುಣ್ಯವಿದೆ ಎಂದರು.

ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಮುಖಂಡ ಕೆಇಬಿ ಷಣ್ಮುಖಪ್ಪ, ಜಂಗಮ ಸಮಾಜದ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರಿದ್ದರು. ಜೆಡಿಎಸ್‌ ಯುವ ಮುಖಂಡ ಪ್ರತಾಪ್‌ ಜೋಗಿ ಸ್ವಾಗತಿಸಿದರು. ಉಮೇಶ ಪತ್ತಾರ ಪ್ರಾರ್ಥಿಸಿದರು. ನಿರಂಜನ ದೇವರಮನೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next