Advertisement

ಅಲಕ್ಷಿತ ಸಮಾಜಗಳ ಒಗ್ಗೂಡಿಸಿದ ಬಸವಣ್ಣ

10:51 AM Jul 28, 2018 | |

ದಾವಣಗೆರೆ: 12ನೇ ಶತಮಾನದಲ್ಲಿ ಅತ್ಯಂತ ಅಲಕ್ಷಿತ ಸಮುದಾಯಗಳನ್ನು ಒಗ್ಗೂಡಿಸಿ ಸ್ವಾಭಿಮಾನ ತುಂಬಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
 
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜಗಳ ಆಶ್ರಯದಲ್ಲಿ ಶುಕ್ರವಾರ ಶಿವಯೋಗಾಶ್ರಮದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರಿಗಿಂತ ಮುನ್ನ ಎಲ್ಲರೂ ಶೋಷಿತರಾಗಿದ್ದರು. ಲಿಂಗಾಯತರು ಸಹ ಅಲಕ್ಷಕ್ಕೆ ಒಳಗಾಗಿದ್ದರು. ಬಸವಣ್ಣನವರು ನೀಡಿದ ಸಂಸ್ಕಾರ, ಸ್ವಾಭಿಮಾನ ಪಾಲಿಸುವ ಮೂಲಕ ಲಿಂಗಾಯತರಾದರು. ಬಸವಾದಿ ಶರಣರು ಎಲ್ಲ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುವ ಉದಾತ್ತ ಗುಣದಿಂದ ಆದರ್ಶನೀಯ, ಸೈದ್ಧಾಂತಿಕ, ಮಾನವೀಯ ತಳಹದಿಯೊಂದಿಗೆ ಮೌಲಿಕವಾದ ಸಮಾಜ
ಕಟ್ಟಿಕೊಟ್ಟಿದ್ದಾರೆ ಎಂದರು.

Advertisement

ಬಸವಣ್ಣ ಮತ್ತು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ನಡುವೆ ಅವಿನಾಭಾವ ಸಂಬಂಧ ಇತ್ತು. ಬಸವಣ್ಣ ಆದರ್ಶದ ನೆಲೆಗಟ್ಟಿನಲ್ಲಿ ಸಮಾಜ ಕಟ್ಟಿದರು. ಅವರು ಕಟ್ಟಿದಂತಹ ಸಮಗ್ರ ಸಮಾಜದಲ್ಲಿ ಹಡಪದ ಅಪ್ಪಣ್ಣ ಸೇರಿದಂತೆ ಎಲ್ಲ ವರ್ಗದವರಿದ್ದರು ಎಂದರು. 

ಬಸವಣ್ಣನವರ 12ನೇ ಶತಮಾನ ಆದರ್ಶದ ಶತಮಾನ. ಅದೇ 21 ನೇ ಶತಮಾನ ಆಡಂಬರ ಮತ್ತು ಅದ್ಧೂರಿ ಶತಮಾನವಾಗಿದೆ. ಆಧುನಿಕ ಪ್ರಪಂಚದಲ್ಲಿ ಕೆಲವರು ಜಾತಿ, ಆಸ್ತಿ ಆಧಾರದಲ್ಲಿ ಸಮಾಜ ಕಟ್ಟಲು ಹೋಗುತ್ತಿದ್ದಾರೆ. ಆಸ್ತಿ ಗಳಿಸಲು ಅಕ್ರಮದ ಹಾದಿ ಹಿಡಿಯಲಾಗುತ್ತಿದೆ. ಆದರೆ, ಸಂಕುಚಿತ ಮತಿಯಿಂದ ವಿಶಾಲ, ಸಮಕಾಲೀನ, ವಿಸ್ತೃತ ಸಮಾಜ ಕಟ್ಟಲು ಸಾಧ್ಯವಾಗದು ಎಂದು ತಿಳಿಸಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಇತಿಹಾಸ ಪುನರ್‌ ನಿರ್ಮಾಣವಾಗುತ್ತಿದೆ ಅನ್ನಿಸುತ್ತಿದೆ. ಬಸವಣ್ಣನವರು ಅಲಕ್ಷಿತ ಸಮಾಜದ ಶರಣ ಅಪ್ಪಣ್ಣನನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡು ಜಾಣ್ಮೆಯಿಂದ ಶತಮಾನಗಳ ಶೋಷಣೆ ತೊಡೆದುಹಾಕಲು ಮುಂದಾಗಿದ್ದರು. ಇಂದು ರಾಜ್ಯಾದ್ಯಂತ ಸಂವಿಧಾನಬದ್ಧವಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮೂಲಕ ಗುರುತಿಸುವಂತಹ ಕೆಲಸವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೆಲವು ಸ್ವಾಮೀಜಿಗಳೇ ತಾವು ಲಿಂಗಾಯತ ಸ್ವಾಮೀಜಿ ಎಂಬುದಾಗಿ ಹೇಳಿಕೊಳ್ಳಲಿಕ್ಕೂ ಹಿಂದೇಟು ಹಾಕಿದ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜದ ಸ್ವಾಮೀಜಿ ನಾವು ಲಿಂಗಾಯತ ಸ್ವಾಮೀಜಿ ಎಂದು ಧೈರ್ಯವಾಗಿ ಹೇಳಿಕೊಂಡಿದ್ದರು. ಹಡಪದ ಸಮಾಜ ಎಂದೂ ಬಸವ ತತ್ವಕ್ಕೆ ವಿಮುಖವಾಗಿಲ್ಲ. ಅಪ್ಪಣ್ಣ-ಬಸವಣ್ಣ ಎರಡು ದೇಹ ಒಂದು ಜೀವವಾಗಿದ್ದರು. ಈ ನಿಟ್ಟಿನಲ್ಲಿ ನಾವು ಕೂಡ ನಡೆದಾಗ ಒಗ್ಗೂಡಲು ಸಾಧ್ಯ ಎಂದರು.
 
ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಹಡಪದ ಸಮಾಜದ ಕೊಡುಗೆ ಅಪಾರ. ಎಲ್ಲ ಸಮಾಜದ ಸಮಾನ ಸ್ಥಾನಮಾನಕ್ಕಾಗಿ ಹಿಂದೆ ಬಸವಣ್ಣನವರು ಹೋರಾಡಿದಂತೆ ಈಗ ಮುರುಘಾ ಶ್ರೀಗಳು ಕಾರ್ಯೋನ್ಮುಖರಾಗಿದ್ದಾರೆ. ಎಲ್ಲರೂ ಸಂಘಟಿತರಾಗಿ, ಮೌಡ್ಯವನ್ನು ಮೆಟ್ಟಿನಿಂತು ಮುಂದೆ ಸಾಗಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಮುರುಘಾ ಶರಣರು ದೇಶದ, ಸಮಾಜದ ಕ್ರಾಂತಿಕಾರಿ ಸ್ವಾಮಿಗಳಾಗಿದ್ದಾರೆ. ಹಡಪದ ಅಪ್ಪಣ್ಣ ಸಮಾಜದವರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. 

ನವದೆಹಲಿಯ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತ ಸ್ವಾಮೀಜಿ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವರಾಜ್‌, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಅಧ್ಯಕ್ಷ ಶಶಿ ಬಸಾಪುರ, ಡಾ| ಎಚ್‌. ವಿಶ್ವನಾಥ್‌, ಎಂ. ಜಯಕುಮಾರ್‌, ದೇವಗಿರಿ ವೀರಭದ್ರಪ್ಪ, ಮರುಳ ಸಿದ್ದಪ್ಪ, ಯು. ಬಸವರಾಜ್‌, ಜಿಲ್ಲಾಧಿ ಕಾರಿ ಡಿ. ಎಸ್‌. ರಮೇಶ್‌, ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌, ದಾವಣಗೆರೆ ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌ ಇತರರು ಇದ್ದರು.

ಬಸವ ಕಲಾ ಲೋಕದವರು ವಚನ ಗಾಯನ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಎನ್‌.ಜೆ .ಶಿವಕುಮಾರ್‌ ನಿರೂಪಿಸಿದರು. ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಸಾಲಸೌಲಭ್ಯ, ನಿವೇಶನ, 2ಎ ಪ್ರವರ್ಗಕ್ಕೆ ಸೇರ್ಪಡೆ, ಕ್ಷೌರಿಕ ಕುಟೀರ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ವೇದಿಕೆ ಕಾರ್ಯಕ್ರಮದ ಮುನ್ನ ಹಡಪ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಸ್ವಾಮೀಜಿ ನೇಮಕ ಸಮರ್ಥನೆ ಕಳೆದ 20 ವರ್ಷಗಳ ಹಿಂದೆ ಜಾತಿಗೊಬ್ಬ ಸ್ವಾಮೀಜಿಯವರಿಗೆ ದೀಕ್ಷೆ ನೀಡಿದ ಸಂದರ್ಭದಲ್ಲಿ ಮುರುಘಾ ಮಠ ಜಾತಿಗೊಬ್ಬ ಸ್ವಾಮೀಜಿ ಮಾಡುತ್ತಿರುವುದು ಸೂಕ್ತ ನಿರ್ಣಯ ಅಲ್ಲ. ಏನೋ ಒಂದು ರೀತಿಯಲ್ಲಿ ಸ್ವಾಮೀಜಿಯವರನ್ನು ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಈಗ ನಾವು ನೇಮಕ ಮಾಡಿದ್ದ ಸ್ವಾಮೀಜಿಯವರು ಮುಖ್ಯಮಂತ್ರಿಗಳ ಜೊತೆಗೂಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ಮೂಲಕ ಆಯಾ ಜಾತಿ ಬಾಂಧವರನ್ನು ತಲುಪುತ್ತಿದ್ದಾರೆ. ನಾವು ಅಂತಹ ವಾತಾವರಣ ನಿರ್ಮಾಣ ಆಗುವುದನ್ನೇ ಬಯಸಿದ್ದಾಗಿ ಹೇಳುವ ಮೂಲಕ ಡಾ| ಶಿವಮೂರ್ತಿ ಮುರುಘಾ ಶರಣರು ಜಾತಿಗೊಬ್ಬ ಸ್ವಾಮೀಜಿಯವರನ್ನು ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next